ಆ್ಯಪ್ನಗರ

ಮಳೆ, ಬಿಸಿಲಲ್ಲಿಬಸ್‌ ಏರುವ ಪ್ರಯಾಣಿಕರು

ಮಳೆಯಾಗುತ್ತಿರುವ ದಿನಗಳಲ್ಲೇ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಚಾವಣಿ ತೆರವುಗೊಳಿಸಿ, ಕಾಮಗಾರಿ ವಿಳಂಬ ಮಾಡುತ್ತಿರುವ ರಾಜ್ಯ ರಸ್ತೆ ಸಾರಿಗೆ ನಿಗಮದ ಕ್ರಮಕ್ಕೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Vijaya Karnataka 30 Oct 2019, 5:00 am
ಹೊಳೆನರಸೀಪುರ: ಮಳೆಯಾಗುತ್ತಿರುವ ದಿನಗಳಲ್ಲೇ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಚಾವಣಿ ತೆರವುಗೊಳಿಸಿ, ಕಾಮಗಾರಿ ವಿಳಂಬ ಮಾಡುತ್ತಿರುವ ರಾಜ್ಯ ರಸ್ತೆ ಸಾರಿಗೆ ನಿಗಮದ ಕ್ರಮಕ್ಕೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Vijaya Karnataka Web HSN29HNP1_16


ತಾಲೂಕಿನಲ್ಲಿನಿರಂತರ ಮಳೆಯಾಗುತ್ತಿದ್ದು, ಈ ವೇಳೆಯೇ ನಿಲ್ದಾಣದ ಸೂರು ತೆರವಾಗಿದೆ. ಹೀಗಾಗಿ ಪ್ರಯಾಣಿಕರು ಬಸ್‌ಗಾಗಿ ಬಿಸಿಲು, ಮಳೆಯಲ್ಲಿಫಜೀತಿ ಪಡುವಂತಾಗಿದೆ. ಬೇಸಿಗೆಯಲ್ಲಿನಿಲ್ದಾಣ ನವೀಕರಿಸುವ ಕಾರ್ಯ ನಡೆಸಬಹುದಿತ್ತು ಎನ್ನುವ ಅಭಿಪ್ರಾಯ ಪ್ರಯಾಣಿಕರಿಂದ ಕೇಳಿಬಂದಿದೆ. ಅಶಕ್ತರು, ಗರ್ಭಿಣಿಯರು, ಮಕ್ಕಳು ಮಳೆ, ಬಿಸಿಲಿನಲ್ಲೇ ಪ್ರಯಾಣ ಬೆಳೆಸಲು ಕಾಯ್ದು ಕೂರುವ ಸ್ಥಿತಿ ಇದೆ. ಮಳೆಗಾಲದಲ್ಲಿಚಾವಣಿ ತೆಗೆದು ಕಾಮಗಾರಿ ಆರಂಭಿಸಿದ್ದು, ಕಾಮಗಾರಿ ಆಮೆ ವೇಗದಲ್ಲಿಸಾಗುತ್ತಿದೆ. ಇದರಿಂದ ಆದಷ್ಟು ಬೇಗ ನಿಲ್ದಾಣ ನವೀಕರಣ ಮಾಡಬೇಕು ಎಂದು ಪ್ರಯಾಣಿಕರ ಬೇಡಿಕೆಯಾಗಿದೆ.

1983ರಲ್ಲಿಕಾರ್ಯಾರಂಭವಾಗಿದ್ದ ನಿಲ್ದಾಣದ ಹಳೇ ಕಟ್ಟಡ ತೆರವುಗೊಳಿಸುವ ಕಾರ್ಯ ಪ್ರಸ್ತುತ ನಡೆದಿದೆ. 3 ಕೋಟಿ ರೂ. ವೆಚ್ಚದಲ್ಲಿನಿಲ್ದಾಣ ನವೀಕರಿಸುವ ಉದ್ದೇಶ ಇದೆ. ನಿಲ್ದಾಣದ ಒಳಗೆ ಅರ್ಧ ಹೊಸ ಕಟ್ಟಡವನ್ನು ಕಳೆದ 4 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಇನ್ನುಳಿದಂತೆ ಹಳೇ ಕಟ್ಟಡವೂ ಇತ್ತು. ಎರಡೂ ಕಟ್ಟಡಗಳು ಬಸ್‌ ನಿಲುಗಡೆಯ ಮತ್ತು ಪ್ರಯಾಣಿಕರ ತಾಣವಾಗಿ ಬಳಕೆಯಾಗುತ್ತಿತ್ತು. ಹೊಸ ಕಟ್ಟಡದಲ್ಲಿಬೆಂಗಳೂರು-ಮೈಸೂರಿಗೆ ತೆರಳುವ ಕೆಲವೇ ಬಸ್‌ಗಳು ನಿಲುಗಡೆಯಾಗುತ್ತಿದೆ.

ಹಾಸನ, ಅರಕಲಗೂಡು ಹಾಗೂ ಹಳ್ಳಿಮೈಸೂರು ಸೇರಿದಂತೆ ಕೆಲವು ಗ್ರಾಮೀಣ ಪ್ರದೇಶಗಳಿಗೆ ತೆರಳುವ ಮಾರ್ಗದ ಬಸ್‌ಗಳು ಹಳೇ ನಿಲ್ದಾಣದ ಕಟ್ಟಡದಲ್ಲಿನಿಲುಗಡೆಯಾಗುತ್ತಿತ್ತು. ಆದರೆ ಕಳೆದ 4 ತಿಂಗಳಿಂದ ನಿಲ್ದಾಣದ ಚಾವಣಿ ತೆರವುಗೊಳಿಸಿ ಹಳೇ ಕಟ್ಟಡ ತೆರವುಗೊಳಿಸಲಾಗುತ್ತಿದೆ. ನೆಲಹಾಸು ಮಳೆ ನೀರಿನಿಂದ ತೊಯ್ದು ಪ್ರಯಾಣಿಕರು ಜಾರಿ ಬೀಳುವುದು ಮಾಮೂಲಾಗಿದೆ. ಇನ್ನಷ್ಟು ವಿಳಂಬ ಕಾಮಗಾರಿ ಅನುಸರಿಸಿದಲ್ಲಿಪ್ರಯಾಣಿಕರ ಗೋಳು ಮುಂದುವರಿಯಲಿದೆ ಎಂಬುದು ನಾಗರಿಕರ ಆಕ್ಷೇಪವಾಗಿದೆ.

ಬಸ್‌ ನಿಲ್ದಾಣ ಪ್ರವೇಶಿಸುವ, ನಿರ್ಗಮಿಸುವ ದ್ವಾರ ಸಂಚಾರಕ್ಕೆ ಯೋಗ್ಯವಾಗಿಲ್ಲ. ಪ್ರವೇಶದ್ವಾರಗಳಲ್ಲೇ ಗುಂಡಿ ಬಿದ್ದು, ಮಳೆ ನೀರಿನ ಹೊಂಡಗಳಾಗಿವೆ. ಬಸ್‌ಸಂಚಾರ ಸುಗಮವಾಗಿಲ್ಲ. ಆಗಿಂದಾಗ್ಗೆ ದುರಸ್ಥಿ ನಂತರವೂ ಇದೇ ಫಜೀತಿ ಮುಂದುವರಿದಿದೆ. ಪಟ್ಟಣದ ಒಳ ರಸ್ತೆಗೆ ಇದ್ದ ಪ್ರವೇಶದ್ವಾರಗಳ ಪೈಕಿ ಒಂದನ್ನು ಬೈಪಾಸ್‌ ಕಡೆಗೆ ಬದಲಿಸಲಾಗಿದೆ. ಆದರೆ, ಸಾಕಷ್ಟು ತಿರುವು, ಮುರುವು ಪಡೆದು ಒಳ, ಹೊರಗೆ ವಾಹನಗಳು ಸಂಚರಿಸಬೇಕಿದೆ. ಅನುಕೂಲಕರವಾಗಿ ಪ್ರವೇಶ, ನಿರ್ಗಮ ಮಾರ್ಗ ಕಲ್ಪಿಸಬೇಕು ಎನ್ನುವುದು ಚಾಲಕರ ಅಭಿಪ್ರಾಯವೂ ಹೌದು.

ಪೂರ್ವಯೋಜಿತವಲ್ಲದೆ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದರಿಂದ ಮೈಸೂರು ಭಾಗದಿಂದ ನಿಲ್ದಾಣದ ಒಳ, ಹೊರ ಬಸ್‌ ಸಂಚರಿಸಲು ಕಷ್ಟವಾಗುತ್ತಿದೆ. ನಿಲ್ದಾಣದಲ್ಲಿಕುಡಿಯುವ ಶುದ್ಧನೀರು, ಸ್ವಚ್ಛಗೃಹ, ಪಾರ್ಕಿಂಗ್‌ ವ್ಯವಸ್ಥೆಯಾಗಬೇಕಿದೆ.

ಅನುದಾನ ಕೊರತೆ ಇಲ್ಲ. ನಿಲ್ದಾಣದ ಒಳಗೆ ಹೊಸ ಕಟ್ಟಡ ಪ್ರಯಾಣಿಕರಿಗೆ ಒದಗಿದೆ. ಹಳೇ ಕಟ್ಟಡ ತೆರವುಗೊಳಿಸುವ ಕಾರ್ಯ ನಡೆದಿದೆ. ಕಟ್ಟಡ ನಿರ್ಮಾಣ ಹಾಗೂ ಪ್ರಯಾಣಿಕರ ಅನುಕೂಲತೆಗೆ ತಕ್ಕಂತೆ ವಿನ್ಯಾಸಗೊಳಿಸಿ ನವೀಕರಿಸಲಾಗುತ್ತಿದೆ. ಮೇಲಧಿಕಾರಿಗಳು, ತಾಂತ್ರಿಕ ಇಂಜಿನಿಯರ್‌ಗಳ ಯೋಜಿತ ಕಾರ್ಯ ಸಾರ್ಥಕವಾಗಲಿದೆ.
-ಕೃಷ್ಣ, ಕೆಎಸ್‌ಆರ್‌ಟಿಸಿ ತಾಂತ್ರಿಕ ಇಂಜಿನಿಯರ್‌.

ಬಸ್‌ಗಳು ನಿಲ್ದಾಣ ಪ್ರವೇಶಿಸುವ ಮತ್ತು ನಿರ್ಗಮಿಸುವ ಮಾರ್ಗವನ್ನು ಸುಗಮಗೊಳಿಸಬೇಕಿದೆ. ಹೈಟೆಕ್‌ ಶೌಚಗೃಹವನ್ನು ನಿಲ್ದಾಣದ ಮೂಲೆಯಲ್ಲಿಬಸ್‌ ಪ್ರವೇಶಿಸುವಲ್ಲಿಸ್ಥಾಪಿಸಲಾಗಿದೆ. ಇದರಿಂದ ವೇಗವಾಗಿ ಬರುವ ಬಸ್‌ಗೆ ಅಡ್ಡ ಸಿಲುಕುವ ಹೆದರಿಕೆಯಲ್ಲೇ ಓಡಾಟ ನಡೆಸಬೇಕಿದೆ. ನವೀಕರಣಕ್ಕಾಗಿ ತೆರವು ಕಾರ್ಯ 4 ತಿಂಗಳಿಂದ ನಡೆದಿದೆ. ಮಳೆ, ಬಿಸಿಲಿನಲ್ಲಿಪ್ರಯಾಣಿಕರ ಪರಿಸ್ಥಿತಿ ಮನಗಂಡು ಆದಷ್ಟೂ ಬೇಗ ನಿಲ್ದಾಣವನ್ನು ವ್ಯವಸ್ಥಿತಗೊಳಿಸಬೇಕಿದೆ.
-ರಂಗನಾಥ್‌, ನಾಗರಿಕ, ಹೊಳೆನರಸೀಪುರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ