ಹಾವೇರಿ: ನಗರದಲ್ಲಿ ಮೂರು ದಿನಗಳ ಕಾಲ ಜಿಲ್ಲಾ ಉತ್ಸವ ಆಚರಣೆ ಮಾಡುತ್ತಿರುವುದನ್ನು ಖಂಡಿಸಿ ಬಿಎಸ್ಪಿ ಜಿಲ್ಲಾ ಘಟಕದ ಪದಾಧಿಕಾರಿಗಳು ಬುಧವಾರ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ ಅವರಿಗೆ ಮನವಿ ಸಲ್ಲಿಸಿದರು.
ನಗರದಲ್ಲಿ ಫೆ.23ರಿಂದ 26ರ ವರೆಗೆ ಜಿಲ್ಲಾ ಉತ್ಸವವನ್ನು ಯಾವ ಉದ್ದೇಶಕ್ಕಾಗಿ ಮಾಡುತ್ತೀರಿ? ಇದರಿಂದ ಜನರಿಗೇನು ಲಾಭ? ಈ ಉತ್ಸವದಿಂದ ಸಾಕಷ್ಟು ಹಣವನ್ನು ಹಾಳು ಮಾಡುವ ಬದಲು ಜಿಲ್ಲೆಯ ಮೂಲ ಸೌಲಭ್ಯ ಕೊರತೆಗೆ ಬಳಕೆ ಮಾಡಿ ಜಿಲ್ಲೆಯ ಅಭಿವೃದ್ಧಿ ಮಾಡಬೇಕು ಎಂದು ಒತ್ತಾಯಿಸಿದರು.
ಈ ಉತ್ಸವಕ್ಕೆ ಖರ್ಚು ಮಾಡುವ ಸಾರ್ವಜನಿಕರ ದುಡ್ಡನ್ನು ಸಾರ್ವಜನಿಕ ಉಪಯೋಗಕ್ಕೆ ಬಳಿಸದೇ ಮೂರು ದಿನಗಳ ಸಂತೆಯ ಕಾರ್ಯಕ್ರಮಕ್ಕೆ ದುಡ್ಡನ್ನು ಅನವಶ್ಯಕವಾಗಿ ಬಳಸುತ್ತಿರುವುದನ್ನು ಬಿಎಸ್ಪಿ ಉಗ್ರವಾಗಿ ಖಂಡಿಸುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು ಹಾವೇರಿ ನಗರದ ಬಗ್ಗೆ ಕಾಳಜಿ ತೋರದೇ ಅಧಿಕಾರಿಗಳು ಹೇಳುವ ಅಭಿವೃದ್ಧಿ ಪುರಾಣದ ಕಥೆಯನ್ನು ನಂಬಿ ಎಲ್ಲ ಕೆಲಸಗಳು ಆಗಿವೆ, ನಗರದ ಸಂಪೂರ್ಣ ಅಭಿವೃದ್ಧಿಯಾಗಿದೆ ಎಂದು ಹೇಳುವ ಮಾತು ಸಾರ್ವಜನಿಕರಿಗೆ ಗೊತ್ತಾಗುವುದಿಲ್ಲವೇ? ಜಿಲ್ಲೆಯಾಗಿ 20 ವರ್ಷ ಗತಿಸಿದೆ. ಯಾವ ಮಾನದಂಡದ ಮೇಲೆ ಇವರಿಗೆ ಅಭಿವೃದ್ಧಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿ ಮೂತ್ರಾಲಯಗಳು ಇಲ್ಲ, ಬಿಡಾಡಿ ದನ, ಬೀದಿ ನಾಯಿ, ಹಂದಿಗಳ ಹಾವಳಿ ಹೆಚ್ಚಾಗಿದೆ. ಇವನ್ನು ತಡೆಗಟ್ಟುವ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿಲ್ಲಾ. ಉದ್ಯಾನ, ಮಕ್ಕಳ ಆಶಾಕಿರಣವಾಗಿರುವ ಪುಟಾಣಿ ರೈಲುಗಳು, ಪಾರ್ಕಗಳು ಹೆಸರಿಗೆ ಮಾತ್ರ ಇದ್ದು, ಇವನ್ನು ಅಭಿವೃದ್ಧಿ ಪಡಿಸದೇ ಯಾವ ಪುರುಷಾರ್ಥಕ್ಕಾಗಿ ಈ ಜಿಲ್ಲಾ ಉಸ್ತುವಾರಿಯನ್ನು ಮಾಡುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಎಂ.ಕೆ. ಮಖಬೂಲ್, ಲಕ್ಷ ್ಮಣ ಗಾಣಿಗೇರ. ವಿಜಯಕುಮಾರ ವಿರಕ್ತಮಠ, ಮೂಹಿನ್ ಮುಲ್ಲಾ, ಅಬ್ದುಲ್ ಖಾದರ ಧಾರವಾಡ, ವಕೀಲರಾದ ವೀರೇಶ ಕಿರವಾಡಿ, ರವಿ ಕಾಳೆ, ಮಹ್ಮದಶರೀಫ್ ಎಂ., ರಘು ಕಲಾಲ, ಶಿವಕುಮಾರ ತಳವಾರ, ಪ್ರಕಾಶ ಉಪಸ್ಥಿತರಿದ್ದರು.