ಆ್ಯಪ್ನಗರ

ಭರ್ತಿಯಾಗಿದ್ದ ಹೇಮೆ ಬೇಸಿಗೆ ಆರಂಭದಲ್ಲೇ ಖಾಲಿ

ಕಳೆದ ಮುಂಗಾರಿನಲ್ಲಿ ಉತ್ತಮ ಮಳೆಯಾದ ಪರಿಣಾಮ ಮೈದುಂಬಿದ್ದ ಹೇಮಾವತಿ ಒಡಲು, ಇದೀಗ ಮಾರ್ಚ್‌ನಲ್ಲೇ ದಿಢೀರ್‌ ಬರಿದಾಗುತ್ತಿದ್ದು, ಮುಂದಿನ ಬೇಸಿಗೆಯ ದಿನಗಳಲ್ಲಿ ನೀರಿಗೆ ತೀವ್ರ ಹಾಹಾಕಾರ ಎದುರಾಗುವ ಮುನ್ಸೂಚನೆ ಈಗಲೇ ಸಿಕ್ಕಿದೆ.

Vijaya Karnataka 25 Mar 2019, 5:00 am
ಪ್ರಕಾಶ್‌ ಜಿ. ಹಾಸನ
Vijaya Karnataka Web HSN-HSN15N11


ಕಳೆದ ಮುಂಗಾರಿನಲ್ಲಿ ಉತ್ತಮ ಮಳೆಯಾದ ಪರಿಣಾಮ ಮೈದುಂಬಿದ್ದ ಹೇಮಾವತಿ ಒಡಲು, ಇದೀಗ ಮಾರ್ಚ್‌ನಲ್ಲೇ ದಿಢೀರ್‌ ಬರಿದಾಗುತ್ತಿದ್ದು, ಮುಂದಿನ ಬೇಸಿಗೆಯ ದಿನಗಳಲ್ಲಿ ನೀರಿಗೆ ತೀವ್ರ ಹಾಹಾಕಾರ ಎದುರಾಗುವ ಮುನ್ಸೂಚನೆ ಈಗಲೇ ಸಿಕ್ಕಿದೆ.

ಮಲೆನಾಡು ಮತ್ತು ಅರೆಮಲೆನಾಡು ಪ್ರದೇಶವನ್ನು ಹೊಂದಿದ ಜಿಲ್ಲೆಯಲ್ಲಿ ಈ ಬಾರಿ ಅವಧಿಧಿಗೆ ಮುನ್ನವೇ 37.103 ಸಾಮರ್ಥ್ಯ‌ದ ಜಲಾಶಯ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗಿತ್ತು. ಹೀಗಾಗಿ ಈ ಬಾರಿ ನೀರಿನ ಸಮಸ್ಯೆ ಉದ್ಭವಿಸದು ಎಂದು ಜನತೆ, ಜನಪ್ರತಿನಿಧಿಧಿಗಳು ನಿಟ್ಟುಸಿರು ಬಿಟ್ಟು, ಬಾಗಿನ ಬಿಟ್ಟು, ಪೂಜೆ ಸಲ್ಲಿಸಿದ್ದರು. ಕೆರೆ, ಕಟ್ಟೆಗಳು, ಕಾಲುವೆ ಮೂಲಕವೂ ನಿಗದಿನ ಪ್ರಮಾಣದ ನೀರು ಹರಿಸಲಾಗಿತ್ತು.

ನಿರೀಕ್ಷೆಗಿಂತ ಹೆಚ್ಚು ಮಳೆ, ಅತಿವೃಷ್ಟಿಯಿಂದ ಮತ್ತೊಂದಿಷ್ಟು ಮಳೆ ಬಂದು ಜಲಾಶಯಕ್ಕೆ ಸಾಕಷ್ಟು ನೀರು ಹರಿದುಬಂತು. ಬಂದ ನೀರನ್ನು ಮೈಸೂರು, ತುಮಕೂರು ಭಾಗಕ್ಕೆ ಕುಡಿಯಲು ಕಾಲುವೆ ಮೂಲಕ ನೀರು ಹರಿಸಲಾಯಿತು. ತಮಿಳುನಾಡಿಗೂ ತನ್ನ ಪಾಲಿನ ನೀರನ್ನು ಹೇಮಾವತಿ ನೀಡಿದ್ದಾಳೆ. ಇಷ್ಟೆಲ್ಲಾ ಆದರೂ, ಈ ಬಾರಿ ಬೇಸಿಗೆಗೆ ನೀರಿನ ಸಮಸ್ಯೆ ಆಗುವುದಿಲ್ಲ ಎಂದೇ ಭಾವಿಸಿದ್ದ ಅಧಿಧಿಕಾರಿಗಳಿಗೆ ಇದೀಗ ಒಮ್ಮೆಗೆ ಆತಂಕ ಎದುರಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಜಲಾಶಯ ಹಿನ್ನೀರಿನ ನದಿಪಾತ್ರದಲ್ಲಿ ಹರಿಯುತ್ತಿದ್ದ ಸಣ್ಣಪ್ರಮಾಣದ ನೀರೂ ಸಹ ರಾತ್ರಿ ಬೆಳಗಾಗುವುದರೊಳಗೆ ಮಂಗಮಾಯವಾಗುತ್ತಿದೆ.

ಇದೀಗ ಈ ನೀರು ಎಲ್ಲಿ ಹೋಗುತ್ತಿದೆ ಎಂದು ಹುಡುಕಿದಾಗ ಸಿಕ್ಕಿದ್ದೇ ಕಾಫಿತೋಟ. ಮೊದಲೇ ಕ್ಷೀಣಿಸಿರುವ ಜಲರಾಶಿಯನ್ನು ಕಾಫಿತೋಟದ ಪೈಪುಗಳು ಎಳೆದುಕೊಂಡು ಖಾಲಿ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಕಾಫಿ ಬೆಳೆ ಉಳಿಸಿಕೊಳ್ಳಲು ಕೆಲವು ಬೆಳೆಗಾರರು ಕದ್ದು,ಮುಚ್ಚಿ ನದಿಯನ್ನೇ ಬರಿದು ಮಾಡುತ್ತಿದ್ದಾರೆ. ಹೀಗೆ ನೀರು ಖಾಲಿಯಾದರೆ ಜನರ ದಾಹ ತಣಿಸಲು ನೀರು ಎಲ್ಲಿಂದ ತರುವುದು ಎಂಬ ಆತಂಕ ಎದುರಾಗಿದೆ.

ಜಲಾಶಯವೂ ಖಾಲಿ

ಹೇಮಾವತಿ ಜಲಾಶಯ 37.103 ಟಿಎಂಸಿ ಸಾಮರ್ಥ್ಯ‌ದಲ್ಲಿ ಪ್ರಸ್ತುತ ಕೇವಲ 6.04 ಟಿಎಂಸಿ ನೀರಿನ ಸಂಗ್ರಹವಿದೆ. ಅದರಲ್ಲಿ ಮೂರು ಟಿಎಂಸಿಯಷ್ಟು ಹೂಳು ತುಂಬಿದ್ದು, ಅಂತಿಮವಾಗಿ ಉಳಿದಿರುವುದು 3 ಟಿಎಂಸಿ ಮಾತ್ರ. ಕಳೆದ ವರ್ಷ ಮಳೆ ಕೊರತೆಯ ನಡುವೆ, ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗದಿದ್ದರೂ, ಮಾ.24 ರಂದು 6.30 ಟಿಎಂಸಿ ನೀರಿನ ಸಂಗ್ರಹವಿತ್ತು. ಆದರೆ, ಈ ಬಾರಿ ಜಲಾಶಯ ಭರ್ತಿಯಾಗಿದ್ದರೂ ಮಾರ್ಚ್‌ನಲ್ಲೇ ಜಲಾಶಯ ಖಾಲಿಯಾಗುತ್ತಿದೆ.

ಇದಕ್ಕೆ ಕಾರಣ ಹುಡುಕಿ ಹೋದಾಗಲಷ್ಟೇ ನದಿಯ ನೀರು ಕಾಫಿತೋಟದ ಪಾಲಾಗಿರುವುದು ಕಂಡು ಬಂದಿದೆ. ಇದೇ ರೀತಿ ಬಿಟ್ಟರೆ ಜನತೆಗೆ ಕುಡಿಯುವ ನೀರು ಇಲ್ಲದಂತಾಗುತ್ತದೆ ಎಂಬ ಸಂಗತಿ ಮನಗಂಡ ಅಧಿಧಿಕಾರಿ ವರ್ಗ ಇದಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಇಷ್ಟಾದ ಮಾತ್ರಕ್ಕೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿದೀತು ಎಂಬಂತಿಲ್ಲ. ಬಡವರ ಊಟಿಯಲ್ಲಿ ದಿನೇದಿನೆ ಬಿಸಿಲ ತಾಪ ಹೆಚ್ಚುತ್ತಿರುವುದನ್ನು ಗಮನಿಸಿದರೆ ಮಾರ್ಚ್‌ ಅಂತ್ಯ ಅಥವಾ ಏಪ್ರಿಲ್‌ ಮೊದಲ ವಾರದಲ್ಲಿ ನೀರಿಗೆ ಹಾಹಾಕಾರ ಉದ್ಭವವಾಗುವ ಲಕ್ಷಣ ಕಂಡು ಬರುತ್ತಿದೆ.

ಮೋಟಾರ್‌ ತೆರವಿಗೆ ಸೂಚನೆ: ಎಚ್ಚರಿಕೆ

ಹೇಮಾವತಿ ನದಿಯ ದಡದಲ್ಲಿ ಇರುವ ಕಾಫಿ ತೋಟದ ಮಾಲೀಕರು ನದಿಗೆ ಪಂಪ್‌ ಮೋಟಾರ್‌ಗಳನ್ನು ಅಳವಡಿಸಿ ತಮ್ಮ ತೋಟಗಳಿಗೆ ನೀರನ್ನು ಹಾಯಿಸುತ್ತಿರುವ ಕಾರಣ ನದಿಯಲ್ಲಿ ಈಗಾಗಲೇ ಗಣನೀಯವಾಗಿ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ.

ಸಕಲೇಶಪುರ ಪಟ್ಟಣದಲ್ಲಿ ವಾಸಮಾಡುವ ನಾಗರೀಕರಿಗೆ ಕುಡಿಯುವ ನೀರನ್ನು ನದಿಯಿಂದ ಪೂರೈಕೆ ಮಾಡಲಾಗುತ್ತಿದ್ದು, ಇನ್ನು ಮುಂದೆ ಜನರಿಗೆ ಕುಡಿಯುವ ನೀರಿಲ್ಲದೆ ಹಾಹಾಕಾರ ಸಂಭವಿಸುವ ಸಂದರ್ಭಗಳು ಹೆಚ್ಚಾಗಿರುವುದರಿಂದ ಹೇಮಾವತಿ ಸೇತುವೆಯಿಂದ ಹೆನ್ನಲಿ ಗ್ರಾಮದವರೆಗೆ ಅಳವಡಿಸಲಾಗಿರುವ ಪಂಪ್‌ ಮೋಟಾರ್‌ಗಳನ್ನು ತೆರವುಗೊಳಿಸಲು ತಿಳಿಸಲಾಗಿದೆ. ತೆರವುಗೊಳಿಸದಿದ್ದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಮೋಟಾರ್‌ ಪಂಪ್‌ಗಳನ್ನು ತಮ್ಮ ವಶಕ್ಕೆ ತೆಗೆದು ಕೊಳ್ಳಲಾಗುವುದು ಎಂದು ಸಕಲೇಶಪುರ ಪುರಸಭೆ ಮುಖ್ಯಾಧಿಕಾರಿಗಳಾದ ಟಿ.ವಿಲ್ಸನ್‌ ಎಚ್ಚರಿಸಿದ್ದಾರೆ.

ಜಿಲ್ಲೆಯಲ್ಲಿ ಸಂಪೂರ್ಣ ಬರ

ಈ ಬಾರಿಯ ವೈಪರೀತ್ಯದಿಂದ ಜಿಲ್ಲೆಯ ಎಂಟು ತಾಲೂಕುಗಳನ್ನು ಬರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಜಿಪಂ ಸಭೆಯಲ್ಲಿ ಚರ್ಚಿಸಲಾಗಿದೆ. ಜಿಪಂ ಸದಸ್ಯರು ಎದುರಾಗಬಹುದಾದ ನೀರಿನ ಸಮಸ್ಯೆ ವಿವರಿಸಿ ಆತಂಕ ತೋಡಿಕೊಂಡಿದ್ದಾರೆ, ಜಿಪಂ ಹೆಚ್ಚು ಅನುದಾನಕ್ಕೆ ಸರಕಾರವನ್ನು ಕೋರಿದೆ. ಹಣ ಕೊಟ್ಟರೂ ನೀರು ತರುವುದು ಎಲ್ಲಿಂದ ಎಂಬುದು ಯಕ್ಷ ಪ್ರಶ್ನೆ.

ಟ್ಯಾಂಕರ್‌ ನೀರು

ಬರದ ತೀವ್ರ ಸಮಸ್ಯೆ ಎದುರಿಸುತ್ತಿರುವ ಅರಸೀಕೆರೆ ಹಾಗೂ ಬೇಲೂರು ತಾಲೂಕಿನ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಹರಿಸಲಾಗುತ್ತಿದೆ. ಪ್ರಸ್ತುತ ಎರಡು ಗ್ರಾಮಗಳಿಂದ 25ರಿಂದ 30 ಗ್ರಾಮಕ್ಕೆ ಟ್ಯಾಂಕರ್‌ ನೀರು ನೀಡಲಾಗುತ್ತಿದೆ. ಪ್ರತಿನಿತ್ಯ ಇದಕ್ಕೆ ಹೊಸದಾಗಿ ಗ್ರಾಮಗಳು ಸೇರ್ಪಡೆಯಾಗುತ್ತಲೇ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ