ಆ್ಯಪ್ನಗರ

ಸಂಭ್ರಮದ ಪ್ರಸನ್ನಾಂಜನೇಯಸ್ವಾಮಿ ಮಹಾರಥೋತ್ಸವ

ಕೊಣನೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಪ್ರಸನ್ನಾಂಜನೇಯಸ್ವಾಮಿ ಮಹಾರಥೋತ್ಸವವು ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಸಡಗರ ಮತ್ತು ಸಂಭ್ರಮದಿಂದ ನೆರವೇರಿತು.

Vijaya Karnataka 15 Apr 2019, 5:00 am
ಕೊಣನೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಪ್ರಸನ್ನಾಂಜನೇಯಸ್ವಾಮಿ ಮಹಾರಥೋತ್ಸವವು ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಸಡಗರ ಮತ್ತು ಸಂಭ್ರಮದಿಂದ ನೆರವೇರಿತು.
Vijaya Karnataka Web konanuru anjaneya swamy fair festival
ಸಂಭ್ರಮದ ಪ್ರಸನ್ನಾಂಜನೇಯಸ್ವಾಮಿ ಮಹಾರಥೋತ್ಸವ


ರಥೋತ್ಸವದ ಅಂಗವಾಗಿ ದೇವಾಸ್ಥಾನದಲ್ಲಿ ಶನಿವಾರದಿಂದಲೇ ಪಂಚಾಮೃತ ಅಭಿಷೇಕ, ಅರ್ಚನೆ, ಸ್ವಸ್ಥಿ ಪುಣ್ಯಾಹವಾಚನ, ಮೃತ್ತಿಕಾ ಸಂಗ್ರಹಣಾ, ಮೃತ್ತಿಕಾ ಪೂಜೆ, ಅಂಕುರಾರ್ಪಣ, ಯಾಗಶಾಲಾ ಪ್ರವೇಶ, ನಿತ್ಯ ಬಲಿ ಕಂಕಣಧಾರಣೆ, ದೇವತಾ ಪ್ರಾರ್ಥನಾ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗಗಳು ಹಾಗೂ ವಿಶೇಷ ಪೂಜೆಗಳು ನಡೆದವು.

ಭಾನುವಾರ ಬೆಳಗ್ಗೆ ದೇವಾಲಯದಲ್ಲಿ ದೇವತಾ ಪ್ರಾರ್ಥನೆ, ಸ್ವಸ್ತಿಶ್ರೀ ಪುಣ್ಯಾಹವಾಚನ, ನಿತ್ಯಹೋಮ, ನಿತ್ಯಬಲಿ ಪ್ರಧಾನ ಮುಂತಾದ ಪೂಜಾ ಕೈಂಕರ‍್ಯಗಳು ನೆರವೇರಿದ ನಂತರ ದೇವರ ಉತ್ಸವ ಮೂರ್ತಿಯನ್ನು ಪುಷ್ಪಗಳಿಂದ ಅಲಂಕರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಮೂಲಕ ಮೆರವಣಿಗೆ ನಡೆಸಿ ತದನಂತರ 12ಕ್ಕೆ ಹೂವುಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ದೇವರ ಉತ್ಸವ ಮೂರ್ತಿಯನ್ನು ಅರ್ಚಕರಾದ ಗೊರೂರು ಶ್ರೀಕಾಂತ್‌ ಭಟ್‌, ಕೊಣನೂರಿನ ಸತ್ಯನಾರಾಯಣ ಭಟ್‌ ಮತ್ತು ಅನಂತ ಶಯನ ರವರುಗಳು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಇದೇ ಸಂದರ್ಭದಲ್ಲಿ ತಹಸೀಲ್ದಾರ್‌ ಶಿವರಾಜ್‌, ರಾಜಸ್ವನಿರೀಕ್ಷ ಕ ನಟರಾಜ್‌, ಗ್ರಾಮಲೆಕ್ಕಾಧಿಕಾರಿ ವಸಂತ್‌ಕುಮಾರ್‌, ರಾಮನಾಥಪುರದ ಉಪತಹಸೀಲ್ದಾರ್‌ ಚಂದ್ರೇಗೌಡ, ರಾಜಸ್ವನಿರೀಕ್ಷ ಕ ಸ್ವಾಮಿ ಹಾಗೂ ಸಮಿತಿಯವರು ರಥಕ್ಕೆ ಪೂಜಾ ಕೈಂಕರ‍್ಯ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಶುಭ ಮಿಥುನ ಲಗ್ನದಲ್ಲಿ ಭಕ್ತರು ಹರ್ಷೋದ್ಘಾರದಿಂದ ಗೋವಿಂದಾ, ಗೋವಿಂದಾ ಎಂಬ ಜೈಕಾರಗಳೊಂದಿಗೆ ರಥವನ್ನು ಎಳೆಯುವ ಮೂಲಕ ಮಹಾ ರಥೋತ್ಸವಕ್ಕೆ ಸಾಕ್ಷಿಯಾದರು. ಮುಂಜಾನೆಯಿಂದಲೇ ನೂರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.

ರಥವನ್ನು ಎಳೆಯುವ ಮಾರ್ಗದುದ್ದಕ್ಕೂ ಭಕ್ತರು ಈಡುಗಾಯಿ ಒಡೆದು, ಹಣ್ಣು ಕಾಯಿ ಸಮರ್ಪಿಸಿ ಭಕ್ತಿ ಭಾವ ಮೆರೆದರು ಹಾಗೂ ರಥವನ್ನು ಎಳೆಯುವ ಮಾರ್ಗದಲ್ಲಿ ಕೊಣನೂರಿನ ವಾಸವಿ ಸಂಸ್ಥೆಯವರು ಭಕ್ತಾದಿಗಳಿಗೆ ಮಜ್ಜಿಗೆ ಹಾಗೂ ಪಾನಕ ತರಿಸಿದರು. ರಥದ ಮುಂಭಾಗದಲ್ಲಿ ಮಂಗಳವಾಧ್ಯ, ಮಂಗಳೂರಿನ ತಂಡದವರಿಂದ ನಾಸಿಕ್‌ ಡ್ರಮ್ಸ್‌ ಮತ್ತು ನೃತ್ಯ ಮುಂತಾದ ಜಾನಪದ ಕಾರ‍್ಯಕ್ರಮಗಳು ರಥೋತ್ಸವಕ್ಕೆ ಮೆರಗು ನೀಡಿದವು.

ಬೆಂಗಳೂರು, ಮೈಸೂರು, ಮಂಡ್ಯ, ಕೊಡಗು ಮತ್ತು ಇತರೆ ಕಡೆಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಆಂಜನೇಯ ಸ್ವಾಮಿ ಭಕ್ತರು ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ