ಆ್ಯಪ್ನಗರ

ವೈಲಿನ್ ವಾದನಕ್ಕೆ ಮನಸೋತ ಶ್ರೋತೃಗಳು

ರಾಮನಾಥಪುರ ಹೋಬಳಿಯ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ನಡೆಯುತ್ತಿರುವ 18ನೇ ವರ್ಷದ ಸಂಗೀತೋತ್ಸವದಲ್ಲಿ ಭಾನುವಾರ ನಗರ ಸಂಕೀರ್ತನೆ, ಭಜನೆಯೊಂದಿಗೆ ಶ್ರೀರಾಮನ ಉತ್ಸವ ಮೂರ್ತಿಯ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು.

Vijaya Karnataka 20 May 2019, 5:00 am
ಕೊಣನೂರು : ರಾಮನಾಥಪುರ ಹೋಬಳಿಯ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ನಡೆಯುತ್ತಿರುವ 18ನೇ ವರ್ಷದ ಸಂಗೀತೋತ್ಸವದಲ್ಲಿ ಭಾನುವಾರ ನಗರ ಸಂಕೀರ್ತನೆ, ಭಜನೆಯೊಂದಿಗೆ ಶ್ರೀರಾಮನ ಉತ್ಸವ ಮೂರ್ತಿಯ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು.
Vijaya Karnataka Web HSN-HSN19KNR1


ನಂತರ ಉತ್ಸವ ಮೂರ್ತಿಯನ್ನು ಸ್ವಸ್ಥಾನದಲ್ಲಿರಿಸಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 2ಗಂಟೆವರೆಗೆ ಸತತ ಮೂರೂವರೆ ಗಂಟೆ ಮೈಸೂರಿನ ವಿದ್ವಾನ್‌ ಎಂ.ನಾಗರಾಜ್‌ ಮತ್ತು ವಿದ್ವಾನ್‌ ಡಾ.ಎಂ.ಮಂಜುನಾಥ್‌ ಯುಗಳ ವೈಲಿನ ವಾದನ ಸಭಿಕರನ್ನು ಮಂತ್ರಮುಗ್ಧಗೊಳಿಸಿತು. ವೈಲಿನ್‌ ವಾದನಕ್ಕೆ ಚೆನ್ನೈನ ವಿ.ಅನಂತ ಆರ್‌.ಕೃಷ್ಣನ್‌ ಮೃದಂಗ, ವಿ.ಜಿ.ಗುರುಪ್ರಸನ್ನ ಖಂಜರಿ ನುಡಿಸಿ ಸಾಥ್‌ ನೀಡಿದರು.

ಈ ಕಛೇರಿಯಲ್ಲಿ ತ್ಯಾಗರಾಜರ ಕೃತಿಗಳಾದ ಬಾಗಾಯನಯ್ಯ ಕೃತಿಯನ್ನು ಚಂದ್ರಜ್ಯೋತಿ ರಾಗ ಆದಿತಾಳದಲ್ಲಿ, ಎಂತವೇಡುಕೊಂಡು ಕೃತಿಯನ್ನು ಸರಸ್ವತಿ ಮನೋಹರಿ ರಾಗ ಆದಿತಾಳದಲ್ಲಿ, ಮನಸುಲೋನಿ ಕೃತಿಯನ್ನು ವರಮು ರಾಗ ಆದಿತಾಳದಲ್ಲಿ, ನಗುಮೋಮು ಕೃತಿಯನ್ನು ಅಭೇರಿ ರಾಗ ಆದಿತಾಳದಲ್ಲಿ, ಮುತ್ತುಸ್ವಾಮಿ ದೀಕ್ಷಿತರ ಮಾಮವ ಮೀನಾಕ್ಷಿ ಕೃತಿಯನ್ನು ವರಾಳಿ ರಾಗ ಮಿಶ್ರಛಾಪು ತಾಳದಲ್ಲಿ ಹಾಗೂ ಸ್ವರಚಿತ ಗಾಯನವಾದ ಸಪ್ತಸ್ವರ ದೇವತಾಂಭಜೇಹಂ, ಪದ್ಮನಾಭಾರ್ಚಿತಂ ಮುಂತಾದವುಗಳಿಗೆ ವೈಲಿನ ನುಡಿಸಿ ಎಲ್ಲರ ಚಪ್ಪಾಳೆ ಗಿಟ್ಟಿಸಿದರು. ಶ್ರೀರಾಮಮಂದಿರ ಭರ್ತಿಯಾಗಿ ಹೊರಗಡೆ ರಸ್ತೆಯ ಬದಿಯಲ್ಲಿ ಕುರ್ಚಿ ಹಾಕಿಕೊಂಡು ವಾದನ ಆಲಿಸಿದರು.

ಚೆನ್ನೈ,ಆಂಧ್ರ, ಬೆಂಗಳೂರು, ಮೈಸೂರು, ಹೈದ್ರಾಬಾದ್‌, ಮಂಗಳೂರು, ಮೈಸೂರು ಮುಂತಾದ ಕಡೆಗಳಿಂದ ಸಂಗೀತಾಸಕ್ತರು ಆಗಮಿಸಿದ್ದರು. ಕಾರ‍್ಯಕ್ರಮದ ಕೊನೆಯಲ್ಲಿ ಶೋತೃಗಳೆಲ್ಲರೂ ಎದ್ದು ನಿಂತು ಸುಮಾರು ಕಾಲು ಗಂಟೆ ಚಪ್ಪಾಳೆ ಸುರಿಮಳೆಗೈದು ವೈಲಿನ್‌ ವಾದಕರಿಗೆ ಗೌರವ ಸೂಚಿಸಿದರು.

ನಾನು ಮತ್ತು ನನ್ನ ಕುಟುಂಬ ಕಳೆದೆರಡು ವರ್ಷಗಳಿಂದ ಇಲ್ಲಿ ನಡೆಯುವ ಸಂಗೀತೋತ್ಸವಕ್ಕೆ ಆಗಮಿಸುತ್ತಿದ್ದೇವೆ. ಇಲ್ಲಿ ನಡೆಯುವ ಸಂಗೀತ ಸಮಾರಾಧನೆ ನಿಜಕ್ಕೂ ಅವಿಸ್ಮರಣೀಯ. ಯಾವುದೇ ಸಾಧಕರು ಸಾಧನೆಗೈದ ಮೇಲೆ ಪಟ್ಟಣ ಬಿದ್ದು ನೆಮ್ಮದಿಯಾಗಿರುತ್ತಾರೆ. ಆದರೆ, ಆರ್‌.ಕೆ.ಪದ್ಮನಾಭಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ ಹುಟ್ಟೂರನ್ನು ಮರೆಯದೆ ಕಳೆದ 17 ವರ್ಷಗಳಿಂದ ಗ್ರಾಮೀಣ ಪ್ರದೇಶವಾದ ರುದ್ರಪಟ್ಟಣದಲ್ಲಿ ಸಂಗೀತ ಸಮಾರಾಧನೆ ಆಯೋಜಿಸಿ ಗ್ರಾಮೀಣ ಭಾಗಗಳಲ್ಲಿ ಸಂಗೀತದ ಸಂಸ್ಕಾರ ಉಳಿಸುತ್ತಿದ್ದಾರೆ. ಇವರ ಈ ಸತ್ಕಾರ‍್ಯ ಹೀಗೆ ನಿರಂತರವಾಗಿರಲಿ.

-ಟಿ.ಎನ್‌.ಶ್ರೀನಿವಾಸಮೂರ್ತಿ, ಟಿವಿ ಧಾರಾವಾಹಿ ಕಲಾವಿದರು, ಬೆಂಗಳೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ