ಆ್ಯಪ್ನಗರ

ಮಾಲೇಕಲ್‌ ತಿರುಪತಿಯಲ್ಲಿ ಸಂಭ್ರಮದ ರಥೋತ್ಸವ

ರಾಜ್ಯದ ಚಿಕ್ಕ ತಿರುಪತಿಯೆಂದೇ ಹೆಸರು ಪಡೆದಿರುವ ಅಮರಗಿರಿ ಮಾಲೇಕಲ್ಲು ಶ್ರೀ ಲಕ್ಷ್ಮೇ ವೆಂಕಟರಮಣ ಸ್ವಾಮಿ ಮಹಾರಥೋತ್ಸವವು ಶನಿವಾರ ಮಧ್ಯಾಹ್ನ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು.

Vijaya Karnataka 14 Jul 2019, 5:00 am
ಅರಸೀಕೆರೆ: ರಾಜ್ಯದ ಚಿಕ್ಕ ತಿರುಪತಿಯೆಂದೇ ಹೆಸರು ಪಡೆದಿರುವ ಅಮರಗಿರಿ ಮಾಲೇಕಲ್ಲು ಶ್ರೀ ಲಕ್ಷ್ಮೇ ವೆಂಕಟರಮಣ ಸ್ವಾಮಿ ಮಹಾರಥೋತ್ಸವವು ಶನಿವಾರ ಮಧ್ಯಾಹ್ನ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು.
Vijaya Karnataka Web HSN-HSN13ASK-P2


ಏಕಾದಶಿಯ ಮಾರನೇ ದಿನ ಆಷಾಢ ಶುದ್ಧ ದ್ವಾದಶಿಯಂದು ಶ್ರೀ ಕ್ಷೇತ್ರದಲ್ಲಿ ರಥೋತ್ಸವವು ಜರುಗುತ್ತ ಬಂದಿದ್ದು, ಅದರಂತೆ ಈ ಬಾರಿಯೂ ವಿಜೃಂಭಣೆಯ ಮಹೋತ್ಸವ ಜರುಗಿತು. ಬೆಟ್ಟದ ತಪ್ಪಲಿನಲ್ಲಿರುವ ಲಕ್ಷ್ಮೀದೇವಿ, ಪದ್ಮಾವತಿ ಸಮೇತ ಗೋವಿಂದರಾಜ ಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರವನ್ನು ಮಾಡಿ ಶಾಸ್ತ್ರೋಕ್ತವಾಗಿ ರಥದಲ್ಲಿ ಕೂರಿಸಿ ಸಹಸ್ರಾರು ಭಕ್ತರು ರಥವನ್ನು ಎಳೆದರು. ಈ ಸಂದರ್ಭದಲ್ಲಿ ನವ ದಂಪತಿಗಳು ಹಾಗೂ ಭಕ್ತರು ರಥಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಮೆರೆದರು.

1,250 ಮೆಟ್ಟಿಲುಗಳ ಬೆಟ್ಟದ ಮೇಲೆ ನೆಲೆಸಿರುವ ಪದ್ಮಾವತಿ ಸಮೇತನಾದ ವೆಂಕಟರಮಣ ಸ್ವಾಮಿಗೆ ಜಾತ್ರಾ ವಿಶೇಷವಾಗಿ ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಬೆಳಗಿನಿಂದಲೇ ನಾನಾ ಊರುಗಳಿಂದ ಆಗಮಿಸಿದ ಸಾವಿರಾರು ಭಕ್ತರು ಶ್ರೀ ಕ್ಷೇತ್ರದಲ್ಲಿ ಗೋವಿಂದಾ, ಗೋವಿಂದಾ ಎಂದು ನಾಮಜಪ ಮಾಡುತ್ತಾ ಬೆಟ್ಟವನ್ನು ಹತ್ತಿ ಪುನೀತರಾದರು. ಉತ್ಸವಕ್ಕೆ ಅಗತ್ಯ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆಗೊಳಿಸಲಾಗಿತ್ತು.

ರಥಕ್ಕೆ ಚಾಲನೆ

ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ರಥದ ಗಾಲಿಗೆ ತೆಂಗಿನಕಾಯಿ ಹೊಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ, ''ಲಕ್ಷಾಂತರ ಭಕ್ತರನ್ನು ಹೊಂದಿರುವ ಶ್ರೀಕ್ಷೇತ್ರದಲ್ಲಿ ರಾಜಗೋಪುರ ನಿರ್ಮಾಣ, ದೇವಾಲಯದ ಆವರಣದಲ್ಲಿ ಹಾಸುಗಲ್ಲು, ಸೂರ್ಯ ದೇವರ ಆಲಯ ನಿರ್ಮಾಣ ಸೇರಿದಂತೆ ಕೋಟ್ಯಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವನ್ನಾಗಿ ರೂಪಿಸಲು ಒತ್ತು ನೀಡಲಾಗುವುದು,'' ಎಂದರು.

ಹೂವಿನ ಅಲಂಕಾರ
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ಪ್ರತಿ ವರ್ಷದಂತೆ ಈ ವರ್ಷವೂ ರಥೋತ್ಸವಕ್ಕೆ ಹಾಗೂ ದೇವಾಲಯದ ಅಲಂಕಾರಕ್ಕೆ, ದೇವರ ಅಲಂಕಾರಕ್ಕೆ ಹೂವಿನ ಸೇವಾರ್ಥವನ್ನು ಒದಗಿಸಿದರು.

ಜಾತ್ರಾ ವಿಶೇಷ ಬಸ್‌
ರಥೋತ್ಸವದ ನಿಮಿತ್ತ ಸಾರಿಗೆ ಇಲಾಖೆ ಬೆಳಗ್ಗೆ 6 ರಿಂದ ರಾತ್ರಿ 8 ರವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಜಾತ್ರಾ ವಿಶೇಷ ಬಸ್‌ ಸೌಕರ್ಯವನ್ನು ಕಲ್ಪಿಸಿತ್ತು. ನಗರದ ಬಸ್‌ ನಿಲ್ದಾಣದಿಂದ ದೇವಸ್ಥಾನಕ್ಕೆ 10 ರೂ. ಪ್ರಯಾಣ ದರ ನಿಗದಿಪಡಿಸಲಾಗಿತ್ತು.

ಸ್ವಯಂ ಸೇವೆ
ಸ್ಕೌಟ್ಸ್‌ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಬೆಟ್ಟದವರೆಗೂ ನಿಂತು ಕರ್ತವ್ಯ ನಿರ್ವಹಿಸಿದರು. ವಿವಿಧ ಸಮಾಜಗಳಿಂದ ಭಕ್ತರು ಅನ್ನ ದಾಸೋಹ ಏರ್ಪಡಿಸಿದ್ದರು. ತಾಲೂಕು ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗ ಸಂಘಟನೆಯಿಂದ ಬೆಟ್ಟದ ತಪ್ಪಲಿನಲ್ಲಿ ಭಕ್ತಾದಿಗಳಿಗೆ ಕುಡಿಯುವ ಉಚಿತ ನೀರು ವ್ಯವಸ್ಥೆ ಮಾಡಿದ್ದರು.

ಜಾತ್ರಾ ಕಾರ್ಯಕ್ರಮದಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಸ್ಥಳೀಯ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್‌ಕುಮಾರ್‌, ತಾ.ಪಂ. ಅಧ್ಯಕ್ಷೆ ರೂಪ ಗುರುಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಂ. ಸಮೀವುಲ್ಲಾ, ತಹಸೀಲ್ದಾರ್‌ ಸಂತೋಷ್‌ಕುಮಾರ್‌, ಗ್ರೇಡ್‌ 2 ತಹಸೀಲ್ದಾರ್‌ ಫಾಲಾಕ್ಷ, ಡಿವೈಎಸ್‌ಪಿ ಸದಾನಂದ ತಿಪ್ಪಣ್ಣನವರ್‌, ಅಭಿವೃದ್ಧಿ ಸಮಿತಿಯ ಟಿ.ಆರ್‌. ನಾಗರಾಜು, ಎ.ಎಸ್‌.ರಂಗರಾಜು, ಟಿ.ಆರ್‌. ಚಂದ್ರು, ರೈಲ್ವೆ ರಂಗಣ್ಣ, ವೆಂಕಟೇಶ್‌ಬಾಬು, ಹೇಮಂತ್‌ಕುಮಾರ್‌, ಕಿರಣ್‌ಕುಮಾರ್‌, ಲಾಳನಕೆರೆ ಯೋಗೀಶ್‌, ರಮೇಶ್‌ನಾಯ್ಡು, ಶಿವನ್‌ರಾಜ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ