ಆ್ಯಪ್ನಗರ

ಸದನದಲ್ಲಿ ಉತ್ತರಿಸದ ಮೋದಿ: ಗೌಡರ ಟೀಕಾಪ್ರಹಾರ

ಭ್ರಷ್ಟಾಚಾರ ರಹಿತ ಸ್ಥಿರ ಸರಕಾರ ಯಾವುದೆಂದು ದೇಶದ 125 ಕೋಟಿ ಜನತೆ ತೀರ್ಮಾನಿಸಲಿ, ಆ ಬಳಿಕ ಬಿಜೆಪಿಯವರೇ ಆನಂದದಿಂದ ಅಧಿಕಾರ ನಡೆಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಟೀಕಾಪ್ರಹಾರ ನಡೆಸಿದರು.

Vijaya Karnataka 14 Jan 2019, 5:00 am
ಹಾಸನ: ಭ್ರಷ್ಟಾಚಾರ ರಹಿತ ಸ್ಥಿರ ಸರಕಾರ ಯಾವುದೆಂದು ದೇಶದ 125 ಕೋಟಿ ಜನತೆ ತೀರ್ಮಾನಿಸಲಿ, ಆ ಬಳಿಕ ಬಿಜೆಪಿಯವರೇ ಆನಂದದಿಂದ ಅಧಿಕಾರ ನಡೆಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಟೀಕಾಪ್ರಹಾರ ನಡೆಸಿದರು.
Vijaya Karnataka Web modi not answering in the asembly gowdas criticism
ಸದನದಲ್ಲಿ ಉತ್ತರಿಸದ ಮೋದಿ: ಗೌಡರ ಟೀಕಾಪ್ರಹಾರ


''ಪ್ರತಿಪಕ್ಷಗಳ ಆರೋಪಕ್ಕೆ ಸದನದಲ್ಲಿ ಒಂದು ದಿನವೂ ಉತ್ತರ ನೀಡದ ಪ್ರಧಾನಿ ದೇಶಲೂಟಿ ಮಾಡಿದ ಪಕ್ಷಗಳೆಲ್ಲವೂ ಒಟ್ಟಾಗಿ ಬಿಜೆಪಿಯನ್ನು ಅಧಿಕಾರದಿಂದ ಇಳಿಸಲು ಹೊರಟಿವೆ ಎಂಬ ದೊಡ್ಡ ವ್ಯಾಖ್ಯಾನ ಮಾಡುವುದರಲ್ಲಿ ಅರ್ಥವಿಲ್ಲ,'' ಎಂದು ಪ್ರಧಾನಿ ಆರೋಪಕ್ಕೆ ಸುದ್ದಿಗೋಷ್ಠಿಯಲ್ಲಿ ತಮ್ಮದೇ ಆದ ದಾಟಿಯಲ್ಲಿ ಟಾಂಗ್‌ ನೀಡಿದರು.

''ಬಿಜೆಪಿ ಅಧಿಕಾರಕ್ಕೆ ಬರುವಾಗ ಕಾಂಗ್ರೆಸ್‌ನವರು ಭ್ರಷ್ಟರು ಎಂದು ಬಿಂಬಿಸಿ 2ಜಿ, 3ಜಿ ಹಲವು ಹಗರಣ ಪ್ರಸ್ತಾಪಿಸಿದ್ದರು. ತಮ್ಮ ವಿರುದ್ಧ ರಾಹುಲ್‌ಗಾಂಧಿ ಸೇರಿದಂತೆ ಪ್ರತಿಪಕ್ಷ ಮಾಡಿದ ಆರೋಪದ ಬಗ್ಗೆ ಸದನದಲ್ಲಿ ಉತ್ತರಿಸದೆ ಪ್ರಧಾನಿ ಮಾಡಿದ್ದೇನು,'' ಎಂದು ಪ್ರಶ್ನಿಸಿದರು.

''ದೇಶದ ಅಭಿವೃದ್ಧಿ ನನ್ನಿಂದಲೇ, ಅದಕ್ಕಾಗಿಯೇ ಜನ್ಮ ತಾಳಿದ್ದೇನೆ ಎನ್ನುವುದಾದರೆ ಮಾಜಿ ಪ್ರಧಾನಿ ದಿ.ಶಾಸ್ತ್ರಿ, ದಿ.ಇಂದಿರಾಗಾಂಧಿ ಸೇರಿದಂತೆ ಹಿಂದಿನ ಯಾವ ಪ್ರಧಾನಿಗಳ ಕೊಡುಗೆ ಏನು ಇಲ್ಲವೇ? ಪ್ರಧಾನಿ ಹುದ್ದೆಯಲ್ಲಿ ಇರುವವರು ಮಾತನಾಡುವಾಗ ಜವಾಬ್ದಾರಿಯಿಂದ ಮಾತನಾಡಬೇಕು,'' ಎಂದು ತಿರುಗೇಟು ನೀಡಿದರು.

''ದೇಶದ ಅಭಿವೃದ್ಧಿ ಚೂರು,ಪಾರು ಪಕ್ಷಗಳಿಂದ ಆಗಲ್ಲ ಎಂದು ಟೀಕಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉನ್ನತ ಮಟ್ಟದಲ್ಲಿ ಇರುವವರು ಬಳಸುವ ಶಬ್ಧ, ಪದ ಪ್ರಯೋಗಗಳನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ತನ್ನ 60 ವರ್ಷದ ರಾಜಕೀಯ ಜೀವನದಲ್ಲಿ ಎಂದು ಕೀಳುಮಟ್ಟದ ಭಾಷೆ ಬಳಸಿಲ್ಲ,'' ಎಂದು ಮೋದಿ ವಿರುದ್ಧ ಅಸಮಾಧಾನ ಹೊರಹಾಕಿದರು.

''ತಾನು ಕೂಡ ಪ್ರಧಾನಿಯಾಗಿದ್ದವನು ಅಲ್ಪಕಾಲ ಇದ್ದರೂ ಸಿಬಿಐಗೆ ಸ್ವಾತಂತ್ರ್ಯ ನೀಡಿದ್ದೆ. ಪ್ರಸ್ತುತ ಏನಾಗಿದೆ? ಸಿಬಿಐ ಎಲ್ಲಿವರೆಗೆ ಸ್ವತಂತ್ರವಾಗಿ ಕೆಲಸ ನಿರ್ವಹಿಸುತ್ತದೆಯೋ ಅದುವರೆಗೆ ಸರಿಯಾಗಿ, ನಂಬಿಕಸ್ಥ ಸಂಸ್ಥೆಯಾಗಿ ಉಳಿಯಲು ಸಾಧ್ಯ,'' ಎಂದರು.

''ದೇಶದಲ್ಲಿ 2019ರ ಚುನಾವಣೆಗೆ ಎಲ್ಲ ಪಕ್ಷಗಳು ರಭಸದಿಂದ ಹೋರಾಟ ಮಾಡುತ್ತಿವೆ. ಪ್ರಾದೇಶಿಕ ಪಕ್ಷಗಳು ಒಂದೆಡೆ, ರಾಷ್ಟ್ರೀಯ ಪಕ್ಷಗಳು ಮತ್ತೊಂದೆಡೆ ತಮ್ಮದೇ ಆದ ಕಾರ್ಯತಂತ್ರ ರೂಪಿಸುತ್ತಿವೆ. ಬಿಜೆಪಿ ರಾಮ್‌ಲೀಲಾ ಮೈದಾನದಲ್ಲಿ ದೇಶದ ಸಂಸದರು, ಶಾಸಕರು, ಮುಖಂಡರನ್ನು ಸೇರಿಸಿ ದೊಡ್ಡ ಮಟ್ಟದ ಶಕ್ತಿ ಪ್ರದರ್ಶನ ನಡೆಸುತ್ತಿದೆ. ಮಾತಿನ ಭರದಲ್ಲಿ ಪ್ರಧಾನಿ ನರೇಂದ್ರಮೋದಿ ಆಗಾಗ್ಗೆ ಆಪಾದನೆಯನ್ನು ಮಾಡುತ್ತಿದ್ದಾರೆ. ಮಹಾ ಘಟಬಂಧನ್‌ ಅಲ್ಲ ವಿಘಟಬಂಧನ್‌ ಎಂದು ಹೀಯಾಳಿಸಿದ್ದಾರೆ. ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ,'' ಎಂದರು.

''ಜ.19ರಂದು ಮಮತಾ ಬ್ಯಾನರ್ಜಿ ನಡೆಸುವ ರಾರ‍ಯಲಿ ಪ್ರಾದೇಶಿಕ ಪಕ್ಷಗಳೆಲ್ಲ ಸೇರಿ ಒಂದು ತೀರ್ಮಾನಕ್ಕೆ ಬರುವುದು ಸತ್ಯ. ಜಗನ್‌ಮೋಹನ್‌ ರೆಡ್ಡಿ ಕೂಡ ಪಾದಯಾತ್ರೆ ಬಳಿಕ ನಿರ್ಧರಿಸುತ್ತೇನೆ ಎಂದಿದ್ದಾರೆ,'' ಎಂದು ಹೇಳಿದರು.

ಒತ್ತಡ ಇರುವುದು ನಿಜ: ''ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮೇಲೆ ಒತ್ತಡ ಇರುವುದು ನಿಜ,'' ಎಂದು ದೇವೇಗೌಡರು ಒಪ್ಪಿಕೊಂಡರು.

''ರೈತರ ಸಾಲಮನ್ನಾ ಸೇರಿದಂತೆ ಹಿಂದಿನ ಸಿಎಂ ಸಿದ್ದರಾಮಯ್ಯ ಘೋಷಿಸಿದ ಎಲ್ಲ ಯೋಜನೆ ಮುಂದುವರಿಸಬೇಕು ಎಂಬ ಷರತ್ತು ಇದೆ. ಇದೆಲ್ಲ ಹುಡುಗಾಟವಲ್ಲ. ಎಲ್ಲ ಯೋಜನೆಗೆ ಹಣ ಹೊಂದಿಸುವ ಜವಾಬ್ದಾರಿ ಸಿಎಂ ಮೇಲಿದೆ,'' ಎಂದು ಹೇಳಿದರು.

''ಜೆಡಿಎಸ್‌ ಮತ್ತು ಕಾಂಗ್ರೆಸ್‌ ಎರಡು ಪಕ್ಷಕ್ಕೂ ಪ್ರಬುದ್ಧತೆ ಇದೆ. ಸಿಎಂ ಕೊಟ್ಟ ಮಾತಿನಂತೆ ಗರ್ಭಿಣಿಯರಿಗೆ ಆರು ಸಾವಿರ, 70 ವರ್ಷ ವಯಸ್ಸಾದವರಿಗೆ ಐದು ಸಾವಿರ ಕೊಡುವುದಾಗಿ ಘೋಷಿಸಿದ್ದಾರೆ. ಎಲ್ಲವನ್ನು ಈಡೇರಿಸುತ್ತಾರೆ,'' ಎಂದರು.

''ರಾಜ್ಯದಲ್ಲಿ ಶೇ.2ರಷ್ಟು ಬ್ರಾಹ್ಮಣರು ಇದ್ದಾರೆ. ಅವರಿಗಾಗಿ ರಾಜ್ಯ ಸರಕಾರ ಪ್ರತ್ಯೇಕ ನಿಗಮ ಘೋಷಿಸಿದೆ, ಕೇಂದ್ರ ಸರಕಾರ ಮೇಲ್ವರ್ಗದ ಜನರಿಗೂ ಮೀಸಲು ಎಂದಿದೆ. ಅದೆಷ್ಟರ ಮಟ್ಟಿಗೆ ಮೀಸಲು ಸೌಲಭ್ಯ ಒದಗಿಸಲಿದೆ ನೋಡೋಣ,'' ಎಂದು ವ್ಯಂಗ್ಯವಾಡಿದರು.

ಶಾಸಕ ಎ.ಟಿ.ರಾಮಸ್ವಾಮಿ, ಲಿಂಗೇಶ್‌, ಶಿವಲಿಂಗೇಗೌಡ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ