ಆ್ಯಪ್ನಗರ

ಹಾಸನಾಂಬ ದರ್ಶನಕ್ಕೆ ತೆರೆ

ಹಾಸನ: ವರ್ಷಕ್ಕೆ ಒಮ್ಮೆ ಮಾತ್ರ ನಿಗದಿತ ದಿನದಲ್ಲಿ ದರ್ಶನ ಕರುಣಿಸುವ ಹಾಸನಾಂಬೆ ದರ್ಶನಕ್ಕೆ ಶುಕ್ರವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ತೆರೆ ಬಿತ್ತು.

Vijaya Karnataka 10 Nov 2018, 5:00 am
ಹಾಸನ: ವರ್ಷಕ್ಕೆ ಒಮ್ಮೆ ಮಾತ್ರ ನಿಗದಿತ ದಿನದಲ್ಲಿ ದರ್ಶನ ಕರುಣಿಸುವ ಹಾಸನಾಂಬೆ ದರ್ಶನಕ್ಕೆ ಶುಕ್ರವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ತೆರೆ ಬಿತ್ತು.
Vijaya Karnataka Web hassan hasanmba darshana close friday siddeswara swami fair festival close temple
ಹಾಸನಾಂಬ ದರ್ಶನಕ್ಕೆ ತೆರೆ


ನ.1ರಿಂದ ನ.9ರವರೆಗೆ ಒಟ್ಟು 7 ದಿನಗಳು ಮಾತ್ರ ಭಕ್ತರಿಗೆ ದರ್ಶನ ಮಾಡುವ ಅವಕಾಶ ಸಿಕ್ಕಿತ್ತು. ಮೊದಲ ದಿನ ಹಾಗೂ ಕೊನೆಯ ದಿನ ದರ್ಶನಕ್ಕೆ ಅವಕಾಶವಿಲ್ಲವೆಂದರೂ ನೂರಾರು ಮಂದಿ ಹರಸಾಹಸ ಪಟ್ಟು ದರ್ಶನ ಪಡೆದರು. ಅಂತಿಮವಾಗಿ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಮಧ್ಯಾಹ್ನ 1.25ಕ್ಕೆ ಜಿಲ್ಲಾಡಳಿತದ ಸಮ್ಮುಖದಲ್ಲಿ ತೆರೆ ಬಿದ್ದಿತು.

ಅಂತಿಮ ದಿನವಾದ ಶುಕ್ರವಾರ ಮಧ್ಯಾಹ್ನ ದೇಗುಲದ ಅರ್ಚಕರು ಸಂಪ್ರದಾಯಬದ್ಧವಾಗಿ ಧಾರ್ಮಿಕ ಪೂಜೆಗಳನ್ನು ನೆರವೇರಿಸಿದರು. ಬಳಿಕ 1.25ರ ವೇಳೆಗೆ ಗರ್ಭಗುಡಿಯಲ್ಲಿ ದೀಪ ಪ್ರಜ್ವಲಿಸುತ್ತಿರುವಂತೆಯೇ ಬಾಗಿಲನ್ನು ಮುಚ್ಚಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಆಡಳಿತಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌, ಎಸ್‌ಪಿ ಪ್ರಕಾಶ್‌ಗೌಡ, ಶಾಸಕ ಪ್ರೀತಂ ಜೆ.ಗೌಡ, ತಹಸೀಲ್ದಾರ್‌ ಶಿವಶಂಕರಪ್ಪ ಸಮ್ಮುಖದಲ್ಲಿ ಬೀಗಮುದ್ರೆ ಹಾಕಲಾಯಿತು.

ಆಭರಣ ಭದ್ರ: ಹಾಸನಾಂಬೆಗೆ ತೊಡಿಸಿದ್ದ ಆಭರಣಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ಜೋಡಿಸಿ, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಆಭರಣಗಳ ಗಂಟನ್ನು ಅರ್ಚಕರು ಹೊತ್ತು ಹೊರತಂದರು. ಆ ವೇಳೆ ಹರಕೆ ಹೊತ್ತಿದ್ದ ಭಕ್ತರು ಸಂಪ್ರದಾಯದಂತೆ ಮೆಣಸುನ್ನು ಎಸೆದರು. ಮುಜುರಾಯಿ ಅಧಿಕಾರಿ ತಹಸೀಲ್ದಾರ್‌ ಸಮ್ಮುಖದಲ್ಲಿ ಆಭರಣವನ್ನು ಜಿಲ್ಲಾ ಖಜಾನೆಗೆ ತಂದು ಭದ್ರತಾ ಕಪಾಟಿನಲ್ಲಿ ಇರಿಸಲಾಯಿತು.

ಬಾಗಿಲು ಭದ್ರಪಡಿಸಿದ ಡಿಸಿ: ಪ್ರಧಾನ ಅರ್ಚಕರು ಗರ್ಭಗುಡಿಯ ಬಾಗಿಲು ಹಾಕುವ ವೇಳೆ ಶ್ರಮಪಡುತ್ತಿದ್ದುದನ್ನು ಗಮನಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕೂಡಲೇ ಖುದ್ದು, ಬಾಗಿಲನ್ನು ಜೋರಾಗಿ ಎಳೆದು ಎರಡು ಬಾಗಿಲು ಜೋಡಣೆಯಾಗುವಂತೆ ಮಾಡಿದರು. ಬಳಿಕ ಶತಮಾನಗಳ ಹಿಂದಿನ ಕಬ್ಬಿಣದ ಬೀಗವನ್ನು ಹಾಕಿದ ನಂತರ ತಹಸೀಲ್ದಾರ್‌ ಮತ್ತು ಸಿಬ್ಬಂದಿ, ಬೀಗಮುದ್ರೆ ಹಾಕಿದರು.

ನೂರಾರು ಭಕ್ತರು: ಹಾಸನಾಂಬೆಯ ಈವರ್ಷದ ಕೊನೆಯ ದರ್ಶನ ಪಡೆಯಲು ನೂರಾರು ಮಂದಿ ಭಕ್ತರು ಬೆಳಗ್ಗೆಯಿಂದಲೇ ಕಾದು ನಿಂತಿದ್ದರು. ಅಧಿಕಾರಿಗಳಿಗೆ ಮನವಿ ಮಾಡಿ ಒಳಪ್ರವೇಶಿಸಲು ಹರಸಾಹಸ ಮಾಡಿ ದರ್ಶನ ಪಡೆದರು. ಕೆಲವರಿಗೆ ದರ್ಶನ ಸಿಕ್ಕರೆ ಮತ್ತೆ ಕೆಲವರು ನಿರಾಸೆಯಿಂದ ಹಿಂತಿರುಗಿದರು. ಮತ್ತೆ ಕೆಲವರು ಮೊಬೈಲ್‌ ದೃಶ್ಯಾವಳಿ ನೋಡಿ ಕೈಮುಗಿದರು.

ಶಾಶ್ವತ ಯೋಜನೆ ಚಿಂತನೆ: ಹಾಸನಾಂಬ ಉತ್ಸವಕ್ಕೆ ಬರುವ ಭಕ್ತರಿಗೆ ಕಲ್ಪಿಸುತ್ತಿರುವ ತಾತ್ಕಾಲಿಕ ಸೌಲಭ್ಯದ ಬದಲು ಶಾಶ್ವತ ಸೌಲಭ್ಯ ಕಲ್ಪಿಸಲು ಚಿಂತನೆ ನಡೆದಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

ದೇಗುಲ ಬಾಗಿಲು ಹಾಕಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಂಪ್ರದಾಯದ ಅನ್ವಯ ಒಂಬತ್ತು ದಿನದಲ್ಲಿ ಏಳುದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಂದಾಜು ನಾಲ್ಕರಿಂದ ಐದು ಲಕ್ಷ ಭಕ್ತರು ಬಂದಿರುವ ನಿರೀಕ್ಷೆ ಇದೆ. ಈ ಬಾರಿ ಏಳುದಿನವಾದ್ದರಿಂದ ಭಕ್ತರ ಸಂಖ್ಯೆ ಕಡಿಮೆಯಾಗಿರಬಹುದು. ಹಿಂದಿನ ವರ್ಷ ಸಂಗ್ರಹವಾದ ಹಣ ಜತೆಗೆ ಈ ಬಾರಿ ಎಣಿಕೆ ಆಗುತ್ತಿರುವ ಹುಂಡಿಯ ಹಣವನ್ನು ಇಲ್ಲಿನ ಅಭಿವೃದ್ಧಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಮೂರುಪಾಳಿ ಭದ್ರತೆ: ಹಾಸನಾಂಬೆ ಉತ್ಸವ ಅತ್ಯಂತ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಪೊಲೀಸ್‌ ಸಿಬ್ಬಂದಿ ಮೂರುಪಾಳಿಯಲ್ಲಿ ಭದ್ರತಾ ಕರ್ತವ್ಯ ನಿರ್ವಹಿಸಿದ್ದಲ್ಲದೆ ಕಿಂಚಿತ್ತು ಅಹಿತರಕ ಘಟನೆಗೆ ಆಸ್ಪದ ಇಲ್ಲದಂತೆ ಶಾಂತಿಯುತವಾಗಿ ಮುಕ್ತಾಯಕಂಡಿದೆ ಎಂದು ಎಸ್‌ಪಿ ಪ್ರಕಾಶ್‌ಗೌಡ ಸಂತಸ ವ್ಯಕ್ತಪಡಿಸಿದರು. ಹಾಸನಾಂಬ ಗರ್ಭಗುಡಿಯ ಮುಂಭಾಗದ ಕೊಠಡಿಯಲ್ಲಿ ಇದ್ದ ಹಣ್ಣುಗಳನ್ನು ಭಕ್ತರು ಖಾಲಿ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ