ಆ್ಯಪ್ನಗರ

ಅಕ್ಟೋಬರ್‌ 17ರಿಂದ ಹಾಸನಾಂಬೆಯ ದರುಶನ ಭಾಗ್ಯ

ಹಲವು ನಿಗೂಢಗಳ ತಾಣವಾಗಿರುವ ಹಾಸನದ ಹಾಸನಾಂಬೆ ದೇವಾಲಯದ ಬಾಗಿಲು ಅಕ್ಟೋಬರ್‌ 17ರಂದು ತೆರೆಯಲಿದೆ. ಅಕ್ಟೋಬರ್‌ 29ರವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ. ವರ್ಷದಲ್ಲಿ ಒಮ್ಮೆ ಮಾತ್ರ ಹಾಸನಾಂಬೆಯ ದರ್ಶನಕ್ಕೆ ಆವಕಾಶ ನೀಡಲಾಗುತ್ತದೆ.

Vijaya Karnataka Web 18 Sep 2019, 4:24 pm

ಹಾಸನ: ವರ್ಷಕ್ಕೆ ಒಮ್ಮೆ ಬಾಗಿಲು ತೆರೆಯುವ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಾಲಯ ಈ ವರ್ಷ ಅ.17 ರಂದು ಬಾಗಿಲು ತೆರೆಯಲಿದೆ. ಅ.29 ರವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರಲಿದೆ ಎಂದು ಜಿಲ್ಲಾಧಿಕಾರಿ ಗಿರೀಶ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Vijaya Karnataka Web hasanamba


ಬಡವರ ಊಟಿ ಎಂದೇ ಕರೆಯಲಾಗುವ ಹಾಸಕ್ಕೆ, ಆ ಹೆಸರು ಬಂದದ್ದೇ ಹಾಸನಾಂಬೆ ದೇವಾಲಯದಿಂದ. ಈ ಐತಿಹಾಸಿಕ ದೇವಾಲಯದಲ್ಲಿ ಒರ್ಷಕ್ಕೆ ಒಮ್ಮೆ ಮಾತ್ರ ದೇವಿಯ ದರ್ಶನಕ್ಕೆ ಬಾಗಿಲು ತೆರೆಯಲಾಗುತ್ತದೆ. ಈ ದೇವಾಲಯದಲ್ಲಿ ಹಲವಾರು ಪವಾಡಗಳೂ ನಡೆಯುತ್ತವೆ. ಈ ವರ್ಷ ಹಚ್ಚಿದ ದೀಪ ಮುಂದಿನ ವರ್ಷದವರೆಗೂ ಉರಿಯುತ್ತಲೇ ಇರುತ್ತದೆ. ದೇವರಿಗೆ ಇಟ್ಟ ಅನ್ನದ ನೈವೇದ್ಯ ಒಂದು ವರ್ಷವಾದರೂ ಹಳಸಿರುವುದಿಲ್ಲ. ದೇವರಿಗೆ ಅಲಂಕರಿಸಿದ ಹೂವುಗಳು ಕೂಡ ಒಂದು ವರ್ಷವಾದರೂ ಬಾಡಿರುವುದಿಲ್ಲ. ಈ ಕುರಿತು ಸಂಶೋಧನೆ ನಡೆಸುವ ಪ್ರಯತ್ನಗಳು ನಡೆದಿವೆಯಾದರೂ, ಅದಕ್ಕೆ ಸಮ್ಮತಿ ದೊರೆತಿಲ್ಲ.

ಹಾಸನಾಂಬ ದೇವಾಲಯದ ಪವಾಡ ಕುರಿತು ಸತ್ಯಶೋಧನೆಯಾಗಲಿ

ಐತಿಹಾಸಿಕ ಹಿನ್ನೆಲೆ:
12ನೆ ಶತಮಾನದಲ್ಲಿ ಕೃಷ್ಣಪ್ಪ ನಾಯಕನೆಂಬ ಪಾಳೆಗಾರನು ದೇವಾಲಯ ಕಟ್ಟಿದ ಬಗ್ಗೆ ಹಾಸನ ತಾಲೂಕಿನ ಕುದರಗುಂಡಿ ಎಂಬ ಗ್ರಾಮದಲ್ಲಿರುವ ಕ್ರಿ.ಶ.1140ರಲ್ಲಿ ಸ್ಥಾಪಿತವಾದ ಶಿಲಾಶಾಸನದಲ್ಲಿ ಉಲ್ಲೇಖವಿದೆ. ಸ್ಥಳ ಪುರಾಣದ ಪ್ರಕಾರ, ಸಪ್ತಮಾತೃಕೆಯರಾದ ವೈಷ್ಣವಿ, ಇಂದ್ರಾಣಿ, ಮಹೇಶ್ವರಿ, ಕುಮಾರಿ, ಬ್ರಾಹ್ಹಿದೇವಿ, ವರಾಹಿ, ಮತ್ತು ಚಾಮುಂಡಿದೇವಿಯರು ವಾಯುವಿಹಾರಕ್ಕಾಗಿ ತೆರಳಿದ್ದಾಗ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ನೆಲೆಸಲು ನಿರ್ಧರಿಸಿದರು. ಅವರಲ್ಲಿ ವೈಷ್ಣವಿ, ಮಹೇಶ್ವರಿ, ಕುಮಾರಿಯರು ಹಾಸನಾಂಬೆ ದೇಗುಲದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದರು ಎಂಬ ನಂಬಿಕೆ ಇದೆ.

ಹಾಸನಾಂಬೆ ಆದಾಯ ಈ ಬಾರಿ 2.48 ಕೋಟಿ

ಬ್ರಾಹ್ಹಿದೇವಿ ಸಮೀಪದ ಕೆಂಚಮ್ಮನ ಹೊಸಕೋಟೆಯಲ್ಲಿ ಹಾಗೂ ಉಳಿದ ಇಂದ್ರಾಣಿ, ವರಾಹಿ, ಮತ್ತು ಚಾಮುಂಡಿ ದೇವಿಯರು ಹಾಸನ ನಗರ ಮಧ್ಯ ಭಾಗದಲ್ಲಿರುವ ದೇವಿಗೆರೆಯಲ್ಲಿ ನೆಲೆಸಿದರು ಎಂದು ಹೇಳಲಾಗಿದೆ. ಮಹಾಭಾರತ ಕಾಲದಲ್ಲಿ ಈ ಸ್ಥಳಕ್ಕೆ ಜನಮೇಜಯ ರಾಜನ ಆಳ್ವಿಕೆಯ ಸಿಂಹಾಸನಪುರಿಯೆಂದು ಹೆಸರಿದ್ದು, ಹಾಸನಾಂಬೆ ಇಲ್ಲಿ ನೆಲೆಸಿದ ನಂತರ ಹಾಸನವೆಂದು ಹೆಸರಾಯಿತು ಎನ್ನಲಾಗುತ್ತಿದೆ. ಗರ್ಭಗುಡಿಯದೇವಿಯ ವಿಗ್ರಹದ ಎದುರು ಒಂದು ಪುಟ್ಟ ಕಲ್ಲು ಇದೆ. ಅದನ್ನು ಸೊಸೆ ಕಲ್ಲು ಎನ್ನುತ್ತಾರೆ. ಅದಕ್ಕೊಂದು ವಿಶೇಷವಿದೆ. ಪ್ರತಿನಿತ್ಯ ಸೊಸೆಗೆ ಕಿರುಕುಳ ನೀಡುತ್ತಿದ್ದ ಅತ್ತೆ ಒಂದು ದಿನ ಸೊಸೆಯನ್ನು ಹಿಂಬಾಲಿಸಿ ಬಂದು ದೇವಿಯ ಧ್ಯಾನದಲ್ಲಿ ಮಗ್ನಳಾಗಿದ್ದ ಸೊಸೆಯನ್ನು ಕಂಡು ಸಿಟ್ಟಿನಿಂದ ಪಕ್ಕದಲ್ಲಿದ್ದ ಚಂದ್ರಬಟ್ಟಲನ್ನು ತೆಗೆದುಕೊಂಡು ತಲೆಗೆ ಕುಕ್ಕಿದಾಗ ಆ ನೋವು ತಾಳಲಾರದೆ ಅಮ್ಮಾ ಎಂದು ಕೂಗಿದ ಸೊಸೆಯ ಆರ್ತನಾದ ಕರುಣಾಮಯಿಯಾದ ಹಾಸನಾಂಬೆ ಸೊಸೆಯ ಭಕ್ತಿಗೆ ಮೆಚ್ಚಿ ಯಾವಾಗಲೂ ನೀನು ನನ್ನ ಸನ್ನಿಧಾನದಲ್ಲೇ ನೆಲೆಸು ಎಂಬ ವರ ನೀಡಿದ್ದರಿಂದ ಸೊಸೆ ಅಲ್ಲೇ ಕಲ್ಲಾಗಿ ನೆಲೆಸಿದಳೆಂದು ಪ್ರತೀತಿ ಇದೆ. ಪ್ರತಿ ವರ್ಷ ಈ ಕಲ್ಲು ಒಂದು ಭತ್ತದ ಕಾಳಿನಷ್ಟು ಅಂತರ ದೇವಿಯ ವಿಗ್ರಹದ ಕಡೆ ಚಲಿಸುತ್ತದೆ. ಈ ಕಲ್ಲು ದೇವಿ ಪಾದ ತಲುಪಿದ ಕ್ಷಣವೇ ಕಲಿಯುಗ ಅಂತ್ಯ ಎನ್ನುವ ಐತಿಹ್ಯವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ