ಆ್ಯಪ್ನಗರ

ಬೇಸಿಗೆಯಲ್ಲೂ ನೀರು ಒದಗಿಸುವ ಪುರಾತನ ಬಾವಿ

ಕಾಕೋಳ: ಸತತ ಬರಗಾಲ ಹಾಗೂ ಬಿಸಲಿನ ಬೇಗೆಗೆ ಅಂತರ್ಜಲ ಮಟ್ಟ ಕುಸಿದು ಎಲ್ಲ ಕೆರೆ ಕಟ್ಟೆಗಳು ಖಾಲಿಯಾಗಿ ಬಣಗುಡುತ್ತಿದ್ದರೇ ಇಲ್ಲೊಂದು ಬಾವಿ ಮಾತ್ರ ಎಂತಹ ಬರಗಾಲಕ್ಕೂ ಜಗ್ಗದೆ ನಿರಂತರವಾಗಿ ನೀರನ್ನು ನೀಡುತ್ತಿದ್ದು ಇಲ್ಲಿನ ಜನರ ಪಾಲಿಗೆ ಸಂಜೀವಿನಿಯಾಗಿದೆ.

Vijaya Karnataka 5 Dec 2022, 9:39 pm
ಕಾಕೋಳ: ಸತತ ಬರಗಾಲ ಹಾಗೂ ಬಿಸಲಿನ ಬೇಗೆಗೆ ಅಂತರ್ಜಲ ಮಟ್ಟ ಕುಸಿದು ಎಲ್ಲ ಕೆರೆ ಕಟ್ಟೆಗಳು ಖಾಲಿಯಾಗಿ ಬಣಗುಡುತ್ತಿದ್ದರೇ ಇಲ್ಲೊಂದು ಬಾವಿ ಮಾತ್ರ ಎಂತಹ ಬರಗಾಲಕ್ಕೂ ಜಗ್ಗದೆ ನಿರಂತರವಾಗಿ ನೀರನ್ನು ನೀಡುತ್ತಿದ್ದು ಇಲ್ಲಿನ ಜನರ ಪಾಲಿಗೆ ಸಂಜೀವಿನಿಯಾಗಿದೆ.
Vijaya Karnataka Web HVR-25KLK01A


ಶತಮಾನಕ್ಕೂ ಹಳೆಯದಾದ ಬಾವಿಯನ್ನು ಕರಿಯಾಲ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಸೇರಿ ಸುಮಾರು ವರ್ಷಗಳ ಪರಿಶ್ರಮ ಪಟ್ಟು ಬಾವಿಯ ನಿರ್ಮಾಣ ಮಾಡಿದ್ದಾಗಿ ಕರಿಯಾಲ ಗ್ರಾಮದ ಹಿರಿಯರ ಅಭಿಪ್ರಾಯ. ಬಾವಿ ನಿರ್ಮಾಣವಾದ ದಿನದಿಂದ ಇಲ್ಲಿಯವರೆಗೂ ಒಂದು ಬಾರಿಯೂ ನೀರಿಲ್ಲದೇ ಒಣಗಿಲ್ಲ. ಬಾವಿಯಲ್ಲಿ ನಿರಂತರವಾಗಿ ನೀರು ಚಿಮ್ಮುತ್ತಿದ್ದು ಇಲ್ಲಿಯರೆಗೂ ಸುತ್ತಮುತ್ತ ಗ್ರಾಮದ ಜನರ ನೀರಿನ ಬವಣೆ ನೀಗಿಸುತ್ತಿದೆ.

ಬಾವಿ ಇರುವ ಜಾಗ ಹಿಂದೆ ದಟ್ಟವಾದ ಕಾಡು, ಬೆಟ್ಟಗುಡ್ಡಗಳಿಂದ ಆವೃತವಾಗಿತ್ತು. ಈ ಪ್ರದೇಶ ಸಂಪೂರ್ಣ ಜೌಗು ಪ್ರದೇಶವಾಗಿದ್ದರಿಂದ ಅತಿ ಹೆಚ್ಚು ನೀರು ನಿಲ್ಲುತ್ತಿತ್ತು. ಅಲ್ಲದೇ ಹಿಂದೆ ಈ ಭಾಗದಲ್ಲಿದ್ದ ಮಣಿಕಾಸುರ ಮತು ಮಲ್ಲಾಸುರ ಎಂಬ ರಾಕ್ಷ ಸರನ್ನು ದೇವತೆ ಗಂಗಮಾಳಮ್ಮ ಸಂಹಾರ ಮಾಡಿ ಗ್ರಾಮಸ್ಥರಿಗೆ ನೆಮ್ಮದಿ ಜೀವನ ನೀಡಿ ಇಲ್ಲೆ ನೆಲೆಸಿರುವ ಕಾರಣ ಬಾವಿಯಲ್ಲಿ ನಿರಂತರವಾಗಿ ನೀರು ದೊರೆಯುತ್ತಿದೆ ಎಂಬುದು ಗ್ರಾಮದ ಹಿರಿಯರ ಅಭಿಪ್ರಾಯ.

ನೀರಿನ ಅಕ್ಷ ಯ ಪಾತ್ರೆ: ಬೇಸಿಗೆ ಸಮಯದಲ್ಲಿ ನೀರಿನ ಅಭಾವ ಕಂಡಾಗ ಹಳ್ಳಿಯ ಜನರಿಗೆ ನೆನಪಾಗುವುದು ಕರಿಯಾಲ ಬಾವಿ. ಇದು ಸುಮಾರು 75 ಅಡಿ ಆಳ 35 ಅಡಿ ಅಗಲವಿದ್ದು ಸದಾ ಕಾಲ ನೀರು ತುಂಬಿತ್ತದೆ. ಈ ಬಾವಿಯ ಜಲದಿಂದ ಸುತ್ತಮುತ್ತಲಿನ ಕೊಳವೆ ಬಾವಿಗಳು ಸಮೃದ್ಧವಾಗಿ ನೀರನ್ನೊದಗಿಸುತ್ತಿವೆ. ಅಷ್ಟೇ ಅಲ್ಲದೇ ಬಾವಿಯ ಪಕ್ಕದಲ್ಲಿಯೇ ಬಸವಣ್ಣನ ಮೂರ್ತಿ ಮತ್ತು ಶಿವಲಿಂಗ ಇದ್ದು ಪ್ರತಿದಿನ ಇಲ್ಲಿ ಹಳ್ಳಿಯ ಜನರು ದೇವರಿಗೆ ಮತ್ತು ಬಾವಿಗೆ ಪೂಜೆ ಸಲ್ಲಿಸಿ ಹೋಗುತ್ತಾರೆ.

ವಿಶ್ರಾಂತಿ ಸ್ಥಳ: ಇಲ್ಲಿನ ಸುಕ್ಷೇತ್ರ ದೇವರಗುಡ್ಡದ ಮಾಲತೇಶ ದೇವಸ್ಥಾನಕ್ಕೆ ಪ್ರತಿ ಹುಣ್ಣಿಮೆಯಂದು ಹೋಗುವ ಭಕ್ತರು ಎತ್ತಿನ ಬಂಡಿ, ಪಾದಚಾರಿಗಳು, ವಾಹನಗಳಲ್ಲಿ ಬರುವ ಜನರು ಈ ಬಾವಿಯ ಹತ್ತಿರ ನಿಂತು ನೀರು ಕುಡಿದು ವಿಶ್ರಾಂತಿ ಪಡೆದುಕೊಂಡು ಹೋಗುತ್ತಾರೆ. ಅಲ್ಲದೇ ಸುತ್ತಮುತ್ತಲ ಗ್ರಾಮಗಳಾದ ಕರಿಯಾಲ, ಶಿಡಗನಾಳ, ದೇವರಗುಡ್ಡ ಮತ್ತು ಪಕ್ಕದ ತಾಂಡಾ ಜನರು ಅವಲಂಬನೆಯಾಗಿದ್ದಾರೆ.

ಅರಣ್ಯ ಇಲಾಖೆಯಿಂದ ಈ ಭಾಗದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಸಸಿಗಳನ್ನು ಹಚ್ಚಿ ಪ್ರವಾಸಿಗರಿಗೆ ಅನುಕೂಲವಾಗಲೆಂದು ಅಲ್ಲಿ ಪ್ಯಾರಾಗೊಲ ನಿರ್ಮಾಣ ಮಾಡಲಾಗಿದೆ. ಅಷ್ಟೇ ಅಲ್ಲದೇ ಗುಡ್ಡದ ಭಾಗದಲ್ಲಿ ಮಳೆಗಾಲದ ನೀರು ನಿಲ್ಲುವಂತೆ ಇಲಾಖೆ ಮತ್ತು ಗ್ರಾ.ಪಂ ಅವರ ಸಹಕಾರದಿಂದ ಇಂಗು ಗುಂಡಿಗಳನ್ನು ಮಾಡಿರುವುದರಿಂದ ಅಂತರ್ಜಲ ಹೆಚ್ಚಾಗಲು ಅನುಕೂಲವಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ