ಹಾವೇರಿ : ಎಸ್ಎಸ್ಎಲ್ಸಿ, ಜೆಒಡಿಸಿ, ಐಟಿಐ ಸೇರಿದಂತೆ ಕಡಿಮೆ ಶಿಕ್ಷಣ ಪಡೆದಿರುವ ನಿರುದ್ಯೋಗಿ ಯುವ ಸಮೂಹಕ್ಕೆ ಉದ್ಯೋಗ ಒದಗಿಸುವ ಉದ್ದೇಶದಿಂದ ಹಾವೇರಿಯಲ್ಲಿ ಅತಿ ಶೀಘ್ರವೇ ಜಿಟಿಟಿಸಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಜವಳಿ, ಮುಜರಾಯಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ನಗರಸಭೆ ಹಾಗೂ ನಗರಾಭಿವೃದ್ಧಿ ಕೋಶ ಸಂಯುಕ್ತವಾಗಿ ಹಾವೇರಿ ನಗರಸಭೆ ಹೈಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಉನ್ನತ ಶಿಕ್ಷಣ ಪಡೆದವರಿಗೆ ಉದ್ಯೋಗಾವಕಾಶ ಹೆಚ್ಚು. ನಮ್ಮ ಜಿಲ್ಲೆ ಮೂಲತಃ ಕೃಷಿ ಪ್ರಧಾನವಾಗಿದ್ದು, ಕೃಷಿ ಚಟುವಟಿಕೆ ಕೈಗೊಳ್ಳುವ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೃಷಿ ಬಿಟ್ಟು ಉದ್ಯೋಗಕ್ಕೆ ಆಸಕ್ತಿ ವಹಿಸುವ ಯುವ ಸಮುದಾಯ ಹೆಚ್ಚುತ್ತಿದೆ. ಅರ್ಹತೆಗೆ ತಕ್ಕಂತೆ ಉದ್ಯೋಗಾವಕಾಶ ಇರುತ್ತದೆ. ಉನ್ನತ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆದುಕೊಳ್ಳಲು ಕೌಶಲ್ಯ ಮುಖ್ಯ. ಈ ಕಾರಣಕ್ಕೆ 25 ಕೋಟಿ ರೂ. ವೆಚ್ಚದಲ್ಲಿ ಜಿಟಿಟಿಸಿ ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು.
ಜಿಲ್ಲೆಯ ನಿರುದ್ಯೋಗಿ ಯುವ ಸಮೂಹಕ್ಕೆ ಸ್ಟೈಫಂಡ್ ಸಮೇತ ಕೌಶಲ ತರಬೇತಿ ನೀಡುವ ಮೂಲಕ ಉದ್ಯೋಗಾವಕಾಶ ಒದಗಿಸಲು ರಾಜ್ಯದ ವಿವಿಧ ಭಾಗಗಳಿಂದ ಉದ್ಯೋಗದಾತರು ಬಂದಿದ್ದು, ಈ ಉದ್ಯೋಗ ಮೇಳದಲ್ಲಿ ಆಯ್ಕೆಗೊಳ್ಳುವವರಿಗೆ ಕೆಲಸ ಮಾಡುವ ಸ್ಥಳದಲ್ಲೇ ಅನ್ನ ಸಿಗುವಂತಾಗಬೇಕು. ಕನಿಷ್ಠ 7ರಿಂದ 15 ಸಾವಿರ ರೂ. ವರೆಗೂ ವೇತನ ನೀಡುವಂತೆ ಸಹ ಸೂಚಿಸಲಾಗಿದೆ ಎಂದರು.
ಜಿಲ್ಲೆಯ ನಿರುದ್ಯೋಗಿ ಯುವಕ/ಯುವತಿಯರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ರಾಣೇಬೆನ್ನೂರ ಹನುಮನಮಟ್ಟಿಯಲ್ಲಿ 18 ಎಕರೆ ಜಾಗದಲ್ಲಿ ಜವಳಿ ಪಾರ್ಕ್ ಸ್ಥಾಪಿಸಲಾಗುತ್ತಿದೆ. ಸಾಯಿ ಎಕ್ಸ್ಪೋರ್ಟ್ ಗಾರ್ಮೆಂಟ್ ಕಂಪನಿ ಸಿದ್ಧ ಉಡುಪು ತಯಾರಿಕಾ ಘಟಕದ ಸ್ಥಾಪನೆಗೆ 5 ಎಕರೆ ಜಮೀನು ಕೇಳಿದ್ದು, ನಗರಾಭಿವೃದ್ಧಿ ಪ್ರಾಧಿಕಾರ ಒದಗಿಸುವ ಭರವಸೆ ನೀಡಿದೆ. ಅತಿ ಶೀಘ್ರದಲ್ಲೇ ಜಿಲ್ಲೆಯಲ್ಲಿ ಉದ್ಯೋಗಾವಕಾಶ ಹೆಚ್ಚಳವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿ.ಪಂ. ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಮಾತನಾಡಿ, ಸಾಕ್ಷರರ ಸಂಖ್ಯೆ ಹೆಚ್ಚಾಗುತ್ತಿ ರುವ ಬೆನ್ನಲ್ಲೇ ಕೃಷಿಯಿಂದ ವಿಮುಖರಾಗಿ ಉದ್ಯೋಗ ಪಡೆದುಕೊಳ್ಳುವ ಆಸಕ್ತ ಯುವಕರ ಸಂಖ್ಯೆ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ನಿರಂತರ ಉದ್ಯೋಗ ಮೇಳ ಆಯೋಜಿಸುವ ಅಗತ್ಯವಿದೆ. ಕೇವಲ ಉದ್ಯೋಗ ನೀಡಿದರೆ ಸಾಲದು ಜೀವನ ನಿರ್ವಹಣೆಗೆ ಅಗತ್ಯವಿರುವ ವೇತನ ಸಹ ನೀಡುವಂತೆ ಉದ್ಯೋಗದಾತರಿಗೆ ಹೇಳಿದರು.
ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಸರಕಾರಿ ಐಟಿಐ ತರಬೇತಿ ಕೇಂದ್ರ ಸ್ವಂತ ಕಟ್ಟಡ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಇದೇ ಆವರಣದಲ್ಲಿ ಕೌಶಲ ತರಬೇತಿ ಕೇಂದ್ರವನ್ನು ಸಹ ಆರಂಭಿಸಿದರೆ ಜಿಲ್ಲೆಯ ನಿರುದ್ಯೋಗಿ ಯುವ ಸಮೂಹಕ್ಕೆ ಕೌಶಲ ಪಡೆದುಕೊಂಡು ಉದ್ಯೋಗಾವಕಾಶ ಪಡೆದುಕೊಳ್ಳಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಕೈ ಗೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಮಾತನಾಡಿ, ನಗರದಲ್ಲಿ ಇದು ಎರಡನೇ ಉದ್ಯೋಗ ಮೇಳ. ಕಳೆದ ಉದ್ಯೋಗ ಮೇಳದಲ್ಲಿ ಸುಮಾರು 800 ನಿರುದ್ಯೋಗಿ ಯುವಕ/ಯುವತಿಯರಿಗೆ ಉದ್ಯೋಗಾವಕಾಶ ಲಭ್ಯವಾಗಿದೆ. ಕಳೆದ ವಾರ ಬ್ಯಾಡಗಿಯಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲೂ ಹೆಚ್ಚಿನ ಯುವ ಸಮುದಾಯಕ್ಕೆ ಉದ್ಯೋಗಾವಕಾಶ ಸಿಕ್ಕಿದೆ. ಈ ಉದ್ಯೋಗ ಮೇಳದಲ್ಲೂ 34 ಕಂಪನಿಗಳು ಭಾಗವಹಿಸಿವೆ. ಯುವಕರಿಗಿಂತ ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಖುಷಿ ತಂದಿದೆ ಎಂದರು.
ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಒಬ್ಬ ಯುವಕನಿಗೆ 10 ಸಾವಿರ ರೂ. ಹಾಗೂ ಇಬ್ಬರು ಯುವಕರಿಗೆ ತಲಾ 7 ಸಾವಿರ ರೂ. ವೇತನವಿರುವ ಉದ್ಯೋಗ ಪತ್ರ ಸಹ ವಿತರಿಸಲಾಯಿತು.
ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ವಾಸಣ್ಣ, ಡಿವೈಎಸ್ಪಿ ಕುಮಾರಪ್ಪ, ನಗರಸಭೆ ಆಯುಕ್ತ ಬಿ.ಎಸ್.ಶಿವಕುಮಾರಯ್ಯ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಜಿ.ಜೆ.ರುದ್ರಣ್ಣಗೌಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಸ್.ಸುಂಕಾಪೂರ ನಿರೂಪಿಸಿದರು.