ಆ್ಯಪ್ನಗರ

ಗೂಡ್ಸ್‌ ವಾಹನ ದರೋಡೆ ಪ್ರಕರಣ: ವಾಹನದ ಚಾಲಕನೇ ಸೂತ್ರಧಾರ

ಅರಸೀಕೆರೆ ತಾಲೂಕು ರಾಮೇನಹಳ್ಳಿ ಮೀಸಲು ಅರಣ್ಯದ ಹುಳಿಯಾರ್‌ ರಸ್ತೆಯಲ್ಲಿ ಜ.25ರಂದು ರಾತ್ರಿ ಹಿಂದೂಸ್ಥಾನ್‌ ಯೂನಿಲಿವರ್‌ ಲಿ. ಸಂಸ್ಥೆಯ ವಾಹನ ಅಡ್ಡಗಟ್ಟಿ 2.42 ಲಕ್ಷ ರೂ. ದೋಚಿದ್ದ ಒಂಬತ್ತು ಡಕಾಯಿತರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ದರೋಡೆಗೆ ಒಳಗಾಗಿದ್ದ ಚಾಲಕನೇ ಈ ಪ್ರಕರಣದ ಸೂತ್ರಧಾರ ಎಂದು ಎಸ್‌ಪಿ ಡಾ.ಪ್ರಕಾಶ್‌ಗೌಡ ತಿಳಿಸಿದರು.

Vijaya Karnataka 13 Feb 2019, 5:00 am
ಹಾಸನ: ಅರಸೀಕೆರೆ ತಾಲೂಕು ರಾಮೇನಹಳ್ಳಿ ಮೀಸಲು ಅರಣ್ಯದ ಹುಳಿಯಾರ್‌ ರಸ್ತೆಯಲ್ಲಿ ಜ.25ರಂದು ರಾತ್ರಿ ಹಿಂದೂಸ್ಥಾನ್‌ ಯೂನಿಲಿವರ್‌ ಲಿ. ಸಂಸ್ಥೆಯ ವಾಹನ ಅಡ್ಡಗಟ್ಟಿ 2.42 ಲಕ್ಷ ರೂ. ದೋಚಿದ್ದ ಒಂಬತ್ತು ಡಕಾಯಿತರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ದರೋಡೆಗೆ ಒಳಗಾಗಿದ್ದ ಚಾಲಕನೇ ಈ ಪ್ರಕರಣದ ಸೂತ್ರಧಾರ ಎಂದು ಎಸ್‌ಪಿ ಡಾ.ಪ್ರಕಾಶ್‌ಗೌಡ ತಿಳಿಸಿದರು.
Vijaya Karnataka Web vehicle robbery case 9 accused arrested
ಗೂಡ್ಸ್‌ ವಾಹನ ದರೋಡೆ ಪ್ರಕರಣ: ವಾಹನದ ಚಾಲಕನೇ ಸೂತ್ರಧಾರ


ಸಂಸ್ಥೆಯ ವಾಹನ ಚಾಲಕ ಯೋಗೇಶ(21), ಕಿರಣ(23), ಯಶವಂತ(24), ರಾಹುಲ್‌(20), ಶ್ರೀನಿವಾಸ(20), ಮಂಜುನಾಥ(22), ಕಾರ್ತಿಕ(22), ಬೀರೇಶ(23), ರಾಕೇಶ(23) ಬಂಧಿತ ಡಕಾಯಿತರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

''ಅರಸೀಕೆರೆ ಎಪಿಎಂಸಿ ಯಾರ್ಡ್‌ನ ಹಿಂದೂಸ್ಥಾನ್‌ ಯೂನಿಲಿವರ್‌ ಲಿ. ಗೂಡ್ಸ್‌ ಚಾಲಕ ಯೋಗೇಶನಿಗೆ ಸಂಸ್ಥೆಯ ಆರ್ಥಿಕ ವಹಿವಾಟಿನ ಮಾಹಿತಿ ಇತ್ತು. ತನ್ನ ಸಹಚರರೊಡನೆ ಸೇರಿ ದರೋಡೆ ಮಾಡುವ ಸಂಚು ರೂಪಿಸಿ, ಬೆಂಗಳೂರಿನಿಂದ ಇತರರನ್ನು ಕರೆಸಿಕೊಂಡು ಜ.25ರಂದು ಕಿಂಚಿತ್ತೂ ಅನುಮಾನ ಬಾರದಂತೆ ದರೋಡೆ ಮಾಡಿಸಿದ್ದ,'' ಎಂದು ಪ್ರಕರಣದ ವಿವರ ನೀಡಿದರು.

''ಗೂಡ್ಸ್‌ ವಾಹನದಲ್ಲಿ ಯೋಗೇಶ, ಉಳಿದ ಕಾರ್ಮಿಕರಾದ ಮುರಳಿ, ರುದ್ರೇಶ, ಪುನೀತ ಎಂಬುವವರೊಂದಿಗೆ ಜೆಸಿ ಪುರ, ಡಿಎಂ ಕುರ್ಕೆ, ಪಂಚನಹಳ್ಳಿ ಕಡೆ ವ್ಯಾಪಾರ ಮುಗಿಸಿಕೊಂಡು ಅರಸೀಕೆರೆಗೆ ಹಿಂತಿರುಗುತ್ತಿದ್ದ. ಮಾರ್ಗಮಧ್ಯೆ ರಾಮೇನಹಳ್ಳಿ ಮೀಸಲು ಅರಣ್ಯದ ಸಮೀಪ ಬರುತ್ತಿದ್ದಾಗ ಹಂಫ್ಸ್‌ ಎಂದು ವೇಗ ನಿಯಂತ್ರಿಸಿದ್ದೇ ತಡ ರಾತ್ರಿ 9ರ ವೇಳೆಯಲ್ಲಿ ಕೈಯಲ್ಲಿ ರಾಡು, ದೊಣ್ಣೆ ಹಿಡಿದ ಆರರಿಂದ ಎಂಟು ಡಕಾಯಿತರ ತಂಡ ವಾಹನ ಅಡ್ಡಗಟ್ಟಿತು. ಅದರಲ್ಲಿ ಒಬ್ಬ ಚಾಲಕನ ಮುಖಕ್ಕೆ ಪೆಪ್ಪರ್‌ ಸ್ಪ್ರೇ ಮಾಡಿದ್ದ. ಮುಖ ಉರಿಯುತ್ತದೆ ಎಂದು ಯೋಗೇಶ ಗೂಡ್ಸ್‌ ವಾಹನ ನಿಲ್ಲಿಸಿದ್ದೇ ತಡ, ವಾಹನದ ಬಾಗಿಲು ತೆರೆದು ಒಳನುಗ್ಗಿದ ತಂಡ ಮ್ಯಾನೇಜರ್‌ ಮಲ್ಲಿಕಾರ್ಜುನ ಅವರ ಬಳಿ ಇದ್ದ 2.42 ಲಕ್ಷ ಹಣ, ಬಿಲ್‌, ಸಿಮ್‌, ಮೊಬೈಲ್‌ ಬ್ಯಾಗ್‌ ಕಸಿದುಕೊಂಡು ಓಡಿಹೋದರು. ಈ ಬಗ್ಗೆ ಗಂಡಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಪತ್ತೆ ಹಚ್ಚಲು ಅರಸೀಕೆರೆ ಗ್ರಾಮಾಂತರ ಠಾಣೆ ಮತ್ತು ಗಂಡಸಿ ಠಾಣೆಯ ನುರಿತ ತಂಡವನ್ನು ರಚಿಸಲಾಗಿತ್ತು,'' ಎಂದು ತಿಳಿಸಿದರು.

''ತಂಡವು ಫೆ.12ರಂದು ಒಂಬತ್ತು ಜನ ಆರೋಪಿಗಳನ್ನು ಬಂಧಿಸಿ, ಮೊಬೈಲ್‌, ಕಾರು ಹಾಗೂ ಕೃತ್ಯಕ್ಕೆ ಬಳಸಿದ್ದ ಪದಾರ್ಥ ವಶಪಡಿಸಿಕೊಂಡಿದ್ದು, 2.42 ಲಕ್ಷ ರೂ. ಹಣದಲ್ಲಿ 83 ಸಾವಿರ ರೂ. ಮಾತ್ರ ವಶಪಡಿಸಿಕೊಳ್ಳಲಾಗಿದೆ. ಉಳಿದ ಹಣವನ್ನು ಆರೋಪಿಗಳು ಹಂಚಿಕೊಂಡು ಖರ್ಚು ಮಾಡಿದ್ದಾರೆ,'' ಎಂದು ಎಸ್‌ಪಿ ಹೇಳಿದರು.

''ಪ್ರಕರಣದಲ್ಲಿ ಚಾಲಕ ಯೋಗೇಶ್‌ ಪ್ರಮುಖ ಆರೋಪಿಯಾದರೆ, ಮಾಜಿ ಡಕಾಯಿತ ಹಾಗೂ ರೌಡಿಶೀಟರ್‌ ಮಂಜುನಾಥನ ವಿರುದ್ಧ ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆ ಹಾಗೂ ಚನ್ನಮ್ಮನ ಹಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮಣ್ಣ ತ್ಯಾಗರಾಜನಗರ ಠಾಣೆಯಲ್ಲಿ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ,'' ಎಂದರು.

''ಬಂಧಿತರಲ್ಲಿ ವಾಹನ ಚಾಲಕ ಯೋಗೇಶ, ಬೀರೇಶ, ರಾಕೇಶ ಅರಸೀಕೆರೆ ತಾಲೂಕಿನವರೇ ಆಗಿದ್ದು ಅವರನ್ನು ಹೊರತುಪಡಿಸಿದರೆ ಉಳಿದವರೆಲ್ಲ ಬೆಂಗಳೂರಿನವರು,'' ಎಂದು ಹೇಳಿದರು.

ಅರಸೀಕೆರೆ ಡಿವೈಎಸ್‌ಪಿ ಸದಾನಂದ ತಿಪ್ಪಣ್ಣವರ್‌, ಪ್ರೊ.ಡಿವೈಎಸ್‌ಪಿ ಗೋಪಿ, ಗ್ರಾಮಾಂತರ ಸಿಪಿಐ ಸಿದ್ದರಾಮೇಶ್ವರ, ಸಿಬ್ಬಂದಿಗಳಾದ ಹೀರಾಸಿಂಗ್‌, ಲೋಕೇಶ್‌, ರವಿ, ಮೋಹನಕುಮಾರ, ಶೇಖರ್‌ಗೌಡ ಶಿರಿಗೇರಿ, ಫಕ್ರುದೀನ್‌, ನಂಜುಂಡೇಗೌಡ, ಕೇಶವಮೂರ್ತಿ, ಶಂಕರೇಗೌಡ, ಚಾಲಕ ವಸಂತ, ಪೀರ್‌ಖಾನ್‌ ಅವರ ತಂಡಕ್ಕೆ 25 ಸಾವಿರ ರೂ. ಬಹುಮಾನ ಘೋಷಿಸಿರುವುದಾಗಿ ತಿಳಿಸಿದರು. ಎಎಸ್‌ಪಿ ನಂದಿನಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ