ಆ್ಯಪ್ನಗರ

ಮಳೆ ಕೊರತೆ: ಯಗಚಿಗೆ ಹೆಚ್ಚದ ಒಳ ಹರಿವು

ಇಲ್ಲಿನ ಯಗಚಿ ಜಲಾಶಯಕ್ಕೆ ಮಳೆಗಾಲದಲ್ಲೂ ಒಳಹರಿವು ತೀರಾ ಕಡಿಮೆ ಆಗಿದ್ದು, ಈ ವರ್ಷ ಜಲಾಶಯ ಭರ್ತಿಯಾಗುವ ಯಾವುದೇ ಲಕ್ಷ ಗಳಿಲ್ಲ.

Vijaya Karnataka 20 Jul 2019, 5:00 am
ಬೇಲೂರು: ಇಲ್ಲಿನ ಯಗಚಿ ಜಲಾಶಯಕ್ಕೆ ಮಳೆಗಾಲದಲ್ಲೂ ಒಳಹರಿವು ತೀರಾ ಕಡಿಮೆ ಆಗಿದ್ದು, ಈ ವರ್ಷ ಜಲಾಶಯ ಭರ್ತಿಯಾಗುವ ಯಾವುದೇ ಲಕ್ಷ ಗಳಿಲ್ಲ.
Vijaya Karnataka Web HSN-HSN 19BLRP-2


3.6 ಟಿಎಂಸಿ ಸಾಮರ್ಥ್ಯ‌ದ ಜಲಾಶಯದಲ್ಲಿ ಇದೀಗ ಕೇವಲ 1.97 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ವೇಳೆಗೆ 1 ಟಿಎಂಸಿ ನೀರು ಬಂದಿತ್ತು. ಆದರೆ, ಈ ವರ್ಷ ಕೇವಲ 0.20 ಟಿಎಂಸಿ ಮಾತ್ರ ಉಳಿದಿದ್ದು, ಇದು ರೈತರು ಹಾಗೂ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಜಲಾನಯನ ವ್ಯಾಪ್ತಿಯಾದ ಬೇಲೂರು ತಾಲೂಕಿನ ಗೆಂಡೇಹಳ್ಳಿ, ಚಿಕ್ಕಮಗಳೂರು ತಾಲೂಕಿನ ಆಲ್ದೂರು ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾದರೆ ಯಗಚಿ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಳವಾಗಲಿದೆ. ಇದೀಗ ಆ ಭಾಗದಲ್ಲಿ ಮಳೆ ಪ್ರಮಾಣ ತೀರಾ ಕಡಿಮೆ ಇರುವುದರಿಂದ ಹಾಗೂ ಆ ಭಾಗದ ಬಹುತೇಕ ಕಾಫಿ ತೋಟಗಳಲ್ಲಿ ಇಂಗುಗುಂಡಿಗಳ ತೋಡಿರುವುದರಿಂದ ಮಳೆಯ ನೀರು ನೇರವಾಗಿ ಜಲಾಶಯಕ್ಕೆ ಹರಿದು ಬರುವ ಸಾಧ್ಯತೆ ಕಡಿಮೆಯಾಗಿದೆ.

ಸಮುದ್ರಮಟ್ಟದಿಂದ ಜಲಾಶಯ 964.603 ಮೀ. ಎತ್ತರದಲ್ಲಿದ್ದು ಇಂದಿನ ಮಟ್ಟ 961.12 ಮೀಟರ್‌ ಇದೆ. ಅಂದರೆ, 142 ಕ್ಯೂಸೆಕ್‌ ನೀರು ಒಳಬರುತ್ತಿದೆ. ಅಣೆಕಟ್ಟೆ ನಿರ್ಮಾಣಗೊಂಡ 15 ವರ್ಷದಲ್ಲಿ ಹತ್ತು ವರ್ಷ ಮಾತ್ರ ಡ್ಯಾಂ ಭರ್ತಿಯಾಗಿದೆ. ಕಳೆದ ವರ್ಷ ಜಲಾಶಯಕ್ಕೆ ಬಂದ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗಿತ್ತು. ಈ ಜಲಾಶಯದಿಂದ ಒಟ್ಟು 37 ಸಾವಿರ ಎಕರೆ ಭೂಮಿಗೆ ನೀರು ಒದಗಿಸಲಾಗುತ್ತಿದ್ದು ಇದಲ್ಲದೆ ಬೇಲೂರು, ಅರಸೀಕೆರೆ, ಚಿಕ್ಕಮಗಳೂರು, ಹಳೇಬೀಡು ಜನರ ಕುಡಿಯುವ ನೀರಿಗೂ ಒದಗಿಸಲಾಗುತ್ತಿದೆ. ಇದರೊಂದಿಗೆ ಹಳೇಬೀಡು, ಮಾದಿಹಳ್ಳಿ ಹೋಬಳಿಯ 36 ಕೆರೆಗಳಿಗೆ ಇದೇ ನೀರನ್ನು ನಾಲೆ ಮೂಲಕ ಹರಿಸಲಾಗುತ್ತಿದೆ.

ಜುಲೈ ಹಾಗೂ ಆಗಸ್ಟ್‌ ಈ ಎರಡು ತಿಂಗಳಲ್ಲಿನ ಮಳೆಯ ನಿರೀಕ್ಷೆಯಲ್ಲಿದ್ದು ಜಲಾಶಯ ಭರ್ತಿಯಾಗುವುದೆ ಎಂಬ ಪ್ರಶ್ನೆ ಮೂಡಿದೆ. ಮುಂಗಾರು ಮಳೆಯ ಕೊರತೆಯಿಂದಾಗಿ ಜಲಾಶಯಕ್ಕೆ ಒಳಹರಿವು ಇಲ್ಲದೆ ಇರುವುದರಿಂದ ಜಲಾಶಯದಿಂದ ನೀರನ್ನು ನದಿಗೆ ಬಿಡಲಾಗುತ್ತಿಲ್ಲ. ಇದರಿಂದ ರೈತರು ಆತಂಕಗೊಂಡಿದ್ದಾರೆ. ನದಿಯಲ್ಲಿ ನೀರು ಹರಿಯದಿದ್ದರೆ ಬೆಳೆ ಬೆಳೆಯಲು ಸಾಕಷ್ಟು ತೊಂದರೆ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿರುವ ರೈತ ಸಂಘದ ಅಧ್ಯಕ್ಷ ಬೋಗಮಲ್ಲೇಶ್‌, ಜಲಾಶಯದಲ್ಲಿ ಸಾಕಷ್ಟು ಹೂಳು ತುಂಬಿಕೊಂಡಿದ್ದು ಅದರ ತೆಗೆಯುವಿಕೆಗೆ ಕ್ರಮ ಕೈಗೊಳ್ಳಬೇಕಿದೆ ಎಂದಿದ್ದಾರೆ.

ಅಭಿಪ್ರಾಯ
ಯಗಚಿ ಜಲಾಶಯದಲ್ಲಿ ಮುಂಗಾರು ಮಳೆಯ ಕೊರತೆ ಹಿನ್ನಲೆಯಲ್ಲಿ ಒಳಹರಿವಿನ ಸಮಸ್ಯೆ ಉಂಟಾಗಿದ್ದರೂ ಬೇಲೂರು, ಅರಸೀಕೆರೆ, ಚಿಕ್ಕಮಗಳೂರು, ಹಳೇಬೀಡು ಜನರು ಕುಡಿಯಲು ನೀರಿಗೆ ತೊಂದರೆ ಆಗುವುದಿಲ್ಲ. ಆತಂಕ ಪಡುವ ಅಗತ್ಯವಿಲ್ಲ.
-ಕೃಷ್ಣಪ್ಪ, ಯಗಚಿ ಯೋಜನೆ ಎಂಜಿನಿಯರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ