ಆ್ಯಪ್ನಗರ

ಭೂಕುಸಿತ ಪ್ರದೇಶಕ್ಕೆ ಅಧಿಕಾರಿಗಳ ತಂಡ ಭೇಟಿ

ಭೂಕುಸಿತದಿಂದ ಆತಂಕ ಸ್ಥಿತಿಯಲ್ಲಿ ಇದ್ದೇವೆ, ಕೊಡಗಿನಷ್ಟು ಹಾನಿ ಇಲ್ಲದಿದ್ದರೂ, ಕೃಷಿ ಚಟುವಟಿಕೆಯ ಸೆಲೆಯೇ ಇಲ್ಲದಂತಾಗಿದೆ. ಗದ್ದೆ, ಜಮೀನು, ತೋಟ ಜಲಾವೃತಗೊಂಡ ಪರಿಣಾಮ ಬೆಳೆನಷ್ಟವಾಗಿದೆ. ಸಂಪರ್ಕ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿದ್ದು, ಸೂಕ್ತ ಪರಿಹಾರ ಒದಗಿಸಿ ಎಂದು ಮಾಗೇರಿ ಸುತ್ತಮುತ್ತಲಿನ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

Vijaya Karnataka 22 Aug 2018, 5:00 am
ವನಗೂರು (ಸಕಲೇಶಪುರ): ಭೂಕುಸಿತದಿಂದ ಆತಂಕ ಸ್ಥಿತಿಯಲ್ಲಿ ಇದ್ದೇವೆ, ಕೊಡಗಿನಷ್ಟು ಹಾನಿ ಇಲ್ಲದಿದ್ದರೂ, ಕೃಷಿ ಚಟುವಟಿಕೆಯ ಸೆಲೆಯೇ ಇಲ್ಲದಂತಾಗಿದೆ. ಗದ್ದೆ, ಜಮೀನು, ತೋಟ ಜಲಾವೃತಗೊಂಡ ಪರಿಣಾಮ ಬೆಳೆನಷ್ಟವಾಗಿದೆ. ಸಂಪರ್ಕ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿದ್ದು, ಸೂಕ್ತ ಪರಿಹಾರ ಒದಗಿಸಿ ಎಂದು ಮಾಗೇರಿ ಸುತ್ತಮುತ್ತಲಿನ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
Vijaya Karnataka Web MSR-2108-2-1-IMG_20180821_115104


ಸತತ ಎರಡು ತಿಂಗಳಿಂದ ಧಾರಾಕಾರ ಸುರಿದ ಮಳೆಯಿಂದ ಬಿಸ್ಲೆ, ಹೆತ್ತೂರು ಹೋಬಳಿ ಹಿಜ್ಜನಹಳ್ಳಿ, ಕಲ್ಲಹಳ್ಳಿ ಸುತ್ತಲಿನ ಪ್ರದೇಶದಲ್ಲಿ ಆಗಿರುವ ಹಾನಿ ಹಾಗೂ ಕುಸಿದು ಬಿದ್ದಿರುವ ಬೆಟ್ಟ,ಗುಡ್ಡಗಳ ಕುರಿತು ವಿಜಯ ಕರ್ನಾಟಕ ಮಂಗಳವಾರ ವರದಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತಕೊಂಡ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಹಿಜ್ಜನಹಳ್ಳಿ ಹಾಗೂ ಮಾಗೇರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನೊಂದವರಿಗೆ ಜಿಲ್ಲಾಡಳಿತದಿಂದ ನೆರವಿನ ಭರವಸೆ ನೀಡಿದರು.

ಚಂಗಡಿಹಳ್ಳಿ, ಎಸಳೂರು ಮಾರ್ಗದ ಮೂಲಕ ಉಚ್ಚಂಗಿಯ ಕಣಿವೆ ಬಾಗಿಲು ಹಾಗೂ ಗವಿಬೆಟ್ಟ ಕುಸಿತದಿಂದ ಜಮೀನು ಕಳೆದುಕೊಂಡಿದ್ದು, ಓಡಳ್ಳಿ ಭಾಗದ ಭೂಕುಸಿತ ಪ್ರದೇಶ ವೀಕ್ಷಿಸಿದ ಅವರು, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಪರಿಹಾರ ಕೇಂದ್ರಕ್ಕೆ ಭೇಟಿ

ಹಿಜ್ಜನಹಳ್ಳಿ-ಕಲ್ಲಹಳ್ಳಿ ಭೂಕುಸಿತ ವೀಕ್ಷ ಣೆ ಮಾಡಿದ ಜಿಲ್ಲಾಧಿಕಾರಿ, ಮಾಗೇರಿ ಸರಕಾರಿ ಶಾಲೆಯಲ್ಲಿ ಸರಕಾರ ತೆರೆದಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಮಯದಲ್ಲಿ ಗ್ರಾಮಸ್ಥರು ನಮಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಮನವಿ ಮಾಡಿದರು.

ಮಳೆ ನಿಲ್ಲುವವರೆಗೂ ನಷ್ಟ ಅಂದಾಜು ಇಲ್ಲ

ಈ ಭಾಗದಲ್ಲಿ ಭಾರಿ ಮಳೆ ಸುರಿಯುತ್ತ ಇದ್ದು, ಬೆಳೆ ಹಾನಿ ನಷ್ಟ ಮಳೆ ನಿಂತ ನಂತರ ಮಾಡಲಾಗುವುದು. ಹೆತ್ತೂರು ಮತ್ತು ಯಸಳೂರು ಹೋಬಳಿಯಲ್ಲಿ ರೈತರು ಸಂಕಷ್ಟದಲ್ಲಿ ಇದ್ದು, ನಿರಾಶ್ರಿತರಿಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಹಿಜ್ಜನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಮನೆಗಳಿಗೆ ಯಾವುದೇ ಹಾನಿ ಆಗಿಲ್ಲ. ಆದ್ದರಿಂದ, ಗ್ರಾಮಸ್ಥರನ್ನು ಸದ್ಯಕ್ಕೆ ತೆರವು ಮಾಡುವುದಿಲ್ಲ. ಶೀಘ್ರ ಮಾಗೇರಿ ಗ್ರಾಮದಲ್ಲಿ ನಿರಾಶ್ರಿತರಿಗೆ ತಾತ್ಕಾಲಿಕ ವಸತಿ ಮನೆ ಮಾಡಿಕೊಡಲಾಗುವುದು. ತುರ್ತು ಪರಿಸ್ಥಿತಿ ಬಂದರೆ, ಗ್ರಾಮಸ್ಥರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗುವುದು. ಕೊಡಗು ಭಾಗದ ಗಡಿ ಪ್ರದೇಶವಾಗಿರುವುದರಿಂದ ಭೂ ವಿಜ್ಞಾನಿ ಅಧಿಕಾರಿಗಳಿಂದ ಈ ಪ್ರದೇಶದ ಸರ್ವೇ ಮಾಡಲಾಗುವುದು. ರೈತರ ನಷ್ಟವನ್ನು ನಂತರ ಅಂದಾಜು ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಪರಿಸ್ಥಿತಿ ಬಗ್ಗೆ ಉಪವಿಭಾಗಾಧಿಕಾರಿಯಿಂದ ಪ್ರತಿದಿನ ಮಾಹಿತಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಬಿಸಿಲೆ ರಸ್ತೆಗೆ ಭೇಟಿ

ರಾಜ್ಯ ಹೆದ್ದಾರಿ ಬಿಸಿಲೆ-ಜಾಲಸೂರು ಗಡಿ ಚೌಡೇಶ್ವರಿ ರಸ್ತೆ ಕೊಚ್ಚಿಕೊಂಡು ಹೋಗಿರುವ ಪ್ರದೇಶಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ರಸ್ತೆಯ ಪರಿಸ್ಥಿತಿ, ಗುಡ್ಡ ಕುಸಿತ ನೋಡಿ ಶೀಘ್ರ ರಸ್ತೆಯ ಬಗ್ಗೆ ಪಿಡ್ಬ್ಯುಡಿ ಎಂಜಿನಿಯರ್‌ನಿಂದ ಮಾಹಿತಿ ಪಡೆದು ಶೀಘ್ರ ದುರಸ್ತಿ ಪಡಿಸುವ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಅರಣ್ಯ ಇಲಾಖೆ ವಿರುದ್ಧ ದೂರು

ರಸ್ತೆ ಅಭಿವೃದ್ಧಿಗೆ ಅರಣ್ಯ ಇಲಾಖೆ ಪದೇ ಪದೇ ತೊಂದರೆ ನೀಡುತ್ತಾ ಇದ್ದು, ಸಮಸ್ಯೆ ಬಗೆಹರಿಸಿ ಕೊಡಿ ಎಂದು ವನಗೂರು ಗ್ರಾಮದ ಸತೀಶ್‌, ಬಾಚಹಳ್ಳಿ ಪ್ರದೀಪ್‌ ಮನವಿ ಪತ್ರ ಸಲ್ಲಿಸಿದರು. ಅರಣ್ಯ ಇಲಾಖೆ ಬಗ್ಗೆ ರಾಷ್ಟ್ರೀಯ ಹಸಿರು ಪೀಠ ನ್ಯಾಯಾಲಯದಂತೆ ನಡೆಯಬೇಕಿದ್ದು,ಈ ರಸ್ತೆ ಸ್ಥಳೀಯರಿಗೆ ಎಷ್ಟು ಅನುಕೂಲ ಎಂಬ ಬಗ್ಗೆ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಲಕ್ಷಿಕಾಂತ್‌ ರೆಡ್ಡಿ, ಜಿಲ್ಲಾಪಂಚಾಯಿತಿ ಸದಸ್ಯೆ ಉಜ್ಮಾ ರೆಜ್ಮಿ, ಪರಿಸರ ಪ್ರೇಮಿ ಗೊದ್ದು ಉಮೇಶ್‌,ಜಿಲ್ಲಾ ವಾರ್ತಾಧಿಕಾರಿ ವಿನೋದ್‌ ಚಂದ್ರ, ಸ್ಥಳೀಯ ಮುಖಂಡರು ಹಾಗೂ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ