ಆ್ಯಪ್ನಗರ

ಹಾಸನದಲ್ಲಿ ಕೋವಿಡ್‌ ಪರೀಕ್ಷೆ ಹೆಚ್ಚಳಕ್ಕೆ ಜನಾಗ್ರಹ: ಪರೀಕ್ಷೆಗೆ ಮುನ್ನವೇ ಮೃತಪಟ್ಟ ಆಟೋರಿಕ್ಷಾ ಚಾಲಕ

ಪರೀಕ್ಷೆಗೆ ಮುನ್ನವೇ ಆಟೋ ಚಾಲಕ ಮೃತಪಟ್ಟಿದ್ದು, ಪರೀಕ್ಷೆ ವಿಳಂಬದ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆ ಇನ್ನಷ್ಟು ಹೆಚ್ಚಿಸಿದರೆ ಸಕಾಲದಲ್ಲಿ ಚಿಕಿತ್ಸೆಗೆ ಅನುಕೂಲವಾಗಲಿದೆ ಎಂಬ ಆಗ್ರಹ ಹಾಸನದಲ್ಲಿ ಕೇಳಿ ಬಂದಿದೆ.

Vijaya Karnataka Web 29 Sep 2020, 7:33 am
ಎ.ಎಲ್‌.ನಾಗೇಶ್‌ ಚನ್ನರಾಯಪಟ್ಟಣ
Vijaya Karnataka Web COVID-19 test

ಹಾಸನ: ಸ್ವಯಂಪ್ರೇರಿತರಾಗಿ ಪರೀಕ್ಷೆಗೆ ಬಂದವರು ಹಾಗೂ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಆದ್ಯತೆ ನೀಡಿ ಪರೀಕ್ಷೆ ಮಾಡಬೇಕಾಗಿದೆ. ಇತ್ತೀಚಿಗೆ ಪರೀಕ್ಷೆ ಹೆಚ್ಚಾದಂತೆ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜಿಲ್ಲಾಧಿಕಾರಿಗಳೇ ಸೂಚಿಸಿರುವಂತೆ ಪರೀಕ್ಷೆ ಪ್ರಮಾಣವನ್ನು ಇನ್ನಷ್ಟು ಹೆಚ್ಚು ಮಾಡಬೇಕಿದೆ. ಆದರೆ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ ಎಂಬುದು ಜಿಲ್ಲೆಯ ಸಾರ್ವಜನಿಕರ ಆರೋಪವಾಗಿದೆ.

ಆಸ್ಪತ್ರೆಯಲ್ಲೇ ಸಾವು
ಆಟೋ ಚಾಲಕರಾಗಿದ್ದ ವಾಬೇಗೌಡ ಎಂಬುವವರು ಮೂರ್ನಾಲ್ಕು ದಿನಗಳಿಂದ ವಾಂತಿಬೇಧಿಯಿಂದ ತೀವ್ರ ನಿತ್ರಾಣರಾಗಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಲು ಬೆಳಗ್ಗೆಯಿಂದಲೇ ಆಸ್ಪತ್ರೆ ಆವರಣದಲ್ಲಿ ಗಂಟೆಗಟ್ಟಲೆ ಕಾದು ಪರೀಕ್ಷೆ ಮಾಡಿಸಿ ನೆಗೆಟಿವ್‌ ವರದಿ ಪಡೆದು ಹೊರಬರುತ್ತಿದ್ದಂತೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮೊದಲೇ ಪರೀಕ್ಷೆ ಮಾಡಿದ್ದರೆ ತುರ್ತು ಚಿಕಿತ್ಸೆಯಿಂದ ಉಳಿಯುತ್ತಿದ್ದರೇನೋ ಎಂಬ ಮಾತು ಕುಟುಂಬದ್ದಾಗಿತ್ತು. ಹೀಗಾಗಿ ಇತರೆ ಚಿಕಿತ್ಸೆ ಅಗತ್ಯವಿರುವವರಿಗೆ ಕೋವಿಡ್‌ ಪರೀಕ್ಷೆಯನ್ನು ತುರ್ತಾಗಿ ಮಾಡಿ ವರದಿ ನೀಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.

ತಾಲೂಕಿನ ಹಿರೀಸಾವೆ, ಶ್ರವಣಬೆಳಗೊಳ, ಉದಯಪುರ ಮತ್ತು ನುಗ್ಗೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಪಟ್ಟಣದ ಸರಕಾರಿ ಆಸ್ಪತ್ರೆ ಹಾಗೂ ಒಂದು ಮೊಬೈಲ್‌ ತಂಡ ಕೂಡ ಕಾರ್ಯೋನ್ಮುಖವಾಗಿದೆ. ಪ್ರತಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರತಿದಿನ ಸರಾಸರಿ 30 ಮಂದಿಗೆ ಪರೀಕ್ಷೆ ಮಾಡುತ್ತಿದ್ದು ಮೊಬೈಲ್‌ ತಂಡವು ಸರಾಸರಿ 40ರಿಂದ 50 ಮಂದಿಗೆ ಪರೀಕ್ಷೆ ಮಾಡಲಿದೆ. ಜತೆಗೆ ಆಸ್ಪತ್ರೆಯಲ್ಲಿ 50 ಮಂದಿಗೆ ಪರೀಕ್ಷೆ ಮಾಡಲಾಗುತ್ತಿದೆ. ಒಟ್ಟಾರೆ ತಾಲೂಕಿನಲ್ಲಿ 210 ಮಂದಿಗೆ ಪರೀಕ್ಷೆ ಮಾಡಲಾಗುತ್ತಿದ್ದು, ಇದರಲ್ಲಿ ಕನಿಷ್ಠ ಪ್ರತಿಶತ 20 ಮಂದಿಗೆ ಪಾಸಿಟಿವ್‌ ವರದಿ ಬರುತ್ತಿದೆ.

ಪಟ್ಟಣದಲ್ಲಿ ಹೆಚ್ಚಬೇಕು
ಲಾಕ್‌ಡೌನ್‌ ತೆರವು ನಂತರ ಜನಜೀವನ ಸಹಜತೆಗೆ ಬಂದಿದೆ ಎಂಬ ಭಾವನೆ ಸಾರ್ವಜನಿಕರಲ್ಲಿದೆ. ಹಾಗಾಗಿಯೇ ಎಲ್ಲೆಂದರಲ್ಲಿ ಜನಸಂದಣಿ, ನಿತ್ಯ ಕಾಯಕದಲ್ಲಿ ತೊಡಗಿದ್ದಾರೆ. ಈ ನಡುವೆಯೂ ಹಲವರಲ್ಲಿ ಅರಿವು ಮೂಡುತ್ತಿದ್ದು, ಸ್ವತಃ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ.

ಕಳೆದೊಂದು ವಾರದಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‌ ಪರೀಕ್ಷೆಗಾಗಿ ಜನ ಸಾಲುಗಟ್ಟಿ ನಿಲ್ಲುತ್ತಿದ್ದು ಇದರಲ್ಲಿ ಜ್ವರ, ಕೆಮ್ಮಿನಿಂದ ಬಳಲುತ್ತಿರುವವರು ಹಾಗೂ ಯಾವುದೇ ಸೂಚನೆಗಳೂ ಇಲ್ಲದವರೂ ಇದ್ದಾರೆ. ಮಿಗಿಲಾಗಿ ಇತರೆ ಕಾಯಿಲೆಗಳಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿ ತೋರಿಸಿಕೊಳ್ಳುವ ಮುನ್ನ ಸರಕಾರಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿರಬೇಕೆಂಬ ಅಲಿಖಿತ ನಿಯಮವೂ ಇದಕ್ಕೆ ಕಾರಣವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗೆ ಬರುವವರಿಗೆ ಸಕಾಲದಲ್ಲಿ ಪರೀಕ್ಷೆ ಮಾಡಿ ಫಲಿತಾಂಶ ನೀಡುವಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಇನ್ನಷ್ಟು ತಾಳ್ಮೆಯಿಂದ ವರ್ತಿಸಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು. ಆಸ್ಪತ್ರೆಗೆ ಬರುವವರನ್ನೂ ಅಷ್ಟೇ ಕಾಳಜಿಯಿಂದ ನೋಡಬೇಕಿದ್ದು, ತುರ್ತುಚಿಕಿತ್ಸೆ ಅವಶ್ಯಕತೆ ಇರುವವರನ್ನೂ ಕಾಯಿಸದೆ ಆದ್ಯತೆ ನೀಡಬೇಕಿದೆ.

ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಬರುವವರಿಗೆ ಅಗತ್ಯ ಸೌಕರ‍್ಯಗಳನ್ನು ಕಲ್ಪಿಸಬೇಕಾಗಿದೆ. ಪರೀಕ್ಷಿತರ ಸಂಖ್ಯೆ ಹೆಚ್ಚಾದಂತೆ ಕರ್ತವ್ಯನಿರತರ ಸಂಖ್ಯೆಯನ್ನೂ ಹೆಚ್ಚು ಮಾಡಿಕೊಳ್ಳಬೇಕು. ಪರೀಕ್ಷೆಯ ಕಿಟ್‌ಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ದಾಸ್ತಾನು ಇಡಬೇಕು. ಮೊದಲು ಆಸ್ಪತ್ರೆಗೆ ಬಂದವರೊಂದಿಗೆ ಸೌಜನ್ಯವಾಗಿ ವರ್ತಿಸಬೇಕು.
ಎ.ಪಿ.ನಂದೀಶ್‌ ಚನ್ನರಾಯಪಟ್ಟಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ