ಆ್ಯಪ್ನಗರ

ಮನಸೂರೆಗೊಂಡ ಅಕ್ಕರೈ ಸಹೋದರಿಯರ ಯುಗಳ ಗಾಯನ

ರಾಮನಾಥಪುರ ಹೋಬಳಿಯ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ನಡೆಯುತ್ತಿರುವ 18ನೇ ವರ್ಷದ ಸಂಗೀತೋತ್ಸವದ ಮೂರನೇ ದಿನವಾದ ಶನಿವಾರ ಬೆಳಗ್ಗೆ 6.30ರಿಂದ 8.30ರವರೆಗೆ ಕಾವೇರಿ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು.

Vijaya Karnataka 19 May 2019, 5:00 am
ಕೊಣನೂರು : ರಾಮನಾಥಪುರ ಹೋಬಳಿಯ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ನಡೆಯುತ್ತಿರುವ 18ನೇ ವರ್ಷದ ಸಂಗೀತೋತ್ಸವದ ಮೂರನೇ ದಿನವಾದ ಶನಿವಾರ ಬೆಳಗ್ಗೆ 6.30ರಿಂದ 8.30ರವರೆಗೆ ಕಾವೇರಿ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು.
Vijaya Karnataka Web HSN-HSN18KNR2


ಬೆಳಗ್ಗೆ 10.30ರಿಂದ ಮಧ್ಯಾಹ್ನ 1ರವರೆಗೆ ಸತತ ಎರಡೂವರೆ ಗಂಟೆ ಚೆನ್ನೈನ ಅಕ್ಕರೈ ಸಹೋದರಿಯರಾದ ಎಸ್‌.ಶುಭಲಕ್ಷ್ಮೀ ಮತ್ತು ಎಸ್‌. ಸೊರ್ಣಲತಾ ಯುಗಳಗಾಯನ ಸಂಗೀತ ಪ್ರಿಯರ ಮನಸೂರೆಗೊಂಡಿತು. ಯುಗಳ ಗಾಯನಕ್ಕೆ ವಿ.ಚಾರುಲತಾ ರಾಮಾನುಜನ್‌ ವೈಲಿನ್‌, ವಿ.ಕೆ.ಯು. ಜಯಚಂದ್ರರಾವ್‌ ಮೃದಂಗ, ವಿ.ಯು.ಎನ್‌.ಗಿರಿಧರ ಉಡುಪ ಘಟ ಹಾಗೂ ವಿ.ಆಶಾ ತಂಬೂರಿ ನುಡಿಸಿ ಸಾಥ್‌ ನೀಡಿದರು.

ಸಂಜೆ ಮೈಸೂರು ವಿವಿಯ ಪ್ರೊ.ಎ.ರಂಗಸ್ವಾಮಿ ಅವರು ಅರಕಲಗೂಡು ತಾಲೂಕಿನ ಸಾಂಸ್ಕೃತಿಕ ಶ್ರೀಮಂತಿಕೆ ಬಗ್ಗೆ ಉಪನ್ಯಾಸ ನೀಡಿದರು. ರುದ್ರಪಟ್ಟಣದ ಸವಿತಾರವರು ವಿ.ಡಾ.ಆರ್‌.ಕೆ.ಪದ್ಮನಾಭ್‌ ವಿರಚಿತ ವಿಪ್ರ ವಿಕ್ರಮ ಕಾದಂಬರಿಯ ವಿಶ್ಲೇಷಣೆ ಮಾಡಿದರು. ರಾತ್ರಿ ವಿನಯ್‌ ಚಂದ್ರ ಮೆನನ್‌ ಮತ್ತು ತಂಡದವರಿಂದ ಭಜನಾಮೃತ ನಾಮ ಸಂಕೀರ್ತನ ನಡೆಯಿತು.

ಈ ಸಂದರ್ಭದಲ್ಲಿ ಸಂಗೀತ ವಿದ್ವಾನ್‌ ಡಾ.ಆರ್‌.ಕೆ.ಪದ್ಮನಾಭ್‌ ಮಾತನಾಡಿ, ಸಂಗೀತವೇ ಒಂದು ದೇವಾಲಯ, ಇಲ್ಲಿ ನಾದದೇವತೆಯೇ ಆರಾಧ್ಯಮೂರ್ತಿ, ಗಾಯಕನೇ ಇಲ್ಲಿ ಅರ್ಚಕನು, ವಿವಿಧವಾದ್ಯಗಳೇ ಗಂಟೆ ಜಾಗಟೆಗಳು, ರಾಗತಾಳಗಳೇ ಪೂಜಾ ಪುಷ್ಪಗಳು, ಕೃತಿ ಕೀರ್ತನೆಗಳೇ ಧೂಪಾರತಿಗಳು. ಶಾಸ್ತ್ರೀಯ ಸಂಗೀತ ಸಾತ್ವಿಕತೆಯನ್ನು ಸೃಷ್ಟಿಸಲು ಸುಲಭವಾದ ಸಾಧನ. ಇದು ಜಾತಿ ಧರ್ಮವನ್ನು ಮೀರಿದ್ದು. ಶಾಸ್ತ್ರೀಯ ಸಂಗೀತದ ಕೇಳ್ಮೆ ಮನಸ್ಸನ್ನು ತಿಳಿಮಾಡುತ್ತದೆ, ರೋಗಗಳನ್ನು ನಿವಾರಣೆ ಮಾಡುತ್ತದೆ, ಜೀವನೋತ್ಸಾಹ ತುಂಬುತ್ತದೆ. ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ ಭಾರತೀಯ ಸಂಸ್ಕೃತಿಯ ಎರಡು ಕಣ್ಣುಗಳಿದ್ದಂತೆ. ಎಲ್ಲಾ ಸಂಗೀತಕ್ಕೂ ಜಾನಪದವೇ ಮೂಲ. ಶಾಸ್ತ್ರೀಯ ಸಂಗೀತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಪ್ರಚಾರಕ್ಕೆ ಬರಬೇಕು. ಶಾಸ್ತ್ರೀಯ ಸಂಗೀತ ಭಾವೈಕ್ಯತೆಯ ಸಂಕೇತ ಎಂದರು.

ಭಾನುವಾರದ ಕಾರ‍್ಯಕ್ರಮಗಳು: ಇಂದು ಬೆಳಗ್ಗೆ 9ಗಂಟೆಗೆ ನಗರ ಸಂಕೀರ್ತನ ಮತ್ತು ರಥೋತ್ಸವ ಏರ್ಪಡಿಸಲಾಗಿದೆ. 10.30ರಿಂದ ವಿ.ಮೈಸೂರು ಎಂ. ನಾಗರಾಜ್‌ ಹಾಗೂ ವಿ. ಡಾ. ಮೈಸೂರು ಎಂ. ಮಂಜುನಾಥ್‌ ಅವರ ಯುಗಳ ವೈಲಿನ್‌ ವಾದನಕ್ಕೆ ಚೆನ್ನೈನ ವಿ. ಅನಂತ ಆರ್‌. ಕೃಷ್ಣನ್‌ ಮೃದಂಗ, ವಿ. ಜಿ. ಗುರುಪ್ರಸನ್ನ ಖಂಜರಿ ನುಡಿಸುವರು. ಸಂಜೆ 3.30ಕ್ಕೆ ಶ್ರೀರಾಮಮಂದಿರದಲ್ಲಿ ನಡೆಯುವ ಪಂಚರತ್ನ ಕೃತಿಗಳ ಸಾಮೂಹಿಕ ಗೋಷ್ಠಿ ಗಾಯನಕ್ಕೆ ವಿ.ನಳಿನಾ ಮೋಹನ್‌ ವೈಲಿನ್‌, ವಿ.ಕೆ.ರವಿಶಂಕರ್‌ ಶರ್ಮ ಮೃದಂಗ ನುಡಿಸುವರು. ಸಂಜೆ 5 ರಿಂದ 6 ಗಂಟೆಯವರೆಗೆ ಆದಿ ಚುಂಚನಗಿರಿ ಮಠದ ಪೀಠಾಧಿಪತಿ ಶ್ರೀನಿರ್ಮಲಾನಂದನಾಥ ಸ್ವಾಮೀಜಿಗೆ ಪಾದ ಪೂಜೆ ಮತ್ತು ಶ್ರೀಗಳ ಸಾರ್ವಜನಿಕ ದರ್ಶನ, 6.30ಕ್ಕೆ ಚುಂಚಶ್ರೀಗಳು ಹಾಗೂ ನಾಚರಮ್ಮ ಪ್ರಶಸ್ತಿ ಸ್ವೀಕರಿಸುವ ಸಂಗೀತ ವಿದ್ವಾಂಸರುಗಳ ಭವ್ಯ ಮೆರವಣಿಗೆ ನಡೆಯಲಿದೆ. 7.30ಕ್ಕೆ ರಾತ್ರಿ ಕಾವೇರಿ ನದಿ ತಟದಲ್ಲಿ ಸಭಾ ಕಾರ‍್ಯಕ್ರಮ ಹಾಗೂ ತೆಪೋ್ಪತ್ಸವ ಬಳಿಕ ರಾಷ್ಟ್ರದ ಮಹಾನ್‌ ವಿದ್ವಾಂಸರಾಗಿರುವ ವಿ.ಮೈಸೂರು ಎಂ. ನಾಗರಾಜ್‌ ಹಾಗೂ ವಿ. ಡಾ. ಮೈಸೂರು ಎಂ. ಮಂಜುನಾಥ್‌ ರವರಿಗೆ ನಾಚರಮ್ಮ ಪ್ರಶಸ್ತಿ 2019 ಹಾಗೂ ಗಾನಕಲಾ ಸ್ಪರ್ಶಮಣಿ ಬಿರುದು ಪ್ರದಾನ ಮಾಡಲಾಗುವುದು. ಇದೇ ವೇಳೆ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹಂಪಿ ಮಾದರಿಯ ದ್ವಾದಶ ಸ್ವರಸ್ಥಂಭವು ಚುಂಚಶ್ರೀಗಳಿಂದ ಲೋಕಾರ್ಪಣೆಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಶಾಸಕ ಎ.ಟಿ.ರಾಮಸ್ವಾಮಿ ಹಾಗೂ ಕರ್ನಾಟಕ ಬ್ಯಾಂಕಿನ ಎಂ.ಡಿ ಮತ್ತು ಸಿಇಒ ಎಂ.ಎಸ್‌. ಮಹಾಬಲೇಶ್ವರ್‌ ಆಗಮಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ