ಆ್ಯಪ್ನಗರ

ರಣಾಂಗಣವಾದ ಹಿಮತ್‌ಸಿಂಗ್‌ ಕಾರ್ಖಾನೆ ಆವರಣ

ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಸಂಘರ್ಷ ,ಪ್ರತಿಭಟನೆಗೆ ಕಾರಣವಾಗಿದ್ದಲ್ಲದೆ, ಕ್ಷಣಮಾತ್ರದಲ್ಲಿ ನಗರ ವಿಶೇಷ ಆರ್ಥಿಕ ವಲಯದ ಹಿಮತ್‌ಸಿಂಗ್‌ಕಾ ಲಿನೆನ್‌ ಕಾರ್ಖಾನೆಯ ಆವರಣ ರಣಾಂಗಣವಾಗಿ ಮಾರ್ಪಟ್ಟಿತು.

Vijaya Karnataka 25 Jul 2019, 5:00 am
ಹಾಸನ: ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಸಂಘರ್ಷ ,ಪ್ರತಿಭಟನೆಗೆ ಕಾರಣವಾಗಿದ್ದಲ್ಲದೆ, ಕ್ಷಣಮಾತ್ರದಲ್ಲಿ ನಗರ ವಿಶೇಷ ಆರ್ಥಿಕ ವಲಯದ ಹಿಮತ್‌ಸಿಂಗ್‌ಕಾ ಲಿನೆನ್‌ ಕಾರ್ಖಾನೆಯ ಆವರಣ ರಣಾಂಗಣವಾಗಿ ಮಾರ್ಪಟ್ಟಿತು.
Vijaya Karnataka Web HSN-HSN24N9


ಬಿಹಾರ, ಒರಿಸ್ಸಾ, ನೇಪಾಳ, ಮಹಾರಾಷ್ಟ್ರ, ಅಸ್ಸಾಂ ಸೇರಿದಂತೆ ಹೊರರಾಜ್ಯದ ಕಾರ್ಮಿಕರೇ ಹೆಚ್ಚಿರುವ ಕಾರ್ಖಾನೆಯಲ್ಲಿ ಆಡಳಿತ ಮಂಡಳಿ ನೌಕರರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಪ್ರಶ್ನಿಸುವ ಕಾರ್ಮಿಕರನ್ನು ಕರೆದೊಯ್ದು ಹಲ್ಲೆ ನಡೆಸಲಾಗುತ್ತಿದೆ ಎಂಬ ಆರೋಪ ಹಲವು ದಿನದಿಂದ ಕೇಳಿಬಂದಿದೆ.

ಹೊರ ರಾಜ್ಯದ ಕಾರ್ಮಿಕ ಇಲ್ಲಿನ ಮಹಿಳಾ ಸಿಬ್ಬಂದಿಯನ್ನು ತನ್ನೊಂದಿಗೆ ಕರೆದೊಯ್ದಿದ್ದ. ಇದು ಬೆಳಕಿಗೆ ಬಂದ ಬಳಿಕ ವಾಪಸ್‌ ಕರೆತಂದ ಎಂಬ ಸಂಗತಿ ಸ್ಥಳೀಯ ಮತ್ತು ಹೊರ ರಾಜ್ಯದ ನೌಕರರ ನಡುವೆ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಇದರೊಂದಿಗೆ ಇಬ್ಬರು ಹೊರ ರಾಜ್ಯದ ಕಾರ್ಮಿಕರು ಕಾಣೆಯಾಗಿದ್ದಾರೆ ಎಂಬ ವದಂತಿ ಕೂಡ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಯಿತು. ಧರಣಿ ಸ್ಥಳಕ್ಕೆ ಆಡಳಿತ ಮಂಡಳಿ ಸದಸ್ಯರು ಬಂದು ಅಹವಾಲು ಕೇಳುವ ಬದಲು ಒಳಗೆ ಯಾರೂ ಪ್ರವೇಶಿಸದಂತೆ ಗೇಟ್‌ ಬಂದ್‌ ಮಾಡಿಕೊಳ್ಳಲು ಮುಂದಾಗಿದ್ದೇ ಕಲ್ಲು ತೂರಾಟಕ್ಕೆ ಪ್ರೇರಣೆ ನೀಡಿದಂತಾಯಿತು.

ಕಾರ್ಮಿಕರಾರ‍ಯರು ಇಲ್ಲಿ ಪ್ರಶ್ನಿಸುವಂತಿಲ್ಲ. ಪ್ರಶ್ನಿಸಿದರೆ ಕೆಲಸದಿಂದ ವಜಾ ಮಾಡುವ ಧೋರಣೆಯನ್ನು ಆಡಳಿತ ಮಂಡಳಿ ಹೊಂದಿದೆ ಎಂಬುದೇ ಕಾರ್ಮಿಕರ ಆಕ್ರೋಶಕ್ಕೆ ಕಾರಣ . ಇದೇ ವಿಷಯಕ್ಕೆ ಕೆಲ ದಿನದ ಹಿಂದೆಯೂ ರಾತ್ರಿ ವೇಳೆ ಘರ್ಷಣೆ ನಡೆದು ಪೊಲೀಸ್‌ ಠಾಣೆ ಮೆಟ್ಟಿಲೇರಿತ್ತು. ಕಾರ್ಖಾನೆ ವಿರುದ್ಧ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರೇವಣ್ಣ ಆಕ್ರೋಶ ಹೊರಹಾಕಿದ್ದರು. ಆಡಳಿತ ಮಂಡಳಿಯವರನ್ನು ಡಿಸಿ ಕಚೇರಿಗೆ ಕರೆಸಿ ಚರ್ಚಿಸಿ ಸಮಸ್ಯೆ ಸರಿಪಡಿಸುವುದಾಗಿ ಈ ಹಿಂದೆ ತಿಳಿಸಿದ್ದರು.

ಇಷ್ಟೆಲ್ಲ ಘಟನೆಗಳಾದರೂ, ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಪರಿಗಣಿಸದೆ ನಿರ್ಲಕ್ಷಿಸಿದ ಪರಿಣಾಮ ಘರ್ಷಣೆ ಸ್ವರೂಪ ಪಡೆದುಕೊಳ್ಳಲು ಕಾರಣವಾಯಿತು ಎಂಬ ಆರೋಪ ಕೇಳಿಬಂದಿದೆ.

ಪ್ರಭಾವಿಗಳ ಒಡೆತನದ ಕಾರ್ಖಾನೆ ಆಡಳಿತ ಮಂಡಳಿಯನ್ನು ಪ್ರಶ್ನಿಸುವವರುಂಟೇ ಎಂಬ ಅಧಿಕಾರಿಗಳ ಮನೋಧೋರಣೆಯೇ ಕಾರ್ಮಿಕರು ಹಿಂಸಾರೂಪಕ್ಕೆ ಇಳಿಯಲು ಪ್ರೇರಣೆ ನೀಡಿರಬಹುದು ಎನ್ನಲಾಗಿದೆ.

ದೂರು ಬಂದಿರಲಿಲ್ಲ
ಕಾರ್ಮಿಕರ ವೇತನ, ಬೋನಸ್‌ ನೀಡುವ ವಿಷಯದಲ್ಲಿ ಯಾವುದೇ ದೂರು ಕೇಳಿಬಂದಿರಲಿಲ್ಲ, ಆಡಳಿತ ಮಂಡಳಿ ದೌರ್ಜನ್ಯ ನಡೆಸುತ್ತಿದೆ ಎಂಬುದು ಕಾರ್ಮಿಕ ಇಲಾಖೆ ಪರಿಮಿತಿಯಲ್ಲಿ ಬರಲ್ಲ, ಅಂತಹ ದೂರು ಕೇಳಿಬಂದಿದ್ದರೂ, ಪೊಲೀಸರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೆವು. ಯಾವುದೇ ದೂರು ಬಂದಿರಲಿಲ್ಲ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ (ಪ್ರಭಾರ) ಎ.ಎಸ್‌.ಉಮೇಶ್‌ ತಿಳಿಸಿದರು.

ಡಿಸಿ ಅಧ್ಯಕ್ಷತೆಯಲ್ಲಿ ಇಂದು ಸಭೆ
ಘಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಕ್ರಂಪಾಷಾ ಅಧ್ಯಕ್ಷತೆಯಲ್ಲಿ ಗುರುವಾರ ಕಾರ್ಖಾನೆ ಆಡಳಿತ ಮಂಡಳಿ, ಕಾರ್ಮಿಕ ಇಲಾಖೆ, ಇಎಸ್‌ಐ, ಪಿಎಫ್‌, ಪೊಲೀಸ್‌ ಮತ್ತಿತರ ಇಲಾಖೆ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ.

ಸಂಘಟನೆಗಳ ಮನವಿ
ಹೊರರಾಜ್ಯದ ಕಾರ್ಮಿಕರು ಪೊಲೀಸರು, ಪತ್ರಕರ್ತರ ಮೇಲೆ ನಡೆಸಿರುವ ಘಟನೆ ಖಂಡಿಸಿ, ಶ್ರೀರಾಮಸೇನೆ ಹಾಗೂ ಕರವೇ ಸತೀಶ್‌ ಪಟೇಲ್‌ ಮತ್ತಿತರರು ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಹೊರರಾಜ್ಯದ ಕಾರ್ಮಿಕರಿಂದ ಸ್ಥಳೀಯ ಮಹಿಳಾ ಕಾರ್ಮಿಕರ ಮೇಲೆ ದಬ್ಬಾಲಿಕೆ ನಡೆಯುತ್ತಿದೆ. ಸ್ಥಳೀಯರರಿಗಾದರೆ ಹೆಚ್ಚು ವೇತನ ಕೊಡಬೇಕೆಂಬ ಕಾರಣಕ್ಕಾಗಿ ಹೊರರಾಜ್ಯದವರಿಗೆ ವಸತಿ ಸೌಲಭ್ಯ ಊಟ ತಿಂಡಿ ವ್ಯವಸ್ಥೆಯೊಂದಿಗೆ ಕಡಿಮೆ ವೇತನಕ್ಕೆ ನೇಮಿಸಿಕೊಂಡಿದ್ದಾರೆ. ಈ ದೌರ್ಜನ್ಯವನ್ನು ನಿಲ್ಲಿಸಲು ಸ್ಥಳಿಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಸತೀಶ್‌ ಪಟೇಲ್‌ ಆಗ್ರಹಿಸಿದ್ದಾರೆ.

ಕಾರ್ಮಿಕರ ಮೇಲೆ ದೌರ್ಜನ್ಯ ಹಲ್ಲೆ ನಡೆದಿಲ್ಲ. ಅದೆಲ್ಲಾ ಸುಳ್ಳು ಮಾಹಿತಿ. ಇಂದು ಪ್ರತಿಭಟನೆ ಏಕೆ ನಡೆಸಿದರೆಂಬುದು ಗೊತ್ತಿಲ್ಲ.ಗಲಭೆ ಮಾಡಿದವರು ಯಾರು ಎಂಬುದೂ ಗೊತ್ತಿಲ್ಲ. ಪೊಲೀಸ್‌ ತನಿಖೆಯಿಂದ ಇದೆಲ್ಲಾ ಬೆಳಕೆಗೆ ಬರಬೇಕಿದೆ.
- ಮಹೇಶ್‌, ಆಡಳಿತ ಮಂಡಳಿ ಮುಖ್ಯಸ್ಥ, ಹಿಮತ್‌ಸಿಂಗ್‌ಕಾ ಲಿನೆನ್‌ ಕಾರ್ಖಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ