ಆ್ಯಪ್ನಗರ

ಕನಕದಾಸರಿಗೆ ವಿಶ್ವಮಾನ್ಯತೆ ಸಿಗುವ ತನಕ ಹೋರಾಟ

ಬ್ಯಾಡಗಿ (ಹಾವೇರಿ) : ಎಲ್ಲ ಜಾತಿ ವ್ಯವಸ್ಥೆಗಳನ್ನು ಹೋಗಲಾಡಿಸಬೇಕೆಂಬುದು ಕನಕದಾಸರ ಉದ್ದೇಶವಾಗಿತ್ತು. ಹೀಗಾಗಿ 'ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲಯನೇನಾದರೂ ಬಲ್ಲಿರಾ' ಎಂದು ಜಾತಿ ಮತ್ತು ವರ್ಗ ಪದ್ಧತಿ ವಿರುದ್ಧ ಕನಕದಾಸರು ನಡೆಸಿದ ಆಂದೋಲನಕ್ಕೆ ವಿಶ್ವ ಗುರು ಬಸವೇಶ್ವರರ ಮಾದರಿಯಲ್ಲಿ ವಿಶ್ವ ಮಾನ್ಯತೆ ಸಿಗುವವರೆಗೂ ಕನಕ ಗುರುಪೀಠದ ಹೋರಾಟ ಮುಂದುವರಿಸಲಿದೆ ಎಂದು ಕನಕ ಗುರುಪೀಠದ ನಿರಂಜನಾನಂದ ಪುರಿ ಶ್ರೀಗಳು ಹೇಳಿದರು.

Vijaya Karnataka 27 Nov 2018, 5:00 am
ಬ್ಯಾಡಗಿ (ಹಾವೇರಿ) : ಎಲ್ಲ ಜಾತಿ ವ್ಯವಸ್ಥೆಗಳನ್ನು ಹೋಗಲಾಡಿಸಬೇಕೆಂಬುದು ಕನಕದಾಸರ ಉದ್ದೇಶವಾಗಿತ್ತು. ಹೀಗಾಗಿ 'ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲಯನೇನಾದರೂ ಬಲ್ಲಿರಾ' ಎಂದು ಜಾತಿ ಮತ್ತು ವರ್ಗ ಪದ್ಧತಿ ವಿರುದ್ಧ ಕನಕದಾಸರು ನಡೆಸಿದ ಆಂದೋಲನಕ್ಕೆ ವಿಶ್ವ ಗುರು ಬಸವೇಶ್ವರರ ಮಾದರಿಯಲ್ಲಿ ವಿಶ್ವ ಮಾನ್ಯತೆ ಸಿಗುವವರೆಗೂ ಕನಕ ಗುರುಪೀಠದ ಹೋರಾಟ ಮುಂದುವರಿಸಲಿದೆ ಎಂದು ಕನಕ ಗುರುಪೀಠದ ನಿರಂಜನಾನಂದ ಪುರಿ ಶ್ರೀಗಳು ಹೇಳಿದರು.
Vijaya Karnataka Web HVR-26BYD3A


ತಾಲೂಕಿನ ಕಾಗಿನೆಲೆ ಕನಕ ಗುರುಪೀಠದಲ್ಲಿ ಕನಕದಾಸ ಜಯಂತ್ಯುತ್ಸವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

''ಜಾತಿ ಪದ್ಧತಿ ಹಾಗೂ ಪುರೋಹಿತಶಾಹಿಗಳ ವಿರುದ್ಧ ಧ್ವನಿ ಎತ್ತಿದ ಕನಕರ ಶ್ರೇಷ್ಠ ಚಿಂತನೆಗಳನ್ನು ಕೇವಲ ಒಂದು ವರ್ಗಕ್ಕೆ ಸೀಮಿತಿಗೊಳಿಸದೆ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ವಿಶ್ವಕ್ಕೆ ಪರಿಚಯಿಸುವ ಕೆಲಸವಾಗಬೇಕಿದೆ. ಅಂದಾಗ ಮಾತ್ರ ಕೀರ್ತನೆಗಳ ಮೂಲಕ ಸಾಮಾಜಿಕ ಮೌಢ್ಯಗಳಿಗೆ ಕಡಿವಾಣ ಹಾಕುವತ್ತ ಅವರು ಇಟ್ಟಿದ್ದ ದಿಟ್ಟ ಹೆಜ್ಜೆಗಳಿಗೆ ಇನ್ನಷ್ಟು ವೇಗ ದೊರೆಯಲಿದೆ'' ಎಂದರು.

ಒಳತಿರುಳು ಅರಿಯಬೇಕಿದೆ:

ಶಾಸಕ ವಿರೂಪಾಕ್ಷ ಪ್ಪ ಬಳ್ಳಾರಿ ಮಾತನಾಡಿ, ''ಅನ್ಯ ಜಾತಿ ಮತ್ತು ಧರ್ಮೀಯರನ್ನು ಗೌರವಿಸುವುದು, ಪ್ರೀತಿಸುವುದು ಕನಕದಾಸರ ಉದ್ದೇಶವಾಗಿತ್ತೇ ಹೊರತು ಅವರೆಂದಿಗೂ ಮಡಿವಂತಿಕೆ ನಡೆಸುತ್ತಿದ್ದ ಜನರ ವಿರುದ್ಧ ಹೋರಾಟಕ್ಕಿಳಿಯಲಿಲ್ಲ. ಬದಲಾಗಿ ಕೃಷ್ಣನನ್ನು ಒಲಿಸಿಕೊಳ್ಳುವ ಮೂಲಕ ಭಕ್ತಿಗಿರುವ ಶಕ್ತಿಯನ್ನು ಜಗತ್ತಿಗೆ ತೋರ್ಪಡಿಸಿದರು. ಆದರೆ ಇಂದು ಕನಕರ ಆದರ್ಶಗಳ ಒಳತಿರುಳನ್ನು ಅರಿಯದೆ ಧಾರ್ಮಿಕ ಅಪ್ರಭುದ್ಧತೆ ತೋರುತ್ತಿರುವ ಸಮುದಾಯಗಳು ಪರಸ್ಪರ ದ್ವೇಷ, ಅಸೂಯೆ ಪ್ರದರ್ಶಿಸುತ್ತಿರುವುದು ವಿಷಾದಕರ ಸಂಗತಿ'' ಎಂದರು.

ಧಾರ್ಮಿಕ ಕ್ಷೇತ್ರಗಳು ಸದೃಢವಾಗಲಿ:

ಮಾಜಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ''ಭಕ್ತರ ಸಹಕಾರದಿಂದ ಧಾರ್ಮಿಕ ಕ್ಷೇತ್ರಗಳು ಸದೃಢಗೊಳ್ಳಬೇಕಿದೆ. ಇಲ್ಲದಿದ್ದರೆ ಶ್ರೀಕ್ಷೇತ್ರಗಳಿಗೆ ಮೂರು ಕಾಸಿನ ಬೆಲೆ ಸಿಗುವುದಿಲ್ಲ. ಕುರುಬ ಸಮಾಜ ಧಾರ್ಮಿಕ ನೆಲೆಗಟ್ಟಿನ ಮೇಲೆ ಸಂಘಟಿತಾದರೆ ಮಾತ್ರ ಇನ್ನುಳಿದ ಸಮಾಜಗಳು ಬೆಲೆ ನೀಡಲಿವೆ. ಹೀಗಾಗಿ ಶೈಕ್ಷ ಣಿಕವಾಗಿ, ಆರ್ಥಿಕವಾಗಿ ಸದೃಢಗೊಳ್ಳುವುದರ ಜೊತೆಗೆ ಧಾರ್ಮಿಕವಾಗಿ ಸಂಘಟಿತರಾಗುವುದು ಇಂದಿನ ಅಗತ್ಯ'' ಎಂದು ಹೇಳಿದರು.

ವೇದಿಕೆಯಲ್ಲಿ ಮೈಲಾರ ಸುಕ್ಷೇತ್ರದ ಕಾರ್ಣಿಕದ ರಾಮಣ್ಣಜ್ಜ, ಕಾಗಿನೆಲೆ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟಿ, ಬಿಜೆಪಿ ತಾಲೂಕಾಧ್ಯಕ್ಷ ಶಂಕ್ರಣ್ಣ ಮಾತನವರ, ಜಿ.ಪಂ.ಸದಸ್ಯ ಅಬ್ದುಲ್‌ ಮುನಾಫ್‌ ಎಲಿಗಾರ, ಮಾಜಿ ಸದಸ್ಯ ರಾಜೇಂದ್ರ ಹಾವೇರಣ್ಣವರ, ತಾ.ಪಂ.ಸದಸ್ಯ ಜಗದೀಶ ಪೂಜಾರ, ಕುರುಬ ಸಮಾಜದ ಜಿಲ್ಲಾಧ್ಯಕ್ಷ ಮಾರುತಿ ಹರಿಹರ, ಪ್ರಧಾನ ಕಾರ‍್ಯದರ್ಶಿ ಹನುಮಂತಗೌಡ ಗಾಜೀಗೌಡ್ರ, ರಾಮಣ್ಣ ಉಕ್ಕುಂದ ಮತ್ತಿತರು ಇದ್ದರು. ಮಾಜಿ ಆಡಳಿತಾಧಿಕಾರಿ ಎಸ್‌.ಎಫ್‌. ಎನ್‌.ಗಾಜೀಗೌಡ್ರ ಸ್ವಾಗತಿಸಿದರು. ಪ್ರಾಚಾರ‍್ಯ ಬೀರಪ್ಪ ನಿರೂಪಿಸಿದರು. ಮುಖ್ಯ ಶಿಕ್ಷ ಕ ರವಿ ಆನ್ವೇರಿ ವಂದಿಸಿದರು.
ಮೌನಾಚರಣೆ

ಕಾರ್ಯಕ್ರಮಕ್ಕೂ ಮುನ್ನ ಅಗಲಿದ ನಾಯಕರಾದ ನಟ ಅಂಬರೀಷ್‌ ಹಾಗೂ ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್‌ ಷರೀಫ್‌ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.

ಬಾಡದಲ್ಲಿ ವಿಶೇಷ ಪೂಜೆ

ಶಿಗ್ಗಾವಿ: 531ನೇ ಕನಕ ಜಯಂತಿ ಅಂಗವಾಗಿ ಭಕ್ತ ಕನಕದಾಸರ ಜನ್ಮಸ್ಥಳ ಬಾಡ ಗ್ರಾಮದಲ್ಲಿ ಸೋಮವಾರ ವಿವಿಧ ಸಂಸ್ಥೆ-ಸಂಸ್ಥೆ ಪದಾಧಿಕಾರಿಗಳು, ಭಕ್ತರು ಕನಕದಾಸರ ಮೂರ್ತಿಗೆ ವಿಶೇಷ ಅಭಿಷೇಕ, ಪೂಜೆ ನೆರವೇರಿಸಿದರು.

ಕೆಂಡದಮಠದ ಬಸಯ್ಯನವರ ನೇತೃತ್ವದಲ್ಲಿ ಶಾಸಕ ಬಸವರಾಜ ಬೊಮ್ಮಾಯಿ ಕನಕದಾಸರ ಮೂರ್ತಿಗೆ ಪೂಜೆ ಸಲ್ಲಿಸಿ ನಮಿಸಿದರು. ಬಾಡ ಗ್ರಾಮಸ್ಥರು ಸಹ ಕನಕದಾಸರ ಮೂರ್ತಿಗೆ ಪೂಜೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ