ಆ್ಯಪ್ನಗರ

ಶಿಷ್ಟಾಚಾರ ಪಾಲಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ

ಶಿಷ್ಟಾಚಾರ ಪಾಲಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ *ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ ವಿಕ ಸುದ್ದಿಲೋಕ ಹಾಸನ ಮುಖ್ಯಮಂತ್ರಿಗಳು ಕ್ಷೇತ್ರಕ್ಕೆ ಬಂದಾಗ ...

Vijaya Karnataka 23 Oct 2018, 5:00 am
ಹಾಸನ: ಮುಖ್ಯಮಂತ್ರಿಗಳು ಕ್ಷೇತ್ರಕ್ಕೆ ಬಂದಾಗ ಜಿಲ್ಲಾ, ಗ್ರಾಮ ಪಂಚಾಯಿತಿ ಸದಸ್ಯರಿಗೆ ಆಹ್ವಾನ ನೀಡದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.
Vijaya Karnataka Web hassan zillapanchayat meeting mlc zp members allegation about officers
ಶಿಷ್ಟಾಚಾರ ಪಾಲಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ


ಜಿಪಂ ಹೊಯ್ಸಳ ಸಭಾಂಗಣದಲ್ಲಿ ಅಧ್ಯಕ್ಷೆ ಶ್ವೇತ ದೇವರಾಜ್‌ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ, ತಾವು ಕ್ಷೇತ್ರದ ಸದಸ್ಯರೋ, ಇಲ್ಲವೋ ಎಂಬಂತೆ ಕಡೆಗಣಿಸಲಾಗುತ್ತಿದೆ. ಕನಿಷ್ಠ ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸದೆ ಎಷ್ಟರ ಮಟ್ಟಿಗೆ ತಾತ್ಸಾರ ತೋರುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಸದಸ್ಯರಾದ ರೇವಣ್ಣ, ರವಿ, ಲೋಕೇಶ್‌, ಶ್ರೀನಿವಾಸ್‌, ಪಟೇಲ್‌ ಶಿವಪ್ಪ, ಶ್ರೇಯಸ್‌ ಪಟೇಲ್‌ ಮತ್ತಿತರ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಜರುಗುವ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭಕ್ಕೆ ಸದಸ್ಯರನ್ನು ಆಹ್ವಾನಿಸುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಹಿರೀಸಾವೆ ಹೋಬಳಿ ತೋಟಿ ಗ್ರಾಮದ ನೀರಾವರಿ ಯೋಜನೆ ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಗಮಿಸಿದ್ದ ಕಾರ್ಯಕ್ರಮಕ್ಕೆ ಜಿಪಂ ಸದಸ್ಯನಾದ ತನ್ನನ್ನೇ ಆಹ್ವಾನಿಸಿಲ್ಲ ಎಂದು ಸಿ.ಮಂಜೇಗೌಡ ಆರೋಪಿಸಿದರು. ಗ್ರಾಪಂ ಅಧ್ಯಕ್ಷರು, ಸದಸ್ಯರಿಗೂ ಆಹ್ವಾನವಿಲ್ಲ, ಗ್ರಾಪಂ ಇಲ್ಲದೆ ಜಿಪಂ ಆಯಿತೇ? ಒಂದಕ್ಕೊಂದು ಸಂಬಂಧವಿಲ್ಲವೇ? ಚುನಾಯಿತ ಸದಸ್ಯರು ಎಂದರೆ ಏಕಿಷ್ಟು ನಿರ್ಲಕ್ಷ್ಯ ಎಂದು ಸಿಟ್ಟಾದರು. ಹೊಸಳ್ಳಿ, ಕಿರೀಸಾವೆ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಲಾಗಿದೆ. ತನಗೆ ಮಾಹಿತಿಯೇ ಇಲ್ಲ. ಕ್ಷೇತ್ರದ ಜನತೆಗೆ ಏನು ಉತ್ತರ ನೀಡಬೇಕು ಎಂದು ಪ್ರಶ್ನಿಸಿದರು.

ಕ್ರಮ ಕೈಗೊಳ್ಳಿ: ಮಂಜೇಗೌಡರ ಆರೋಪಕ್ಕೆ ಧ್ವನಿಗೂಡಿಸಿದ ವಿಧಾನಪರಿಷತ್‌ ಸದಸ್ಯ ಗೋಪಾಲಸ್ವಾಮಿ ಅಧಿಕಾರಿಗಳು ಈ ರೀತಿ ನಿರ್ಲಕ್ಷಿಸಿದರೆ ಜನಪ್ರತಿನಿಧಿಗಳು ಕೆಲಸ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ, ಸಚಿವರು ಆಗಮಿಸಿದ ವೇಳೆ ಹಾಗೂ ಸರಕಾರಿ ಕಾರ್ಯಕ್ರಮಗಳಲ್ಲಿ ಕಟ್ಟುನಿಟ್ಟಾಗಿ ಶಿಷ್ಟಾಚಾರ ಪಾಲಿಸಬೇಕು. ಇದಕ್ಕೆ ಜಿಪಂ ಸಿಇಒ ಹಾಗೂ ಜಿಲ್ಲಾಧಿಕಾರಿಗಳೇ ಹೊಣೆ ಎಂದು ಎಚ್ಚರಿಸಿದರು.

ವಿಧಾನಪರಿಷತ್‌ ಸದಸ್ಯ ಗೋಪಾಲಸ್ವಾಮಿ ಹಾಗೂ ಜಿಪಂ ಸದಸ್ಯ ಮಂಜೇಗೌಡರ ಆರೋಪಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಶ್ವೇತ ದೇವರಾಜ್‌, ಪ್ರಭಾರ ಸಿಇಒ ಪುಟ್ಟಸ್ವಾಮಿ ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಅಂಗನವಾಡಿ ಕಟ್ಟಡ ಕಾಮಗಾರಿ ಅಪೂರ್ಣ: ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳುತ್ತೀರಲ್ಲಾ ಎಲ್ಲಿ ಮುಗಿದಿದೆ ತೋರಿಸಿ. ಒಂದೂವರೆ ವರ್ಷದಿಂದಲೂ ಪಾಳು ಬಿದ್ದಿವೆ. ಜನರಿಗೆ ಉತ್ತರ ಕೊಡಲು ಆಗುತ್ತಿಲ್ಲ. ಸಭೆಯಲ್ಲಿ ಕೆಲಸವೇ ಮುಗಿದು ಹೋಗಿದೆ ಎಂದು ಉತ್ತರ ನೀಡುತ್ತಿರಲ್ಲಾ ಯಾರನ್ನು ದಿಕ್ಕು ತಪ್ಪಿಸುತ್ತಿದ್ದೀರಾ ಎಂದು ಅಧಿಕಾರಿಗಳನ್ನು ಬೇಲೂರು, ಹಗರೆ ಕ್ಷೇತ್ರದ ಸದಸ್ಯರು ತರಾಟೆ ತೆಗೆದುಕೊಂಡರು. ಸದಸ್ಯ ಶ್ರೀನಿವಾಸ್‌, ಲತಾ ದಿಲೀಪ್‌ಕುಮಾರ್‌ ಮತ್ತಿತರರು ಧ್ವನಿಗೂಡಿಸಿದರು.

ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಅನುದಾನ ಹಂಚಿಕೆ ವಿಷಯವಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಪರಸ್ಪರ ವಾಗ್ವಾದ ನಡೆಸಿದರು. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದು, ಜಿಪಂನಲ್ಲೂ ಹೊಂದಿಕೊಂಡು ಹೋಗೋಣ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗದಂತೆ ಪರಸ್ಪರ ಕುಳಿತು ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಅಧ್ಯಕ್ಷೆ ಶ್ವೇತ ಸಮಾಧಾನ ಪಡಿಸಲು ಯತ್ನಿಸಿದರು. ಆದರೂ ಕಾಂಗ್ರೆಸ್‌ ಸದಸ್ಯರು ಮಾತ್ರ ಅಸಮಾಧಾನ ಹೊರ ಹಾಕುತ್ತಲೇ ಇದ್ದರು.

ಸದಸ್ಯರಿಗೆ ಕ್ಷೇತ್ರವಾರು ಲಭಿಸುತ್ತಿರುವ ಅನುದಾನ ಕಡಿಮೆ ಇದೆ. ಗ್ರಾಪಂಗಳ ಉದ್ಯೋಗ ಖಾತರಿ ಯೋಜನೆಯಡಿ ಕೋಟಿಗಟ್ಟಲೆ ಕಾಮಗಾರಿಗಳು ನಡೆಯುತ್ತಿವೆ. ಹೊರಗುತ್ತಿಗೆ ಮೇಲೆ ನೇಮಕಗೊಂಡಿರುವ ಎಂಜಿನಿಯರ್‌ಗಳು ಹಾಗೂ ಪಿಡಿಒ ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತಾಗಬೇಕು. ಎಂಜಿನಿಯರ್‌ಗಳೇ ಗುತ್ತಿಗೆದಾರರಾಗುತ್ತಿದ್ದಾರೆ. ಈ ಬಗ್ಗೆ ನಿಯಂತ್ರಣ ಅಗತ್ಯ ಎಂದು ಒತ್ತಾಯಿಸಿದರು.

ಜಿಪಂ ಸಿಇಒ ಪುಟ್ಟಸ್ವಾಮಿ ಮಾತನಾಡಿ, ಮಾತೃಪೂರ್ಣ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜತೆಗೆ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

ಡೋನೆಷನ್‌ ಹಾವಳಿ: ಖಾಸಗಿ ಶಾಲೆಗಳಲ್ಲಿ ಮಿತಿ ಮೀರುತ್ತಿರುವ ಡೊನೇಷನ್‌ ಹಾವಳಿಗೆ ನಿರ್ಬಂಧ ಹೇರಬೇಕು. ಪ್ರತಿ ಶಿಕ್ಷ ಣ ಸಂಸ್ಥೆಯ ಸೂಚನಾ ಫಲಕದಲ್ಲಿ ಪಡೆಯಲಾಗುತ್ತಿರುವ ಶುಲ್ಕದ ಸಂಪೂರ್ಣ ವಿವರ ಪ್ರಕಟಿಸಬೇಕು ಎಂದು ಸದಸ್ಯರಾದ ರೇವಣ್ಣ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಪುಟ್ಟಸ್ವಾಮಿ ಎಲ್ಲ ಶಾಲೆಗಳಿಗೂ ಈ ಬಗ್ಗೆ ಸುತ್ತೋಲೆ ಹೊರಡಿಸಿ ಸೂಚನಾ ಫಲಕದಲ್ಲಿ ಶುಲ್ಕದ ವಿವರ ಪ್ರಕಟಿಸಲು ಕ್ರಮಕೈಗೊಂಡು ವರದಿಸಲ್ಲಿಸುವಂತೆ ಸಾರ್ವಜನಿಕ ಶಿಕ್ಷ ಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಉಪಾಧ್ಯಕ್ಷ ಸುಪ್ರದೀಪ್‌ ಯಜಮಾನ್‌ ಮತ್ತಿತರ ಸದಸ್ಯರು ಸಭೆಯಲ್ಲಿ ಹಾಜರಿದ್ದರು.

----------------------
ಶಿಷ್ಟಾಚಾರ ಪಾಲಿಸಬೇಕು ಎಂದು ರಾಜ್ಯದ ಮುಖ್ಯಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ಇಷ್ಟಾಗಿಯೂ ಕ್ರಮ ಕೈಗೊಳ್ಳುತ್ತಿಲ್ಲ ಎಂದರೆ ಇದಕ್ಕೆ ಜಿಪಂ ಸಿಇಒ ಹಾಗೂ ಜಿಲ್ಲಾಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ.
-ಗೋಪಾಲಸ್ವಾಮಿ ವಿಧಾನ ಪರಿಷತ್‌ ಸದಸ್ಯ
-------------------
ಜಿಪಂ ಅನುದಾನದಲ್ಲಿ ಕೈಗೊಳ್ಳುವ ಕಾಮಗಾರಿಗಳು ಹಾಗೂ ಮತ್ತಿತರೆ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸುವಾಗ ಆಯಾಯ ವ್ಯಾಪ್ತಿಯ ಜಿಪಂ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಶಿಷ್ಟಾಚಾರ ಉಲ್ಲಂಘಿಸಿದ್ದಲ್ಲಿ ಶಿಸ್ತು ಕ್ರಮಕೈಗೊಳ್ಳಲಾಗುವುದು.
- ಶ್ವೇತಾ ದೇವರಾಜ್‌ ಅಧ್ಯಕ್ಷೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ