ಆ್ಯಪ್ನಗರ

ಬ್ಯಾಡಗಿ ಕೆರೆಗಳು ಭರಪೂರ, ರೈತರಿಗೆ ಸಂತಸ

ಗಣೇಶ ಅರ್ಕಾಚಾರಿ ಬ್ಯಾಡಗಿ: ಕಳೆದ ಹತ್ತು ದಿನಗಳಿಂದ ತಾಲೂಕಿನಲ್ಲಿ ಅಬ್ಬರಿಸಿದ ಮಳೆಗೆ ಖಾಲಿಯಾಗಿದ್ದ ತಾಲೂಕಿನ ಪ್ರಮುಖ ಕೆರೆಗಳು ಮೈದುಂಬಿ ನಳನಳಿಸುತ್ತಿವೆ.

Vijaya Karnataka 12 Aug 2019, 5:00 am
ಗಣೇಶ ಅರ್ಕಾಚಾರಿ ಬ್ಯಾಡಗಿ: ಕಳೆದ ಹತ್ತು ದಿನಗಳಿಂದ ತಾಲೂಕಿನಲ್ಲಿ ಅಬ್ಬರಿಸಿದ ಮಳೆಗೆ ಖಾಲಿಯಾಗಿದ್ದ ತಾಲೂಕಿನ ಪ್ರಮುಖ ಕೆರೆಗಳು ಮೈದುಂಬಿ ನಳನಳಿಸುತ್ತಿವೆ.
Vijaya Karnataka Web HVR-11BYD1B


ಕಳೆದ ಹತ್ತು ದಿನಗಳಿಂದ ಉತ್ತರ ಕರ್ನಾಟಕ ಭಾಗಕ್ಕೆ ವಿನಾಶಕಾರಿಯಾಗಿ ಪರಿಣಮಿಸಿದ ಮಹಾ ಮಳೆ ಎರಡು ದಿನಗಳಿಂದ ಬಿಡುವು ನೀಡಿದ್ದು, ಜನಜೀವನ ಸಹಜಸ್ಥಿತಿಯತ್ತ ಬರುತ್ತಿದೆ. ಆದರೆ, ನೆರೆ ಹಾನಿ ಜನರನ್ನು ಘಾಸಿಗೊಳಿಸಿದೆ. ಇನ್ನೊಂದೆಡೆ ತಾಲೂಕಿನ ಕೆರೆ ಕಟ್ಟೆಗಳು ತುಂಬಿದ್ದು ನೋವಲ್ಲೂ ಕೊಂಚ ಸಂತಸ ತಂದಿದೆ. ತಾಲೂಕಿನ ಆಣೂರ, ಹಿರೇನಂದಿಹಳ್ಳಿ, ಚಿನ್ನಿಕಟ್ಟಿ, ಬುಡಪನಹಳ್ಳಿ, ಕೆರವಡಿ, ಅಸುಂಡಿ ಕೆರೆಯಲ್ಲಿ ನೀರು ಬಂದಿದೆ.

ಆಣೂರ ಕೆರೆ ಶೇ.60 ನೀರು: ತಾಲೂಕಿನ ಪಾಲಿಗೆ ರೈತರ ಜೀವನಾಡಿಗಳಾಗಿರುವ ಪ್ರಮುಖ ಕೆರೆಗಳು ಭಾಗಶಃ ಭರ್ತಿಯಾಗಿವೆ. ನೀರು ತುಂಬಿಸುವ ಹೋರಾಟದ ಮೂಲಕ ಗಮನ ಸೆಳೆದಿದ್ದ ಆಣೂರ ಕೆರೆ ಈಗಾಗಲೇ ಶೇ.60 ರಷ್ಟು ತುಂಬಿದೆ. ಕೆರೆ ಪಾತ್ರದ ಸುತ್ತಮುತ್ತಲಿನ ಹತ್ತಾರು ಸಣ್ಣ ಪುಟ್ಟ ಕೆರೆಗಳು ತುಂಬಿದ್ದು ಗ್ರಾಮಸ್ಥರು ಹಾಗೂ ರೈತರಲ್ಲಿ ಖುಷಿ ಮೂಡಿಸಿದೆ. ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಕೂಡ ಹೆಚ್ಚಾಗಲಿದೆ ಎಂಬ ನಿರೀಕ್ಷೆ ಹುಟ್ಟು ಹಾಕಿದೆ.

ಅಸುಂಡಿ ಕೆರೆಗೆ ಮರು ಜೀವ: ಕ್ಷೇತ್ರದ ಅತೀ ದೊಡ್ಡ ಕೆರೆಯಾದ ಅಸುಂಡಿ ಕೆರೆ ಸಹ ಈಗಾಗಲೇ 200 ಎಕರೆಯಷ್ಟು ತುಂಬಿದ್ದು, ಅಕ್ಕಪಕ್ಕದ ಕೆರೆಗಳಿಗೆ ಮತ್ತು ಅಂತರ್ಜಲಕ್ಕೆ ಮತ್ತೆ ಜೀವ ನೀಡಿದೆ. ಹಲವಾರು ವರ್ಷಗಳಿಂದ ಒಣಗಿದ್ದ ಕೆರೆ ಈಗ ನೀರಿನಿಂದ ನಳನಳಿಸುತ್ತಿದೆ.

ದರ್ಶನ ನೀಡಿದ ಸೂರ್ಯ: ಹತ್ತು ದಿನಗಳಿಂದ ಮಾಯವಾದಂತೆ ಭಾಸವಾಗುತ್ತಿದ್ದ ಸೂರ್ಯ ಶನಿವಾರ ಹಾಗೂ ಭಾನುವಾರ ದರ್ಶನ ನೀಡಿದ್ದಾನೆ. ಆದರೆ, ಭಾರೀ ಮಳೆಗೆ ತಾಲೂಕಿನಲ್ಲಿ ಸುಮಾರು 500 ಕ್ಕೂ ಹೆಚ್ಚು ಕುಟುಂಬಗಳು ಮನೆ ಕಳೆದುಕೊಂಡು ಬೀದಿಗೆ ಬಂದು ನಿಂತಿವೆ. ಈ ಕುಟುಂಬಗಳಿಗೆ ಸೂರು, ಪರಿಹಾರ ನೀಡಬೇಕಿದೆ.

ತುಂಬಿದ ಕೆರೆಯ ಸೆಲ್ಫಿ ಕ್ರೇಜ್‌: ಮಹಾಮಳೆಗೆ ತಾಲೂಕಿನ ಆಣೂರ, ಹಿರೇನಂದಿಹಳ್ಳಿ, ಚಿನ್ನಿಕಟ್ಟಿ, ಬುಡಪನಹಳ್ಳಿ, ಕೆರವಡಿ, ಅಸುಂಡಿ ಕೆರೆಯಲ್ಲಿ ನೀರು ಬಂದಿದ್ದು, ರೈತರು, ಗ್ರಾಮಸ್ಥರು ಕೆರೆಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

-

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ