ಹಾಸನ: ಭಗವಾನ್ ಬಾಹುಬಲಿ ಮಹಾಮಜ್ಜನದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ದಿನಾಂಕ ಇನ್ನೂ ನಿಗದಿಯಾಗಿಲ್ಲವಾದರೂ, ಫೆ. 26ರೊಳಗೆ ಅವರು ಬರುತ್ತಾರೆ ಎಂದು ಮೂಲಗಳು ತಿಳಿಸುತ್ತಿವೆ.
ಫೆ. 17ರಿಂದ ಪ್ರಾರಂಭವಾಗುವ ಈ ಶತಮಾನದ ಎರಡನೇ ಮಹಾಮಸ್ತಕಾಭಿಷೇಕಕ್ಕೆ ಆಗಮಿಸುವಂತೆ ಕ್ಷೇತ್ರದ ವತಿಯಿಂದ ಪ್ರಧಾನಿಗೆ ಆಹ್ವಾನ ಹೋಗಿರುವುದಲ್ಲದೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಖುದ್ದು ಭೇಟಿ ಮಾಡಿ ಆಮಂತ್ರಿಸಿದ್ದಾರೆ.
ಕೇಂದ್ರ ಸಚಿವ ಅನಂತಕುಮಾರ್ ಶ್ರವಣಬೆಳಗೊಳಕ್ಕೆ ಭೇಟಿ ನೀಡಿದ ಸಂದರ್ಭ ಮಸ್ತಕಾಭಿಷೇಕ್ಕೆ ಕೇಂದ್ರದ ಅನುದಾನ ಕೊಡಿಸುವ ಜತೆಗೆ ಪ್ರಧಾನಿ ಮೋದಿಯವರನ್ನು ಕರೆತರುವುದಾಗಿ ಹೇಳಿ ಹೋಗಿದ್ದರು. ಇದರೊಂದಿಗೆ ಬಿಜೆಪಿ ನಾಯಕರು ಕೂಡ ಮೋದಿ ಫೆ. 4ರಂದು ಬೆಂಗಳೂರಿಗೆ ಆಗಮಿಸಿದ್ದ ವೇಳೆ ಶ್ರವಣಬೆಳಗೊಳಕ್ಕೆ ಆಗಮಿಸುವಂತೆ ವಿನಂತಿಸಿದ್ದರು. ಪ್ರಧಾನಿ ನರೇಂದ್ರಮೋದಿ ಫೆ.13ಕ್ಕೆ ಫಿಲಿಫೈನ್ಸ್ ಪ್ರವಾಸ ಮುಗಿಸಿ ದೇಶಕ್ಕೆ ಆಗಮಿಸಲಿದ್ದು, ಆ ಬಳಿಕ ಫೆ.26ರೊಳಗೆ ಒಂದು ದಿನ ಆಗಮಿಸಿ ಮಸ್ತಕಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ನಿಚ್ಚಳವಾಗಿರುವ ಕಾರಣ ಪ್ರಧಾನಿ ಬೆಳಗೊಳ ಭೇಟಿ ಮಹತ್ವ ಪಡೆದುಕೊಂಡಿದೆ. ಪ್ರಧಾನಿ ಮೋದಿ ಆಗಮಿಸಬಹುದು ಎಂಬ ಮಾಹಿತಿ ಜಿಲ್ಲಾಡಳಿತಕ್ಕೆ ಇದೆಯಾದರೂ, ಪ್ರಧಾನಿ ಕಾರಾರಯಲಯದಿಂದ ಅಧಿಕೃತವಾಗಿ ಯಾವ ಮಾಹಿತಿಯೂ ರವಾನೆಯಾಗಿಲ್ಲ.
ಫೆ.22ಕ್ಕೆ ಅಮಿತ್ ಶಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಫೆ. 22ಕ್ಕೆ ಬೆಳಗೊಳಕ್ಕೆ ಆಗಮಿಸಲಿದ್ದಾರೆ. ಈ ಮೊದಲು ಫೆ. 18ಕ್ಕೆ ಆಗಮಿಸುತ್ತಾರೆ ಎನ್ನಲಾಗಿತ್ತಾದರೂ, ಅಂದು ರಾಷ್ಟ್ರೀಯ ಬಿಜೆಪಿ ಕಚೇರಿ ಉದ್ಘಾಟನಾ ಸಮಾರಂಭ ಇರುವ ಕಾರಣ ಬೆಳಗೊಳ ಭೇಟಿಯನ್ನು ಮುಂದೂಡಲಾಗಿದೆ.
ಮಾಜಿ ಪ್ರಧಾನಿಗಳ ಭೇಟಿ
ದೇಶದ ಪ್ರಥಮ ಪ್ರಧಾನಿ ಜವಹರ್ಲಾಲ್ ನೆಹರು 1953ರಲ್ಲಿ ತಮ್ಮ ಪುತ್ರಿ ಇಂದಿರಾ ಗಾಂಧಿಯೊಂದಿಗೆ ಆಗಮಿಸಿ, ವಿಂಧ್ಯಗಿರಿ ಬೆಟ್ಟವೇರಿ ಬಾಹುಬಲಿ ದರ್ಶನ ಪಡೆದಿದ್ದರು. 1981ರಲ್ಲಿ ಪ್ರಧಾನಿಯಾಗಿ ದಿ.ಇಂದಿರಾಗಾಂಧಿ ಆಗಮಿಸಿ ಮಸ್ತಕಾಭಿಷೇಕ ಉದ್ಘಾಟಿಸಿದ್ದರು. 1993ರಲ್ಲಿ ಅಂದಿನ ಪ್ರಧಾನಿ ನರಸಿಂಹರಾವ್ ಭೇಟಿ ನೀಡಿದ್ದರು.
------------------
ಇಂದು ಉಪ ರಾಷ್ಟ್ರಪತಿ ಭೇಟಿ
ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಫೆ. 10ರಂದು ಬೆಳಗೊಳಕ್ಕೆ ಆಗಮಿಸುತ್ತಿದ್ದು, ವ್ಯಾಪಕ ಭದ್ರತೆ ಒದಗಿಸಲಾಗಿದೆ. ಮಸ್ತಕಾಭಿಷೇಕ ಪೂರ್ವಭಾವಿಯಾಗಿ ನಡೆಯುವ ಭಗವಾನ್ ಬಾಹುಬಲಿಯ ರಾಜ್ಯಾಭಿಷೇಕ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದು, ಚಾಮುಂಡರಾಯ ಸಭಾ ಮಂಟಪದಲ್ಲಿ ಏರ್ಪಡಿಸಿರುವ ಸಮಾರಂಭವನ್ನು ಬೆಳಗ್ಗೆ 10.20ಕ್ಕೆ ಉದ್ಘಾಟಿಸಲಿದ್ದಾರೆ. ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಸಚಿವ ಅನಂತಕುಮಾರ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.