ಆ್ಯಪ್ನಗರ

ಜೆಡಿಎಸ್‌ ಮುಖಂಡರಿಂದ ಅಕ್ರಮ ಕಲ್ಲು ಗಣಿಗಾರಿಕೆ: ಆರೋಪ

ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರ ಕಡೆಯವರು ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಕೆಡಿಪಿ ಮಾಜಿ ಸದಸ್ಯ ದೇವರಾಜೇಗೌಡ ಆರೋಪಿಸಿದ್ದಾರೆ.

ವಿಕ ಸುದ್ದಿಲೋಕ 3 May 2017, 5:15 am

ಹಾಸನ: ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರ ಕಡೆಯವರು ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಕೆಡಿಪಿ ಮಾಜಿ ಸದಸ್ಯ ದೇವರಾಜೇಗೌಡ ಆರೋಪಿಸಿದ್ದಾರೆ.

''ಶಿವಲಿಂಗೇಗೌಡ ಅವರು ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಭಾಗಿಯಾಗುವ ಮೂಲಕ ಸರಕಾರಕ್ಕೆ ಸಲ್ಲಬೇಕಾದ ಕೋಟ್ಯಂತರ ರೂ. ರಾಜಧನವನ್ನು ತಪ್ಪಿಸಿದ್ದಾರೆ,'' ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

''ಸೋಮಶೆಟ್ಟಿಹಳ್ಳಿ ಗ್ರಾಮದ ಸ.ನಂ. 43ರಲ್ಲಿ 2009ರಿಂದ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ತಮ್ಮ ಪತ್ನಿ ಹಾಗೂ ತಮಗೆ ಬೇಕಾದ ಜಿಪಂ ಮಾಜಿ ಸದಸ್ಯರೊಬ್ಬರ ಹೆಸರಿನಲ್ಲಿ ತಲಾ 3 ಎಕರೆ ಜಮೀನನ್ನು ಶಾಸಕ ಶಿವಲಿಂಗೇಗೌಡ ಮಂಜೂರು ಮಾಡಿಸಿಕೊಂಡಿದ್ದಾರೆ. ಇದಲ್ಲದೇ ಕಪ್ಪು ಪಟ್ಟಿಗೆ ಸೇರಿರುವ ಖಾಸಗಿ ಕಂಪೆನಿಯೊಂದಕ್ಕೆ ಮಂಜೂರಾಗಿದ್ದ ಗಣಿಯಿಂದಲೂ ಅಕ್ರಮವಾಗಿ ಕಲ್ಲು ಮಾರಾಟ ಮಾಡಿದ್ದಾರೆ,'' ಎಂದು ದೂರಿದರು. ''ಅಕ್ರಮವಾಗಿ ಗಣಿಗಾರಿಕೆ ನಡೆಸಿರುವ ಬಗ್ಗೆ ಆರ್‌ಟಿಐ ಕಾರ್ಯಕರ್ತರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ವಿಚಾರಣೆ ನಡೆದು, ಖಾಸಗಿ ಕಂಪೆನಿಗೆ 19 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದಾದ ಬಳಿಕ ಶಾಸಕರ ಬೆಂಬಲಿಗ ಹನುಮಪ್ಪ ಅವರು 22 ಲಕ್ಷ ಹಾಗೂ ಅವರ ಪತ್ನಿ 2 ಲಕ್ಷ ರೂ. ರಾಜಧನವನ್ನು ಸರಕಾರಕ್ಕೆ ಕಟ್ಟಿದ್ದಾರೆ. ಇದಕ್ಕೆ ಶಾಸಕ ಶಿವಲಿಂಗೇಗೌಡ ಅವರ ಪ್ರಭಾವವೇ ಕಾರಣ,'' ಎಂದು ಆರೋಪಿಸಿದರು.

''ಅರಕಲಗೂಡು ಕ್ಷೇತ್ರದ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಪುತ್ರ ಪುನೀತ್‌ ಅವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಉಪ ತಹಸೀಲ್ದಾರ್‌ ಪೊಲೀಸ್‌ ಠಾಣೆಗೆ ಪತ್ರ ಬರೆದಿದ್ದಾರೆ. ಕಣಕಟ್ಟೆ ಹೋಬಳಿ ಉಪ ತಹಸೀಲ್ದಾರ್‌ 2016ರ ಸೆಪ್ಟಂಬರ್‌ 3ರಂದು ಬಾಣಾವರ ಠಾಣೆ ಪಿಎಸ್‌ಐಗೆ ಬರೆದಿರುವ ಪತ್ರದಲ್ಲಿ ಅರಸೀಕೆರೆ ತಾಲೂಕು, ಕಣಕಟ್ಟೆ ಹೋಬಳಿ, ಸೋಮಶೆಟ್ಟಿಹಳ್ಳಿ ಗ್ರಾಮದ ಸ.ನಂ. 42 ರಲ್ಲಿ ಎಸ್‌.ಕೆ.ರಾಜು ಬಿನ್‌ ಕೃಷ್ಣೇಗೌಡ, ಕೇಶವಮೂರ್ತಿ ಬಿನ್‌ ಹನುಮಪ್ಪ, ಎ.ಆರ್‌.ಪುನೀತ್‌ ಬಿನ್‌ ಎ.ಟಿ.ರಾಮಸ್ವಾಮಿ ಅವರು ಕಲ್ಲು ಗಣಿಗಾರಿಕೆ ಮಾಡುತ್ತಿದ್ದು, ಜಲ್ಲಿ ಕಲ್ಲುಗಳನ್ನು ಪುಡಿ ಮಾಡುವ ಕ್ರಷರ್‌ಗಳು ಮತ್ತು ವಾಸ್ತವ್ಯಕ್ಕಾಗಿ ಕಟ್ಟಡ ಮತ್ತು ಶೆಡ್‌ ನಿರ್ಮಿಸಿದ್ದಾರೆ. ಈ ಕಟ್ಟಡ, ಶೆಡ್‌ ನಿರ್ಮಿಸಲು ಯಾವುದೇ ಅನುಮತಿ ಪಡೆದಿಲ್ಲ. ದಾಸ್ತಾನು ಮಾಡಿರುವ ಜಲ್ಲಿಯನ್ನು ಟ್ರಿಪ್‌ ಚೀಟಿ ನೀಡದೆ ಅಕ್ರಮವಾಗಿ ರಾತ್ರಿ ಸಮಯದಲ್ಲಿ ಸಾಗಿಸುತ್ತಿದ್ದಾರೆ,'' ಎಂದು ಆರೋಪಿಸಿದರು.

''ಭೂ ಕಂದಾಯ ನಿಯಮ 1964ರ ಪ್ರಕಾರ ಇದು ಶಿಕ್ಷಾರ್ಹ ಅಪರಾಧ. ಮೇಲ್ಕಂಡ ಮೂವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿಕೊಳ್ಳಬೇಕು. ಮತ್ತು ರಾತ್ರಿ ವೇಳೆ ಜಲ್ಲಿಯನ್ನು ಟ್ರಿಪ್‌ ಚೀಟಿಯಿಲ್ಲದೆ ಸಾಗಿಸುತ್ತಿರುವುದರಿಂದ ಪೊಲೀಸ್‌ ಬಂದೋಬಸ್ತ್‌ ಒದಗಿಸಬೇಕು ಎಂದು ಉಪತಹಸೀಲ್ದಾರ್‌ ಪತ್ರದಲ್ಲಿ ಕೋರಿದ್ದಾರೆ. ಉಪ ತಹಸೀಲ್ದಾರ್‌ ಪತ್ರ ಬರೆದರೂ ಪೊಲೀಸರು ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ಜೆಡಿಎಸ್‌ನ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಬೆಂಗಳೂರು ಸುತ್ತಮುತ್ತ ಭೂ ಕಬಳಿಕೆ ತಡೆ ಸಮಿತಿಯ ಅಧ್ಯಕ್ಷರಾಗಿ, ಭ್ರಷ್ಟಾಚಾರ ವಿರೋಧಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಪುತ್ರನೇ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ,'' ಎಂದು ಆರೋಪಿಸಿದರು.

* ಮೊಕದ್ದಮೆ ಹೂಡ್ತಿನಿ

ಗಣಿಗಾರಿಕೆ ನಡæಸಲು ಕಾನೂನು ಬದ್ಧವಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆದಿದ್ದೇನೆ. ಆದರೆ, ಇದುವರೆಗೂ ಒಂದು ಅಡಿ ಗಣಿಗಾರಿಕೆ ಮಾಡಿಲ್ಲ. ಆದರೂ ಸರಕಾರಕ್ಕೆ ಸಲ್ಲಿಸಬೇಕಾದ ರಾಯಲ್ಟಿ ಪಾವತಿಸುತ್ತಿದ್ದೇನೆ. ಮುಂದಿನ ಭವಿಷ್ಯದ ದೃಷ್ಟಿಯಿಂದ ಗಣಿಗಾರಿಕೆಗೆ ಅನುಮತಿ ಪಡೆದಿದ್ದರೂ, ಅದರಲ್ಲಿ ಚಟುವಟಿಕೆ ನಡೆಸುತ್ತಿಲ್ಲ. ಕಳೆದ ನಾಲ್ಕೈದು ವರ್ಷದಿಂದ ಕೆಲವರು ಅರ್ಜಿ ಹಾಕಿ ಸಾಕಾಗಿ ಹೋಗಿದ್ದಾರೆ. ಇದರ ಹಿಂದೆ ಮಾಜಿ ಸಚಿವರ ಕೈವಾಡ ಇರುವುದು ಗೊತ್ತಿದೆ. ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಎ.ಟಿ.ರಾಮಸ್ವಾಮಿ ಮಗ ಕೂಡ ಇಲ್ಲಿ ಗಣಿಗಾರಿಕೆ ನಡೆಸಿಲ್ಲ. ಸುಮ್ಮನೆ ಜನರನ್ನು ದಿಕ್ಕು ತಪ್ಪಿಸುವ ಕುತಂತ್ರ ಇದಾಗಿದೆ. ತನ್ನ ವಿರುದ್ಧದ ಆರೋಪ ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿ ಆಗುತ್ತೇನೆ.

- ಕೆ.ಎಂ.ಶಿವಲಿಂಗೇಗೌಡ, ಶಾಸಕರು, ಅರಸೀಕೆರೆ.

Vijaya Karnataka Web illegal stone mining by jds leaders charges
ಜೆಡಿಎಸ್‌ ಮುಖಂಡರಿಂದ ಅಕ್ರಮ ಕಲ್ಲು ಗಣಿಗಾರಿಕೆ: ಆರೋಪ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ