ಆ್ಯಪ್ನಗರ

ರುದ್ರಪಟ್ಟಣದಲ್ಲಿ ಮನಸೂರೆಗೊಂಡ ಸಂಗೀತ ಸುಧೆ

ರಾಮನಾಥಪುರ ಹೋಬಳಿ ರುದ್ರಪಟ್ಟಣದಲ್ಲಿ ಹಮ್ಮಿಕೊಂಡಿರುವ ಸಂಗೀತ ಸಮಾರಾಧನೆಯಲ್ಲಿ ಸಂಗೀತ ಕ್ಷೇತ್ರದ ಸುಪ್ರಸಿದ್ಧರ ಗಾನ ಮಾಧುರ್ಯ ಸಂಗೀತಾಸಕ್ತರನ್ನು ಮಂತ್ರಮುಗ್ಧರನ್ನಾಗಿಸಿತು.

Vijaya Karnataka 18 May 2019, 5:00 am
ಕೊಣನೂರು: ರಾಮನಾಥಪುರ ಹೋಬಳಿ ರುದ್ರಪಟ್ಟಣದಲ್ಲಿ ಹಮ್ಮಿಕೊಂಡಿರುವ ಸಂಗೀತ ಸಮಾರಾಧನೆಯಲ್ಲಿ ಸಂಗೀತ ಕ್ಷೇತ್ರದ ಸುಪ್ರಸಿದ್ಧರ ಗಾನ ಮಾಧುರ್ಯ ಸಂಗೀತಾಸಕ್ತರನ್ನು ಮಂತ್ರಮುಗ್ಧರನ್ನಾಗಿಸಿತು.
Vijaya Karnataka Web HSN-HSN17KNR7


18ನೇ ವರ್ಷದ ಸಂಗೀತೋತ್ಸವದ ಎರಡನೇ ದಿನವಾದ ಶುಕ್ರವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 1ರವರೆಗೆ ಸತತ ಎರಡೂವರೆ ಗಂಟೆ ಚೆನ್ನೈನ ವಿದ್ವಾನ್‌ ರಮೇಶ್‌ ಮುನಿಗೊಂಡನ್‌ ಮತ್ತು ಸಂಗಡಿಗರು ನಡೆಸಿಕೊಟ್ಟ ವೀಣಾ ವಾದನ ಜನರ ಮೆಚ್ಚುಗೆ ಗಳಿಸಿತು.

ಅಣ್ಣಮಾಚಾರ್ಯರ ಕೃತಿಯನ್ನು ಶೇಷಾದ್ರಿ ರಾಗ, ಖಂಡಛಾಪು ತಾಳದಲ್ಲಿ ಹಾಗೂ ಮುತ್ತುಸ್ವಾಮಿ ದೀಕ್ಷಿತರ ಕಾದಂಬರಿ ಪ್ರಿಯಾಯೈ ಕೃತಿಯನ್ನು ಮಿಶ್ರತಾಳ ಛಾಪು ತಾಳ ಮತ್ತು ಮೋಹನ ರಾಗದಲ್ಲಿ ಸಂಗೀತ ದಿಗ್ಗಜ ಮುತ್ತುಸ್ವಾಮಿ, ದೀಕ್ಷಿತರ ಮಹಾಗಣಪತಿಂ ಕೃತಿಯನ್ನು ನಾಟ್ಯ ರಾಗದಲ್ಲಿ, ಅಟ್ಟತಾಳ ವರ್ಣದ ವೀರಿಬೋಣಿ ಕೃತಿಯನ್ನು ಭೈರವಿ ರಾಗದಲ್ಲಿ, ಶ್ರೀ ವಿಶ್ವನಾಥಂಭಜೇಹಂ ಕೃತಿಯನ್ನು ರಾಗಮಾಲಿಕಾ ರಾಗದಲ್ಲಿ, ಸ್ಮರಣೆ ಒಂದೇ ಸಾಲದೆ ಗೋವಿಂದ ಕೃತಿಯನ್ನು ಮಲಯಮಾರುತ ರಾಗದಲ್ಲಿ, ಅರ್ಧನಾರೀಶ್ವರಂ ಕೃತಿಯನ್ನು ಕುಮುದಕ್ರಿಯ ರಾಗದಲ್ಲಿ, ತ್ಯಾಗರಾಜರ ಶೋಭಿಲ್ಲು ಸಪ್ತಸ್ವರ ಕೃತಿಯನ್ನು ಜಗನ್ಮೋಹಿನಿ ರಾಗದಲ್ಲಿ ವೀಣಾ ವಾದನ ನುಡಿಸುವ ಮೂಲಕ ಸಂಗೀತ ಪ್ರಿಯರ ಮನಗೆದ್ದರು. ವೀಣಾವಾದನಕ್ಕೆ ವಿದುಷಿ ಅರ್ಜುನ್‌ ಕುಮಾರ್‌ ಮೃದಂಗ ಹಾಗೂ ತ್ರಿಚಿ ಕೃಷ್ಣನ್‌ ಘಟ ನುಡಿಸಿ ಸಾಥ್‌ ನೀಡಿದರು.

ಸಂಜೆ ನಡೆದ ಗಾಯನ ಕಾರ‍್ಯಕ್ರಮದಲ್ಲಿ ವಿದ್ವಾನ್‌ ಎಂ.ಡಿ.ಸಮುದ್ಯತ ಅವರ ಗಾಯನಕ್ಕೆ ತಕ್ಕಂತೆ ಎಂ.ವಿ.ವಿಶ್ವಜಿತ್‌ ವಯೋಲಿನ್‌, ಸಾಯಿವಂಶಿ ಮೃದಂಗ ಬಾರಿಸಿದರು. ವಿದ್ವಾನ್‌ ಕಲ್ಯಾಣ ಪುರಂ ಎಸ್‌.ಅರವಿಂದ್‌ ಅವರ ಗಾಯನಕ್ಕೆ ಸಿ.ಎನ್‌.ಚಂದ್ರಶೇಖರ್‌ ವಯೋಲಿನ್‌, ಸಿ.ಚೆಲುವರಾಜ್‌ ಮೃದಂಗ ಮತ್ತು ಬಿ.ರಾಜಶೇಖರ್‌ ಮೋರ್ಚಿಂಗ್‌ ನುಡಿಸಿ ಎಲ್ಲರ ಮನಸೆಳೆದರು.

ಇಂದಿನ ಕಾರ‍್ಯಕ್ರಮ : ಬೆಳಗ್ಗೆ 6.30 ರಿಂದ 8.30ರವರೆಗೆ ಕಾವೇರಿ ಪೂಜೆ, 10.30ರಿಂದ 1ರವರೆಗೆ ಚೆನ್ನೈನ ಸಹೋದರಿಯರಾದ ಎಸ್‌.ಶುಭಲಕ್ಷ್ಮೀ ಮತ್ತು ಎಸ್‌.ಸ್ವರ್ಣಲತಾ ಅವರಿಂದ ಯುಗಳ ಗಾಯನಕ್ಕೆ ವಿ.ಚಾರುಲತಾ ರಾಮಾನುಜಮ್‌ ವಯೋಲಿನ್‌, ವಿ. ಕೆ.ಯು.ಜಯಚಂದ್ರರಾವ್‌ ಮೃದಂಗ ಹಾಗೂ ವಿ. ಯು.ಎನ್‌.ಗಿರಿಧರ ಉಡುಪ ಘಟ ನುಡಿಸುವರು. ಸಂಜೆ 4.30ಕ್ಕೆ ಮೈಸೂರು ವಿವಿಯ ಪ್ರೊ.ಎ.ರಂಗಸ್ವಾಮಿ ಅವರಿಂದ ಅರಕಲಗೂಡು ತಾಲೂಕಿನ ಸಾಂಸ್ಕೃತಿಕ ಶ್ರೀಮಂತಿಕೆ ಬಗ್ಗೆ ಉಪನ್ಯಾಸ ಹಾಗೂ ರುದ್ರಪಟ್ಟಣ ಸವಿತಾ ಅವರಿಂದ ಡಾ.ಆರ್‌.ಕೆ.ಪದ್ಮನಾಭ್‌ ವಿರಚಿತ ವಿಪ್ರ ವಿಕ್ರಮ ಕಾದಂಬರಿಯ ವಿಶ್ಲೇಷಣೆ, ಸಂಜೆ 6.45ರಿಂದ 8.45ರವರೆಗೆ ವಿನಯ್‌ ಚಂದ್ರ ಮೆನನ್‌ ತಂಡದವರಿಂದ ಭಜನಾಮೃತ ನಾಮ ಸಂಕೀರ್ತನ ಏರ್ಪಡಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಹಾಸನ ಟೈಮ್ಸ್‌ ಸಮೂಹ ಸಂಸ್ಥೆಗಳ ಕಾರ‍್ಯದರ್ಶಿ ಬಿ.ಕೆ.ಗಂಗಾಧರ್‌ ಆಗಮಿಸುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ