ಆ್ಯಪ್ನಗರ

ತ್ಯಾಜ್ಯ ಸಂಗ್ರಹ ದಿಢೀರ್‌ ಸ್ಥಗಿತ: ನಗರದಲ್ಲಿ ಮತ್ತೆ ಕಸದ ಸಮಸ್ಯೆ

ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳ ಪ್ರತಿನಿತ್ಯ 65 ರಿಂದ 70 ಟನ್‌ ತ್ಯಾಜ್ಯ ಸಂಗ್ರಹಿಸುತ್ತಿದ್ದ ಎಸ್‌ಎಂಪಿ ಎಂಟರ್‌ ಪ್ರೈಸಸ್‌ ಸಂಸ್ಥೆಯು ಆರ್ಥಿಕ ನಷ್ಟದ ಕಾರಣ ನೀಡಿ, ತನ್ನ ಗುತ್ತಿಗೆ ಜವಾಬ್ದಾರಿಯಿಂದ ಏಕಾಏಕಿ ಹಿಂದೆ ಸರಿದಿರುವ ಪರಿಣಾಮ ನಗರದಲ್ಲಿ ಕಸದ ಸಮಸ್ಯೆ ಮತ್ತೊಮ್ಮೆ ತಲೆದೋರಿದೆ. ಹೀಗಾಗಿ ನಗರಸಭೆ 25 ಟಿಪ್ಪರ್‌, ಕಾಂಪ್ಯಾಕ್ಟ್ ಖರೀದಿಗಾಗಿ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿ ಸಮಸ್ಯೆ ನಿವಾರಣೆಗೆ ಕಸರತ್ತು ಪ್ರಾರಂಭಿಸಿದೆ.

Vijaya Karnataka 13 Feb 2019, 5:00 am
ಪ್ರಕಾಶ್‌ ಜಿ. ಹಾಸನ
Vijaya Karnataka Web HSN-HSN12N6


ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳ ಪ್ರತಿನಿತ್ಯ 65 ರಿಂದ 70 ಟನ್‌ ತ್ಯಾಜ್ಯ ಸಂಗ್ರಹಿಸುತ್ತಿದ್ದ ಎಸ್‌ಎಂಪಿ ಎಂಟರ್‌ ಪ್ರೈಸಸ್‌ ಸಂಸ್ಥೆಯು ಆರ್ಥಿಕ ನಷ್ಟದ ಕಾರಣ ನೀಡಿ, ತನ್ನ ಗುತ್ತಿಗೆ ಜವಾಬ್ದಾರಿಯಿಂದ ಏಕಾಏಕಿ ಹಿಂದೆ ಸರಿದಿರುವ ಪರಿಣಾಮ ನಗರದಲ್ಲಿ ಕಸದ ಸಮಸ್ಯೆ ಮತ್ತೊಮ್ಮೆ ತಲೆದೋರಿದೆ. ಹೀಗಾಗಿ ನಗರಸಭೆ 25 ಟಿಪ್ಪರ್‌, ಕಾಂಪ್ಯಾಕ್ಟ್ ಖರೀದಿಗಾಗಿ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿ ಸಮಸ್ಯೆ ನಿವಾರಣೆಗೆ ಕಸರತ್ತು ಪ್ರಾರಂಭಿಸಿದೆ.

ನಗರದಲ್ಲಿ ತ್ಯಾಜ್ಯ ನಿರ್ವಹಣೆ ವೈಜ್ಞಾನಿಕವಾಗಿ ನಿರ್ವಹಣೆ ಆಗುತ್ತಿಲ್ಲ ಎಂದು ನಗರದ ಜನತೆ, ಸಂಘಟನೆಗ ವ್ಯಾಪಕ ವಿರೋಧ, ಪ್ರತಿಭಟನೆ ಹಿನ್ನೆಲೆಯಲ್ಲಿ ಕಳೆದ 2007-08ನೇ ಸಾಲಿನಲ್ಲಿ 11 ವಾರ್ಡ್‌ಗಳ ತ್ಯಾಜ್ಯ ನಿರ್ವಹಣೆಯನ್ನು ಸ್ವಸಹಾಯ ಸಂಘ ಹಾಗೂ ವಾರ್ಡ್‌ನ ಕ್ಷೇಮಾಭಿವೃದ್ಧಿ ಸಂಘಕ್ಕೆ ವಹಿಸಲಾಯಿತು. ಇದಕ್ಕಾಗಿ ಕೊಳ್ಳುವ ಆಟೋ ಟಿಪ್ಪರ್‌ಗೆ ನಗರಸಭೆ ಶೇ.50 ಸಬ್ಸಿಡಿಯನ್ನು ನೀಡುವ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಈ ಎಲ್ಲ ಪ್ರಕ್ರಿಯೆ ಬಳಿಕ ತ್ಯಾಜ್ಯ ಸಂಗ್ರಹ ನಿರ್ವಹಣೆ ಒಂದು ಹಂತಕ್ಕೆ ವ್ಯವಸ್ಥಿತಿ ರೀತಿಯಲ್ಲಿ ನಡೆಯುತ್ತಿದೆ ಎನ್ನುವಾಗಲೇ ಏಕಾಏಕಿ ಸ್ವಸಹಾಯ ಸಂಘ, ಸಂಸ್ಥೆಗಳ ಬದಲು ಚಿಕ್ಕಮಗಳೂರು, ತುಮಕೂರಿನಲ್ಲಿ ತ್ಯಾಜ್ಯ ನಿರ್ವಹಣೆ ಯಶಸ್ವಿಯಾಗಿ ಮಾಡಲಾಗುತ್ತಿದೆ ಎಂಬ ಕಾರಣ ನೀಡಿ ಖಾಸಗಿ ಸಂಸ್ಥೆಗೆ ಗುತ್ತಿಗೆ ವಹಿಸಲಾಯಿತು. ಹೊಸ ಟಿಪ್ಪರ್‌ಗಳಿಗೆ ಚಾಲನೆ ನೀಡಿ, ವಾರ್ಡ್‌ಗಳಿಗೆ ಕಳುಹಿಸಿಕೊಡಲಾಗಿತ್ತು.

ಈ ಬೆಳವಣಿಗೆ ಬಳಿಕ ಆಟೋಟಿಪ್ಪರ್‌ಗಳಿಗೆ ಬ್ಯಾಂಕ್‌ಗಳಿಂದ ಸಾಲ ಪಡೆದು ಬಂಡವಾಳ ಹೂಡಲಾಗಿದೆ. ಸಿಬ್ಬಂದಿಗೆ ಇಂತಿಷ್ಟು ವೇತನ ಕೊಟ್ಟು ನಿರ್ವಹಿಸಲಾಗುತ್ತಿದೆ. ಹೀಗಿರುವಾಗ ಏಕಾಏಕಿ ಖಾಸಗಿಯವರಿಗೆ ವಹಿಸಿದರೆ ಇದನ್ನೇ ನಂಬಿಕೊಂಡಿದ್ದವರ ಪಾಡೇನು? ಎಂಬ ವಿರೋಧವೂ ವ್ಯಕ್ತವಾಗಿತ್ತು.

ಇಂತಹ ವಿರೋಧದ ನಡುವೆ ಖಾಸಗಿ ಸಂಸ್ಥೆ ಕೆಲದಿನಗಳ ಕಾಲ ತ್ಯಾಜ್ಯ ಸಂಗ್ರಹಿಸುತ್ತಿತ್ತು. ಇದೀಗ ಒಂದು ತಿಂಗಳು ಪೂರೈಸಿದ್ದು, ವಸತಿ ಮನೆಯವರು ತಿಂಗಳಿಗೆ 30 ರೂ. ಶುಲ್ಕವನ್ನು ನೀಡುತ್ತಿಲ್ಲ. ಹೀಗಾಗಿ 20 ಕಾರ್ಮಿಕರು, 40 ಟಿಪ್ಪರ್‌ ಚಾಲಕರಿಗೆ ವೇತನ ನೀಡಲು, ಡೀಸೆಲ್‌ ಹಾಕಿಸಲು ಆಗುತ್ತಿಲ್ಲ, ಆರ್ಥಿಕ ನಷ್ಟದ ಕಾರಣ ಫೆ.8ರಿಂದ ಮನೆ ಕಸ ಸಂಗ್ರಹ ಸ್ಥಗಿತಗೊಳಿಸುತ್ತಿದ್ದೇವೆ ಎಂದು ಎಸ್‌ಎಂಪಿ ಎಂಟರ್‌ ಪ್ರೈಸಸ್‌ ನಗರಸಭೆ ಆಯುಕ್ತರಿಗೆ ಲಿಖಿತ ಪತ್ರ ನೀಡಿ, ತ್ಯಾಜ್ಯ ಸಂಗ್ರಹ ಕಾರ್ಯ ಸ್ಥಗಿತಗೊಳಿಸಿದೆ.

ನಗರದಲ್ಲಿ ನಿತ್ಯ 65ರಿಂದ 70 ಟನ್‌ ತ್ಯಾಜ್ಯ ಸಂಗ್ರಹವಾಗುತ್ತದೆ. ಖಾಸಗಿ ಗುತ್ತಿಗೆ ಕಂಪನಿ ತ್ಯಾಜ್ಯ ಸಂಗ್ರಹಕ್ಕೆ ಮನೆಯವರು ಹಣ ನೀಡುತ್ತಿಲ್ಲ ಎಂದು ತಿಳಿಸಿರುವುದಲ್ಲದೆ. ನಷ್ಟದ ಕಾರಣ ನೀಡಿ ಸ್ಥಗಿತಗೊಳಿಸಿದೆ. ಹೀಗಾಗಿ ಈ ಕೂಡಲೇ 25 ಟಿಪ್ಪರ್‌ , ಕಾಂಫ್ಯಾಕ್ಟರ್‌ ಖರೀದಿಗೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಒಂದೆರಡು ದಿನದಲ್ಲಿ ಪುನಃ ನಗರಸಭೆ, ಸ್ವಸಹಾಯ ಸಂಘಗಳ ಮೂಲಕ ತ್ಯಾಜ್ಯ ವಿಲೆ ಪ್ರಾರಂಭಿಸಲಾಗುವುದು.
- ಪರಮೇಶ್‌, ನಗರಸಭೆ ಆಯುಕ್ತ, ಹಾಸನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ