ಆ್ಯಪ್ನಗರ

ಸಚಿವರಿಂದ ನೆರೆ ಹಾನಿ ಪರಿಶೀಲನೆ

ತಾಲೂಕಿನ ನೆರೆ ಪೀಡಿತ ಹಲವು ಗ್ರಾಮಗಳಿಗೆ ನೂತನ ಸಚಿವ ಮಾಧುಸ್ವಾಮಿ ಹಾಗೂ ಶಾಸಕ ಸಿ.ಟಿ.ರವಿ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಹಾನುಬಾಳು ಹೋಬಳಿಯ ಹುರುಡಿ ಗ್ರಾಮದಿಂದ ಪರಿಶೀಲನೆ ಆರಂಭಿಸಿದ ಸಚಿವರು ಮೊದಲಿಗೆ ಮೃತ ಪ್ರಕಾಶ್‌ ಹಾಗೂ ದೇವಾಲದಕೆರೆ ರಮೇಶ್‌ ಮನೆಗೆ ತೆರಳಿ ಸಾಂತ್ವನ ಹೇಳಿದರು.

Vijaya Karnataka 23 Aug 2019, 5:00 am
ಸಕಲೇಶಪುರ : ತಾಲೂಕಿನ ನೆರೆ ಪೀಡಿತ ಹಲವು ಗ್ರಾಮಗಳಿಗೆ ನೂತನ ಸಚಿವ ಮಾಧುಸ್ವಾಮಿ ಹಾಗೂ ಶಾಸಕ ಸಿ.ಟಿ.ರವಿ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web neighborhood damage inspection by the minister
ಸಚಿವರಿಂದ ನೆರೆ ಹಾನಿ ಪರಿಶೀಲನೆ


ಹಾನುಬಾಳು ಹೋಬಳಿಯ ಹುರುಡಿ ಗ್ರಾಮದಿಂದ ಪರಿಶೀಲನೆ ಆರಂಭಿಸಿದ ಸಚಿವರು ಮೊದಲಿಗೆ ಮೃತ ಪ್ರಕಾಶ್‌ ಹಾಗೂ ದೇವಾಲದಕೆರೆ ರಮೇಶ್‌ ಮನೆಗೆ ತೆರಳಿ ಸಾಂತ್ವನ ಹೇಳಿದರು. ಮೃತರ ಕುಟುಂಬಗಳಿಗೆ ಶಾಶ್ವತ ಪರಿಹಾರ ಕೊಡಿಸುವುದು ಹಾಗೂ ಒಬ್ಬರಿಗೆ ನೌಕರಿ ಕೊಡಿಸುವ ವಿಚಾರವನ್ನೂ ಪ್ರಸ್ತಾಪಿಸಿದರು. ನಂತರ ಹಾನುಬಾಳು, ವೆಂಕಟಹಳ್ಳಿ, ದೇಖ್ಲಾ, ಗುಡಾಣಕೆರೆ, ಹೆಗ್ಗದ್ದೆ, ಪಟ್ಟಣ ಭಾಗದಲ್ಲಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿ ಅಹವಾಲು ಸ್ವೀಕರಿಸಿದರು. ಜಿಲ್ಲಾ ಪ್ಲಾಂಟರ್ಸ್‌ ಅಸೋಸಿಯೇಷನ್‌ ಸಭಾಂಗಣದಲ್ಲಿ ಕೆಲಕಾಲ ರೈತರೊಂದಿಗೆ ಸಭೆ ನಡೆಸಿ ಚರ್ಚಿಸಿದರು.

ಹಣದ ಕೊರತೆ ಇಲ್ಲ: ಈ ನಡುವೆ ಹಾನುಬಾಳು ವೃತ್ತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಾಧುಸ್ವಾಮಿ, ಸಿಎಂ ಸೂಚನೆಯಂತೆ ತಾವು ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು, ಈ ಭಾಗದ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ಒದಗಿಸಲು ಹಣದ ಕೊರತೆ ಇಲ್ಲ. ಸರ್ಕಾರದ ಅನುದಾನದ ಜೊತೆಗೆ ಉದಾರಿಗಳು, ಸಂಘ ಸಂಸ್ಥೆಗಳು ದೇಣಿಗೆ ನೀಡುತ್ತಿವೆ. ಮಳೆಯಿಂದ ನಿರಾಶ್ರಿತರಾದ ಪ್ರತಿ ಕುಟುಂಬಕ್ಕೆ ಈಗಾಗಲೇ 10 ಸಾವಿರ ರೂಪಾಯಿಯನ್ನು ಖಾತೆಗೆ ಹಾಕಿದ್ದೇವೆ. ಉಭಯ ಸರ್ಕಾರಗಳ ಜಂಟಿ ಅನುದಾನದ ಹಣವೂ ಸದ್ಯದಲ್ಲಿಯೇ ಸಂತ್ರಸ್ತರ ಕೈ ಸೇರಲಿದೆ. ತಾತ್ಕಾಲಿಕ ಶೆಡ್‌ ಕಟ್ಟಿಕೊಳ್ಳುವವರಿಗೆ 50 ಸಾವಿರ ರೂ. ಹಾಗೂ ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೆ ಮಾಸಿಕ 5 ಸಾವಿರ ರೂ. ಕೊಡುವ ಬಗ್ಗೆಯೂ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಐದು ಎಕರೆ ಮೀರಿದರೆ ಪರಿಹಾರ ಇಲ್ಲ: ಮಳೆಹಾನಿಯಿಂದ ಕೃಷಿ ಭೂಮಿ ನಷ್ಟ ಅನುಭವಿಸಿದವರಿಗೆ ನಮ್ಮ ಸರ್ಕಾರ ಪರಿಹಾರ ನೀಡಲು ಸಿದ್ಧವಿದೆ. ಆದರೆ, ಐದು ಎಕರೆಗಿಂತಲೂ ಹೆಚ್ಚು ಭೂಮಿ ಇರುವವರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ. ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತ ಮರುಕಳಿಸಿ ಮುಂದಿನ ದಿನಗಳಲ್ಲಿ ಹಾನಿ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿದ್ದು, ಶಾಶ್ವತ ಮಾರ್ಗೋಪಾಯ ಮಾಡಿ ದುರಸ್ತಿ ಕಾರ್ಯ ನಡೆಸುವ ಚಿಂತನೆ ಇದೆ. ಎನ್‌ಡಿಆರ್‌ಎಫ್‌ನಲ್ಲಿ ಇಲ್ಲಿನ ಸಮಸ್ಯೆಗಳಿಗೆ ವಿಶೇಷ ಪ್ರಾತಿನಿಧ್ಯ ನೀಡಲು ಸಾಧ್ಯವಿಲ್ಲದಿದ್ದರೂ ರಾಜ್ಯ ಸರಕಾರ ವಿಶೇಷ ಪ್ರಕರಣ ಎಂದು ಪರಿಗಣಿಸಿ ಕಾರ್ಯಯೋಜನೆ ಸಿದ್ಧಪಡಿಸುವ ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಕೃಷಿ ಹಾಗೂ ತೋಟಗಾರಿಕೆ ಭೂಮಿಗಳು ಸಾಕಷ್ಟು ಪ್ರಮಾಣದಲ್ಲಿ ಹನಿಯಾಗಿವೆ. ಈ ಬಗ್ಗೆ ತಮಗೆ ಪ್ರವಾಸದಿಂದ ಅರಿವಾಗಿದ್ದು, ಸರಕಾರಕ್ಕೆ ಸಮರ್ಪಕ ವರದಿ ಸಲ್ಲಿಸಲಾಗುವುದು. ಸಂಪರ್ಕ ಕಡಿದುಕೊಂಡ ರಸ್ತೆಗಳು, ಮಣ್ಣಲ್ಲಿ ಮುಚ್ಚಿ ಹೋಗಿರುವ ಮನೆಗಳನ್ನು ಸರಿಪಡಿಸುವ ಬಗ್ಗೆ ಆದ್ಯತೆ ಮೇರೆಗೆ ತ್ವರಿತ ಕೆಲಸ ನಡೆಯುತ್ತಿದೆ. ಮಳೆ ಬರುವ ಸಾಧ್ಯತೆ ಇರುವ ಕಾರಣ ಸೇತುವೆಗಳ ದುರಸ್ತಿ, ರಸ್ತೆಗಳ ಮರುನಿರ್ಮಾಣವನ್ನು ಇನ್ನೆರಡು ತಿಂಗಳು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಅಲ್ಲಿಯವರೆಗೆ ಜನರಿಗೆ ಯಾವುದೇ ತೊಂದರೆ ಆಗದಂತೆ ತಾತ್ಕಾಲಿಕ ಅನುಕೂಲಗಳನ್ನು ಮಾಡಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಸೂಚನೆ: ಪ್ರತಿ ಹಳ್ಳಿಗೂ ವಿದ್ಯುತ್‌, ಕುಡಿಯುವ ನೀರು ಪೂರೈಕೆ, ಟೆಲಿಫೋನ್‌ ಲೈನ್‌ ಸುಸ್ಥಿತಿ ಬಗ್ಗೆ ಅಧಿಕಾರಿಗಳು ಜಾಗರೂಕತೆಯಿಂದ ನೋಡಿಕೊಳ್ಳಬೇಕು. ವಿದ್ಯುತ್‌ ಸಮಸ್ಯೆ ಉಂಟಾದರೂ ಟೆಲಿಫೋೕನ್‌ ಹಾಗೂ ಮೊಬೈಲ್‌ ಸಂಪರ್ಕ ಕಡಿತ ಆಗದಂತೆ ಜನರೇಟರ್‌ ಬಳಕೆ ಮಾಡಿಕೊಳ್ಳಲು ಬಿಎಸ್‌ಎನ್‌ಎಲ್‌ಗೆ ಅಗತ್ಯ ಡೀಸೆಲ್‌ ಒದಗಿಸಿಕೊಡಬೇಕು. ಆಸ್ಪತ್ರೆಗಳು ಸುಸ್ಥಿತಿಯಲ್ಲಿರಬೇಕು. ಅಧಿಕಾರಿಗಳು ಇವುಗಳ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸಬೇಕು. ಹೆಚ್ಚಿನ ನೆರವು ಒದಗಿಸುವ ಕುರಿತು ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಆದರೆ, ತುರ್ತು ಸಂದರ್ಭದಲ್ಲಿ ಯಾರಿಗೂ ತೊಂದರೆ ಆಗದಂತೆ ಜಿಲ್ಲಾಡಳಿತ ನಿಗಾ ವಹಿಸಬೇಕು ಎಂದು ಮಾಧುಸ್ವಾಮಿ ಸೂಚಿಸಿದರು.

ಶಾಸಕ ಪ್ರೀತಂ ಜೆ.ಗೌಡ, ಎಚ್‌.ಕೆ.ಕುಮಾರಸ್ವಾಮಿ, ಮಾಜಿ ಸಚಿವ ಎ.ಮಂಜು, ಮಾಜಿ ಶಾಸಕ ಬಿ.ಆರ್‌.ಗುರುದೇವ್‌, ಎಚ್‌.ಎಂ.ವಿಶ್ವನಾಥ್‌, ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್‌ನಿವಾಸ್‌ ಸೆಪಟ್‌, ಸಕಲೇಶಪುರ ತಾಲೂಕು ಬಿಜೆಪಿ ಅಧ್ಯಕ್ಷ ಪ್ರತಾಪ್‌ ಮೊದಲಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ