ಆ್ಯಪ್ನಗರ

ಆಣೂರಿಗೆ ಬಾರದ ಡಿಸಿ: ಗ್ರಾಮಸ್ಥರ ಬೇಸರ

ಬ್ಯಾಡಗಿ: ಕುಡಿಯುವ ನೀರಿನ ಸಮಸ್ಯೆಯಿರುವ ತಾಲೂಕಿನ ಹಳ್ಳಿಗಳಿಗೆ ಸೋಮವಾರ ಭೇಟಿ ನೀಡಲು ಆಗಮಿಸಿದ್ದ ಜಿಲ್ಲಾಧಿಕಾರಿ ಕೃಷ್ಣಾ ಬಾಜಪೇಯ ಅವರು, ನೀರಿನ ಬವಣೆ ವಿಪರೀತವಾಗಿರುವ ಆಣೂರಿಗೆ ಭೇಟಿ ನೀಡದೆ ವಾಪಸಾಗಿದ್ದರಿಂದ ಮಾಸಣಗಿ ಹಾಗೂ ಆಣೂರ ಗ್ರಾಮಸ್ಥರಿಗೆ ತೀವ್ರ ನಿರಾಸೆಯಾಯಿತು.

Vijaya Karnataka 21 May 2019, 5:00 am
ಬ್ಯಾಡಗಿ: ಕುಡಿಯುವ ನೀರಿನ ಸಮಸ್ಯೆಯಿರುವ ತಾಲೂಕಿನ ಹಳ್ಳಿಗಳಿಗೆ ಸೋಮವಾರ ಭೇಟಿ ನೀಡಲು ಆಗಮಿಸಿದ್ದ ಜಿಲ್ಲಾಧಿಕಾರಿ ಕೃಷ್ಣಾ ಬಾಜಪೇಯ ಅವರು, ನೀರಿನ ಬವಣೆ ವಿಪರೀತವಾಗಿರುವ ಆಣೂರಿಗೆ ಭೇಟಿ ನೀಡದೆ ವಾಪಸಾಗಿದ್ದರಿಂದ ಮಾಸಣಗಿ ಹಾಗೂ ಆಣೂರ ಗ್ರಾಮಸ್ಥರಿಗೆ ತೀವ್ರ ನಿರಾಸೆಯಾಯಿತು.
Vijaya Karnataka Web HVR-20BYD1A


ನೀರಿನ ಸಮಸ್ಯೆ ಹೆಚ್ಚಾಗಿರುವ ತಾಲೂಕಿನ ಹಳ್ಳಿಗಳಿಗೆ ಭೇಟಿ ನೀಡಲು ಬಂದಿದ್ದ ಜಿಲ್ಲಾಧಿಕಾರಿ ಮೊದಲು ಮೋಟೆಬೆನ್ನೂರ ಗ್ರಾಮಕ್ಕೆ ತೆರಳಿ ಅಲ್ಲಿನ ನೀರಿನ ಬವಣೆಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ಕಳೆದ ನಾಲ್ಕು ತಿಂಗಳಿನಿಂದ ಗ್ರಾಮದಲ್ಲಿ ನೀರಿನ ಬವಣೆ ಮಿತಿ ಮೀರಿದೆ. ನೀರಿಗಾಗಿ ಕಿಮೀಗಟ್ಟಲೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲ ಕೆಲಸ ಕಾರ‍್ಯಗಳನ್ನು ಬಿಟ್ಟು ನೀರಿಗಾಗಿ ರಾತ್ರಿ ಹಗಲು ಪರದಾಡುವ ಅನಿವಾರ‍್ಯತೆ ಉಂಟಾಗಿದೆ. ನೀರೊದಗಿಸಿ ಎಂದು ಪಿಡಿಓಗಳನ್ನು ಕೇಳಿದರೆ ನೀರಿನ ಯಾವುದೇ ಕೊರತೆ ಇಲ್ಲ ಎಂಬ ಬೇಜಬಾಬ್ದಾರಿ ಮಾತುಗಳನ್ನಾಡುತ್ತಾರೆ ಎಂದು ಆರೋಪಿಸಿದರು.

ಆಟಕ್ಕುಂಟು ಲೆಕ್ಕಕ್ಕಿಲ್ಲ ನೀರಿನ ಘಟಕ: ಗ್ರಾಮದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಶುದ್ಧ ಕುಡಿಯುವ ನೀರಿನ ಘಟಕವನ್ನು ಜಿಲ್ಲಾಧಿಕಾರಿಗಳಿಗೆ ತೋರಿಸಿದ ಗ್ರಾಮಸ್ಥರು, ಇದರಲ್ಲಿ ನೀರು ಬಂದು ಅದೆಷ್ಟೋ ತಿಂಗಳುಗಳೇ ಕಳೆದಿವೆ. ಘಟಕ ಸ್ಥಾಪನೆ ಮಾಡಿದ್ದು ಬಿಟ್ಟರೆ ಇಲ್ಲಿ ಇಂದು ಹನಿ ನೀರು ಸಿಗಲ್ಲ, ಅಧಿಕಾರಿಗಳಿಗೆ ಗ್ರಾಮಸ್ಥರ ಸಮಸ್ಯೆ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಡಕ್‌ ಸೂಚನೆ: ಗ್ರಾಮಸ್ಥರ ಅಳಲನ್ನು ಆಲಿಸಿದ ಜಿಲ್ಲಾಧಿಕಾರಿ ಬಾಜಪೇಯಿ, ತಹಶೀಲ್ದಾರ ಸೇರಿದಂತೆ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭ ಮಾಡಿ ನೀರಿಲ್ಲದಿದ್ದರೆ ಟ್ಯಾಂಕರ್‌ ಮೂಲಕ ನೀರನ್ನು ಪೂರೈಕೆ ಮಾಡಿ ಗ್ರಾಮಸ್ಥರಿಗೆ ಪೊ್ಲೕರೈಡ್‌ಮುಕ್ತ ನೀರನ್ನು ಒದಗಿಸಿ ಮತ್ತು ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ನೀರೋದಗಿಸಿ ಎಂದು ಖಡಕ್‌ ಸೂಚನೆ ನೀಡಿದರು.

ಅಲ್ಲಿಂದ ರಾಮಗೊಂಡನಹಳ್ಳಿ ಕೆರೆ ವೀಕ್ಷ ಣೆಗೆ ತೆರಳಿದ ಜಿಲ್ಲಾಧಿಕಾರಿಗಳು ದೂರವಾಣಿ ಕರೆ ಬಂದ ಕೂಡಲೇ ವಾಪಸ್‌ ಚುನಾವಣೆ ಕಾರ‍್ಯ ನಿಮಿತ್ತ ವಾಪಸ್‌ ತೆರಳಿದರು.

ಕಾದು ಸುಸ್ತಾದ ಗ್ರಾಮಸ್ಥರು: ಗ್ರಾಮದಲ್ಲಿ ಉದ್ಭವಿಸಿರುವ ನೀರಿನ ಬವಣೆಗೆ ಪರಿಹಾರ ಕಲ್ಪಿಸಬಹುದು ಮತ್ತು ಆಣೂರ ಕೆರೆ ತುಂಬಿಸುವ ಯೋಜನೆ ಕುರಿತಂತೆ ಮಾಹಿತಿ ನೀಡಬಹುದು ಎಂದು ಬೆಳಿಗ್ಗೆಯಿಂದಲೆ ಟ್ರ್ಯಾಕ್ಟರ್‌ ಹಾಗೂ ಎತ್ತಿನ ಗಾಡಿಗಳಲ್ಲಿ ಆಣೂರ ಕೆರೆಗೆ ಆಗಮಿಸಿದ್ದ ಮಾಸಣಗಿ ಹಾಗೂ ಆಣೂರಿನ ನೂರಾರು ಗ್ರಾಮಸ್ಥರು ಜಿಲ್ಲಾಧಿಕಾರಿಗಾಗಿ ಬಿಸಿಲಲ್ಲಿ ಕಾದು ಸುಸ್ತಾದರು. ಗ್ರಾಮಕ್ಕೆ ಭೇಟಿ ನೀಡದೆ ವೀಕ್ಷ ಣೆ ಅರ್ಧಕ್ಕೆ ಮೊಟಕುಗೊಳಿಸಿ ತೆರಳಿದ ಜಿಲ್ಲಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಆಣೂರ ಗ್ರಾಮಸ್ಥ ಪ್ರವೀಣ ಹೊಸಗೌಡ್ರ ಮಾತನಾಡಿ, ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಇಂಥ ಪರಿಸ್ಥಿತಿಯಲ್ಲಿ ನೀರಿನ ಸಮರ್ಪಕ ವ್ಯವಸ್ಥೆ ಮಾಡಬೇಕಿದ್ದ ತಹಶೀಲ್ದಾರ ಕೈಕಟ್ಟಿ ಕುಳಿತಿದ್ದಾರೆ. ಇದೀಗ ಜಿಲ್ಲಾಧಿಕಾರಿ ಕೂಡ ಕೇವಲ ಹತ್ತು ನಿಮಿಷ ತಾಲೂಕಿನಲ್ಲಿ ಸಂಚರಿಸಿ ಆಣೂರಗೆ ಬಾರದೆ ವಾಪಸ್‌ ಹೋಗಿದ್ದಾರೆ ಇಂತಹ ಅಧಿಕಾರಿಗಳಿಂದ ನಾವೇನು ನೀೕಕ್ಷೆ ಮಾಡಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ