ರಾಣೇಬೆನ್ನೂರ: ಹೊಸದಾಗಿ ನಿರ್ಮಿಸಿದ ಮನೆಗೆ ಅಮಾವಾಸ್ಯೆ ದಿನದಂದು ವಾಮಚಾರ ಮಾಡಿರುವ ಘಟನೆ ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ಗಿರಿಯಪ್ಪ ದೊಡ್ಡತಮ್ಮನವರ ಗ್ರಾಮದಲ್ಲಿ ಹೊಸದಾಗಿ ಮನೆ ನಿರ್ಮಿಸಿದ್ದು, ಒಂದೆರಡು ದಿನಗಳಲ್ಲಿ ಗೃಹ ಪ್ರವೇಶ ಸಮಾರಂಭ ಕೂಡ ಹಮ್ಮಿಕೊಂಡಿದ್ದರು. ಆದರೆ ಅಮಾವಾಸ್ಯೆ ನಿಮಿತ್ತ ಮಂಗಳವಾರ ರಾತ್ರಿ ಯಾರೋ ಕಿಡಿಗೇಡಿಗಳು ಮನೆಯ ಹಿಂಬದಿ ಬಾಗಿಲಿಗೆ ತೆಂಗಿನಕಾಯಿ, ಗೊಂಬೆ, ಕುಂಕುಮ, ಈರುಳ್ಳಿ, ಮೆಣಸಿನಕಾಯಿಗಳನ್ನು ಕಟ್ಟಿ ವಾಮಾಚಾರ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಮನೆ ಹಿಂಬದಿ ಬಾಗಿಲು ಕೆಳಗೆ ನಿಂಬೆಹಣ್ಣು, ಅರಿಶಿನ, ಕುಂಕುಮ, ಮೊಟ್ಟೆ ಸೇರಿದಂತೆ ಇತರ ವಾಮಾಚಾರದ ವಸ್ತುಗಳನ್ನಿಟ್ಟು ಹೋಗಿದ್ದಾರೆ. ಇದರಿಂದಾಗಿ ಕುಟುಂಬದವರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.