ಆ್ಯಪ್ನಗರ

ಕಲ್ಪತರು ನಾಡಿನ ಕೊಬ್ಬರಿಗಿಲ್ಲ ಬೇಡಿಕೆ

ಹಾಸನ: ಎಣ್ಣೆ ಅಂಶವಿಲ್ಲ, ಗಾತ್ರ ಕಡಿಮೆ ಎಂಬ ಕಾರಣಕ್ಕೆ ಕಲ್ಪತರು ನಾಡಿನ ಕೊಬ್ಬರಿಗೆ ತಮಿಳುನಾಡಿನಲ್ಲಿ ಬೇಡಿಕೆ ಇಲ್ಲದಂತಾಗಿದೆ. ಉತ್ತಮ ಬೆಲೆ ಇದ್ದರೂ, ಇಳುವರಿ ಇಲ್ಲದೆ ಅರಸೀಕೆರೆ, ಚನ್ನರಾಯಪಟ್ಟಣ ತಾಲೂಕಿನ ತೆಂಗು ಬೆಳೆಗಾರ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

Vijaya Karnataka 11 Jan 2019, 5:00 am
ಹಾಸನ: ಎಣ್ಣೆ ಅಂಶವಿಲ್ಲ, ಗಾತ್ರ ಕಡಿಮೆ ಎಂಬ ಕಾರಣಕ್ಕೆ ಕಲ್ಪತರು ನಾಡಿನ ಕೊಬ್ಬರಿಗೆ ತಮಿಳುನಾಡಿನಲ್ಲಿ ಬೇಡಿಕೆ ಇಲ್ಲದಂತಾಗಿದೆ. ಉತ್ತಮ ಬೆಲೆ ಇದ್ದರೂ, ಇಳುವರಿ ಇಲ್ಲದೆ ಅರಸೀಕೆರೆ, ಚನ್ನರಾಯಪಟ್ಟಣ ತಾಲೂಕಿನ ತೆಂಗು ಬೆಳೆಗಾರ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.
Vijaya Karnataka Web hassan market down coconut
ಕಲ್ಪತರು ನಾಡಿನ ಕೊಬ್ಬರಿಗಿಲ್ಲ ಬೇಡಿಕೆ


ಬರವನ್ನು ಸದಾ ಅಪ್ಪಿಕೊಂಡಿರುವ ಅರಸೀಕೆರೆ ತಾಲೂಕಿನಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಕಪ್ಪುತಲೆ ಹುಳು ತೆಂಗನ್ನು ಬಿಟ್ಟೂ ಬಿಡದೆ ತಿಂದು ಹಾಕಿದ ಪರಿಣಾಮ ಏಳು ಲಕ್ಷ ಹೆಕ್ಟೇರ್‌ ಅರಸೀಕೆರೆ, ಚನ್ನರಾಯಪಟ್ಟಣ, ಬೇಲೂರು, ಹಾಸನದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ತೆಂಗಿನ ಗಿಡ ನಾಶವಾಗಿದೆ. ಅಳಿದುಳಿದ ತೆಂಗಿನ ಮರದಲ್ಲೂ ಅಷ್ಟೇ ಪ್ರಮಾಣದಲ್ಲಿ ತೆಂಗಿನ ಇಳುವರಿ ಕ್ಷೀಣಿಸಿದೆ ಎಂಬುದು ತೋಟಗಾರಿಕೆ ಇಲಾಖೆ ಲೆಕ್ಕಾಚಾರ. ಈ ಎಲ್ಲ ಕಾರಣದಿಂದ ಈ ಬಾರಿಯ ಸಂಕ್ರಾಂತಿಗೆ ಜಿಲ್ಲೆಯ ಕೊಬ್ಬರಿ ಬದಲು ದಾವಣಗೆರೆ, ಭದ್ರಾವತಿ, ಚಿತ್ರದುರ್ಗ ಕೊಬ್ಬರಿ ಅರಸೀಕೆರೆ ಮಾರುಕಟ್ಟೆ ಪ್ರವೇಶಿಸುವಂತಾಗಿದೆ. ಆದರೂ ನಿತ್ಯ 7ರಿಂದ 8 ಲೋಡ್‌ ಬರಬೇಕಿದ್ದ ಜಾಗದಲ್ಲಿ 1ರಿಂದ 2 ಲೋಡ್‌ ಕೊಬ್ಬರಿ ಬಂದರೆ ಹೆಚ್ಚು ಎಂಬಂತಾಗಿದ್ದು,ಮಾರುಕಟ್ಟೆ ಬಿಕೋ ಎನ್ನುತ್ತಿದೆ.

ಹಿಂದಿನ ವರ್ಷ 14,300 ಕ್ವಿಂಟಾಲ್‌ ಬಂದಿದ್ದರೆ ಈ ಬಾರಿ 7ರಿಂದ 8 ಸಾವಿರ ಕ್ವಿಂಟಾಲ್‌ ಕೊಬ್ಬರಿ ಮಾರಾಟವಾಗಿದೆ. ನಿತ್ಯ 500 ಚೀಲ ಬಂದರೆ ಅದೇ ದೊಡ್ಡದು ಎನ್ನುತ್ತಾರೆ ಸ್ಥಳೀಯ ವರ್ತಕರು.
ಕುಸಿದ ಬೇಡಿಕೆ: ಅರಸೀಕೆರೆ-ಚನ್ನರಾಯಪಟ್ಟಣದ ಕೊಬ್ಬರಿ ಎಂದರೆ ಬೆಂಗಳೂರು, ತುಮಕೂರು ಮಾತ್ರವಲ್ಲದೆ ತಮಿಳುನಾಡಿನಲ್ಲಿ ವ್ಯಾಪಕ ಬೇಡಿಕೆ ಇತ್ತು. ಕೊಬ್ಬರಿ ಸಣ್ಣ, ಎಣ್ಣೆ ಅಂಶವಿಲ್ಲ ಎಂಬ ಕಾರಣಕ್ಕೆ ಈ ಬಾರಿ ಅಂತಹ ಬೇಡಿಕೆ ಇಲ್ಲವಾಗಿದೆ. ತಿಪಟೂರು, ತುಮಕೂರು, ನಾಗಮಂಗಲ ಭಾಗದಲ್ಲಿ ಈ ಬಾರಿ ತೆಂಗಿನ ಉತ್ಪಾದನೆ ಚೆನ್ನಾಗಿರುವ ಕಾರಣ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಅಧಿಕಾರಿಗಳು.
ತೆಂಗು ಬೆಳೆಗಾರ ರೈತ ಅರಸೀಕೆರೆ ತಾಲೂಕು ಒಂದರಲ್ಲೇ 20 ಲಕ್ಷ ಮರಗಳಿಗೆ ಹಾನಿಯಾಗಿದೆ. ಇಳುವರಿ ಸಂಪೂರ್ಣ ಕ್ಷೀಣಿಸಿದೆ ಎನ್ನುತ್ತಾರೆ ಅಧಿಕಾರಿಗಳು.
ಬೆಲೆ ಉತ್ತಮ: ಉತ್ತಮ ದರ್ಜೆಯ ಕೊಬ್ಬರಿ ಕ್ವಿಂಟಾಲ್‌ಗೆ 14,300 ರೂ. ತನಕ ದರವಿದೆ. ಹಿಂದಿನ ವರ್ಷ ಇದೇ ವೇಳೆಯಲ್ಲಿ ಏಳರಿಂದ ಎಂಟು ಸಾವಿರವಿತ್ತು. ಬೆಲೆ ದುಪ್ಪಟ್ಟಾದರೂ, ಇಳುವರಿ ಕ್ಷೀಣಿಸಿದ್ದು, ರೈತರು ದಿಕ್ಕು ತೋಚದಂತಾಗಿದೆ.
-----------------
ಅರಸೀಕೆರೆ ತಾಲೂಕಿನ ಕೊಬ್ಬರಿ ಗಾತ್ರದಲ್ಲಿ ಸಣ್ಣದಾಗಿದ್ದು, ಎಣ್ಣೆ ಅಂಶವೂ ಇಲ್ಲ ಎಂಬ ದೂರುಗಳಿವೆ. ಇಳುವರಿ ಸಂಪೂರ್ಣ ಕ್ಷೀಣಿಸಿದೆ. ಬೆಲೆ ಇದ್ದರೂ ಮಾರುಕಟ್ಟೆಗೆ ಕೊಬ್ಬರಿ ಪೂರೈಕೆ ಆಗುತ್ತಿಲ್ಲ. ದಾವಣಗೆರೆ, ಚಿತ್ರದುರ್ಗದಿಂದ ನಿತ್ಯ 500 ಚೀಲ ಬಂದರೆ ಹೆಚ್ಚು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಮಳೆ ಕೊರತೆಯಿಂದ ಕೊಬ್ಬರಿ ಕಡಿಮೆ ಪೂರೈಕೆ ಆಗುವ ಸಾಧ್ಯತೆ ಇದೆ. ಉತ್ತಮ ಬೆಲೆ ಇದ್ದರೂ ಕೊಬ್ಬರಿ ಇಲ್ಲವಾಗಿದೆ.
- ಸಿದ್ದರಾಜು ಎಪಿಎಂಸಿ ಕಾರ್ಯದರ್ಶಿ, ಅರಸೀಕೆರೆ
----------
ಅರಸೀಕೆರೆ, ಚನ್ನರಾಯಪಟ್ಟಣ, ಬೇಲೂರು ಭಾಗದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ತೆಂಗಿನ ಮರ ನಾಶವಾಗಿವೆ. ಆರು ಲಕ್ಷ ಮರ ಒಣಗಿವೆ. ಉದ್ಯೋಗಖಾತ್ರಿ ಯೋಜನೆ ಮೂಲಕ 65 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಒಂದು ಲಕ್ಷ ತೆಂಗಿನ ಸಸಿಗಳನ್ನು ಹಾಕಿಸಲಾಗುತ್ತಿದೆ.
- ಸಂಜಯ್‌ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ, ಹಾಸನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ