ಆ್ಯಪ್ನಗರ

ಎತ್ತಿನಹೊಳೆ ಪ್ರದೇಶಕ್ಕೆ ಸ್ಪೀಕರ್‌ ನೇತೃತ್ವದ ತಂಡ ಭೇಟಿ

ಕೋಲಾರ, ಚಿಕ್ಕಬಳ್ಳಾಪುರ ಮತ್ತಿತರ ಬರಪೀಡಿತ ಪ್ರದೇಶಕ್ಕೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ಶ್ರೀನಿವಾಸಪುರ ಭಾಗದ ಜನಪ್ರತಿನಿಧಿಗಳು, ರೈತರು ಸೇರಿದಂತೆ 200ಕ್ಕೂ ಹೆಚ್ಚು ಸಾರ್ವಜನಿಕರೊಂದಿಗೆ ಸ್ಪೀಕರ್‌ ರಮೇಶ್‌ ಕುಮಾರ್‌ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

Vijaya Karnataka 15 Jun 2019, 5:00 am
ಸಕಲೇಶಪುರ: ಕೋಲಾರ, ಚಿಕ್ಕಬಳ್ಳಾಪುರ ಮತ್ತಿತರ ಬರಪೀಡಿತ ಪ್ರದೇಶಕ್ಕೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ಶ್ರೀನಿವಾಸಪುರ ಭಾಗದ ಜನಪ್ರತಿನಿಧಿಗಳು, ರೈತರು ಸೇರಿದಂತೆ 200ಕ್ಕೂ ಹೆಚ್ಚು ಸಾರ್ವಜನಿಕರೊಂದಿಗೆ ಸ್ಪೀಕರ್‌ ರಮೇಶ್‌ ಕುಮಾರ್‌ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web HSN-HSN14SKP1NEW


ಕಾಮಗಾರಿ ನಡೆಯುತ್ತಿರುವ ಎತ್ತಿನಹಳ್ಳ, ಕೆಂಪುಹೊಳೆ, ಹೆಬ್ಬಸಾಲೆ, ಹೆಬ್ಬನಹಳ್ಳಿ ಹಾಗೂ ಸುತ್ತಮುತ್ತಲ ಸ್ಥಳಗಳಿಗೆ ಭೇಟಿ ನೀಡಿದ ತಂಡ, ಗುತ್ತಿಗೆದಾರರು ಹಾಗೂ ಸಂಬಂಧಿಸಿದ ಎಂಜಿನಿಯರ್‌ಗಳಿಂದ ಮಾಹಿತಿ ಪಡೆಯಿತು.

ನೀರಿನ ನಿರೀಕ್ಷೆಯಲ್ಲಿ ಜನತೆ: ಈ ಸಂದರ್ಭ ಸ್ಪೀಕರ್‌ ರಮೇಶ್‌ ಕುಮಾರ್‌ ಮಾತನಾಡಿ, ಎತ್ತಿನಹೊಳೆ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು , ಸಾಧ್ಯವಾದಷ್ಟು ಬೇಗ ಬರಪೀಡಿತ ಪ್ರದೇಶಗಳಿಗೆ ನೀರು ಹರಿಸಲು ಎಲ್ಲಾ ಯತ್ನ ಮಾಡಲಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದ್ದು ,ಆ ಭಾಗದ ಜನರು ಎತ್ತಿನಹೊಳೆ ನೀರಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಕ್ಷೇತ್ರ ಶ್ರೀನಿವಾಸಪುರದ ಜನರು ಕಾಮಗಾರಿಯನ್ನು ಖುದ್ದು ವೀಕ್ಷಿಸಬೇಕು ಎಂದು ಅಪೇಕ್ಷಿಸಿದ ಹಿನ್ನೆಲೆಯಲ್ಲಿ ಮೂರು ಹೋಬಳಿ ವ್ಯಾಪ್ತಿಯ ಎಲ್ಲಾ ಗ್ರಾಪಂನ ತಲಾ ಎಂಟು ಮಂದಿ ಹಾಗೂ ಕೆಲವು ಜನಪ್ರತಿನಿಧಿಗಳು ಇಲ್ಲಿಗೆ ಆಗಮಿಸಿ ವೀಕ್ಷಣೆ ಮಾಡಿದ್ದಾರೆ. ಇದೀಗ ಎಲ್ಲರಲ್ಲೂ ನೀರು ದೊರಕುವ ಆಶಾಭಾವನೆ ಮೂಡಿದೆ ಎಂದರು.

ರಾಜಕೀಯ ಗಿಮಿಕ್‌ ಅಲ್ಲ: ತಮ್ಮ ಭೇಟಿಯ ರಹಸ್ಯವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮೇಶ್‌ಕುಮಾರ್‌, ಸ್ಥಳೀಯರ ವಿರೋಧ ಹಾಗೂ ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಅಭಿಪ್ರಾಯ ತಮ್ಮ ಕ್ಷೇತ್ರದ ಜನರಲ್ಲಿ ಮೂಡಿದೆ. ಅವರ ಬಗೆಗಿನ ಸಹಜ ಕಾಳಜಿಯಿಂದ ಜನರಿಗೆ ಇಲ್ಲಿನ ಸ್ಥಿತಿಗತಿ ತಿಳಿಯಲಿ ಎಂಬ ಏಕೈಕ ಉದ್ದೇಶದಿಂದ ಕರೆತಂದಿದ್ದೇನೆ. ಅದರ ಹೊರತು ತಮ್ಮ ಭೇಟಿಯಲ್ಲಿ ಯಾವುದೇ ರಾಜಕೀಯ ಗಿಮಿಕ್‌ ಇಲ್ಲ. ಬಯಲು ಸೀಮೆಯ ಜನ ಕುಡಿಯುವ ನೀರಿಗೂ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಅವರಿಗೆ ಕೂಡಲೇ ನೀರು ಹರಿಸಬೇಕಾಗಿದೆ. ಯೋಜನೆಗೆ ಭೂಮಿ ನೀಡಿದವರಿಗೂ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದರು.

ಮೊದಲ ಹಂತದ ಕಾಮಗಾರಿ ಶೇ.80ರಷ್ಟು ಪೂರ್ಣ : ಶ್ರೀನಿವಾಸಪುರದಿಂದ ಬಂದ ಜನರಿಗೆ ಎತ್ತಿನಹೊಳೆ ಯೋಜನೆ ಅಧೀಕ್ಷ ಕ ಗುರುದತ್‌ ಮಾಹಿತಿ ನೀಡಿ, ಸುಮಾರು 140 ಕೋಟಿ ರೂ. ವೆಚ್ಚದಲ್ಲಿ 2 ಕಿಮೀ ಸುರಂಗ ನಿರ್ಮಾಣ ಮಾಡಲಾಗುತ್ತಿದ್ದು, ಸುಮಾರು 260 ಮೀಟರ್‌ನಷ್ಟು ನೀರನ್ನು ಒಂದು ಸಮಯದಲ್ಲಿ ಪಂಪ್‌ ಮಾಡಿ ಟನಲ್‌ ಮೂಲಕ ಗುರುತ್ವಾಕರ್ಷಣ ಶಕ್ತಿಯಲ್ಲಿ ಬೈರಗುಂಡ್ಲ ಬಳಿ ಹರಿಸಿ, ಅಲ್ಲಿಂದ ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ನೀರು ಪೂರೈಸಲಾಗುವುದು ಎಂದು ವಿವರಿಸಿದರು.

ಎತ್ತಿನಹೊಳೆ ಕಾಮಗಾರಿಯನ್ನು ಎರಡು ಹಂತದಲ್ಲಿ ಕೈಗೊಳ್ಳಲಾಗಿದ್ದು, ಮೊದಲ ಹಂತದ ಪೈಪ್‌ ಲೈನ್‌ ಕಾಮಗಾರಿ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಎರಡನೇ ಹಂತದಲ್ಲಿ ಗುರುತ್ವಾಕರ್ಷಣೆ ಮೂಲಕ ನೀರು ಹರಿಸುವ ಕಾಮಗಾರಿ ಶೇ. 46ರಷ್ಟು ಮುಗಿದಿದ್ದು, ಅತಿ ವೇಗವಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ಕಾಮಗಾರಿ ಪ್ರಗತಿಗೆ ಹರ್ಷ: ನಮ್ಮ ಭಾಗದ ಜನ ನೀರಿಲ್ಲದೆ ಪರದಾಡುತ್ತಿದ್ದಾರೆ. ಜಾನುವಾರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ನೀರಿಲ್ಲ. ಸಾವಿರಾರು ಅಡಿ ಆಳಕ್ಕೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಮಲೆನಾಡು ಭಾಗಕ್ಕೆ ಪ್ರವಾಸಿಗರು ಇಲ್ಲಿನ ಸೌಂದರ್ಯವನ್ನು ಆಹ್ಲಾದಿಸಲು ಬಂದರೆ, ನಾವು ಕುಡಿಯುವ ನೀರಿಗಾಗಿ ಬಂದಿದ್ದೇವೆ. ಕಾಮಗಾರಿ ನೋಡಿ ಸಂತೋಷವಾಗಿದೆ. ರಮೇಶ್‌ ಕುಮಾರ್‌ ಅವರು ನಮ್ಮ ಭಾಗಕ್ಕೆ ನೀರು ಹರಿಸಲು ವ್ಯಾಪಕ ಶ್ರಮ ಪಡುತ್ತಿದ್ದಾರೆ. ಇಲ್ಲಿಂದ ನೀರು ನಮಗೆ ದೊರಕುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶ್ರೀನಿವಾಸಪುರ ತಾಪಂ ಸದಸ್ಯ ಕೆ.ಕೆ. ಮಂಜು ಹೇಳಿದರು.

ಈ ಸಂದರ್ಭ ಎತ್ತಿನಹೊಳೆ ಯೋಜನೆಯ ಭೂಸ್ವಾಧೀನ ಅಧಿಕಾರಿ ಗಿರೀಶ್‌ ನಂದನ್‌, ಕಾರ್ಯಪಾಲಕ ಅಭಿಯಂತರ ಜಯಣ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರ ಶಶಿಧರ್‌, ಸತೀಶ್‌ ಮುಂತಾದವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ