ಸವಣೂರು:ತಾಲೂಕಿನಲ್ಲಿಯೇ ದೊಡ್ಡ ಗ್ರಾಮವಾದ ಹುರಳಿಕುಪ್ಪಿಯಲ್ಲಿ ಆರಂಭವಾಗುತ್ತಿರುವ ನೂತನ ಆರೋಗ್ಯ ವಿಸ್ತರಣಾ ಚಿಕಿತ್ಸಾಲಯ ಕೇಂದ್ರದ ಸದುಪಯೋಗವನ್ನು ಹುರಳಿಕುಪ್ಪಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ಮಂಗಳವಾರ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಹುರಳಿಕುಪ್ಪಿ ಗ್ರಾ.ಪಂ. ಹಾಗೂ ಕಳಸೂರ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಹುರಳಿಕುಪ್ಪಿ ಆರೋಗ್ಯ ವಿಸ್ತರಣಾ ಚಿಕಿತ್ಸಾಲಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಹುರಳಿಕುಪ್ಪಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಗಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆಯಾಗಿತ್ತು. ಆದೇ ರೀತಿ 2013ರಲ್ಲಿ ಪ್ರಾಥಮಿಕ ಕೇಂದ್ರಕ್ಕಾಗಿ ನಬಾರ್ಡ್ ಆರ್.ಐ.ಡಿ.ಎಫ್ ಯೋಜನೆಯಲ್ಲಿ ಸುಂದರ ಕಟ್ಟಡವು ಕೂಡಾ ನಿರ್ಮಾಣಗೊಂಡಿತು. ಆದರೆ ಹೊಸ ಆಸ್ಪತ್ರೆ ಮಂಜೂರಿ ಅವಕಾಶವಿಲ್ಲದ ಕಾರಣದಿಂದ ಕಳಸೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಆರೋಗ್ಯ ವಿಸ್ತರಣಾ ಚಿಕಿತ್ಸಾಲಯ ಸದ್ಯ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಆರೋಗ್ಯ ವಿಸ್ತರಣಾ ಚಿಕಿತ್ಸಾಲಯಕ್ಕೆ ರಸ್ತೆ, ಕಂಪೌಂಡ್ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸುವದರ ಜೊತೆಗೆ ಪೂರ್ಣ ಪ್ರಮಾಣದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು.
ಅಧ್ಯಕ್ಷ ತೆ ವಹಿಸಿದ್ದ ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ಹುರಳಿಕುಪ್ಪಿ ಗ್ರಾಮಸ್ಥರ ಬೇಡಿಕೆಯಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೊದಲು ಮಂಜೂರಿ ನೀಡಿದ್ದರಿಂದ 2011-12 ನಬಾರ್ಡ್ ಆರ್.ಐ.ಡಿ.ಎಫ್ ಯೋಜನೆಯಲ್ಲಿ ಅನುದಾನವನ್ನು ಪಡೆದುಕೊಂಡು 2013ರಲ್ಲಿ ಕಟ್ಟಡ ಪೂರ್ಣಗೊಂಡಿತು. ಆದರೆ ನಂತರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ರದ್ದಾಗಿದ್ದರಿಂದ ಆರೋಗ್ಯ ಸೇವೆ ಪ್ರಾರಂಭವಾಗಲು ಕುಂಠಿತಗೊಂಡಿತು. ಈ ಕುರಿತು ಆರೋಗ್ಯ ಸಚಿವರಿಗೆ ಹಲವಾರು ಬಾರಿ ಪತ್ರವನ್ನು ನೀಡಿದ್ದೇ ಮತ್ತು ಗ್ರಾಮಸ್ಥರು, ರೈತ ಮುಖಂಡರು ನಡೆಸಿದ ಹೋರಾಟ ನಂತರ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಹರಿಸಿದರ ಪರಿಣಾಮ ಗ್ರಾಮದಲ್ಲಿ ಚಿಕಿತ್ಸಾಲಯ ಚಟುವಟಿಕೆ ಪ್ರಾರಂಭವಾಗಲಿ ಎಂದು ಆರೋಗ್ಯ ವಿಸ್ತರಣಾ ಚಿಕಿತ್ಸಾಲಯವನ್ನು ಆರಂಭಿಸಲಾಗಿದೆ ಎಂದರು.
ಹುರಳಿಕುಪ್ಪಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಾಗಿರುವ ಕಟ್ಟಡ ವ್ಯವಸ್ಥೆ ಇದೆ. ಆದ್ದರಿಂದ 2018-19ನೇ ಸಾಲಿಗೆ ನೀಡುವ ಹೊಸ ಪಿ.ಎಚ್.ಸಿ ಕೇಂದ್ರವನ್ನು ಹುರಳಿಕುಪ್ಪಿಗೆ ಮಂಜೂರಿ ಪಡೆದುಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನಿಸುವುದಾಗಿ ತಿಳಿಸಿದ ಶಾಸಕ ಬೊಮ್ಮಾಯಿ, ಹುರಳಿಕುಪ್ಪಿ ಗ್ರಾಮದಲ್ಲಿ ಆರೋಗ್ಯ ಸೇವೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಲಭ್ಯವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷ ನಿಂಗಪ್ಪ ತಿಪ್ಪಕ್ಕನವರ, ಉಪಾಧ್ಯಕ್ಷ ನಿಂಗಪ್ಪ ಯರೇಶೀಮಿ, ತಾ.ಪಂ.ಸದಸ್ಯೆ ಸವಿತಾ ಬಿಜ್ಜೂರ, ಎಪಿಎಂಸಿ ನಿರ್ದೇಶಕ ಪಾಂಡಪ್ಪ ತಿಪ್ಪಕ್ಕನವರ, ತಾಲೂಕಾ ಆರೋಗ್ಯಾಧಿಕಾರಿ ಡಾ.ಸುರೇಶ ಪೂಜಾರ, ಪ್ರಾಥಮಿಕ ಆರೋಗ್ಯಾಧಿಕಾರಿ ಡಾ.ಮಲ್ಲಿಕಾರ್ಜುನ ಸಿ.ಎಂ., ಸೇರಿದಂತೆ ಗ್ರಾ.ಪಂ.ಎಲ್ಲ ಸದಸ್ಯರು, ಗ್ರಾಮದ ಮುಖಂಡರು, ಗಣ್ಯರು, ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ ಬಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಭೋಜರಾಜ ಲಮಾಣಿ ಸ್ವಾಗತಿಸಿ, ವಂದಿಸಿದರು.