ರಾಣೇಬೆನ್ನೂರ: ಶಿಕ್ಷ ಣ ಸಂಸ್ಥೆಗಳಿಂದ ದೂರವಿರುವ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹೋಗಿ ಬರಲು ಬಸ್ ಸೌಲಭ್ಯ ಕಲ್ಪಿಸುವಂತೆ ಸ್ಥಳೀಯ ಶಾಸಕ ಮತ್ತು ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಸಾರಿಗೆ ಡಿಪೋ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಲ್ಲಿನ ತಾ.ಪಂ. ಸಭಾಭವನದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ತಾ.ಪಂ. ಅಧ್ಯಕ್ಷ ನೀಲಕಂಠಪ್ಪ ಕುಸಗೂರ ಬಿಸಿಎಂ ಇಲಾಖೆಯ ಮೆಟ್ರಿಕ್ ಪೂರ್ವ ಹಾಸ್ಟೆಲ್ ಸ್ಥಳಾಂತರ ಕುರಿತಂತೆ ಅಧಿಕಾರಿಗಳನ್ನು ಪ್ರಶ್ನಿಸಿದರಲ್ಲದೇ ಹೊಸ ಕಟ್ಟಡ ಶಿಕ್ಷ ಣ ಸಂಸ್ಥೆಗಳಿಗೆ ಸಾಕಷ್ಟು ದೂರವಿದ್ದು, ವಿದ್ಯಾರ್ಥಿಗಳಿಗೆ ಶಾಲೆಗಳಿಗೆ ಹೋಗಿ ಬರಲು ತೊಂದರೆಯಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು. ತಕ್ಷ ಣವೇ ಇದಕ್ಕೆ ಸ್ಪಂದಿಸಿದ ಕೆ.ಬಿ.ಕೋಳಿವಾಡ ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಅಧಿಕಾರಿಗೆ ಸೂಚಿಸಿದರು.
ತಾಲೂಕಿನಲ್ಲಿ ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಶೇ.41ರಷ್ಟು ಮಳೆ ಕಡಿಮೆಯಾಗಿದೆ. ಇದುವರೆಗೂ ಶೇ.36 ಬಿತ್ತನೆಯಾಗಿದ್ದು, ಎರಡು ದಿನಗಳಿಂದ ತುಂತುರು ಮಳೆಯಾಗುತ್ತಿರುವುದರಿಂದ ಬಿತ್ತನೆ ಕ್ಷೇತ್ರ ಶೇ.60 ತಲುಪುವ ಸಾಧ್ಯತೆಗಳಿವೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಫ್.ಎ.ಬಾಗವಾನ ಸಭೆಗೆ ಮಾಹಿತಿ ನೀಡಿದರು. ಬಿತ್ತಿದ ಪೀಕುಗಳು ಸರಿಯಾಗಿವೆ ಎಂದು ವಿಧಾನಸಭಾಧ್ಯಕ್ಷ ಕೋಳಿವಾಡ ಅಧಿಕಾರಿಯನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಕೃಷಿ ಅಧಿಕಾರಿ, ಸದ್ಯಕ್ಕೆ ವಿಷಮ ಪರಿಸ್ಥಿತಿಯಿದ್ದು, ಬಿತ್ತನೆ ಮಾಡಿರುವ ಪೀಕುಗಳ ಪರಿಸ್ಥಿತಿ ಅಷ್ಟೊಂದು ಸಮಾಧಾನಕರವಾಗಿಲ್ಲ. ಮುಂದಿನ ದಿನಗಳಲ್ಲಿ ಮಳೆಯಾದರೆ ಪರಿಸ್ಥಿತಿಯಲ್ಲಿ ಸುಧಾರಣೆ ಸಾಧ್ಯ ಎಂದರು.
ನಗರದಲ್ಲಿ ಕೆಲವು ಅಂಗನವಾಡಿ ಕೇಂದ್ರಗಳಿಗೆ ಕಟ್ಟಡಗಳಿಲ್ಲ, ಅವುಗಳಿಗೆ ಸರಕಾರಿ ಕನ್ನಡ ಶಾಲೆಗಳಲ್ಲಿ ಅವಕಾಶ ಒದಗಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರಕಾಶ ಜೈನ್ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೋಳಿವಾಡ ಮಕ್ಕಳ ಸಂಖ್ಯೆ ಕಡಿಮೆಯಿರುವ ಶಾಲೆಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ನಡೆಸಲು ಕ್ರಮ ಜರುಗಿಸುವಂತೆ ಕ್ಷೇತ್ರ ಶಿಕ್ಷ ಣಾಧಿಕಾರಿ ಹಾಗೂ ಸಿಡಿಪಿಒಗೆ ಸೂಚಿಸಿದರು.
ನಗರದಲ್ಲಿ ಅಂಬೇಡ್ಕರ್ ಭವನ ಕಟ್ಟಡ ನಿರ್ಮಿಸಲು ಐದು ವರ್ಷಗಳ ಹಿಂದೆಯೇ ನಿರ್ಮಿತಿ ಕೇಂದ್ರಕ್ಕೆ ಹಣ ಸಂದಾಯ ಮಾಡಿದ್ದರೂ, ಇದುವರೆಗೂ ಅದರ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರಕಾಶ ಜೈನ್ ದೂರಿದರಲ್ಲದೇ ಇದಕ್ಕಾಗಿ 75 ಲಕ್ಷ ರೂ. ಹಣವನ್ನು ಸಹ ತುಂಬಲಾಗಿದೆ ಎಂದರು.
ಇದಕ್ಕೆ ಉತ್ತರಿಸಿದ ನಿರ್ಮಿತಿ ಕೇಂದ್ರದ ಅಧಿಕಾರಿಯು, ಒಂದು ವರ್ಷದ ಹಿಂದೆಯಷ್ಟೇ ನಮ್ಮ ಇಲಾಖೆಗೆ ಇದರ ಜವಾಬ್ದಾರಿ ವಹಿಸಲಾಗಿದೆ. ಮೊದಲು ಇದನ್ನು ಲ್ಯಾಂಡ್ ಆರ್ಮಿಗೆ ವಹಿಸಲಾಗಿತ್ತು. ಆದರೆ ಮಾರುತಿನಗರದಲ್ಲಿ ಜಾಗದ ಸಮಸ್ಯೆಯಿಂದಾಗಿ ಪ್ರಕರಣ ನನೆಗುದಿಗೆ ಬಿದ್ದಿತ್ತು. ನಂತರ ಅದನ್ನು ಸಿದ್ಧಾರೂಢನಗರಕ್ಕೆ ವರ್ಗಾಯಿಸಿ ಅಲ್ಲಿ ಭೂಮಿಪೂಜೆ ಕೂಡ ನೆರವೇರಿಸಲಾಗಿದೆ ಎಂದರು.
ಆದರೆ ಸಭೆಯಲ್ಲಿದ್ದ ಲ್ಯಾಂಡ್ ಆರ್ಮಿ ಅಧಿಕಾರಿಯು ತಮಗೆ ನಗರಸಭೆಯಿಂದ ಯಾವುದೇ ಹಣ ನೀಡಿಲ್ಲ ಎಂದರು. ಆಗ ತಕ್ಷ ಣ ಎದ್ದುನಿಂತ ಪ್ರಕಾಶ ಜೈನ್ ಹಣವನ್ನು ನಿರ್ಮಿತಿ ಕೇಂದ್ರದ ಅಧ್ಯಕ್ಷ ರಾದ ಜಿಲ್ಲಾಧಿಕಾರಿ ಹೆಸರಿನಲ್ಲಿ ಜಮಾ ಮಾಡಲಾಗಿದೆ ಎಂದರು.
ಶುದ್ಧ ನೀರಿನ ಘಟಕ: ತಾಲೂಕಿನ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯಾ? ಯಾವುದಾರೂ ಬಂದ್ ಆಗಿದೆಯಾ ಎಂದು ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಗ್ರಾಮೀಣ ನೀರು ಪೂರೈಕೆ ಅಧಿಕಾರಿಯನ್ನು ಪ್ರಶ್ನಿಸಿದರು.
ಒಂದೆರಡು ಸಣ್ಣಪುಟ್ಟ ತೊಂದರೆ ಬಿಟ್ಟರೆ ಎಲ್ಲ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ವಡೇರಾಯನಹಳ್ಳಿಯಲ್ಲಿ ನೀರಿನ ಸಮಸ್ಯೆಯಿದ್ದು, ಅಲ್ಲಿ ನೀರಿನ ಸೆಲೆಯೂ ಇಲ್ಲ. ದುರ್ಗಾ ಕಾಲೊನಿಯಲ್ಲಿ ಬೋರ್ ಹಾಕಿಸಿ ಅಲ್ಲಿಗೆ ನೀರು ಪೂರೈಸಬೇಕು. ಆದರೆ ಗ್ರಾಮ ಪಂಚಾಯಿತಿಯವರು ಅದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕರೂರ ಕ್ಷೇತ್ರದ ಜಿ.ಪಂ. ಸದಸ್ಯೆ ಮಂಗಳಗೌರಿ ಪೂಜಾರ ದೂರಿದರು. ಆಗ ಚರ್ಚೆಯಲ್ಲಿ ಮಧ್ಯ ಪ್ರವೇಶಿಸಿದ ಕೋಳಿವಾಡ, ಭೂಗರ್ಭ ಶಾಸ್ತ್ರಜ್ಞರಿಗೆ ಹೇಳಿ ಅಗತ್ಯ ಕ್ರಮ ಜರುಗಿಸುವಂತೆ ಗ್ರಾಮೀಣ ನೀರು ಪೂರೈಕೆ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.
ತಾಲೂಕಿನಲ್ಲಿ ಎಷ್ಟು ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶೌಚಾಲಯಗಳಿವೆ? ಶಿಥಿಲ ಶಾಲಾ ಕೊಠಡಿಗಳೆಷ್ಟು? ಬಿಸಿಯೂಟ ಸಮರ್ಪಕವಾಗಿ ಪೂರೈಸಲಾಗುತ್ತಿದೆಯೇ ? ಮುಂತಾದ ಅಂಶಗಳನ್ನು ಒಳಗೊಂಡ ಒಟ್ಟಾರೆ ಶಾಲೆಗಳ ಪರಿಸ್ಥಿತಿ ಕುರಿತು ಮುಂದಿನ ಸಭೆಯಲ್ಲಿ ತಮಗೆ ಪೂರ್ಣ ಮಾಹಿತಿ ನೀಡುವಂತೆ ಕ್ಷೇತ್ರ ಶಿಕ್ಷ ಣಾಧಿಕಾರಿಗೆ ವಿಧಾನಸಭಾಧ್ಯಕ್ಷ ಕೋಳಿವಾಡ ಸೂಚನೆ ನೀಡಿದರು.
ತಾ.ಪಂ. ಅಧ್ಯಕ್ಷ ನೀಲಕಂಠಪ್ಪ ಕುಸಗೂರ, ಜಿ.ಪಂ. ಸದಸ್ಯರುಗಳಾದ ಮಾರುತಿ ರಾಠೋಡ, ಶಿವಾನಂದ ಕನ್ನಪ್ಪಳವರ, ಗಿರಿಜಮ್ಮ ಬ್ಯಾಲದಹಳ್ಳಿ, ಗದಿಗೆವ್ವ ದೇಸಾಯಿ, ತಾಪಂ ಉಪಾಧ್ಯಕ್ಷೆ ಚೈತ್ರಾ ಮಾಗನೂರ, ಸ್ಥಾಯಿ ಸಮಿತಿ ಅಧ್ಯಕ್ಷ ಭರಮಪ್ಪ ಕೊರಕಲಿ, ನಗರಸಭೆ ಪೌರಾಯುಕ್ತ ಡಾ.ಮಹಾಂತೇಶ ಎನ್., ಇಒ ಡಾ.ಬಸವರಾಜ, ಕೆಡಿಪಿ ಸದಸ್ಯರುಗಳಾದ ಹನುಮಂತಪ್ಪ ಚಳಗೇರಿ, ರುದ್ರಗೌಡ್ರ ದೊಡ್ಡಗೌಡ್ರ, ವಿಶ್ವನಾಥ ತಡಕನಹಳ್ಳಿ, ನೂರಜಹಾನ್ ನಂದ್ಯಾಲ, ಕೃಷ್ಣಪ್ಪ ಲಮಾಣಿ ಪಾಲ್ಗೊಂಡಿದ್ದರು.
ತಡವಾಗಿ ಆರಂಭ: ಬೆಳಗ್ಗೆ 10.30ಕ್ಕೆ ಸಭೆ ನಿಗದಿಯಾಗಿದ್ದರೂ, ಅದು ಆರಂಭವಾದಾಗ ಮಧ್ಯಾಹ್ನ 1.15 ಆಗಿತ್ತು. ಸಭೆ ನಡೆಸಬೇಕಾಗಿದ್ದ ವಿಧಾನಸಭಾಧ್ಯಕ್ಷ ರು ಬ್ಯಾಡಗಿಯಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಹೋಗಿ ಬಂದ ಕಾರಣ ಸಭೆ ವಿಳಂಬವಾಗಿ ಆರಂಭವಾಯಿತು. ಹೀಗಾಗಿ ಅಧಿಕಾರಿಗಳು ಸುಮಾರು 2.45 ತಾಸು ಕಾಯಬೇಕಾಯಿತು.
ಗೈರು ಹಾಜರಾದ ಅಧಿಕಾರಿಗೆ ನೋಟಿಸ್: ಸಭೆಗೆ ಗೈರುಹಾಜರಾದ ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ವಿಧಾನಸಭಾಧ್ಯಕ್ಷ ರು ತಾ.ಪಂ. ಸಿಬ್ಬಂದಿಗೆ ಸೂಚಿಸಿದರು.
ಅರ್ಧಕ್ಕೇ ಹೊರ ನಡೆದ ಕೋಳಿವಾಡ: ಬೆಂಗಳೂರಿಗೆ ಹೋಗುವ ಅವಸರದಲ್ಲಿದ್ದ ವಿಧಾನಸಭಾಧ್ಯಕ್ಷ ಕೋಳಿವಾಡ ಭೋಜನ ಸೇವಿಸಿದ ತಕ್ಷ ಣ ಸಭೆಯಿಂದ ನಿರ್ಗಮಿಸಿದರು. ನಂತರ ತಾ.ಪಂ. ಅಧ್ಯಕ್ಷ ನೀಲಕಂಠಪ್ಪ ಕುಸಗೂರ ಸಭೆಯನ್ನು ಮುಂದುವರೆಸಿದರು.