ಹಾವೇರಿ: ರೈಲ್ವೆ ಬ್ರಿಡ್ಜ್ ಕಾಮಗಾರಿಗಾಗಿ ಕೋಳೂರ ಗ್ರಾ.ಪಂ. ಸದಸ್ಯರು ಕೆರೆ ಮಣ್ಣನ್ನು ಮಾರಿದ್ದಾರೆ ಎಂದು ಆರೋಪಿಸಿ ಕೋಳೂರ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ಬುಧವಾರ ಬ್ರಿಡ್ಜ್ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಬಂದು ಪ್ರತಿಭಟನೆ ಆರಂಭಿಸಿದ ಗ್ರಾಮಸ್ಥರು, ಕೋಳೂರ ಕೆರೆಯನ್ನು ಹೂಳೆತ್ತುವ ನೆಪದಲ್ಲಿ ಗ್ರಾ.ಪಂ.ನ ಮೂವರು ಸದಸ್ಯರು ಗುತ್ತಿಗೆದಾರರಿಂದ ವೈಯಕ್ತಿಕವಾಗಿ ಹಣ ಪಡೆದಿದ್ದಾರೆ ಎಂದು ದೂರಿದರು.
ಗ್ರಾ.ಪಂ. ಸದಸ್ಯರು ವೈಯಕ್ತಿಕವಾಗಿ ದುಡ್ಡು ಪಡೆದಿದ್ದಾರೆ ಎಂಬ ಸುದ್ದಿ ಗ್ರಾಮದಲ್ಲಿ ಹಬ್ಬುತ್ತಿದ್ದಂತೆ ಊರಿನ ಗ್ರಾಮದೇವತೆ ಜಾತ್ರೆಗೂ 1.05 ಲಕ್ಷ ರೂ. ಹಣವನ್ನು ಕೊಟ್ಟು ಕೆರೆ ಮಣ್ಣನ್ನು ರೈಲ್ವೆ ಬ್ರಿಡ್ಜ್ ಕೆಲಸಕ್ಕೆ ಬಳಸಿಕೊಳ್ಳಲು ಆರಂಭಿಸಿದ್ದರು.
ಗ್ರಾ.ಪಂ. ಸದಸ್ಯರಿಗೆ ಹಣ ಕೊಟ್ಟು ಕೆರೆ ಹೂಳನ್ನು ಆಳವಾಗಿ ಕೊರೆದ ಕಾರಣಕ್ಕೆ ಗ್ರಾಮಸ್ಥರೊಬ್ಬರ ಹೊಲದ ಒಡ್ಡಿಗೆ ಧಕ್ಕೆಯಾಗಲಿದೆ ಎನ್ನುವ ಆರೋಪ ಮಾಡಿದ್ದಾರೆ. ಅನಗತ್ಯವಾಗಿ ಬ್ರಿಡ್ಜ್ ಕೆಲಸಕ್ಕೆ ತೊಂದರೆ ಕೊಡುತ್ತಿದ್ದಾರೆ ಎನ್ನುವ ಸುದ್ದಿ ತಿಳಿದ ಉಪ ತಹಸೀಲ್ದಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿ-ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಕಾರಣಕ್ಕೆ ಗ್ರಾಮಸ್ಥರು ಪ್ರತಿಭಟನೆ ಸ್ಥಗಿತಗೊಳಿಸಿದ್ದಾರೆ.