ಆ್ಯಪ್ನಗರ

ನೋವಿಗೆ ಕುಂದಿಲ್ಲ, ಸೋತಾಗ ಹೆದರಿಲ್ಲ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

ಸಮಾಜದಲ್ಲಿ ಒಳ್ಳೆಯವರೂ ಇರುತ್ತಾರೆ, ಕೆಟ್ಟವರೂ ಇರುತ್ತಾರೆ. ಅದು ಜಗತ್ತಿನ ಸೃಷ್ಟಿಯ ನಿಯಮ. ನಾವು ಒಳ್ಳೆಯದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

Vijaya Karnataka 12 Sep 2018, 9:25 am
ಹೊಳೆನರಸೀಪುರ: ಸಮಾಜದಲ್ಲಿ ಒಳ್ಳೆಯವರೂ ಇರುತ್ತಾರೆ, ಕೆಟ್ಟವರೂ ಇರುತ್ತಾರೆ. ಅದು ಜಗತ್ತಿನ ಸೃಷ್ಟಿಯ ನಿಯಮ. ನಾವು ಒಳ್ಳೆಯದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.
Vijaya Karnataka Web HSN-HSN11HNP1


ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕ ಫಯಾಜ್‌ ಪಾಷ ವಿರಚಿತ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಜೀವನಗಾಥೆ 'ನಮ್ಮೂರ ದ್ಯಾವಪ್ಪ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

''ಹಂತ ಹಂತವಾಗಿ 60 ವರ್ಷದಿಂದ ರಾಜಕೀಯ ಏರಿಳಿತ ಕಂಡಿದ್ದೇನೆ. ನೋವಿನಿಂದ ಎಂದೂ ಎದೆಗುಂದಿಲ್ಲ. ಸೋತಾಗ ಧೃತಿಗೆಟ್ಟಿಲ್ಲ. ಹಿಂದಿನ ಅನುಭವವನ್ನು ಮೆಲುಕು ಹಾಕಿಕೊಂಡು ಮುಂದಿನ ಭವಿಷ್ಯದ ಹೆಜ್ಜೆ ಇರಿಸಿದ್ದೇನೆ,''ಎಂದ ಅವರು, ''ನಾನು ಪ್ರಧಾನಿಯಾಗಿದ್ದಾಗ ಜಮ್ಮು, ಕಾಶ್ಮೀರ ಚುನಾವಣೆ ಮಾಡಿಸಿದ್ದೆ. 10 ತಿಂಗಳ ಅವಧಿಯಲ್ಲಿ 5 ಬಾರಿ ಭೇಟಿ ನೀಡಿದ್ದೆ. ಆದರೆ, ಇಂದಿನ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ನಾನು ಒಂದು ಸಣ್ಣ ಕಪ್ಪು ಚುಕ್ಕೆ ಇಲ್ಲದೆ ಕೈಲಾದಷ್ಟು ಉತ್ತಮ ಆಡಳಿತ ನೀಡಿದ್ದೇನೆ,''ಎಂದು ಹೇಳಿದರು.

''ನನ್ನ ಬಹುಪಾಲು ಶ್ರೇಯಸ್ಸಿಗೆ ನನ್ನ ಪತ್ನಿ ಚನ್ನಮ್ಮ ಕಾರಣರಾಗಿದ್ದಾರೆ. ನನ್ನ ಆಗುಹೋಗುಗಳ ಬಗ್ಗೆ ಸುದೀರ್ಘವಾಗಿ ಉಲ್ಲೇಖಿಸಿ ನಮ್ಮೂರ ಯುವಕನೊಬ್ಬ ಪುಸ್ತಕ ಬರೆದಿದ್ದಾನೆ. ನಾನು ಆತನನ್ನು ಅಭಿನಂದಿಸುತ್ತೇನೆ. ಆತ ಮುನ್ನುಡಿಯಲ್ಲಿ ನನ್ನ ತಂದೆ, ತಾಯಿಗೆ ನನ್ನ ಬರಹವನ್ನು ಸಮರ್ಪಿಸುತ್ತೇನೆ ಎಂದು ಬರೆದಿದ್ದಾನೆ. ಇದರಿಂದಲೇ ಅರ್ಥವಾಗುತ್ತದೆ. ಆತನ ಸಂಸ್ಕೃತಿ ಎಂತದ್ದು,''ಎಂದು ಅಭಿನಂದಿಸಿದರು.

ಗೌಡರ ಸಾಧನೆ ಪಠ್ಯದಲ್ಲಿ: ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಮಾತನಾಡಿ, ''ದೇವೇಗೌಡರ ಸಾಧನೆಯನ್ನು ದಾಖಲೆಗಳ ಸಹಿತ ಕ್ರೋಡೀಕರಿಸಿ ಪುಸ್ತಕ ಮಾಡುವ ಪ್ರಯತ್ನದಲ್ಲಿದ್ದೇವೆ. ದಿಲ್ಲಿಯ ಕಾರ್ಯಕ್ರಮವೊಂದರಲ್ಲಿ 3 ಪುಸ್ತಕವನ್ನು ಹೊರತರಲಾಗುವುದು. ಮುಂದೆ ಪಠ್ಯಕ್ರಮದಲ್ಲಿ ಅಳವಡಿಸಲು ಪ್ರಯತ್ನ ನಡೆದಿದೆ,''ಎಂದರು.

ಮೈಸೂರು ವಿವಿಯ ಡಾ.ನಾಗಣ್ಣ ಮಾತನಾಡಿ, ''ಮನೆ ಹತ್ತಿರ ಬಂದ ಬುಡುಬುಡುಕೆಯೊಬ್ಬಾತ ಚಿಕ್ಕ ವಯಸ್ಸಿನ ದೇವೇಗೌಡರನ್ನು ಕಂಡು ಈತ ಮುಂದೆ ಚಕ್ರವರ್ತಿಯಾಗುತ್ತಾನೆ ಎಂದಿದ್ದರಂತೆ. ಅಕ್ಕಪಕ್ಕದವರ ಟೀಕೆ, ಟಿಪ್ಪಣಿಗೆ ಕಿವಿಗೊಡದೆ ಭವಿಷ್ಯದ ಕನಸು ಕಂಡಿದ್ದು, ಅದು ನನಸಾಗಿದೆ. 13 ಪಕ್ಷ ಗಳನ್ನು ಒಗ್ಗೂಡಿಸಿ, ಸಂಯುಕ್ತರಂಗದಡಿ ಸಮಾನತೆ, ಫೆಡರಲ್‌ ತತ್ವವನ್ನು ಆಧರಿಸಿ ಪ್ರಧಾನಿಯಾಗಿದ್ದು ಮಹತ್ಸಾಧನೆ. ಪ್ರಜಾಸತ್ತಾತ್ಮಕ ಚೈತನ್ಯ ನಡೆ ಅನುಸರಿಸಿದ್ದ ಅವರು, ಅಮೆರಿಕಾದ 16ನೇ ರಾಷ್ಟ್ರಾಧ್ಯಕ್ಷ ಅಬ್ರಹಾಂ ಲಿಂಕನ್‌ರ ಪ್ರತಿಪಾದಕರು,''ಎಂದು ತಿಳಿಸಿದರು.

ಸಾಹಿತಿ ಡಾ.ಪಿ.ಕೆ.ರಾಜಶೇಖರ್‌ ಮಾತನಾಡಿ, ''ದೇವೇಗೌಡರಲ್ಲಿ ಕೇವಲ ದೈಹಿಕ ಬಲಮಾತ್ರವಲ್ಲ, ಅವರು ತಮ್ಮಲ್ಲಿರುವ ರಾಜಕೀಯ ಶಕ್ತಿಯನ್ನು ಎಲ್ಲರಿಗೂ ವಿಕೇಂದ್ರೀಕರಣಗೊಳಿಸುವ ಅತೀಂದ್ರಿಯ ಶಕ್ತಿ ಹೊಂದಿದ್ದಾರೆ,'' ಎಂದರು.

ಕಾರ್ಯಕ್ರಮದಲ್ಲಿ ಕೃತಿಕಾರ ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲೂಕು ಸಾಲಿಗ್ರಾಮದ ಮಿರ್ಲೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ, ಹೊಳೆನರಸೀಪುರ ಪಟ್ಟಣದ ಮುಸ್ಲಿಂ ಬಡಾವಣೆಯ ನಿವಾಸಿ ಫಯಾಜ್‌ ಪಾಷ ಅವರನ್ನು ಸನ್ಮಾನಿಸಲಾಯಿತು.

ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್‌ ರೇವಣ್ಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ಕುಮಾರ್‌ ಶಹಪುರವಾಡ್‌, ಮುಸ್ಲಿಂ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ.ರೋಷನ್‌ ಅಬ್ಬಾಸ್‌ ಬೊಮ್ಮನಹಳ್ಳಿ, ಸ್ವಾಮಿ ವಿವೇಕಾನಂದ ಸಮಿತಿ ಅಧ್ಯಕ್ಷ ರೆಹಮಾನ್‌, ಜೆಡಿಎಸ್‌ ಮುಖಂಡರಾದ ಟಿ.ಶಿವಕುಮಾರ್‌, ಸಾಧಿಕ್‌, ಸುಬ್ರಹ್ಮಣ್ಯ ಹಾಗೂ ಜೆಡಿಎಸ್‌ ಬೆಂಬಲಿಗರು ಹಾಜರಿದ್ದರು.

ಮೋದಿ ದಕ್ಷಿಣದತ್ತ ನೋಡಲಿ: ಎಚ್‌.ವಿಶ್ವನಾಥ್‌

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಮಾತನಾಡಿ, ''ದೇಶದಲ್ಲಿ ಯಾರೂ ಪ್ರಧಾನಿ ಅಭ್ಯರ್ಥಿ ಇಲ್ಲ ಎಂದು ಪ್ರಧಾನಿ ಮೋದಿ ಹೇಳಿಕೊಳ್ಳುತ್ತಿದ್ದಾರೆ. ಅವರು ದಕ್ಷಿಣ ಭಾರತದ ಕಡೆಗೊಮ್ಮೆ ತಿರುಗಿ ನೋಡಲಿ. ಭಾರತದ ರಂಗುರಂಗಿನ ರಾಜಕಾರಣದಲ್ಲಿ ಬಡವರು, ರೈತರು, ದೀನದಲಿತರ ದುಃಖ ದುಮ್ಮಾನಗಳನ್ನು ತೊಡೆದುಹಾಕಲು ದೇವೇಗೌಡರು ಒಳ್ಳೆಯ ಆಡಳಿತ ನೀಡಿದ್ದರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು,'' ಎಂದರು.

''ಪ್ರಾಂತೀಯ ಪಕ್ಷಗಳು ಒಗ್ಗೂಡಿ ದೇಶದ ಜವಾಬ್ದಾರಿ ನಿರ್ವಹಿಸಬೇಕು ಎಂಬ ಒತ್ತಾಯ ತಂದಾಗ ಆ ಜವಾಬ್ದಾರಿ ವಹಿಸಲು ಸಿದ್ಧರಿದ್ದಾರೆ. ದೇವೇಗೌಡರು ಮತ್ತೊಮ್ಮೆ ಪ್ರಧಾನಿ ಆದರೂ ಆಶ್ಚರ್ಯಪಡಬೇಕಿಲ್ಲ,''ಎಂದು ಭವಿಷ್ಯ ನುಡಿದರು.

''ಕರ್ನಾಟಕದಿಂದ ದಿಲ್ಲಿಯ ಗದ್ದುಗೆ ಏರಿ ಪ್ರಧಾನಿಯಾಗಿದ್ದ ಏಕೈಕ ಕನ್ನಡಿಗ ದೇವೇಗೌಡರ ಸಾಧನೆಗಳು, ಮುಂದೊಂದು ದಿನ ಶಾಲಾ ಪಠ್ಯಗಳಲ್ಲಿ ಅಳವಡಿಕೆಯಾಗಬೇಕಿದೆ,''ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ