ಆ್ಯಪ್ನಗರ

ತೆಂಗು ಬೆಳೆ ನಷ್ಟ: ಮತ್ತೊಮ್ಮೆ ಸಮೀಕ್ಷೆ

ಮತ್ತೊಮ್ಮೆ ಜಂಟಿ ಸಮೀಕ್ಷೆ * 12ದಿನದೊಳಗೆ ವರದಿ ನೀಡುವಂತೆ ನಾನಾ ಇಲಾಖೆ ಅಧಿಕಾರಿಗಳಿಗೆ ಶಾಸಕ ಬಾಲಕೃಷ್ಣ ಸಲಹೆ * ರಾಜ್ಯ ಸರಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವ ...

Vijaya Karnataka 8 Sep 2018, 5:00 am
ಚನ್ನರಾಯಪಟ್ಟಣ: ತಾಲೂಕಿನಲ್ಲಿ ತೆಂಗು ಬೆಳೆ ನಷ್ಟ ಕುರಿತಂತೆ ತೋಟಗಾರಿಕೆ, ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾರದರ್ಶಕವಾಗಿ ಮತ್ತೊಮ್ಮೆ ಸಮೀಕ್ಷೆ ಮಾಡಿ 12 ದಿನದೊಳಗೆ ಸಮಗ್ರ ವರದಿ ನೀಡಬೇಕು ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ಸೂಚಿಸಿದರು.
Vijaya Karnataka Web hassan channarayapattana coconut crop loss again joint survey mla cs balakrishana
ತೆಂಗು ಬೆಳೆ ನಷ್ಟ: ಮತ್ತೊಮ್ಮೆ ಸಮೀಕ್ಷೆ


ತೆಂಗಿನ ಬೆಳೆ ನಷ್ಟಕ್ಕೆ ಪರಿಹಾರ ನೀಡುವ ಸಲುವಾಗಿ ರಾಜ್ಯ ಸರಕಾರ ಬಜೆಟ್‌ನಲ್ಲಿ 190 ಕೋಟಿ ರೂ. ಮೀಸಲಿಟ್ಟಿದ್ದು ಈ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಮಗ್ರವಾಗಿ ಸಮೀಕ್ಷೆ ಮಾಡುವಂತೆ ಇಲಾಖೆ ಅಧಿಕಾರಿಗಳಿಗೆ ಹೇಳಿದರು.

12 ಜಿಲ್ಲೆಗಳಲ್ಲಿ ಈಗಾಗಲೇ ತೆಂಗಿನ ಬೆಳೆ ನಷ್ಟವಾಗಿರುವುದು ಕಂಡು ಬಂದಿದೆ. ತಾಲೂಕಿನಲ್ಲಿ ಕಳೆದ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಸಮೀಕ್ಷೆ ನಡೆಸಿದರೂ ಮತ್ತೊಮ್ಮೆ ವಿವಿಧ ಇಲಾಖೆಗಳಿಂದ ಜಂಟಿ ಸಮೀಕ್ಷೆ ಮಾಡಲಾಗುತ್ತಿದೆ. ಇದರಲ್ಲಿ ತಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಸರ್ವೇ ಕಾರ‍್ಯದಲ್ಲಿ ಪಾಲ್ಗೊಳ್ಳುವವರು ಪ್ರಾಮಾಣಿಕವಾಗಿ ಕಾರ‍್ಯ ನಿರ್ವಹಿಸಬೇಕು ಎಂದರು.

ಸರ್ವೇಗೆ ಹೋಗುವ ಗ್ರಾಮಗಳಿಗೆ ಮುಂಚಿತವಾಗಿ ಮಾಹಿತಿ ನೀಡಿ. ರೈತರ ಸಮ್ಮುಖದಲ್ಲಿಯೇ ಪಟ್ಟಿ ಮಾಡಬೇಕು. ಎಲ್ಲ ಸಮ್ಮುಖದಲ್ಲಿ ಊರ ನಡುವೆಯೇ ಮಾಡಿದರೆ ಅನವಶ್ಯಕ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗುವುದು ತಪ್ಪುತ್ತದೆ. ಗ್ರಾಮಕ್ಕೆ ಹೋಗುವ ಮೊದಲು ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು. ಯಾರಿಗೂ ಅನ್ಯಾಯವಾಗದಂತೆ ಎಚ್ಚರವಹಿಸಬೇಕು. ಒಂದು ವೇಳೆ ಆ ಕುಟುಂಬದ ಯಜಮಾನರು ಪೌತಿಯಾಗಿದ್ದರೆ ಅವರ ವಾರಸುದಾರರಿಗೆ ಪರಿಹಾರ ದೊರೆಯಲಿದೆ ಎಂದು ಹೇಳಿದರು.

ಹಿರೀಸಾವೆ ಹಾಗೂ ನುಗ್ಗೇಹಳ್ಳಿ ಭಾಗದಲ್ಲಿ ಅತಿಹೆಚ್ಚು ತೆಂಗಿನ ಮರಗಳು ಹಾನಿಯಾಗಿವೆ. ರೋಗದಿಂದ ಸುಳಿ ಬಿದ್ದುಹೋದ ಮರಗಳು ಹಾಗೂ ಭಾಗಶಃ ಹಾಳಾದ ಮರಗಳಿಗೂ ಪ್ರತ್ಯೇಕ ಪರಿಹಾರವಿದೆ. ಹಾಗಾಗಿ ಕರಾರುವಕ್ಕಾದ ಸಮೀಕ್ಷೆ ನಡೆಸಬೇಕು. ಹೆಚ್ಚುವರಿಯಾಗಿ ಹಣದ ಅವಶ್ಯಕತೆಯಿದ್ದರೆ ಸರಕಾರದಿಂದ ಕೊಡಿಸಲಾಗುವುದು. ಪ್ರತಿಯೊಂದು ಹಾನಿಗೀಡಾದ ಮರಕ್ಕೂ ತಲಾ 500 ರೂ. ಪರಿಹಾರ ನೀಡಲಾಗುವುದು ಎಂದರು.

ಈ ಹಿಂದೆ ಮಾಡಿರುವ ಸರ್ವೇಯನ್ನು ಮತ್ತೊಮ್ಮೆ ಪರಿಶೀಲನೆ ಮಾಡುವುದು ಕಡ್ಡಾಯ. ಇತ್ತೀಚೆಗೆ ಹೆಚ್ಚುವರಿಯಾಗಿ ಹಾನಿಯಾಗಿದ್ದರೆ ಅದನ್ನೂ ಪರಿಗಣಿಸಬೇಕು. ಸರ್ವೇ ನಂತರ ದೂರು ಬಂದರೆ ಸಂಬಂಧಪಟ್ಟವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಈಗ ಆಗಿರುವ ಸರ್ವೇಯಂತೆ ತಾಲೂಕಿನಲ್ಲಿ 2.74 ಲಕ್ಷ ಮರಗಳು ಭಾಗಶಃ ಹಾನಿಯಾಗಿದ್ದು 5 ಲಕ್ಷ 32 ಸಾವಿರ 320 ಮರಗಳು ಸಂಪೂರ್ಣ ನಾಶವಾಗಿವೆ ಎಂದು ವರದಿಯಲ್ಲಿದೆ. ಅರ್ಹ ಫಲಾನುಭವಿಗಳು ತಮ್ಮ ಆಧಾರ್‌ಕಾರ್ಡ್‌, ಬ್ಯಾಂಕ್‌ ಪಾಸ್‌ಪುಸ್ತಕದ ಪ್ರತಿ, ಖಾತೆ ಸಂಖ್ಯೆಯನ್ನೊಳಗೊಂಡಂತೆ ಎಲ್ಲ ವಿವರಗಳನ್ನೂ ಸರಿಯಾಗಿ ನೀಡಬೇಕು ಎಂದರು.

ತಹಸೀಲ್ದಾರ್‌ ಸೋಮಶೇಖರ್‌, ಗ್ರೇಡ್‌2 ತಹಸೀಲ್ದಾರ್‌ ಪಾರ್ಥಸಾರಥಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಹೇಶ್‌, ಭಾನುಕುಮಾರ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ