ಆ್ಯಪ್ನಗರ

ಕೆರೆ ಉಳಿವಿಗೆ ಕೊಳಚೆ ತಡೆಯಿರಿ

ನಗರದ ಹೃದಯ ಭಾಗದಲ್ಲಿರುವ ಹುಣಸಿನಕೆರೆ ಅಭಿವೃದ್ಧಿಗೆ ವಿಸ್ತೃತ ಯೋಜನೆ ರೂಪಿಸುವ ಸಲುವಾಗಿ ಬೆಂಗಳೂರು ಜಲ ಮಂಡಳಿಯ ನಿವೃತ್ತ ಹೆಚ್ಚುವರಿ ಮುಖ್ಯ ಎಂಜಿನಿಯರ್‌ ವಿ.ಸಿ.ಕುಮಾರ್‌ ಭೇಟಿ ನೀಡಿ ಪರಿಶೀಲಿಸಿದರು.

Vijaya Karnataka 14 Jun 2019, 5:00 am
ಹಾಸನ : ನಗರದ ಹೃದಯ ಭಾಗದಲ್ಲಿರುವ ಹುಣಸಿನಕೆರೆ ಅಭಿವೃದ್ಧಿಗೆ ವಿಸ್ತೃತ ಯೋಜನೆ ರೂಪಿಸುವ ಸಲುವಾಗಿ ಬೆಂಗಳೂರು ಜಲ ಮಂಡಳಿಯ ನಿವೃತ್ತ ಹೆಚ್ಚುವರಿ ಮುಖ್ಯ ಎಂಜಿನಿಯರ್‌ ವಿ.ಸಿ.ಕುಮಾರ್‌ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web HSN-HSN13N9


ಬೆಂಗಳೂರಿನ ಜಲ ಮಂಡಳಿಯ ನಿವೃತ್ತ ಹೆಚ್ಚುವರಿ ಮುಖ್ಯ ಎಂಜಿನಿಯರ್‌, ನಗರ ನೀರು ಸರಬರಾಜು ಮಂಡಳಿಯ ಎಂಜಿನಿಯರ್‌ಗಳು, ಹಸಿರು ಭೂಮಿ ಪ್ರತಿಷ್ಠಾನ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ನಗರದ ಹುಣಸಿನಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಸ್ಥಳಕ್ಕೆ ಭೇಟಿ ನೀಡಿದರು.

ಬೆಂಗಳೂರು ಜಲ ಮಂಡಳಿಯ ನಿವೃತ್ತ ಹೆಚ್ಚುವರಿ ಮುಖ್ಯ ಎಂಜಿನಿಯರ್‌ ವಿ.ಸಿ.ಕುಮಾರ್‌ ಮಾತನಾಡಿ, ನಗರದ ಕೊಳಚೆ ನೀರು ನೇರವಾಗಿ ಹುಣಸಿನ ಕೆರೆಗೆ ಬರುತ್ತಿದ್ದು ಈಗಾಗಲೇ ಕಲುಷಿತಗೊಂಡಿದೆ. ಇದರಿಂದ ಸ್ಥಳೀಯರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಆದ್ದರಿಂದ ಮೊದಲು ಕೊಳಚೆ ನೀರು ಕೆರೆಗೆ ಬಾರದಂತೆ ಪ್ರತ್ಯೇಕ ಕಾಲುವೆ ವ್ಯವಸ್ಥೆ ಮಾಡಬೇಕಾಗಿದೆ. ಕೆರೆಯಲ್ಲಿರುವ ಹೂಳು ತೆಗೆದು, ತಡೆಗೋಡೆಗಳನ್ನು ನಿರ್ಮಾಣ ಮಾಡುವ ಮೂಲಕ ಕೊಳಚೆ ನೀರು ಕೆರೆಗೆ ನೇರವಾಗಿ ಹರಿಯುವುದನ್ನು ತಡೆಯಬಹುದಾಗಿದೆ ಎಂದು ತಿಳಿಸಿದರು.

ಹುಣಸಿನಕೆರೆ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಖ್ಯಾತ ಕಲಾವಿದ ಬಿ.ಎಸ್‌.ದೇಸಾಯಿ ಮಾತನಾಡಿ, ಇದು ನಗರದ ದೊಡ್ಡ ಕೆರೆಯಾಗಿದ್ದು, ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಕಳೆದ 30 ವರ್ಷಗಳ ಹಿಂದೆ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ನಗರಕ್ಕೆ ನೀರು ಸರಬರಾಜು ಮಾಡುತ್ತಿದ್ದ ಮೋಟರನ್ನು ನಾವು ಈಗಲೂ ನಗರಸಭೆಯಲ್ಲಿ ಕಾಣಬಹುದು ಎಂದರು.

ಆದರೆ ಈಗ 214 ಎಕರೆ ವಿಸ್ತಾರದ ಈ ಕೆರೆಗೆ ರಾಸಾಯನಿಕ ದ್ರವ್ಯಗಳು ಸೇರಿದಂತೆ ಇನ್ನಿತರ ಹಾನಿಕಾರಕ ತ್ಯಾಜ್ಯಗಳ ವಿಲೇವಾರಿಯಾಗುತ್ತಿದೆ. ಜೊತೆಗೆ ಒತ್ತುವರಿಗೂ ಒಳಗಾಗಿದೆ ಈ ಕೆರೆಯ ಅಭಿವೃದ್ಧಿಗೆ ಸ್ಥಳೀಯರ ಸಹಕಾರ ಅಗತ್ಯ ಎಂದರು.

ನಗರದ ಕೆರೆಗೆ ಸಾಗರದಾಚೆಗಿನ ಯೂರೋಪ್‌, ಆಸ್ಪ್ರೇಲಿಯಾ ಖಂಡದಿಂದ ಪೆಲಿಕಾನ್‌, ಗ್ರೇಬರ್ಡ್‌, ಪೈಂಟೆಡ್‌ಸ್ಟಾರ್ಕ್‌, ಪಪ್ಪಲ್‌ ಮೋಕೀನ್‌, ಹಿಮಾಲಯ ಪಕ್ಷಿ ಸೇರಿದಂತೆ ಸುಮಾರು 130 ಜಾತಿಯ ಪಕ್ಷಿಗಳು ಪ್ರತಿ ವರ್ಷ ಬರುತ್ತವೆ. ನೀರು ಹೀಗೆ ಮಲಿನವಾಗುತ್ತಿದ್ದರೆ ಇವುಗಳ ಪ್ರಾಣಕ್ಕೆ ಸಂಚಕಾರ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತ್ಯಾಜ್ಯದಿಂದ ಮೀನು, ಪಕ್ಷಿಗಳ ಸಾವು: ಕೆರೆಯ ಸುತ್ತಮುತ್ತಲಿನ ಮನೆಗಳು ಹಾಗೂ ನಗರದಿಂದ ಬರುವ ತ್ಯಾಜ್ಯ ಕೆರೆಗೆ ಸೇರುತ್ತಿದೆ. ಕೆರೆಗೆ ಕೊಳೆತ ಹಣ್ಣು ಗಳು, ಪ್ಲಾಸ್ಟಿಕ್‌, ಮಾಂಸದ ತ್ಯಾಜ್ಯ ಮುಂತಾದ ವಸ್ತುಗಳು ಸೇರಿ ಕೆರೆಯಲ್ಲಿರುವ ಮೀನು ಹಾಗೂ ಪಕ್ಷಿಗಳು ಮೃತಪಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಸತ್ಯಮಂಗಲ ಕೆರೆ ಅಭಿವೃದ್ಧಿ: ಹಸಿರು ಭೂಮಿ ಪ್ರತಿಷ್ಠಾಪನ ವತಿಯಿಂದ ನಗರದ ಸತ್ಯಮಂಗಲ ಕೆರೆಯಲ್ಲಿ ಬೆಳೆದಿರುವ ಗಿಡ ಗಂಟಿಗಳನ್ನು ಇಟಾಚಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು.

ವಿಶ್ರಾಂತಿ ಗೃಹ ಮತ್ತು ಕೃತಕ ದ್ವೀಪ : ನಗರದ ಹೃದಯ ಭಾಗದ ಹುಣಸಿನಕೆರೆಯಲ್ಲಿ ವಿಶ್ರಾಂತಿ ಗೃಹ ನಿರ್ಮಾಣ ಮಾಡಿ ಆ ಮೂಲಕ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ. ಅಲ್ಲದೆ ವಿವಿಧ ಜೀವ ಸಂಕುಲಗಳಿಗೆ ನೆರವಾಗುವ ನಿಟ್ಟಿನಲ್ಲಿ ಕೃತಕ ದ್ವೀಪ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ. ಆದರೆ ಕೆರೆಯ ಸ್ವಚ್ಛತೆ, ಸೌಂದರ್ಯ ಅಭಿವೃದ್ಧಿಗೆ ಸ್ಥಳೀಯರ ಹೆಚ್ಚಿನ ಸಹಕಾರ ಅಗತ್ಯ ಎಂದು ವಿ.ಸಿ.ಕುಮಾರ್‌ ತಿಳಿಸಿದರು.

ಬೆಂಗಳೂರು ಜಲ ಮಂಡಳಿಯ ನಿವೃತ್ತ ಮುಖ್ಯ ಎಂಜಿನಿಯರ್‌ ಎಚ್‌.ಎಂ.ರವೀಂದ್ರ ಮತ್ತು ಹಸಿರು ಭೂಮಿ ಪ್ರತಿಷ್ಠಾನದ ಆರ್‌.ಪಿ. ವೆಂಕಟೇಶ್‌ ಮೂರ್ತಿ, ಸುಬ್ಬಸ್ವಾಮಿ, ನಗರ ನೀರು ಸರಬರಾಜು ಇಲಾಖೆಯ ಜಗದೀಶ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ