ಆ್ಯಪ್ನಗರ

ಬೇಲೂರಿಗೆ ಇಬ್ಬರು ತಹಸೀಲ್ದಾರ್‌ !

ಇಲ್ಲಿನ ತಾಲೂಕು ಕಚೇರಿಯಲ್ಲಿ ಇಬ್ಬರು ತಹಸೀಲ್ದಾರರು ಕಾರ್ಯನಿರ್ವಹಣೆ ಮಾಡುತ್ತಿದ್ದು, ಕೆಲಸ ಕಾರ್ಯಗಳಿಗೆ ಯಾರ ಬಳಿ ತೆರಳಬೇಕೆಂದು ತಿಳಿಯದೆ ಸಾರ್ವಜನಿಕರು ಗೊಂದಲಕ್ಕೆ ಸಿಲುಕುವಂತಾಗಿದೆ.

Vijaya Karnataka 27 Jun 2018, 5:00 am
ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾದ ಯಥಾಸ್ಥಿತಿ ಆದೇಶ
Vijaya Karnataka Web two tahsildar to belur
ಬೇಲೂರಿಗೆ ಇಬ್ಬರು ತಹಸೀಲ್ದಾರ್‌ !


ಬೇಲೂರು:
ಇಲ್ಲಿನ ತಾಲೂಕು ಕಚೇರಿಯಲ್ಲಿ ಇಬ್ಬರು ತಹಸೀಲ್ದಾರರು ಕಾರ್ಯನಿರ್ವಹಣೆ ಮಾಡುತ್ತಿದ್ದು, ಕೆಲಸ ಕಾರ್ಯಗಳಿಗೆ ಯಾರ ಬಳಿ ತೆರಳಬೇಕೆಂದು ತಿಳಿಯದೆ ಸಾರ್ವಜನಿಕರು ಗೊಂದಲಕ್ಕೆ ಸಿಲುಕುವಂತಾಗಿದೆ.

ಚುನಾವಣೆ ಪೂರ್ವಸ್ಥಿತಿಯನ್ನು ಕಾಯ್ದುಕೊಳ್ಳಬೇಕೆಂಬ ಸರಕಾರದ ನಿರ್ದೇಶನದಂತೆ ಈ ಹಿಂದೆ ಈ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದ ತಹಸೀಲ್ದಾರ್‌ ಪರಮೇಶ್‌ ಅವರು ಕಳೆದ ಶುಕ್ರವಾರ ಬಂದು, ಹಾಲಿ ತಹಸೀಲ್ದಾರ್‌ ಉಮೇಶ್‌ ಅವರಿಂದ ಅಧಿಕಾರ ಪಡೆದುಕೊಂಡಿದ್ದರು. ಅದರಂತೆ ಕಾರ್ಯನಿರ್ವಹಣೆಯನ್ನೂ ಮಾಡಿದ್ದರು. ಆದರೆ, ಶನಿವಾರದಿಂದ ತಹಸೀಲ್ದಾರ್‌ ಉಮೇಶ್‌ ಅವರು ಮತ್ತೆ ಕಚೇರಿಗೆ ಬಂದು ಕಾರ್ಯನಿರ್ವಹಿಸಿದರು.

ಸೋಮವಾರ ಬೆಳಗ್ಗೆ ಪರಮೇಶ್‌ ಅವರು ಕಚೇರಿಗೆ ಬಂದು ತಹಸೀಲ್ದಾರ್‌ ಕುರ್ಚಿಯಲ್ಲಿ ಕುಳಿತು, ಮಧ್ಯಾಹ್ನದವರೆಗೂ ಕಾರ್ಯ ನಿರ್ವಹಣೆ ಮಾಡಿದರು. ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಇದೆ ಎಂದು ತೆರಳಿದರು.

ಆದರೆ, ಕಾರ್ಯ ನಿಮಿತ್ತ ಹೊರಹೋಗಿದ್ದ ತಹಸೀಲ್ದಾರ್‌ ಉಮೇಶ್‌ ಮಧ್ಯಾಹ್ನದ ಬಳಿಕ ಬಂದು ಕಚೇರಿಯಲ್ಲಿ ಕಾರ್ಯನಿರ್ವಹಣೆ ಮಾಡಿದರು. ಮಂಗಳವಾರ ಬೆಳಗ್ಗೆಯೂ ಅವರು ಕರ್ತವ್ಯ ನಿರ್ವಹಿಸಿದ್ದರಿಂದ ಬಹುತೇಕ ನೌಕರರಿಗೆ ಹಾಗೂ ಸಾರ್ವಜನಿಕರಿಗೂ ಗಲಿಬಿಲಿ ಉಂಟು ಮಾಡಿತು.

ಈ ಬಗ್ಗೆ ತಹಸೀಲ್ದಾರ್‌ ಉಮೇಶ್‌ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ, ''ಶುಕ್ರವಾರ ಅವರು ಬಂದದ್ದು ನಿಜ. ಅಧಿಕಾರದ ಹಸ್ತಾಂತರಕ್ಕೂ ಕ್ರಮ ಕೈಗೊಳ್ಳಲಾಗಿತ್ತು. ಅವರು ಬರುವ ಬುಧವಾರ ಮತ್ತೆ ಬರುವುದಾಗಿ ಹೇಳಿದ್ದರು. ಈ ಕಾರಣ ಅಲ್ಲಿಯವರೆಗೂ ಇಲ್ಲಿನ ಅಧಿಕಾರ ಸ್ಥಾನ ಖಾಲಿ ಇಡುವುದು ಸರಿಯಲ್ಲ ಎಂದು ನಾನೇ ಕಾರ್ಯನಿರ್ವಹಣೆ ಮಾಡುತ್ತಿದ್ದೇನೆ'' ಎಂದರು.

ಅಧಿಕಾರ ಸ್ವೀಕಾರದ ವೇಳೆ ಪರಮೇಶ್ವರ್‌, ಚುನಾವಣೆ ವೇಳೆ ಸರಕಾರ ತಮ್ಮನ್ನು ಬೇರೆಡೆಗೆ ವರ್ಗಾಯಿಸಿತ್ತು. ಈಗ ಮತ್ತೆ ಇಲ್ಲಿಗೆ ಬಂದು ಅಧಿಕಾರ ಸ್ವೀಕರಿಸಿದ್ದೇನೆ,'' ಎಂದಿದ್ದರು. ಈಗ ಆಗಿರುವ ಗೊಂದಲದ ಕುರಿತು ಮಾಹಿತಿ ಪಡೆಯಲು ಅವರನ್ನು ಸಂಪರ್ಕಿಸುವ ಪತ್ರಿಕೆಯ ಯತ್ನ ಕೈಗೂಡಲಿಲ್ಲ. ಉಮೇಶ್‌ ಅವರು ಈ ಹಿಂದೆ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರೊಬೆಷನರಿ ತಹಸೀಲ್ದಾರ್‌ ಆಗಿ ಕಾರ್ಯನಿರ್ವಹಿಸಿದ್ದರು. ಚುನಾವಣೆ ವೇಳೆ ಅವರನ್ನು ಬೇಲೂರಿಗೆ ವರ್ಗಾಯಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ