ಆ್ಯಪ್ನಗರ

ಆಸ್ಪತ್ರೆಗೆ ನುಗ್ಗಿದ ಮಳೆ ನೀರು: ಯಂತ್ರೋಪಕರಣಗಳು ಜಲಾವೃತ

ಬ್ಯಾಡಗಿ : ಪಟ್ಟಣದಲ್ಲಿ ಗುರುವಾರ ಸಂಜೆ ಸುಮಾರು 2 ತಾಸು ಸುರಿದ ಭಾರಿ ಮಳೆಗೆ ಪಟ್ಟಣದ ಸಮುದಾಯ ತಾಲೂಕಾಸ್ಪತ್ರೆಗೆ ನೀರು ನುಗ್ಗಿ, ರೋಗಿಗಳು ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಪರದಾಡುವಂತಾಯಿತು.

Vijaya Karnataka 20 Jul 2019, 5:00 am
ಬ್ಯಾಡಗಿ : ಪಟ್ಟಣದಲ್ಲಿ ಗುರುವಾರ ಸಂಜೆ ಸುಮಾರು 2 ತಾಸು ಸುರಿದ ಭಾರಿ ಮಳೆಗೆ ಪಟ್ಟಣದ ಸಮುದಾಯ ತಾಲೂಕಾಸ್ಪತ್ರೆಗೆ ನೀರು ನುಗ್ಗಿ, ರೋಗಿಗಳು ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಪರದಾಡುವಂತಾಯಿತು.
Vijaya Karnataka Web HVR-19BYD2A

ಬ್ಯಾಡಗಿಯಲ್ಲಿ ಗುರುವಾರ ಸುರಿದ ಭಾರಿ ಮಳೆಗೆ ತಾಲೂಕಾಸ್ಪತ್ರೆಯೊಳಗೆ ನೀರು ನುಗ್ಗಿರುವುದು.


ಏಕಾಏಕಿ ಸುರಿದ ಮಳೆ ಇದ್ದಕ್ಕಿದ್ದಂತೆ ರುದ್ರ ರೂಪ ತಾಳಿದ್ದರಿಂದ ತಾಲೂಕಾಸ್ಪತ್ರೆ ಒಂದೆರಡು ಗಂಟೆಗಳಲ್ಲಿಯೇ ಸಣ್ಣ ಕೆರೆಯಂತಾಯಿತು.

ಬೆಲೆ ಬಾಳುವ ಪರಿಕರಗಳು ನೀರಲ್ಲಿ:

ಡ್ರೈನೇಜ್‌ ಮೂಲಕ ಎಲ್ಲ ಕಲ್ಮಷಗಳೊಂದಿಗೆ ತಾಲೂಕಾಸ್ಪತ್ರೆಗೆ ಏಕಾಏಕಿ ನುಗ್ಗಿದ ಮಳೆ ನೀರು ಆಸ್ಪತ್ರೆಯನ್ನು ಸಂಪೂರ್ಣ ಕೆರೆಯನ್ನಾಗಿಸಿತ್ತು. ಆಪರೇಷನ್‌ ಥಿಯೇಟರ್‌, ಡೆಲವರಿ ವಾರ್ಡ್‌, ಸಾಮಾನ್ಯ ರೋಗಿಗಳ ಕೋಣೆ, ಗರ್ಭಿಣಿಯರ ವಾರ್ಡ್‌, ಆಸ್ಪತ್ರೆಯಲ್ಲಿನ ಎಕ್ಸ್‌ರೇ ಕೇಂದ್ರ, ಲ್ಯಾಬ್‌, ಚೀಟಿ ಮಾಡುವ ಕೇಂದ್ರ ಸೇರಿದಂತೆ ಬೆಲೆ ಬಾಳುವ ವೈದ್ಯಕೀಯ ಪರಿಕರಗಳಿರುವ ಎಲ್ಲ ಕಡೆಯೂ ನೀರು ನುಗ್ಗಿ ಭಾರಿ ಅವಾಂತರ ಸೃಷ್ಠಿಸಿತು.

ರಾತ್ರಿ 3 ರವರೆಗೂ ನೀರನ್ನು ಹೊರ ಹಾಕಿದ ಸಿಬ್ಬಂದಿ:
ಏಕಾಏಕಿ ನುಗ್ಗಿದ ನೀರಿನಿಂದ ಗರ್ಭಿಣಿಯರು ಸೇರಿದಂತೆ ಆಸ್ಪತ್ರೆಯ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವುದು ಮತ್ತು ಬೆಲೆಬಾಳುವ ಯಂತ್ರೋಪಕರಣಗಳನ್ನು ರಕ್ಷಿಸಿಕೊಳ್ಳುವುದೇ ಸಿಬ್ಬಂದಿ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಆಸ್ಪತ್ರೆಯ ಒಟ್ಟು 30 ಸಿಬ್ಬಂದಿ ಸೇರಿದಂತೆ ಸುಮಾರು 15 ಕ್ಕೂ ಹೆಚ್ಚು ಹೊರ ಕಾರ್ಮಿಕರು ಗುರುವಾರ ರಾತ್ರಿ 3 ಗಂಟೆಯವರೆಗೆ ನೀರನ್ನು ಹೊರ ಹಾಕುವಲ್ಲಿ ಶ್ರಮಿಸಿದರು.

ಸ್ಪಂದಿಸದ ಪುರಸಭೆ ಸಿಬ್ಬಂದಿ
ಆತಂಕಕ್ಕೆ ಕಾರಣವಾದ ಮಳೆ ನೀರನ್ನು ಹೊರ ಹಾಕಲು ಮತ್ತು ಬೆಲೆ ಬಾಳುವ ಪರಿಕರಗಳನ್ನು ರಕ್ಷಿಸಿಕೊಳ್ಳಲು ಸಹಕರಿಸುವಂತೆ ತಾಲೂಕಾ ವೈದ್ಯಾಧಿಕಾರಿ ಡಾ.ಪುಟ್ಟರಾಜ ಪುರಸಭೆ ಅಧಿಕಾರಿಗಳಿಗೆ ಕರೆ ಮಾಡಿ ಮನವಿ ಮಾಡಿದರೂ ಪುರಸಭೆ ಸಿಬ್ಬಂದಿ ಸೂಕ್ತ ಸ್ಪಂದನೆ ನೀಡಲಿಲ್ಲ. ನೀರಿನ ಜೊತೆಯಲ್ಲಿ ವಿಷ ಜಂತುಗಳು ಕೂಡ ಆಸ್ಪತ್ರೆ ಸೇರಿದ್ದು ಆತಂಕ ಹೆಚ್ಚಲು ಕಾರಣವಾಯಿತು.

ನೀರು ನುಗ್ಗಲು ಕಾರಣವೇನು?
ಎಂತಹ ಮಳೆ ಸುರಿದರೂ ಸುಸಜ್ಜಿತವಾಗಿ ನಿರ್ಮಿಸಿರುವ ಪಟ್ಟಣದ ತಾಲೂಕಾಸ್ಪತ್ರೆಗೆ ಇಲ್ಲಿಯವರೆಗೂ ಮಳೆ ನೀರು ನುಗ್ಗಿರಲಿಲ್ಲ. ಆದರೆ ರಟ್ಟೀಹಳ್ಳಿ ರಸ್ತೆಯಲ್ಲಿರುವ ಮುಖ್ಯ ಸಿಡಿಯನ್ನು ಹೊಸದಾಗಿ ನಿರ್ಮಿಸುವ ನಿಟ್ಟಿನಲ್ಲಿ ದೊಡ್ಡ ಕಾಲುವೆಗೆ ಅಡ್ದಲಾಗಿ ಮಣ್ಣು ಹಾಕಿದ್ದೇ ಪಕ್ಕದಲ್ಲಿರುವ ಆಸ್ಪತ್ರೆಗೆ ನೀರು ನುಗ್ಗಲು ಪ್ರಮುಖ ಕಾರಣವೆನ್ನಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ