ಆ್ಯಪ್ನಗರ

ಆರ್‌ಟಿಇ ವಿದ್ಯಾರ್ಥಿಗಳಿಗೆ ಬಸ್‌ಪಾಸ್‌: ಶೀಘ್ರ ತೀರ್ಮಾನ

ಖಾಸಗಿ ಶಾಲೆಯಲ್ಲೂ ಆರ್‌ಟಿಇ ಸೀಟು ಪಡೆದು ವ್ಯಾಸಂಗ ಮಾಡುತ್ತಿರುವ ಬಡವರಿದ್ದು, ಅವರಿಗೂ ಪಾಸ್‌ ನೀಡುವ ಸಂಬಂಧ ಅನುದಾನ ಎಷ್ಟು ಬೇಕೆಂದು ವರದಿ ನೀಡುವಂತೆ ಸಿಎಂ ಸೂಚಿಸಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್‌.ಮಹೇಶ್‌ ತಿಳಿಸಿದರು

Vijaya Karnataka 26 Jul 2018, 9:17 am
ಹಾಸನ: ಖಾಸಗಿ ಶಾಲೆಯಲ್ಲೂ ಆರ್‌ಟಿಇ ಸೀಟು ಪಡೆದು ವ್ಯಾಸಂಗ ಮಾಡುತ್ತಿರುವ ಬಡವರಿದ್ದು, ಅವರಿಗೂ ಪಾಸ್‌ ನೀಡುವ ಸಂಬಂಧ ಅನುದಾನ ಎಷ್ಟು ಬೇಕೆಂದು ವರದಿ ನೀಡುವಂತೆ ಸಿಎಂ ಸೂಚಿಸಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್‌.ಮಹೇಶ್‌ ತಿಳಿಸಿದರು.
Vijaya Karnataka Web n. mahesh with students


ಖಾಸಗಿ ಕಾರ್ಯಕ್ರಮಕ್ಕಾಗಿ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ''ವಿದ್ಯಾರ್ಥಿಗಳಿಗೆ ಪರೀಕ್ಷೆ ಜ್ವರ ಹೋಗಲಾಡಿಸಲು ಓಪನ್‌ ಬುಕ್‌ ಎಕ್ಸಾಂ ವಿಧಾನವನ್ನು ಜಾರಿಗೆ ತರಬೇಕು ಎಂಬ ಚಿಂತನೆ ನನ್ನದಾಗಿದೆ. ಈ ಕುರಿತು ಶಿಕ್ಷಣ ತಜ್ಞರೊಂದಿಗೂ ಚರ್ಚಿಸುತ್ತೇನೆ,'' ಎಂದರು.

''ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಆ.15ರೊಳಗೆ ಸಂಪೂರ್ಣವಾಗಿ ಸಮವಸ್ತ್ರ ಹಾಗೂ ಪಠ್ಯಪುಸ್ತಕವನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ,'' ಎಂದು ಹೇಳಿದರು.

ಪಾಠ ಮಾಡಿದ ಸಚಿವ

ಮೈಸೂರಿಗೆ ತೆರಳುವ ಮಾರ್ಗದಲ್ಲಿ ಚನ್ನಪಟ್ಟಣ ಬಡಾವಣೆಯ ಶಾಲೆಗೆ ಸಚಿವ ಮಹೇಶ್‌ ದಿಢೀರ್‌ ಭೇಟಿ ನೀಡಿದರು. ಒಳಹೊಕ್ಕು ವಿದ್ಯಾರ್ಥಿಗಳ ಬಳಿ ಇದ್ದ ಸಮಾಜ ವಿಜ್ಞಾನ ಪಠ್ಯಪುಸ್ತಕ ಕೈಗೆತ್ತಿಕೊಂಡು 'ವಿಜಯ ನಗರ ಅರಸು ಮನೆತನ ಪಠ್ಯದ ಬಗ್ಗೆ ನಿಮಗೆಲ್ಲ ಗೊತ್ತಾ' ಎಂದು ಪ್ರಶ್ನಿಸಿದರು. ಎಷ್ಟು ಚಾಪ್ಟರ್‌ ಆಗಿದೆ, ಎಷ್ಟು ಜನ ಶಿಕ್ಷಕರಿದ್ದಾರೆ ಎಂಬಿತ್ಯಾದಿ ಮಾಹಿತಿ ಪಡೆದರು.

'ವಕ್ರತುಂಡ ಎಂದರೇನು? ಹಾಗೆಂದು ಯಾರನ್ನು ಕರೆಯುತ್ತಾರೆ?' ಎಂಬ ಶಿಕ್ಷಣ ಸಚಿವರ ಈ ಪ್ರಶ್ನೆಗೆ ಗೊ...ಗೋ... ಎಂದು ತಡವರಿಸುತ್ತಿದ್ದ ವಿದ್ಯಾರ್ಥಿಗಳು, ಶಿಕ್ಷಕಿ, 'ಆನೆಯ ಸೊಂಡಿಲು ಯಾರಿಗೆ ಇರುತ್ತದೆ' ಎಂಬ ಉಪ ಪ್ರಶ್ನೆ ಕೇಳುತ್ತಿದ್ದಂತೆ ವಿದ್ಯಾರ್ಥಿಗಳು ತಟ್ಟನೆ 'ಗಣಪತಿ' ಎಂದು ಉತ್ತರಿಸಿದರು.

ಪರೀಕ್ಷೆ ಅಗತ್ಯವಿಲ್ಲ: ''ಹೊಸಪಠ್ಯಕ್ರಮಕ್ಕೆ ಅನುಗುಣವಾಗಿ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಅವರಿಗೆ ಮಗದೊಂದು ಪರೀಕ್ಷೆ ಮಾಡುವುದು ಎಂದರೆ ಆತ್ಮವಿಶ್ವಾಸವನ್ನು ಕುಗ್ಗಿಸುವಂತಾಗುತ್ತದೆ. ಈ ಕಾರಣ ಪರೀಕ್ಷೆ ಬೇಡ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ತಿಳಿಸಿದ್ದೇನೆ. ವಿಧಾನಪರಿಷತ್‌ನಲ್ಲೂ ಈ ವಿಷಯ ಚರ್ಚೆಯಾಗಿದೆ. ಪರೀಕ್ಷೆ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿಗೆ ಸೂಚಿಸುತ್ತೇನೆ. ಆದರೆ, ಡಿಸಿ ಅವರ ನಿರ್ಧಾರವನ್ನು ಗೌರವಿಸುತ್ತೇನೆ,'' ಎಂದರು.

ಅಚ್ಚರಿಗೊಂಡ ಸಚಿವರು!: ಸಮಾಜಕ್ಕೂ, ವಿಜ್ಞಾನಕ್ಕೂ ಒಬ್ಬರೇ ಶಿಕ್ಷಕರು ಎಂಬ ಸಂಗತಿ ತಿಳಿದು ಸಚಿವರು ಅಚ್ಚರಿಗೊಂಡರು. 'ಹೇಗಪ್ಪ ಸಮಾಜವನ್ನು ನೀನೇ ಮಾಡ್ತಿಯಾ, ವಿಜ್ಞಾನವನ್ನು ಮಾಡ್ತೀಯಾ,' ಎಂದು ಶಿಕ್ಷಕರನ್ನೇ ಪ್ರಶ್ನಿಸಿದರು.

ರೇಗಬೇಡಿ: ''ನಗುತ್ತಲೇ ಆತ್ಮೀಯತೆಯಿಂದ ಮಕ್ಕಳಿಗೆ ಪಾಠಮಾಡಿ. ಮಕ್ಕಳು ಪರೀಕ್ಷೆಗೆ ಹೆದರುತ್ತಾರೆ, ಪರೀಕ್ಷಾ ಜ್ವರ ಹೋಗಲಾಡಿಸಬೇಕು. ಹತ್ತು ತಿಂಗಳು ಭಯಪಡದಂತೆ ತಯಾರು ಮಾಡಿ. ಹತ್ತು ಸಾರಿ ಓದುವುದು ಒಂದೇ, ನೋಡಿಕೊಂಡು ಒಂದು ಸಾರಿ ಬರೆಯುವುದು ಒಂದೇ,'' ಎಂಬ ಸೂತ್ರವನ್ನು ಹೇಳಿಕೊಟ್ಟರು. ''ಶಿಕ್ಷಕರು ಲವ್‌ಲಿಆಗಿ ಟ್ಯೂನಪ್‌ ಆಗಬೇಕು. ಆಗ ಮಕ್ಕಳು ಬುದ್ಧಿವಂತರಾಗುತ್ತಾರೆ,'' ಎಂದು ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ