ಆ್ಯಪ್ನಗರ

ಕೊಣನೂರು: ಮಕ್ಕಳ ಮೇಲಿನ ದೌರ್ಜನ್ಯ ನಿಯಂತ್ರಣಕ್ಕೆ ಸಹಾಯವಾಣಿ ನೆರವು

ಕೊಣನೂರು: ಮಕ್ಕಳು ಕಲಿಯಲು ಬೇಕಿರುವ ವಾತಾವರಣ, ಮೂಲ ಸೌಕರ‍್ಯಗಳನ್ನು ಕಲ್ಪಿಸಿದರೆ ಸುಸಂಸ್ಕೃತರಾಗುವುದರ ಜತೆಗೆ ವಿಶ್ವಮಾನವರಾಗುವುದರಲ್ಲಿ ಸಂದೇಹವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಪದ್ಮಮ್ಮ ತಿಳಿಸಿದರು.

Vijaya Karnataka 30 Nov 2018, 5:00 am
ಕೊಣನೂರು: ಮಕ್ಕಳು ಕಲಿಯಲು ಬೇಕಿರುವ ವಾತಾವರಣ, ಮೂಲ ಸೌಕರ‍್ಯಗಳನ್ನು ಕಲ್ಪಿಸಿದರೆ ಸುಸಂಸ್ಕೃತರಾಗುವುದರ ಜತೆಗೆ ವಿಶ್ವಮಾನವರಾಗುವುದರಲ್ಲಿ ಸಂದೇಹವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಪದ್ಮಮ್ಮ ತಿಳಿಸಿದರು.
Vijaya Karnataka Web hassan konanuru kitturu rani chanamma resident school childrens rural meeting
ಕೊಣನೂರು: ಮಕ್ಕಳ ಮೇಲಿನ ದೌರ್ಜನ್ಯ ನಿಯಂತ್ರಣಕ್ಕೆ ಸಹಾಯವಾಣಿ ನೆರವು


ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕೊಣನೂರು ಗ್ರಾಮ ಪಂಚಾಯಿತಿಯಿಂದ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಮಾತನಾಡಿ, ಮಕ್ಕಳು ಧೈರ್ಯವನ್ನು ಬೆಳೆಸಿಕೊಂಡಾಗ ಮಾತ್ರ ಸ್ವಯಂ ರಕ್ಷಣೆಗೆ ಜತೆಗೆ ಅನ್ಯಾಯವನ್ನು ತಡೆಗಟ್ಟಲು ಸಾಧ್ಯ. ಮಕ್ಕಳ ಸಹಾಯವಾಣಿಯನ್ನು ಸಮರ್ಪಕವಾಗಿ ಬಳಸಿಕೊಂಡಾಗ ನಿಮ್ಮ ಮೇಲಿನ ದೌರ್ಜನ್ಯ ಹಾಗೂ ಬಾಲ್ಯವಿವಾಹದಂತಹ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ. ಗ್ರಾಪಂಗಳಲ್ಲಿ ಗ್ರಾಮಗಳ ಅಭಿವೃದ್ಧಿಗಾಗಿ ಗ್ರಾಮ ಸಭೆಗಳನ್ನು ಮಾಡುವ ಹಾಗೆ ಮಕ್ಕಳ ಹಕ್ಕುಗಳ ರಕ್ಷ ಣೆಗಾಗಿ ಮಕ್ಕಳ ಗ್ರಾಮಸಭೆಗಳನ್ನು ನಡೆಸಲಾಗುತ್ತದೆ. ಇದು ಮಕ್ಕಳ ಹಕ್ಕುಗಳಿಗೆ ತೊಂದರೆಯುಂಟಾಗಿದ್ದಲ್ಲಿ ಅವುಗಳನ್ನು ತಿಳಿದು ರಕ್ಷಿಸಲು ನಡೆಸುವ ಸಭೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ‍್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ಸಿಡಿಪಿಒ ಶಿವಕುಮಾರ್‌ ಮಾತನಾಡಿ, ಶಾಲೆಯ ಒಳಗೆ-ಹೊರಗೆ, ಸುತ್ತಲಿನ ಪರಿಸರದಲ್ಲಿ ವಿದ್ಯಾರ್ಥಿಗಳಿಗಿರುವ ಸಮಸ್ಯೆಗಳನ್ನು ತಿಳಿದು ಬಗೆಹರಿಸುವ ನಿಟ್ಟಿನಲ್ಲಿ ಮಕ್ಕಳ ಗ್ರಾಮ ಸಭೆಯನ್ನು ಏರ್ಪಡಿಸುತ್ತಿದ್ದು ವಿದ್ಯಾರ್ಥಿಗಳು ಸಭೆಯ ಸದುಪಯೋಗಪಡಿಸಿಕೊಳ್ಳಬೇಕು. ಸರಕಾರಿ ಶಾಲೆಗಳ ಬಗ್ಗೆ ಇರುವ ಕೀಳರಿಮೆ ಹೋಗಬೇಕಾಗಿದೆ. ಎಲ್ಲ ಶಾಲೆಗಳಿಗೆ ಶುದ್ಧ ಕುಡಿಯುವ ನೀರು, ಶೌಚಾಲಯಗಳಿಗೆ ನೀರು ಒದಗಿಸಬೇಕು ಎಂದು ಗ್ರಾಪಂಗೆ ಸೂಚಿಸಿದರು.

ಕೊಣನೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಗಣೇಶ್‌ ಮಕ್ಕಳು ತಮ್ಮ ಶಾಲೆಯ ಹಾಗೂ ಮನೆಯ ಪರಿಸರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಅಹವಾಲು ಸ್ವೀಕರಿಸಿ ಮಾತನಾಡಿ, ಮಕ್ಕಳ ಕಲಿಕೆಗೆ ಮುಕ್ತ ವಾತಾವರಣ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಕೊಣನೂರು ಗ್ರಾಪಂ, ಶಿಕ್ಷ ಣ ಇಲಾಖೆ ಹಾಗೂ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗೆಯೇ ವಿದ್ಯಾರ್ಥಿಗಳಾದ ನೀವು ಅನೇಕ ಬೇಡಿಕೆಗಳನ್ನು ಕೊಣನೂರು ಅಭಿವೃದ್ಧಿಗೆ ಹಾಗೂ ತಮ್ಮ ಶಾಲೆಗೆ ಕೇಳಿದ್ದೀರಿ. ಇದನ್ನು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಶೀಘ್ರ ಪರಿಹರಿಸಲು ಗಮನ ನೀಡುತ್ತೇವೆ. ಪಟ್ಟಣದಲ್ಲಿ 14 ಶಾಲೆಗಳಿದ್ದು ಎಲ್ಲ ಶಾಲಾ ಕಾಲೇಜುಗಳಿಗೆ ಅಗತ್ಯ ಸೌಲಭ್ಯ ನೀಡುತ್ತೇವೆ. ಬಿಎಸ್‌ಎಸ್‌ ಸರಕಾರಿ ಪ್ರೌಢಶಾಲೆ ಚಾವಣಿ ದುರಸ್ತಿಯನ್ನು ಸದ್ಯದಲ್ಲೇ ಮಾಡಿಸಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷ ಕೆ.ಬಿ.ರಮೇಶ್‌ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಎಲ್ಲ ಶಾಲೆಗಳಿಗೂ ನೀರಿನ ಟ್ಯಾಂಕ್‌ ಶುದ್ಧ ಮಾಡಲು ಕ್ರಮಕೈಗೊಳ್ಳಲಾಗುವುದು. ನೀವು ಶೌಚಾಲಯ ಬಳಸಿ ನಿಮ್ಮ ಮನೆಯವರಿಗೂ ಶೌಚಾಲಯ ನಿರ್ಮಾಣಕ್ಕೆ ಮನವೊಲಿಸಲು ಸಲಹೆ ನೀಡಿ. ಗ್ರಾಮ ಸಭೆಗೆ ಎಲ್ಲ ಇಲಾಖೆಗಳ ಸ್ಥಳೀಯ ಅಧಿಕಾರಿಗಳು ಹಾಜರಿರುವಂತೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ನಮ್ಮ ಶಾಲೆಯಲ್ಲಿ ಕಂಪ್ಯೂಟರ್‌ ಶಿಕ್ಷ ಕರಿಲ್ಲ, ಎಸ್‌ಸಿ/ಎಸ್‌ಟಿ ಮಕ್ಕಳಿಗಿರುವ ಮೀಸಲು ಉಳಿದ ವರ್ಗಗಳ ಮಕ್ಕಳಿಗೇಕಿಲ್ಲ. ಎಲ್ಲ ಕಡೆ ಹೆಣ್ಣುಮಕ್ಕಳ ಅಪಹರಣ ವಿಷಯ ಕೇಳಿದರೆ ಭಯವಾಗುತ್ತದೆ. ಖಾಸಗಿ ಶಾಲೆಗಳಲ್ಲಿರುವ ಸೌಲಭ್ಯಗಳು ನಮ್ಮ ಶಾಲೆಗಳಲ್ಲಿ ಏಕಿಲ್ಲ. ಶಾಲೆಯ ಚಾವಣಿಯಿಂದ ಮಳೆ ಬಂದಾಗ ನೀರು ಸೋರುವುದನ್ನು ಯಾವಾಗ ಸರಿಪಡಿಸುತ್ತೀರಿ? ನಮ್ಮ ಬಡಾವಣೆ ವಾಟರ್‌ಟ್ಯಾಂಕ್‌ ಯಾವಾಗ ಸ್ವಚ್ಛ ಮಾಡುತ್ತೀರಿ? ಹೀಗೆ ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಅಧಿಕಾರಿಗಳ ಮುಂದೆ ಸಮಸ್ಯೆಗಳನ್ನು ಮುಂದಿಟ್ಟರು. ಇದಕ್ಕೆ ಅಧಿಕಾರಿಗಳು ಸಮರ್ಪಕ ಉತ್ತರಗಳನ್ನು ನೀಡಿದರು.

ಸಭೆಯಲ್ಲಿ ಕಿತ್ತೂರುರಾಣಿ ಚೆನ್ನಮ್ಮ ವಸತಿಶಾಲೆಯ ಪ್ರಾಂಶುಪಾಲ ಎಂ.ಸಿ. ಹರೀಶ್‌, ಶಿಕ್ಷ ಣ ಸಂಯೋಜಕ ಪೊನ್ನಪ್ಪ, ಬಿಎಸ್‌ಎಸ್‌ ಸರಕಾರಿ ಪ್ರೌಢಶಾಲೆ ಉಪ ಪ್ರಾಂಶುಪಾಲ ಬಿ.ಸಿ. ಹೊನ್ನೇಗೌಡ, ಗ್ರಾಪಂ ಸದಸ್ಯ ಮಹೇಶ್‌, ಶಿಕ್ಷ ಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ