ಆ್ಯಪ್ನಗರ

ತಾಯಿಯಿಂದಲೇ ಆಘಾತಕಾರಿ ಕೃತ್ಯ: ಹಾವೇರಿಯಲ್ಲಿ ಕೂಡಿ ಹಾಕಿದ ಮಕ್ಕಳ ರಕ್ಷಣೆ!

ಮಕ್ಕಳು ಹಸಿವು ತಾಳಲಾರದೇ ಪ್ರತಿದಿನ ಬಾಗಿಲು ಬಡಿಯುವುದು, ಅಳುವುದು, ಕಿರಚಾಡುವುದು ಸಾಮಾನ್ಯವಾಗಿತ್ತು. ಮಕ್ಕಳ ಗೋಳನ್ನು ನೋಡಲಾಗದೇ ನೆರೆಹೊರೆಯ ಸಾರ್ವಜನಿಕರು ಶನಿವಾರ 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

Vijaya Karnataka 5 Dec 2021, 12:09 pm
ಹಾವೇರಿ: ಪುಟ್ಟ ಪುಟ್ಟ ಇಬ್ಬರು ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಿ, ಪ್ರತಿ ದಿನ ಕೆಲಸಕ್ಕೆ ಹೋಗುತ್ತಿದ್ದ ಹೆತ್ತ ತಾಯಿಗೆ ಛೀಮಾರಿ ಹಾಕಿ, ಮಕ್ಕಳನ್ನು ರಕ್ಷಿಸಿ, ಅವರನ್ನು ಜಿಲ್ಲಾಸ್ಪಂದನಾ ವಿಶೇಷ ದತ್ತು ಸ್ವೀಕಾರ ಕೇಂದ್ರದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡ ಘಟನೆ ಶನಿವಾರ ಪಟ್ಟಣದ ಮಂಗಳವಾರ ಪೇಟೆಯಲ್ಲಿ ನಡೆದಿದೆ.
Vijaya Karnataka Web ಮಕ್ಕಳ ರಕ್ಷಣೆ
ಸಾಂದರ್ಭಿಕ ಚಿತ್ರ


ಪಟ್ಟಣದ ಮಂಗಳವಾರ ಪೇಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶಾರದಾ ಕಮ್ಮಾರ ಎಂಬ ಮಹಿಳೆ ತಮ್ಮ 5 ವರ್ಷದ ಮಗಳು ಹಾಗೂ 3 ವರ್ಷದ ಮಗನನ್ನು 3-4 ತಿಂಗಳಿಂದ ಪ್ರತಿ ದಿನ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮನೆಯಲ್ಲಿ ಕೂಡಿ ಹಾಕಿ ಕೆಲಸಕ್ಕೆ ಹೋಗುತ್ತಿದ್ದರು. ಸ್ಥಳೀಯರು ಅವರ ನಡವಳಿಕೆಯನ್ನು ವಿರೋಧಿಸಿದರೆ ಜಗಳವಾಡುತ್ತಿದ್ದರು.

ಮಕ್ಕಳು ಹಸಿವು ತಾಳಲಾರದೇ ಪ್ರತಿದಿನ ಬಾಗಿಲು ಬಡಿಯುವುದು, ಅಳುವುದು, ಕಿರಚಾಡುವುದು ಸಾಮಾನ್ಯವಾಗಿತ್ತು. ಮಕ್ಕಳ ಗೋಳನ್ನು ನೋಡಲಾಗದೇ ನೆರೆಹೊರೆಯ ಸಾರ್ವಜನಿಕರು ಶನಿವಾರ 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಪೊಲೀಸರ ದೌರ್ಜನ್ಯಕ್ಕೆ ಕೈ ಕಳೆದುಕೊಂಡ ಆರೋಪಿ: ಮೂವರು ಕಾನ್‌ಸ್ಟೇಬಲ್‌ಗಳ ಅಮಾನತು
ತಕ್ಷಣ ಕಾರ್ಯಪ್ರವೃತ್ತರಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್‌ ಇಲಾಖೆ ಹಾಗೂ ಜಿಲ್ಲಾಮಕ್ಕಳ ರಕ್ಷಣಾ ಘಟಕದ ತಂಡದವರು ಸ್ಥಳಕ್ಕೆ ಆಗಮಿಸಿ ಮನೆಯಲ್ಲಿ ಕೂಡಿ ಹಾಕಿದ್ದ ಮಕ್ಕಳ ಮನವೊಲಿಸಿ ಕಿಟಕಿ ಬಾಗಿಲು ತೆರೆದು ಮಾತನಾಡಿಸಿದ್ದಾರೆ. ಈ ಸಂದರ್ಭದಲ್ಲಿ ಹೆಣ್ಣು ಮಗು ಮಾತನಾಡಿ, 'ಅಪ್ಪಾಜಿ ನಮ್ಮ ಜೊತೆ ಇರುವುದಿಲ್ಲ, ಮಮ್ಮಿ ಜೊತೆ ಮನೆಯಲ್ಲಿ ಇರುವ ಅಂಕಲ್‌ ಹೊಡೆಯುತ್ತಾರೆ. ತಮ್ಮನನ್ನು ಹಾಗೂ ನನ್ನನ್ನು ಮನೆಯಲ್ಲಿ ಕೂಡಿ ಹಾಕಿ ಹೋಗುತ್ತಾರೆ. ಈ ಕುರಿತು ಯಾರಿಗಾದರೂ ಏನಾದರೂ ಹೇಳಿದರೆ ಮತ್ತಷ್ಟು ಹಿಂಸೆ ನೀಡುತ್ತಾರೆ' ಎಂದು ಮಗು ಅಳುತ್ತಾ ಕಿಟಕಿ ಬಾಗಿಲು ಹಾಕಿಕೊಂಡಿತು.
ಅಪರೂಪಕ್ಕೆ ಮನೆಗೆ ಬಂದು ಪತ್ನಿಯ ಶೀಲ ಶಂಕಿಸಿ ಕೊಲೆಗೈದವನು ಆಂಧ್ರದಲ್ಲಿ ಬೀದಿ ಹೆಣವಾದ!
ಮಕ್ಕಳ ತಾಯಿ ಶಾರದಾ ಅವರಿಗೆ ಅಧಿಕಾರಿಗಳು ಕರೆ ಮಾಡಿ ವಿಚಾರಿಸಿದಾಗ, ಹಾರಿಕೆ ಉತ್ತರ ನೀಡಲು ಮುಂದಾದ ತಕ್ಷಣ ಎಎಸ್‌ಐ ಗೀತಾ ತಿರುಮಲೆ ತಕ್ಷಣ ಸ್ಥಳಕ್ಕೆ ಆಗಮಿಸಲು ಸೂಚಿಸಿದರು.

ಮನೆಗೆ ಆಗಮಿಸಿದ ಶಾರದಾ 'ನಾನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಲ್ಲಿ ಶಿಗ್ಗಾವಿ ತಾಲೂಕು ಹುಲಗೂರಿನಲ್ಲಿ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗುತ್ತೇನೆ. ಮನೆಯಲ್ಲಿರುವವರು ತಮ್ಮ ಪತಿಯೇ ಆಗಿದ್ದಾರೆ' ಎಂದು ಸಮಜಾಯಿಷಿ ನೀಡಲು ಮುಂದಾದರು. ಅಧಿಕಾರಿಗಳ ತಂಡ ಮಹಿಳೆಯನ್ನು ವಿಚಾರಿಸಿ ನಿಮ್ಮ ಪತಿಯನ್ನು ಕರೆಯಿಸಿ ಎಂದು ತಾಕೀತು ಮಾಡಿದರು. ಸುಮಾರು 4 ಗಂಟೆ ಕಳೆದರೂ ಪತಿ ಬರಲಿಲ್ಲ. ಆದ್ದರಿಂದ ಅಧಿಕಾರಿಗಳು ಶಾರದಾಗೆ ಛೀಮಾರಿ ಹಾಕಿ ಮಕ್ಕಳನ್ನು ಹಾವೇರಿ ಜಿಲ್ಲಾಸ್ಪಂದನಾ ವಿಶೇಷ ದತ್ತು ಸ್ವೀಕಾರ ಕೇಂದ್ರಕ್ಕೆ ಕಳಿಸಿಕೊಟ್ಟರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಫ್‌ಡಿಸಿ ಇಬ್ರಾಹಿಂ ಮದರಕಂಡಿ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಮಾರುತಿ ಹರಿಜನ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಶಿಗ್ಗಾವಿ ಯೋಜನಾಧಿಕಾರಿ ಉಮಾ, ಸವಣೂರ ಮೇಲ್ವಿಚಾರಕ ಚಂದ್ರಶೇಖರ, ಅಂಗನವಾಡಿ ಮೇಲ್ವಿಚಾರಕಿ ಸುಜಾತಾ, ಜಿಲ್ಲಾಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಂಗಳಾ ಅಳಗುಂಡಿ, ಜಿಲ್ಲಾಮಕ್ಕಳ ದತ್ತು ಸ್ವೀಕಾರ ಕೇಂದ್ರ ಸಿಬ್ಬಂದಿ ಸಂತೋಷ ಚಲವಾದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪತ್ನಿಗೆ ಗಂಡ ಹೊಡೆದರೆ ತಪ್ಪೇನಿಲ್ಲ!: ಕರ್ನಾಟಕ, ಆಂಧ್ರ, ತೆಲಂಗಾಣದ ಶೇ 80ರಷ್ಟು ಮಹಿಳೆಯರ ಸಮರ್ಥನೆ
ದಂಪತಿ ಅಲ್ಲ
''ಮನೆಯಲ್ಲಿ ಎರಡು ಮಕ್ಕಳನ್ನು ಕೂಡಿ ಹಾಕಿ ಹಿಂಸೆ ನೀಡಿದ್ದಾರೆ. ಮನೆಯಲ್ಲಿರುವವರು ದಂಪತಿಯಲ್ಲ. ಶಾರದಾ ಅವರ ಪತಿ ಶಿವಪ್ಪ ಇಲ್ಲಿ ಇರುವುದಿಲ್ಲ. ಇಲ್ಲಿರುವ ವಾಸುದೇವ ಆರ್‌.ಕೆ. ಎಂಬ ವ್ಯಕ್ತಿ ಶಾರದಾ ಜತೆ ಸೇರಿ ಮಕ್ಕಳಿಗೆ ನಿತ್ಯ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಾರೆ. ನಾವು ದಂಪತಿ ಎಂದು ಸುಳ್ಳು ಹೇಳಿ ಮನೆ ಬಾಡಿಗೆ ಪಡೆದಿದ್ದಾರೆ. ಇದರಲ್ಲಿ ಯಾರು ನಿಜವಾದ ದಂಪತಿ ಎನ್ನುವುದು ಗೊಂದಲವಾಗಿದೆ. ಆದ್ದರಿಂದ ಈ ಕುರಿತು ಸೂಕ್ತ ತನಿಖೆ ಕೈಗೊಂಡು ಮಕ್ಕಳಿಗೆ ಹಿಂಸೆ ನೀಡುತ್ತಿರುವ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು'' ಎಂದು ಸ್ಥಳೀಯರು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ