ಆ್ಯಪ್ನಗರ

ಹಾನಗಲ್ಲ ತಾಲೂಕಿಗೆ 17 ಶುದ್ಧ ನೀರಿನ ಘಟಕ

ಹಾನಗಲ್ಲ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಬಗ್ಗೆ ಸೋಮವಾರ ಇಲ್ಲಿನ ತಾ.ಪಂ ಕಚೇರಿಯಲ್ಲಿ ಶಾಸಕ ಸಿ.ಎಂ.ಉದಾಸಿ ಅಧಿಕಾರಿಗಳ ಸಭೆ ನಡೆಸಿದರು.

Vijaya Karnataka 7 May 2019, 5:00 am
ಹಾನಗಲ್ಲ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಬಗ್ಗೆ ಸೋಮವಾರ ಇಲ್ಲಿನ ತಾ.ಪಂ ಕಚೇರಿಯಲ್ಲಿ ಶಾಸಕ ಸಿ.ಎಂ.ಉದಾಸಿ ಅಧಿಕಾರಿಗಳ ಸಭೆ ನಡೆಸಿದರು.
Vijaya Karnataka Web HVR-06HGL1


ಬಿಸಿಲ ಪ್ರಕೋಪಕ್ಕೆ ಅಂತರ್ಜಲ ಮಟ್ಟ ಕುಸಿತವಾಗಿ ಗ್ರಾಮೀಣ ಭಾಗದ ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದೆ. ತುರ್ತು ಕಾಮಗಾರಿಗಳನ್ನು ಕೈಗೊಳ್ಳಬೇಕು, ಮಳೆ ಆರಂಭಗೊಂಡು, ನದಿ, ಹಳ್ಳಗಳಲ್ಲಿ ನೀರು ಹರಿಯುವ ತನಕ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉದ್ಭವಿಸಿದಂತೆ ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಉದಾಸಿ ಸೂಚನೆ ನೀಡಿದರು.

ಜಿಪಂ ಎಇಇ ಆರ್‌.ಎಂ.ಸೊಪ್ಪಿಮಠ ಮಾಹಿತಿ ನೀಡಿ, ಸದ್ಯ ಸೋಮಸಾಗರ, ಗೊಂದಿ, ಬ್ಯಾತನಾಳ, ಸಮ್ಮಸಗಿ, ಡೊಮ್ಮನಾಳ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿ ಆಶ್ರಯಿಸಿ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದೆ ಎಂದರು.

17 ಶುದ್ಧ ನೀರಿನ ಘಟಕ: ತಾಲೂಕಿಗೆ 17 ಹೊಸದಾಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದಿವೆ, ಅವುಗಳ ಅನುಷ್ಠಾನಕ್ಕಾಗಿ ಅಧಿಕಾರಿಗಳ ಜೊತೆಯಲ್ಲಿ ಶಾಸಕ ಸಿ.ಎಂ.ಉದಾಸಿ ಚರ್ಚೆ ನಡೆಸಿದರು. ಈಗಾಗಲೇ ತಾಲೂಕಿನಲ್ಲಿ 120 ಶುದ್ಧ ಕುಡಿವ ನೀರಿನ ಘಟಕಗಳು ಸ್ಥಾಪನೆಗೊಂಡಿವೆ, ಈ ಪೈಕಿ 18 ಘಟಕ ದುರಸ್ತಿ ಕಾರಣಕ್ಕಾಗಿ ಸ್ಥಗಿತಗೊಂಡಿವೆ, ಬೇಸಿಗೆಯಲ್ಲಿ ಶುದ್ಧ ನೀರಿನ ಘಟಕಗಳಿಗೂ ನೀರಿನ ಸಮಸ್ಯೆ ಏರ್ಪಡುತ್ತಿದೆ ಎಂಬ ಮಾಹಿತಿಗಳು ಸಭೆಯಲ್ಲಿ ವ್ಯಕ್ತವಾದವು.

ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಹೊಂದಿರುವ ಗ್ರಾಮಗಳನ್ನು ಹೊರತುಪಡಿಸಿ, ಗ್ರಾಮಸ್ಥರ ಬೇಡಿಕೆ ಇರುವ ಇನ್ನುಳಿದ ಗ್ರಾಮಗಳಲ್ಲಿ ಈಗ ಬಿಡುಗಡೆಗೊಂಡ 17 ಘಟಕಗಳನ್ನು ಸ್ಥಾಪನೆ ಮಾಡುವಂತೆ ಶಾಸಕ ಉದಾಸಿ ಸಲಹೆ ನೀಡಿದರು.

ತಾಲೂಕಿನ ಸಮ್ಮಸಗಿ ಗ್ರಾಮದ ಶುದ್ಧ ನೀರಿನ ಘಟಕದಲ್ಲಿ ನೀರು ವಾಸನೆಯುಕ್ತವಾಗಿದೆ, ಸ್ಥಳೀಯರು ಘಟಕದ ನೀರು ಬಳಸಲು ಹಿಂಜರಿಯುತ್ತಾರೆ ಎಂದು ದೂರು ಬರುತ್ತಿವೆ, ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಬಗ್ಗೆ ಸಂಬಂಧಿಸಿದ ಪಿಡಿಒ, ವಾಟರ್‌ಮನ್‌ಗೆ ತರಬೇತಿ ನೀಡುವ ಕಾರ್ಯಾಗಾರ ಆಯೋಜಿಸಬೇಕು ಎಂದು ನ್ಯಾಚುರಲ್‌ ಇಕೋ ವಾಟರ್‌ ಸಿಸ್ಟಂನ ವೀರೇಶ ಬಣಗಾರ, ನಿಸಾರ್‌ ಪಾನವಾಲೆ ಅವರಿಗೆ ಸೂಚನೆ ನೀಡಿದರು. ತಹಸೀಲ್ದಾರ್‌ ಗಂಗಪ್ಪ.ಎಂ, ತಾಪಂ ಇಒ ಚನ್ನಬಸಪ್ಪ ಹಾವಣಗಿ, ಎಂಜನಿಯರ್‌ ಎನ್‌.ಎಂ.ಪಾಟೀಲ, ಸತೀಶ ಮೊಗವೀರ್‌ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ