ಆ್ಯಪ್ನಗರ

ಜಿಲ್ಲೆಯಲ್ಲಿ ಮುಂದುವರಿದ ಐಟಿ ದಾಳಿ: ಜೆಡಿಎಸ್‌ ಮುಖಂಡರ ನಿವಾಸಗಳಲ್ಲಿ ಶೋಧ

ಲೋಕಸಭೆ ಚುನಾವಣೆ ಸಮರಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಜಿಲ್ಲೆಯಲ್ಲಿ ಐಟಿ ದಾಳಿ ಮತ್ತೆ ಮುಂದುವರೆದಿದ್ದು, ಮಂಗಳವಾರ ಮುಂಜಾನೆ ಹಾಸನ, ಹೊಳೆನರಸೀಪುರದಲ್ಲಿ ಜೆಡಿಎಸ್‌ನ ವಿಧಾನಪರಿಷತ್‌ ಮಾಜಿ ಸದಸ್ಯ ಪಟೇಲ್‌ ಶಿವರಾಂ ಹಾಗೂ ಸಚಿವ ರೇವಣ್ಣ ಬೆಂಬಲಿಗರ ಮನೆ, ಕ್ರಷರ್‌ ಮೇಲೆ ದಾಳಿ ನಡೆಸಿ ಶಾಕ್‌ ನೀಡಿದ್ದಾರೆ.

Vijaya Karnataka 17 Apr 2019, 5:00 am
ಹಾಸನ/ಹೊಳೆನರಸೀಪುರ: ಲೋಕಸಭೆ ಚುನಾವಣೆ ಸಮರಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಜಿಲ್ಲೆಯಲ್ಲಿ ಐಟಿ ದಾಳಿ ಮತ್ತೆ ಮುಂದುವರೆದಿದ್ದು, ಮಂಗಳವಾರ ಮುಂಜಾನೆ ಹಾಸನ, ಹೊಳೆನರಸೀಪುರದಲ್ಲಿ ಜೆಡಿಎಸ್‌ನ ವಿಧಾನಪರಿಷತ್‌ ಮಾಜಿ ಸದಸ್ಯ ಪಟೇಲ್‌ ಶಿವರಾಂ ಹಾಗೂ ಸಚಿವ ರೇವಣ್ಣ ಬೆಂಬಲಿಗರ ಮನೆ, ಕ್ರಷರ್‌ ಮೇಲೆ ದಾಳಿ ನಡೆಸಿ ಶಾಕ್‌ ನೀಡಿದ್ದಾರೆ.
Vijaya Karnataka Web search in the residence of jds leaders
ಜಿಲ್ಲೆಯಲ್ಲಿ ಮುಂದುವರಿದ ಐಟಿ ದಾಳಿ: ಜೆಡಿಎಸ್‌ ಮುಖಂಡರ ನಿವಾಸಗಳಲ್ಲಿ ಶೋಧ


ಹಾಸನ ನಗರದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಪಟೇಲ್‌ ಶಿವರಾಂ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಹೊನವಳ್ಳಿ ಸತೀಶ್‌ ಅವರ ಮನೆಗಳ ಮೇಲೆ ದಾಳಿ ನಡೆಸಿತು. ಜೆಡಿಎಸ್‌ ಮುಖಂಡ, ಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಕಾರ್ಲೆ ಇಂದ್ರೇಶ್‌ ಮನೆ ಮೇಲೂ ತೆರಿಗೆ ಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣರ ಬೆಂಗಾವಲು ಪಡೆಯ ಕಾರನ್ನು ಪರಿಶೀಲಿಸಿದ ಐಟಿ ಅಧಿಕಾರಿಗಳು 1,20,000 ರೂ. ಪತ್ತೆ ಹಚ್ಚಿದ್ದು, ಚುನಾವಣಾ ನೋಡಲ್‌ ಅಧಿಕಾರಿಗಳಿಗೆ ಕ್ರಮಕೈಗೊಳ್ಳುವಂತೆ ಒಪ್ಪಿಸಿದ್ದಾರೆ.

ಚುನಾವಣೆಗೆ ಹಣ ಹರಿದಾಡುತ್ತಿದೆ ಎಂಬ ದೂರಿನ ಮೇರೆಗೆ ಸೋಮವಾರ ಬೆಳಗ್ಗೆ 12.45 ರಲ್ಲಿ ಐಟಿ ಅಧಿಕಾರಿ ಶರೀಫ್‌ ಮತ್ತು ತಂಡ ಹಾಸನ, ಹೊಳೆನರಸೀಪುರದ ಚೆನ್ನಾಂಬಿಕ ಚಿತ್ರಮಂದಿರದ ಬಳಿ ನಿಂತ ರೇವಣ್ಣರ ಬೆಂಗಾವಲು ವಾಹನ ತಪಾಸಣೆ ನಡೆಸಿದ್ದಾರೆ. ಜಿಲ್ಲಾ ಚುನಾವಣಾ ನೋಡಲ್‌ ಅಧಿಕಾರಿ ಪ್ರಿಯಾಂಕ ನಿರ್ದೇಶನದ ಮೇರೆಗೆ ವಿಕಾಸ್‌ಗೌಡ ಕಾರ್ಯನಿರ್ವಹಿಸಿದ್ದು, ತಪಾಸಣೆ ವೇಳೆ ಬೆಂಗಾವಲು ವಾಹನ ಚಾಲಕ ಚಂದ್ರಯ್ಯ ಮತ್ತು ರವಿ ಎಂಬುವರು ಸ್ಥಳದಲ್ಲಿ ಇದ್ದರು. ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ದೇವೇಗೌಡರ ಸಹೋದರ ಸಂಬಂಧಿ ಎಚ್‌.ಎನ್‌.ದೇವೇಗೌಡ (ಪಾಪಣ್ಣಿ) ಅವರ ಹರದನಹಳ್ಳಿ ಗ್ರಾಮದ ನಿವಾಸ ಮತ್ತು ಹಳೇಕೋಟೆ ಹೋಬಳಿಯ ನ್ಯಾಮನಹಳ್ಳಿ ಸಮೀಪದ ತಾಪಂ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್‌ ಮುಖಂಡ ಎನ್‌.ಆರ್‌.ಅನಂತಕುಮಾರ್‌ ಜಲ್ಲಿ ಕ್ರಷರ್‌ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆಲವು ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದರು.

ಪಟ್ಟಣದಲ್ಲಿ ಸೋಮವಾರ ರಾತ್ರಿ ಕೆಲವು ಅಕ್ಕಿ ಗಿರಣಿ ಹಾಗೂ ಕಾಲೇಜು ಮೈದಾನ ಸುತ್ತುವರೆದು ತಪಾಸಣೆ ನಡೆಸಿದ ಚುನಾವಣಾ ವಿಚಕ್ಷ ಣಾ ದಳ ಪರಿಶೀಲನೆ ನಡೆಸಿತ್ತು. ಇದೇ ಸಂದರ್ಭದಲ್ಲಿ ಚೆನ್ನಾಂಬಿಕ ಚಿತ್ರಮಂದಿರದ ಬಳಿ ಇದ್ದ ಜೆಡಿಎಸ್‌ ಪ್ರಚಾರ ವಾಹನ ಸಹ ತಪಾಸಣೆ ನಡೆಸಿದರು. ಆದರೆ, ಯಾವುದೇ ಅಕ್ರಮ ಹಣ , ಮಹತ್ವದ ದಾಖಲೆ ಸಿಕ್ಕದೆ ಬರಿಗೈಯಲ್ಲಿ ಹಿಂದಿರುಗಿತ್ತು. ಮಂಗಳವಾರ ಬೆಳಗ್ಗೆ ತಪಾಸಣೆ ಮುಂದುವರೆಸಿದರು. ಇದರಿಂದ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿಂಭಾಗದ ಹಾಸ್ಟೆಲ್‌ನಲ್ಲಿ ಅಕ್ರಮವಾಗಿ ಅಕ್ಕಿ ತುಂಬಿದ್ದ 250 ಚೀಲ ದಾಸ್ತಾನು ಇರಿಸಿರುವುದನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ. ಬಿಸಿಎಂ ಇಲಾಖೆಯ ಸರಕಾರಿ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯ ಇದಾಗಿದ್ದು, ಮಾರ್ಚ್‌ನಲ್ಲಿ ನಾನಾ ಹಾಸ್ಟೆಲ್‌ಗಳಿಗೆ ವಿತರಿಸಬೇಕಿದ್ದ ಅಕ್ಕಿ ದಾಸ್ತಾನು ಇರಿಸಿದ್ದರು. ಚುನಾವಣಾ ನೋಡಲ್‌ ಅಧಿಕಾರಿಗಳು ನಗರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಅತ್ತ ಐಟಿ ದಾಳಿ ಮುಂದುವರೆದಿದ್ದರೂ ನಿರಾಯಾಸವಾಗಿ ಹಣ ಹಂಚುವ ಪ್ರಕ್ರಿಯೆ ಮುಂದುವರೆದಿದೆ. ಪಟ್ಟಣ , ಗ್ರಾಮಗಳಲ್ಲಿ ನಿರಾಯಾಸವಾಗಿ ಹಣದ ಹೊಳೆ ಹರಿಸಿದ್ದಾರೆ.

ಹಾಸನದ ಬಿಎಂ ರಸ್ತೆಯ ಜೆಡಿಎಸ್‌ ಒಡೆತನಕ್ಕೆ ಸೇರಿದ ಕಲ್ಯಾಣ ಮಂಟಪ(ಟ್ರಸ್ಟ್‌) ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದಲ್ಲದೆ, ನಗರಸಭೆ ಮಾಜಿ ಅಧ್ಯಕ್ಷ ಡಾ.ಅನಿಲ್‌ಕುಮಾರ್‌ ಒಡೆತನದ ಕಾಲೇಜು ಮೇಲೂ ದಾಳಿ ನಡೆಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ