ಆ್ಯಪ್ನಗರ

ಮುಸುಕಿನ ಜೋಳಕ್ಕೆ ಸೈನಿಕ ಹುಳು ಕಾಟ

ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ | ಸಂಕಷ್ಟದಲ್ಲಿ ರೈತರು ಎಚ್‌ಎನ್‌...

Vijaya Karnataka 16 Oct 2018, 5:00 am
ಹಿರೀಸಾವೆ: ಹೋಬಳಿಯಾದ್ಯಂತ ಹಿಂಗಾರು ಮಾನ್ಸೂನಿನಲ್ಲಿ ಬಿತ್ತನೆಗೊಂಡಿರುವ ಮುಸುಕಿನ ಜೋಳದ ಬೆಳೆಯನ್ನು ಕೀಟಬಾಧೆ ಕಾಡುತ್ತಿದ್ದು, ಉತ್ತಮ ಫಸಲು ಹಾಗೂ ಇಳುವರಿ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.
Vijaya Karnataka Web hassan hirisave heavy rain maze crop incests problem
ಮುಸುಕಿನ ಜೋಳಕ್ಕೆ ಸೈನಿಕ ಹುಳು ಕಾಟ


ಹೋಬಳಿಯ ನರಿಹಳ್ಳಿ ಸುತ್ತಮುತ್ತ ಆಗಸ್ಟ್‌ನಲ್ಲಿ ಬಿತ್ತನೆಗೊಂಡ ಮುಸುಕಿನ ಜೋಳದ ಬೆಳೆಗೆ ಆರಂಭದಲ್ಲಿ ಮಳೆಯ ಕೊರತೆ ಕಾಡಿತ್ತು. ಬಳಿಕ ಉತ್ತಮ ಮಳೆ ಸುರಿದ ಕಾರಣ ಬೆಳೆ ಚೇತರಿಕೆ ಕಂಡು ನಳನಳಿಸಿತ್ತು. 45 ರಿಂದ 50 ದಿನಗಳು ಕಳೆದಿರುವ ಬೆಳೆ ಫಸಲು ಕಚ್ಚುವ ಹಂತದಲ್ಲಿ ಸೈನಿಕ ಹುಳುವಿನ ದಾಳಿಗೆ ಸಿಲುಕಿದೆ. ಇದು ರೈತರನ್ನು ಚಿಂತೆಗೀಡು ಮಾಡಿದೆ.

ಇದಕ್ಕೂ ಮುನ್ನ ಜೂನ್‌ನಲ್ಲಿ ಬಿತ್ತನೆಗೊಂಡಿದ್ದ ಮುಸುಕಿನ ಜೋಳದ ಬೆಳೆ ಮಳೆ ಕೊರತೆಯಿಂದ ಸಂಪೂರ್ಣ ಸೊರಗಿತ್ತು. ಇದೀಗ ಹಿಂಗಾರಿನ ಬೆಳೆಗೆ ಕೀಟಬಾಧೆ ಸಿಲುಕಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.

ಮುಸುಕಿನ ಜೋಳ ಬಿತ್ತನೆ ಮಾಡಿ ಸುಮಾರು 30-45 ದಿನ ಕಳೆದಿದ್ದು, ತೆನೆ ಮೂಡುವ ಹಂತದಲ್ಲಿದೆ. ಈ ಹಂತದಲ್ಲಿ ಸೈನಿಕ ಹುಳುಗಳು ಬೆಳೆಗೆ ಲಗ್ಗೆ ಇಟ್ಟಿವೆ. ಹಗಲಿನಲ್ಲಿ ಸುಳಿ ಹಾಗೂ ಬುಡದ ಮಣ್ಣಿನ ಒಳಭಾಗ ಸೇರಿಕೊಳ್ಳುವ ಹುಳುಗಳು, ರಾತ್ರಿ ವೇಳೆ ಹೊರಬಂದು ಗರಿಗಳನ್ನು ತಿನ್ನುತ್ತಿವೆ. ಜತೆಗೆ ಗರಿಗಳ ಮೇಲೆ ಹಿಕ್ಕೆ ವಿಸರ್ಜಿಸಿ ರೈತರ ನಿದ್ರೆಗೆಡಿಸಿವೆ.

ಕೀಟಬಾದೆ ತೀವ್ರಗೊಂಡು ಮುಸುಕಿನ ಜೋಳದ ಗರಿಗಳು ಹಾಳಾಗಿರುವ ಪರಿಣಾಮ ಬೆಳವಣಿಗೆಯಲ್ಲಿ ಕುಂಠಿತವಾಗಿದ್ದು, ಇದರಿಂದ ಜೋಳದ ತೆನೆ ಹುಲುಸಾಗಿ ಬರುವುದಿಲ್ಲ. ತೆನೆ ಬಂದರೂ ನಿರೀಕ್ಷೆಯಂತೆ ಫಸಲು ಹಿಡಿಯುವುದು ಅನುಮಾನವಾಗಿದೆ ಎಂದು ಹೋಬಳಿಯ ಪಿ.ಹೊಸಹಳ್ಳಿ ರೈತ ಎಚ್‌.ಕೆ.ಗೋವಿಂದರಾಜ್‌ ಅಳಲು ತೋಡಿಕೊಂಡಿದ್ದಾರೆ.

ಕಳೆದ 1 ವಾರದಿಂದ ಹೆಚ್ಚು ನೀರು ಮಿಶ್ರಿತ ಮಂಜು ಬೀಳುತ್ತಿದ್ದು, ಜತೆಗೆ ಮೋಡಕವಿದ ವಾತಾವರಣ ಹಾಗೂ ಶೀತಮಿಶ್ರಿತ ಗಾಳಿ ಕೀಟಬಾಧೆ ಕಾರಣ ಎನ್ನಲಾಗಿದೆ. ರೈತರು ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ಖಾಸಗಿ ಔಷಧ ಅಂಗಡಿಗಳಲ್ಲಿ ಲಭ್ಯವಿರುವ ಕೀಟನಾಶಕಗಳನ್ನು ತಂದು ಬೆಳೆಗೆ ಸಿಂಪಡಿಸಿದರೂ ಕೀಟಬಾಧೆ ನಿಯಂತ್ರಣಕ್ಕೆ ಬಂದಿಲ್ಲ. ಕೆಲವರು ಬೆಳೆಗೆ ತಕ್ಷ ಣ ಕೀಟನಾಶಕ ಸಿಂಪಡಿಸಿದರೆ, ಇನ್ನೂ ಕೆಲವರು ಕೀಟನಾಶಕ ಸಂಪಡಿಸದೆ ಕೈಚೆಲ್ಲಿರುವ ಕಾರಣ ಹುಳುಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಒಂದು ಎಕರೆ ಜಮೀನಿನಲ್ಲಿ ಮುಸುಕಿನ ಜೋಳ ಬೆಳೆಯಲು ಬಿತ್ತನೆಯಿಂದ ಕಟಾವಿನ ಹಂತದವರೆಗೆ ಸುಮಾರು 8ರಿಂದ 9 ಸಾವಿರ ರೂ. ನಿರ್ವಹಣೆ ವೆಚ್ಚ ತಗುಲಲಿದೆ. ಕೀಟಬಾಧೆಗೆ ತುತ್ತಾಗಿರುವ ಮುಸುಕಿನ ಜೋಳದ ಬೆಳೆ ಜಾನುವಾರುಗಳ ಮೇವಿಗೂ ಬಳಕೆಯಾಗದ ಸ್ಥಿತಿ ತಲುಪಿದ್ದು, ರೈತರು ದಿಕ್ಕು ತೋಚದ ಪರಿಸ್ಥಿತಿಯಲ್ಲಿದ್ದಾರೆ.

ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಮುಸುಕಿನ ಜೋಳ ಮಳೆಯ ತೀವ್ರ ಕೊರತೆಯಿಂದ ಒಣಗಿಹೋದರೆ, ಹಿಂಗಾರಿನ ಬೆಳೆ ಕೀಟಬಾಧೆಗೆ ಸಿಲುಕಿದೆ. ಇದರಿಂದ ರೈತರಿಗೆ ಆರ್ಥಿಕವಾಗಿ ಸಂಕಷ್ಟ ಎದುರಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ರೋಗಬಾಧೆ ತಡೆ, ಬೆಳೆ ಪರಿಹಾರಕ್ಕೆ ಕ್ರಮ ವಹಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
----------------------
ರೈತ ಯಾವುದೇ ಬೆಳೆ ಬೆಳೆಯಬೇಕೆಂದರೆ ಕೃಷಿ ಅಧಿಕಾರಿಗಳ ಶಿಫಾರಸು ಹಾಗೂ ಮಾರ್ಗದರ್ಶನ ಅಗತ್ಯ. ಕೃಷಿ ಅಧಿಕಾರಿಗಳು ಬಿತ್ತನೆಯಿಂದ ಫಸಲಿನ ಹಂತದವರೆಗೂ ರೈತರೊಂದಿಗೆ ಸಂಪರ್ಕದಲ್ಲಿದ್ದು, ಆಗಾಗ್ಗೆ ಜಮೀನಿಗೆ ಭೇಟಿ ನೀಡಿ ಬೆಳೆ ವೀಕ್ಷಿಸಿ ಮಾಹಿತಿ ನೀಡಿದರೆ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ ರೋಗಬಾಧೆ ನಿಯಂತ್ರಣಕ್ಕೆ ಸೂಕ್ತ ಸಲಹೆ ನೀಡಬೇಕಿದೆ.
- ರಾಮೇಗೌಡ, ಪಿ.ಹೊಸಹಳ್ಳಿ ಗ್ರಾಮದ ರೈತ
---------------
ಹೋಬಳಿಯಾದ್ಯಂತ ಬಿತ್ತನೆಗೊಂಡಿರುವ ಮುಸುಕಿನ ಜೋಳದ ಬೆಳೆ ಈ ಬಾರಿ ನಿರೀಕ್ಷೆಗೂ ಮೀರಿ ಬೆಳೆದಿದೆ. ಆದರೆ ಕೀಟಬಾಧೆ ಕಾಣಿಸಿಕೊಂಡಿದೆ. ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸಿ ಲಭ್ಯವಿರುವ ಕೀಟನಾಶಕ ಹಾಗೂ ಅಧಿಕಾರಿಗಳ ಸಲಹೆ ಅನುಸರಿಸಿ ಬೆಳೆಗೆ ಕೀಟನಾಶಕ ಸಿಂಪಡಿಸಿದರೆ ಹುಳುಗಳ ಕಾಟಕ್ಕೆ ಮುಕ್ತಿ ನೀಡಬಹುದು.
- ಚನ್ನವೀರೇಗೌಡ ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಹಿರೀಸಾವೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ