ಆ್ಯಪ್ನಗರ

ಕುಮಾರಸ್ವಾಮಿ ಬಗ್ಗೆ ಮೃದು ಧೋರಣೆ ಬೇಡ: ಬಿಜೆಪಿ ನಾಯಕರಿಗೆ ಪ್ರೀತಂ ಗೌಡ ಮನವಿ

ಕುಮಾರಸ್ವಾಮಿ ನಮ್ಮನ್ನು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಬಳಿಕ ನಮ್ಮ ಮಾತೃ ಸಂಸ್ಥೆ ಬಗ್ಗೆ ಮಾತನಾಡುತ್ತಾರೆ. ಅವರ ಬಗ್ಗೆ ಮೃದು ಧೋರಣೆ ಹೊಂದಿರುವ ಬಿಜೆಪಿ ನಾಯಕರು ಅದನ್ನು ಅವರ ಓಲೈಕೆಯನ್ನು ನಿಲ್ಲಿಸಬೇಕು ಎಂದು ಹಾಸನದಲ್ಲಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.

Vijaya Karnataka 7 Oct 2021, 12:48 pm

ಹೈಲೈಟ್ಸ್‌:

  • ನಮ್ಮನ್ನು ಬಳಸಿಕೊಂಡು ಬೇಳೆ ಬೇಯಿಸಿಕೊಂಡು ನಮ್ಮ ವಿರುದ್ಧ ಮಾತನಾಡುತ್ತಾರೆ
  • ನಮ್ಮ ಕೆಲವು ಶಾಸಕರು, ಸಚಿವರು ಅವರನ್ನು ಓಲೈಕೆ ಮಾಡುವುದನ್ನು ಬಿಡಬೇಕು
  • ರಾಜಕೀಯವಾಗಿ ನಂಬಿಕೆಗೆ ಅರ್ಹರಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ
  • ಕಾಂಗ್ರೆಸ್ ಅಥವಾ ಬಿಜೆಪಿ ಸಂಪೂರ್ಣ ಬಹುಮತ ಪಡೆಯುವುದು ಅವರಿಗೆ ಬೇಕಿಲ್ಲ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Preetham J Gowda
ಹಾಸನ: ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ನಮ್ಮ ಮಾತೃ ಸಂಸ್ಥೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದ ಮೇಲೆ ಅವರ ಬಗ್ಗೆ ಎಚ್ಚರದಿಂದ ಇರಬೇಕು. ಇದು ನನ್ನನ್ನು ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೆ ನೀಡಿರುವ ಸಂದೇಶ ಎಂದು ಹಾಸನ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.
ನಮ್ಮ ಕೆಲವು ಶಾಸಕರು ಮತ್ತು ಸಚಿವರು ಕುಮಾರಸ್ವಾಮಿ ಅವರನ್ನು ಓಲೈಕೆ ಮಾಡೋದು, ಮೃದು ಧೋರಣೆ ತೋರುವುದನ್ನು ಮಾಡುತ್ತಿದ್ದರು. ಇನ್ನು ಮೇಲಾದರೂ ಅದನ್ನು ನಿಲ್ಲಿಸಬೇಕು. ನಮ್ಮನ್ನು ಬಳಸಿಕೊಂಡು ಅವರ ಬೇಳೆ ಬೇಯಿಸಿ ಕೊಳ್ತಾರೆ. ಆ ಮೇಲೆ ನಮ್ಮ ಮಾತೃ ಸಂಸ್ಥೆ ಮೇಲೆ ಮಾತಾಡ್ತಾರೆ. ಹೀಗಾಗಿ ಅವರ ಮನಸ್ಥಿತಿ ಏನೆಂದು ಅರ್ಥ ಮಾಡಿಕೊಳ್ಳಬೇಕು ಎಂದು ಪರೋಕ್ಷವಾಗಿ ಜೆಡಿಎಸ್ ಬಗ್ಗೆ ಮೃದು ಧೋರಣೆ ತಾಳುವ ಬಿಜೆಪಿ ನಾಯಕರ ವಿರುದ್ಧ ಪ್ರೀತಂ ಗೌಡ ಅಸಮಾಧಾನ ವ್ಯಕ್ತಪಡಿಸಿದರು.
ನಾನು ಎಂದೂ ಕೂಡ ಎಚ್‌ಡಿ ದೇವೇಗೌಡರ ವಿರುದ್ಧ ಮಾತನಾಡಿಲ್ಲ; ಶಾಸಕ ಪ್ರೀತಂ ಜೆ.ಗೌಡ
ಮೈಸೂರು ಮಹಾನಗರ ಪಾಲಿಕೆ ಅಧಿಕಾರ ಹಿಡಿಯಲು, ಕಲಬುರಗಿ ಮಹಾನಗರ ಪಾಲಿಕೆ ಹಿಡಿಯಲು ಅವರ ಮೇಲೆ ಅವಲಂಬಿತರಾಗಿ ಅವರನ್ನು ಓಲೈಕೆ ಮಾಡಿದರೆ ಕಷ್ಟ. ಹಾಗೆ ಮಾಡಿದರೆ ನಮ್ಮ ಬುಡಕ್ಕೆ ಬರ್ತಾರೆ ಎನ್ನೋದಕ್ಕೆ ಈ ಘಟನೆ ಸಾಕ್ಷಿ. ಅಧಿಕಾರ ಬರೋಕೆ ಇನ್ನೂ ಐದು ಹತ್ತು ವರ್ಷ ಆಗಲಿ ಕಾಯೋಣ. ಬಿಜೆಪಿ ಮುಖ್ಯ ಉದ್ದೇಶ ಅಧಿಕಾರ ಹಿಡಿಯುವುದಿಲ್ಲ. ದೇಶಕ್ಕೆ ಒಳಿತನ್ನು ಬಯಸೋ ಪಕ್ಷ ಬಿಜೆಪಿ. ಇದು ನನಗೂ ಸೇರಿ ಎಲ್ಲರಿಗೂ ಪಾಠ ಎಂದರು.

ಅಲ್ಪ ಕಾಲದ ಅಧಿಕಾರಕ್ಕಾಗಿ ಅವರ ಮೇಲೆ ಮೃದು ದೋರಣೆ ತಾಳಿದರೆ ಜನರಿಗೆ ಗೊಂದಲ ಆಗುತ್ತೆ ಎಂದು ಕೆಲವು ದಿನಗಳಿಂದ ಜನರೂ ಹೇಳುತ್ತಿದ್ದಾರೆ. ನಿಮ್ಮ ಸಂಘದ ಬಗ್ಗೆಯೇ ಮಾತಾಡುವವರ ಬಗ್ಗೆ ಮೃದು ಧೋರಣೆ ಯಾಕೆ ಎಂದು ಜನ ನನ್ನನ್ನೂ ಪ್ರಶ್ನೆ ಮಾಡಿದ್ದಾರೆ. ಯಾರೂ ನಮ್ಮ ತತ್ವ ಸಿದ್ಧಾಂತ ವಿರೋಧ ಮಾಡುತ್ತಾರೋ, ಅವರನ್ನು ರಾಜಕೀಯವಾಗಿ ಬಹಳ ದೂರ ಇಡಬೇಕು. ವೈಯಕ್ತಿಕವಾಗಿ ಸಿದ್ದರಾಮಯ್ಯ, ಕುಮಾರಣ್ಣ ಬಗ್ಗೆ ಗೌರವ ಇದೆ. ಆದರೆ ನಮ್ಮ ಸಿದ್ಧಾಂತದ ಬಗ್ಗೆ ಮಾತನಾಡುತ್ತಾರೆ ಅಂದರೆ, ಅವರ ಬಗ್ಗೆ ನಮ್ಮ ರಾಜಕೀಯ ಬದ್ಧತೆ ಏನಿರಬೇಕು ಎಂದು ತೀರ್ಮಾನ ಮಾಡುವ ಸಮಯವಿದು. ರಾಜ್ಯ ನಾಯಕರು, ರಾಜ್ಯ ಅಧ್ಯಕ್ಷರು, ಸಚಿವರು, ಮುಖ್ಯಮಂತ್ರಿ ಸೇರಿದಂತೆ ಯಾರ್ಯಾರು, ಯಾವಾಗ ಮೃದು ಧೋರಣೆ ತಾಳಿದ್ದರೋ, ಅವರೆಲ್ಲರಿಗೂ ಇದು ಸಂದೇಶ ಎಂದು ಹೇಳಿದರು.
ಆರೆಸ್ಸೆಸ್‌ ಟೀಕೆ ಹಿಂದೆ ಎಚ್‌ಡಿಕೆ ಸ್ಕೆಚ್‌; ಕಿಂಗ್‌ ಮೇಕರ್‌ ಕನಸಿಗೆ ಮುಸ್ಲಿಂ ಮತ ಸೆಳೆಯುವ ಪ್ಲ್ಯಾನ್‌!
ಈ ಸಂದೇಶ ಕೊಟ್ಟ ಕುಮಾರಸ್ವಾಮಿ ಅವರಿಗೆ ಧನ್ಯವಾದ ಹೇಳುತ್ತೇನೆ. ಅವರು ರಾಜಕೀಯವಾಗಿ ನಂಬಿಕೆಗೆ ಅರ್ಹರಲ್ಲ ಅನ್ನೋದನ್ನು ಪದೇ ಪದೆ ಸಾಬೀತು ಮಾಡಿದ್ದಾರೆ. ಈ ಬಾರಿ ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ಅದಕ್ಕಾಗಿ ಕುಮಾರಸ್ವಾಮಿ ಅವರಿಗೆ ನಾನು ಧನ್ಯವಾದ ಹೇಳ್ತೀನಿ. ಅವರ ಮುಖವಾಡ ಕಳಚಿ ಬಿದ್ದಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 120 ಸ್ಥಾನ ಬರುತ್ತದೆ ಅಂದ ಕೂಡಲೇ ಬಿಜೆಪಿಗೆ ವಿರುದ್ಧವಾಗುತ್ತಾರೆ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದರೆ ಕಾಂಗ್ರೆಸ್‌ಗೆ ವಿರುದ್ಧ ಇರುತ್ತಾರೆ. ಅವರಿಗೆ ಕಾಂಗ್ರೆಸ್ ಆಗಲಿ, ಬಿಜೆಪಿ ಆಗಲಿ 100 ಸೀಟುಗಳ ಮೇಲೆ ಬರಬಾರದು. ಇದು ಜೆಡಿಎಸ್‌ಗೆ ಇರುವ ಯೋಜನೆ ಎಂದು ಲೇವಡಿ ಮಾಡಿದರು.

ಇವರು ಯಾರಿಗಾದರೂ ಒಬ್ಬರಿಗೆ ಪ್ಯಾರಾಸೈಟ್ ಆಗಬೇಕು ಅನ್ನೋದು ಇವರ ಕಾಳಜಿ. ಅದಕ್ಕೆ ಬೇಕಾದ ಅಂಶವನ್ನು ತೋರಿಸುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಬೇರೆಯವರು ಮಾತನಾಡಲ್ಲ, ಪ್ರೀತಂಗೌಡ ಮಾತಾಡ್ತಾನೆ ಅಷ್ಟೇ ವ್ಯತ್ಯಾಸ ಎಂದರು.

ಅವರ ಜೊತೆ ಮೃದು ಧೋರಣೆ ತಾಳಿ ಅಧಿಕಾರ ಹಿಡಿಯಬಾರದು. ಹಾಸನ ನಗರಸಭೆ ಅಧಿಕಾರಕ್ಕಾಗಿ ಜೆಡಿಎಸ್ ಜೊತೆ ರಾಜಿಯಾಗಿ ರಾಜಕಾರಣ ಮಾಡು ಅಂದರೆ ನಾನು ಖಂಡಿತಾ ಮಾಡುವುದಿಲ್ಲ. ನಮ್ಮ ಗುರಿ ಹಾಸನ ನಗರಸಭೆ, ಮೈಸೂರು ಮೇಯರ್, ಕಲಬುರಗಿ ಮೇಯರ್ ಸ್ಥಾನ ಅಲ್ಲ. ದೇಶದ ಅಧಿಕಾರ ಹಿಡಿಯಬೇಕು, ದೇಶದ ಬುನಾದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಜೆಡಿಎಸ್ ಜತೆ ರಾಜಿಯಾಗಿ, ಅವರ ಮುಲಾಜಿಗೆ ಒಳಗಾಗಿ, ಅವರು ಹೇಳಿದನ್ನೆಲ್ಲಾ ಕೇಳುವ ಪರಿಸ್ಥಿತಿ ನಮ್ಮ ಪಕ್ಷಕ್ಕೆ ಬರಬಾರದು ಅನ್ನೋದು ಅಭಿಪ್ರಾಯ. ನಾನು ಇದೇ ಕಾರಣಕ್ಕೆ ಕುಮಾರಸ್ವಾಮಿ ಅವರನ್ನು ವಿರೋಧ ಮಾಡಿಕೊಂಡು ಬಂದಿದ್ದು. ನಾನು ವಿರೋಧ ಮಾಡಿದ್ದಕ್ಕೆ ಈಗ ಪುಷ್ಠಿ ಸಿಕ್ಕಿದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ