ಶುಚಿತ್ವಕ್ಕೆ ಆದ್ಯತೆ ಕೊಡಿ, ಭಕ್ತರಿಗೆ ಸೌಲಭ್ಯ ಕಲ್ಪಿಸಿ: ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನೆ
ಚನ್ನರಾಯಪಟ್ಟಣ: ಮಹಾಮಸ್ತಕಾಭಿಷೇಕ ಮಹೋತ್ಸವ ನಿಮಿತ್ತ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ವಿವಿಧ ಇಲಾಖೆಗಳ ಕಾಮಗಾರಿಗಳನ್ನು ಇನ್ನಷ್ಟು ವೇಗಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ರಾಜ್ಸಿಂಗ್ ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
''ನಿತ್ಯ ಲಕ್ಷಾಂತರ ಜನರು ಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಸಂಚಾರಿ ಶೌಚಾಲಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವ್ಯವಸ್ಥೆಗೊಳಿಸಬೇಕು. ಬೀದಿದೀಪಗಳಿಗೆ ಸಂಬಂಧಿಸಿದಂತೆ ಎಲ್ಲೂ ಕತ್ತಲು ಆವರಿಸದಂತೆ ಎಚ್ಚರವಹಿಸಬೇಕು. ನೂತನವಾಗಿ ನಿರ್ಮಾಣವಾಗುತ್ತಿರುವ ತಾತ್ಕಾಲಿಕ ನಗರಗಳಿಗೂ ಸಮರ್ಪಕವಾಗಿ ನೀರು ಹಾಗೂ ಇತರ ಮೂಲ ಸೌಲಭ್ಯಗಳು ಸಮರ್ಪಕವಾಗಿ ದೊರೆಯುವಂತೆ ನೋಡಿಕೊಳ್ಳಬೇಕು,'' ಎಂದರು.
ಭದ್ರತಾ ವ್ಯವಸ್ಥೆ ಕಲ್ಪಿಸಿ: ''ಕ್ಷೇತ್ರಕ್ಕೆ ಬರುವ ಪ್ರವಾಸಿಗರಿಗೆ ಪ್ರತಿಯೊಂದು ಹಂತದಲ್ಲಿಯೂ ಕೊರತೆಯಾಗದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಕಾರ್ಯೋನ್ಮುಖವಾಗಬೇಕು. ಶ್ರವಣಬೆಳಗೊಳದಿಂದ 2 ಕಿ.ಮೀ. ದೂರದಲ್ಲಿಯೇ ಖಾಸಗಿ ವಾಹನಗಳ ನಿಲುಗಡೆ ಮಾಡುವುದರಿಂದ ಅಲ್ಲಿಂದ ಪ್ರವಾಸಿಗರು ಬಯಸುವ ಸ್ಥಳಗಳಿಗೆ ತೆರಳಲು 45 ವಾಹನಗಳನ್ನು ನಿಯೋಜಿಸುವುದಲ್ಲದೆ ಸೂಕ್ತ ಭದ್ರತಾ ವ್ಯವಸ್ಥೆಯನ್ನೂ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು,'' ಎಂದು ಹೇಳಿದರು.
ರಾತ್ರಿ 9.30ರವರೆಗೆ ಭೋಜನ: ''ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬರಿಗೂ ಭೋಜನದ ವ್ಯವಸ್ಥೆ ಸಮರ್ಪಕವಾಗಿ ಮಾಡಲಿದ್ದು, ಸಾಮಾನ್ಯ ಊಟದ ಕೌಂಟರ್ಗಳನ್ನು ಹೊರತುಪಡಿಸಿ ಅತಿಗಣ್ಯರ ತಾತ್ಕಾಲಿಕ ನಗರಗಳು ಇರುವ ಕಡೆಗಳಲ್ಲಿ ರಾತ್ರಿ 9.30ರ ತನಕವೂ ಊಟದ ವ್ಯವಸ್ಥೆಯನ್ನು ಶ್ರೀಮಠದ ವತಿಯಿಂದ ಮಾಡಲಾಗುವುದು,'' ಎಂದು ಮಠದ ಪ್ರತಿನಿಧಿಗಳು ಸಭೆಯ ಗಮನಕ್ಕೆ ತಂದರು. ಅಲ್ಲದೆ ಎಲ್ಲದಕ್ಕೂ ವಿದ್ಯುತ್ ಅಗತ್ಯವಾಗಿರುವುದರಿಂದ ಅನಿಯಂತ್ರಿತವಾಗಿ ವಿದ್ಯುತ್ ಸರಬರಾಜು ಮಾಡುವ ಬಗ್ಗೆ ಗಮನಹರಿಸುವಂತೆ ತಿಳಿಸಲಾಯಿತು.
ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿಯ ರಾಷ್ಟ್ರೀಯ ಸಮಿತಿ ಕಾರಾರಯಧ್ಯಕ್ಷ ಎಸ್.ಜಿತೇಂದ್ರಕುಮಾರ್, ವಿನೋದ್ದೊಡ್ಡನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ಕುಮಾರ್ ಶಹಪುರವಾಡ್, ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿಯ ವಿಶೇಷಾಧಿಕಾರಿ ಬಿ.ಎನ್.ವರಪ್ರಸಾದರೆಡ್ಡಿ, ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ಜಾನಕಿ, ಡಿಎಚ್ಒ ವೆಂಕಟೇಶ್ ಹಾಗೂ ವಿವಿಧ ಇಲಾಖೆಗಳ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.