ಪ್ರಕಾಶ್ ಜಿ. ಹಾಸನ
ಶ್ರವಣಬೆಳಗೊಳಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ವಿಂಧ್ಯಗಿರಿ ಬೆಟ್ಟವನ್ನು ಏರಲಾರರು. ಆದರೆ, ಹೆಲಿಕಾಪ್ಟರ್ನಿಂದಲೇ ಗೊಮ್ಮಟೇಶ್ವರನಿಗೆ ಪುಷ್ಪವೃಷ್ಟಿ ಮಾಡುವರು.
-ಇಂತಹದ್ದೊಂದು ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ. ಪ್ರಧಾನಿ ಮೋದಿ ಫೆ. 19ರಂದು ಬೆಳಗೊಳಕ್ಕೆ ಆಗಮಿಸುತ್ತಿದ್ದು, ಬಾಹುಬಲಿ ಮಸ್ತಕಾಭಿಷೇಕ ಹಿನ್ನೆಲೆ ಸಾರ್ವಜನಿಕ ಆಸ್ಪತ್ರೆ, ವಿಂಧ್ಯಗಿರಿಗೆ ಮುನಿಗಳು, ಗಣ್ಯರು ತೆರಳಲು ನೂತನವಾಗಿ ನಿರ್ಮಿಸಿರುವ ಮೆಟ್ಟಿಲುಗಳನ್ನು ಉದ್ಘಾಟಿಸುವರು.
ಭದ್ರತೆ ಹಾಗೂ ಸಮಯವಕಾಶ ಇಲ್ಲದ ಹಿನ್ನೆಲೆಯಲ್ಲಿ ಮೋದಿ ಬೆಟ್ಟವೇರುವುದಿಲ್ಲ ಎಂಬುದು ಈಗಾಗಲೇ ಖಚಿತವಾಗಿದೆ. ಜೈನಕಾಶಿಗೆ ಬರುವ ದೈವಭಕ್ತ ಮೋದಿ ಭಗವಾನ್ ಬಾಹುಬಲಿ ದರ್ಶನ ಪಡೆಯದೆ ಹೋಗುವುದಿಲ್ಲ. ಹೀಗಾಗಿ ಅವರು ಹೆಲಿಕಾಪ್ಟರ್ನಿಂದಲೇ ಪುಷ್ಪವೃಷ್ಟಿ ನೆರವೇರಿಸಲಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆಯಾದರೂ ಹಿರಿಯ ಪೊಲೀಸ್ ಅಧಿಕಾರಿಗಳು ಮಾತ್ರ ಖಚಿತಪಡಿಸುತ್ತಿಲ್ಲ.
ವಿಂಧ್ಯಗಿರಿ ಬೆಟ್ಟದ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಹೆಲಿಕಾಪ್ಟರ್, ವಿಮಾನ ಅಷ್ಟೇ ಏಕೆ ದ್ರೋಣ್ ಹಾರಾಟವನ್ನು ಕೂಡ ಕೇಂದ್ರ ಪ್ರಾಚ್ಯವಸ್ತು ಮತ್ತು ಸಂಶೋಧನಾ ಇಲಾಖೆ ನಿಷೇಧಿಸಿದೆ. ಹೀಗಾಗಿ ಮೋದಿ ಪುಷ್ಪವೃಷ್ಟಿ ನೆರವೇರಿಸುವುದು ಅನುಮಾನ.
ಮೋದಿ ಆಗಮನದ ಹಿನ್ನೆಲೆಯಲ್ಲಿ ಸಾಸಲು ಕೆಬ್ಬಾಳು ರಸ್ತೆಯಲ್ಲಿ ಮೂರು ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಪ್ರಧಾನಿ ಆಗಮಿಸುವ ವಿಶೇಷ ಹೆಲಿಕಾಪ್ಟರ್ ಹಾಗೂ ಅವರ ಜತೆ ಬರುವ ಹಿರಿಯ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯ ಒಟ್ಟು ಮೂರು ಹೆಲಿಕಾಪ್ಟರ್ಗಳು ಇಲ್ಲಿ ಲ್ಯಾಂಡ್ ಆಗಲಿದ್ದು, ಇದಕ್ಕಾಗಿ ಮೂರು ಪ್ರತ್ಯೇಕ ಹೆಲಿಪ್ಯಾಡ್ ನಿರ್ಮಿಸಲಾಗಿದೆ.
ಪ್ರಧಾನಿ ಕಾರ್ಯಾಲಯದ ಸೂಚನೆ ಅನ್ವಯ ಸ್ಥಳೀಯ ಪೊಲೀಸ್ ಹಾಗೂ ಜಿಲ್ಲಾಡಳಿತ ಹೆಲಿಪ್ಯಾಡ್ನ ಫೋಟೊ ಸೆರೆ ಹಿಡಿದು ರವಾನಿಸಿದೆ. ಪ್ರಧಾನಿ ಭದ್ರತೆಗಾಗಿ ಕೇಂದ್ರದಿಂದ ವಿಶೇಷ ತಂಡ ಆಗಮಿಸಲಿದ್ದು, ಸ್ಥಳೀಯವಾಗಿ ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯದಳ, ಅಶ್ವದಳ ಸೇರಿದಂತೆ 4,500 ಪೊಲೀಸರು ಬಂದೋಬಸ್ತ್ ಮಾಡಲಿದ್ದಾರೆ.
1981ರ ಮಸ್ತಕಾಭಿಷೇಕಕ್ಕೆ ಆಗಮಿಸಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಹೆಲಿಕಾಪ್ಟರ್ ಮೂಲಕವೇ ಬಾಹುಬಲಿಗೆ ಪುಷ್ಪವೃಷ್ಟಿ ಮಾಡಿದ್ದರು.
---------------------------
ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಭದ್ರತೆಗೆ 4,500 ಪೊಲೀಸ್ ಭದ್ರತೆ ಒದಗಿಸಲಾಗಿದೆ. ಗರುಡ, ಬಾಂಬ್ ನಿಷ್ಕ್ರೀಯದಳ, ಅಶ್ವದಳ, ಶ್ವಾನದಳ ಹೀಗೆ ಅಗತ್ಯ ಭದ್ರತೆ ಕಲ್ಪಿಸಲಾಗಿದೆ. ಬೆಳಗೊಳದ ಒಳಗೆ ಸಾರ್ವಜನಿಕ ವಾಹನ ಸಂಚಾರ ನಿಷೇಧಿಸಲಾಗಿದೆ.
- ರಾಹುಲ್ಕುಮಾರ್ ಶಹಪುರವಾಡ್, ಎಸ್ಪಿ ಹಾಸನ