ಆ್ಯಪ್ನಗರ

ಸೈನಿಕ ಹುಳು ಬಾಧೆ ತಡೆಗೆ ರೈತರಿಗೆ ಸಲಹೆ

ರಾಣೇಬೆನ್ನೂರ :ತಾಲೂಕಿನ ಮೂರು ಹೋಬಳಿಗಳ ವ್ಯಾಪ್ತಿಯಲ್ಲಿ ವಿದೇಶಿ ಫಾಲ್‌ ಆರ್ಮಿವರ್ಮ ಸೈನಿಕ ಹುಳುವಿನ ಹೊಸ ಪ್ರಭೇದದ ಬಾಧೆ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯು ಹುಳುವಿನ ಸ್ವರೂಪ ಹಾಗೂ ಅದರ ಹಾವಳಿ ತಡೆಗಟ್ಟಲು ರೈತರಿಗೆ ಅಗತ್ಯ ಸಲಹೆಗಳನ್ನು ನೀಡಿದೆ.

Vijaya Karnataka 17 Sep 2018, 5:00 am
ರಾಣೇಬೆನ್ನೂರ :ತಾಲೂಕಿನ ಮೂರು ಹೋಬಳಿಗಳ ವ್ಯಾಪ್ತಿಯಲ್ಲಿ ವಿದೇಶಿ ಫಾಲ್‌ ಆರ್ಮಿವರ್ಮ ಸೈನಿಕ ಹುಳುವಿನ ಹೊಸ ಪ್ರಭೇದದ ಬಾಧೆ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯು ಹುಳುವಿನ ಸ್ವರೂಪ ಹಾಗೂ ಅದರ ಹಾವಳಿ ತಡೆಗಟ್ಟಲು ರೈತರಿಗೆ ಅಗತ್ಯ ಸಲಹೆಗಳನ್ನು ನೀಡಿದೆ.
Vijaya Karnataka Web advice on farmers for the prevention of soldier
ಸೈನಿಕ ಹುಳು ಬಾಧೆ ತಡೆಗೆ ರೈತರಿಗೆ ಸಲಹೆ


ಸೈನಿಕ ಹುಳುವಿನ ಮಾಹಿತಿ:

ಸೈನಿಕ ಹುಳುವಿನ ಪತಂಗವು ರಾತ್ರಿಯ ವೇಳೆ ಚಟುವಟಿಕೆಯಿಂದ ಕೂಡಿದ್ದು ಬೂದು ಮತ್ತು ಕಂದು ಬಣ್ಣದ್ದಾಗಿರುತ್ತದೆ. ಹಿಂದಿನ ರೆಕ್ಕೆಗಳು ಬೆಳ್ಳಿ ಬಿಳಿ ಬಣ್ಣದಿಂದ ಕೂಡಿದ್ದು ಸಣ್ಣದಾದ ಕಪ್ಪು ಗೆರೆಯು ರೆಕ್ಕೆಯ ಅಂಚಿನಲ್ಲಿರುತ್ತದೆ. ಪತಂಗದ ಜೀವನ ಅವಧಿಯು 17-21 ದಿನಗಳಾಗಿರುತ್ತದೆ. ಒಂದು ಹೆಣ್ಣು ಪತಂಗವು 1500-2000 ಮೊಟ್ಟೆಗಳನ್ನು ಗುಂಪು ಗುಂಪಾಗಿ ಪ್ರತಿ ಗುಂಪಿನಲ್ಲಿ 100-200 ಮೊಟ್ಟೆಗಳನ್ನು ಇಡುತ್ತದೆ. 2-3 ದಿನಗಳಲ್ಲಿ ಮೊಟ್ಟೆಯಿಂದ ಮರಿಗಳು ಹೊರಬರುತ್ತವೆ. ಮರಿ ಹುಳುಗಳು ಕಪ್ಪು ಬಣ್ಣದ ತಲೆಯನ್ನು ಹೊಂದಿದ್ದು ಹಸಿರಾಗಿರುತ್ತವೆ. ಸಂಪೂರ್ಣವಾಗಿ ಬೆಳೆದ ಹುಳುಗಳು ಕಂದು ಬಣ್ಣದಿದ್ದು ತಲೆಯ ಮೇಲೆ ‰‰‰ ಆಕಾರದ ಗುಳಿ ಇರುತ್ತದೆ. ಮತ್ತು ಹುಳುವಿನ ಕೊನೆಯ ಸೆಗ್‌ಮೆಂಟನಲ್ಲಿ ನಾಲ್ಕು ಕಪ್ಪು ಚುಕ್ಕೆಗಳು ಸಮಾನಾಂತರದಲ್ಲಿ ಇರುತ್ತವೆ. ಹುಳುವಿನ ಅವಧಿಯು 14 (ಬೇಸಿಗೆಯಲ್ಲಿ) ರಿಂದ 30 (ಚಳಿಗಾಲದಲ್ಲಿ) ದಿನಗಳಾಗಿದ್ದು ನಂತರ ಕೋಶಾವಸ್ಥೆಗೆ ಹೋಗುತ್ತವೆ. ಕೋಶಾವಸ್ಥೆಯಲ್ಲಿ ಹುಳುಗಳು ಮಣ್ಣಿನಲ್ಲಿ 2-8 ಸೆಂಮೀ ಆಳದಲ್ಲಿ ಇರುತ್ತವೆ. ಕೋಶಾವಸ್ಥೆಯು 8-9 ದಿನಗಳ (ಬೇಸಿಗೆಯಲ್ಲಿ) 20-30 ದಿನಗಳು (ಚಳಿಗಾಲದಲ್ಲಿ) ಅವಧಿಯಾಗಿರುತ್ತದೆ. ಹೊಟ್ಟೆಯಿಂದ ಹೊರಬಂದ ಮರಿಹುಳುಗಳು ಮೊದಲು ಎಲೆಗಳನ್ನು ಕೆರೆದು ತಿನ್ನುತ್ತವೆ. ನಂತರ ಕಾಂಡ ಕೊರೆಯುವ ಕೀಟದಂತೆ ಸುಳಿಗಳಲ್ಲಿ ಸಣ್ಣ ಸಣ್ಣ ರಂದ್ರಗಳನ್ನ ಮಾಡಿ ಎಲೆಗಳನ್ನು ತಿಂದು ನಾಶಪಡಿಸುತ್ತವೆ.

ಹತೋಟಿ ಕ್ರಮಗಳು:

ವ್ಯಾಪಕವಾಗಿ ಪೀಡೆ ಸಮೀಕ್ಷೆಯನ್ನು ಕೈಗೊಂಡು, ಕೀಟದ ಉಪಸ್ಥಿತಿ ಮತ್ತು ಹರಡುವಿಕೆಯ ಬಗ್ಗೆ ನಿಗಾವಹಿಸಬೇಕು. ಗುಂಪಾಗಿ ಇಟ್ಟಿರುವ ಮೊಟ್ಟೆ ಹಾಗೂ ಮರಿಹುಳುಗಳನ್ನು ಕೈಯಿಂದ ಆಯ್ದು ನಾಶ ಪಡಿಸಬೇಕು. ತತ್ತಿ ಪರಾವಲಂಬಿ ಕೀಟಗಳಾದ ಟ್ರೈಕೋಗ್ರಾಮ್‌ ಮತ್ತು ಟೆಲಿಮೊನಾಸ್‌ಗಳನ್ನು ಬಿಡುಗಡೆಗೊಳಿಸಿ ಕೀಟದ ತತ್ತಿಗಳನ್ನು ನಾಶಪಡಿಸುತ್ತದೆ. ಕೀಟ ಬಾಧೆ ತೀವ್ರತೆ ಕಡಿಮೆ ಇದ್ದಾಗ ಅಥವಾ ಮರಿಹುಳುಗಳ ನಿರ್ವಹಣೆಗೆ ಬೇವಿನ ಮೂಲ ಕೀಟನಾಶಕವಾದ ನಿಮೋನಿಯಾ ರಿಲೇ ಶಿಲೀಂಧ್ರವನ್ನು 2 ಗ್ರಾಂ ಪ್ರತಿ ಲೀ. ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. ಕೀಟದ ತೀವ್ರತೆ ಹೆಚ್ಚಾದರೆ ಅಥವಾ ಬೆಳೆದ ಹುಳುಗಳನ್ನು ಹತೋಟಿಯಲ್ಲಿಡಲು ಕೀಟನಾಶಕಗಳಾದ ಇಮಾಮೆಕ್ಟಿನ್‌ ಬೆಂಜೋಯೇಟ್‌ ಶೇ.5 ಎಸ್‌.ಜಿ 0.4 ಗ್ರಾಂ/ಲೀ, ಥಯಾಮೆಥೋಕ್ಸಿಮ್‌ ಶೇ.12.6 ಮತ್ತು ಲಾಮ್ಡಸಹಲೋಥ್ರಿನ್‌ ಶೇ. 9.5, ಝೆಡ್‌.ಸಿ 0.5 ಗ್ರಾಂ/ಲೀ ಬಳಸಿ ಕೀಟವನ್ನು ಹತೋಟಿ ಮಾಡಬಹುದು.

ಪಾಷಾಣ ತಯಾರಿಸಲು ಬೇಕಾಗುವ ಸಾಮಗ್ರಿಗಳು:

ಗೋಧಿ ಮತ್ತು ಬತ್ತದ ತೌಡು 20 ಕೆ.ಜಿ., ಮೋನೋಕ್ರೋಟೋಫಾಸ್‌ ಅಥವಾ 36 ಎಸ್‌.ಎಲ್‌ ಥೈಯೋಡಿಕಾರ್ಬ 75 ಡಬ್ಲು.ಪಿ 250 ಮಿ.ಲೀ., ಬೆಲ್ಲ 2 ಕೆಜಿ, ನೀರು 5-8 ಲೀ. ಬೇಕಾಗುತ್ತದೆ.

ತಯಾರಿಸುವ ವಿಧಾನ:

ಬೆಲ್ಲವನ್ನು ಕುಟ್ಟಿ ಸಣ್ಣಗೆ ಪುಡಿ ಮಾಡಿ ನೀರು ಥೈಯೋಡಿಕಾರ್ಬ 75 ಡಬ್ಲ್ಯು.ಪಿ. (200 ಗ್ರಾಂ) ಅಥವಾ ಮೋನೋಕ್ರೋಟೋಫಾಸ್‌ 36 ಎಸ್‌.ಎಲ್‌ (250 ಮಿ.ಲಿ) ಸೇರಿ ಬೆಲ್ಲ ಪೂರ್ತಿ ಕರಗುವವರೆಗೂ ಚೆನ್ನಾಗಿ ಮಿಶ್ರ ಮಾಡಿ. ಈ ಮಿಶ್ರಣಕ್ಕೆ 20 ಕೆ.ಜಿ ಗೋಧಿ ಅಥವಾ ಅಕ್ಕಿ ತೌಡು ಸೇರಿಸಿ ತಂಬಿಟ್ಟು ಹದಕ್ಕೆ ಕಲಸಿ ಗಾಳಿಯಾಡದ ಚೀಲದಲ್ಲಿ ಅಥವಾ ಡ್ರಮ್ಮಿನಲ್ಲಿ 24 ಗಂಟೆಗಳ ಕಾಲ ಕಳಿಯಲು ಬಿಡಬೇಕು. ಈ ರೀತಿ ತಯಾರಿಸಿದ ವಿಷ ಪಾಶಾಣ ಆಹಾರವನ್ನು ಸಂಜೆ 5ರ ನಂತರ ಪ್ರತಿ ಹೆಕ್ಟೇರಿಗೆ 50 ಕೆ.ಜಿ ಯಂತೆ ಸುಳಿ ಹಾಗೂ ಎಲೆಗಳ ಮೇಲೆ ಬೀಳುವಂತೆ ಸಿಂಪಡಿಸಬೇಕು. ರೈತರು ಹೆಚ್ಚಿನ ಮಾಹಿತಿಗೆ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಕಛೇರಿ ಅಥವಾ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಜಿ.ಎಂ.ಬತ್ತಿಕೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ