ಆ್ಯಪ್ನಗರ

ಅಸುಂಡಿ ಕೆರೆ ಅಭಿವೃದ್ಧಿ ಅವಶ್ಯ

ಎಲ್ಲೆಡೆ ಭೀಕರ ಬರ ಪರಿಸ್ಥಿತಿ ಉಂಟಾಗಿದ್ದು ಜನರು, ಜಾನುವಾರುಗಳು ನೀರಿಗಾಗಿ ಹಪಿಹಪಿಸುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದಕ್ಕೆ ಸ್ವಲ್ಪವಾದರೂ ಪರಿಹಾರ

ವಿಕ ಸುದ್ದಿಲೋಕ 3 May 2016, 9:00 am

ಬಸವರಾಜ ಸರೂರ ರಾಣೇಬೆನ್ನೂರ

ಎಲ್ಲೆಡೆ ಭೀಕರ ಬರ ಪರಿಸ್ಥಿತಿ ಉಂಟಾಗಿದ್ದು ಜನರು, ಜಾನುವಾರುಗಳು ನೀರಿಗಾಗಿ ಹಪಿಹಪಿಸುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದಕ್ಕೆ ಸ್ವಲ್ಪವಾದರೂ ಪರಿಹಾರ ಕಂಡುಕೊಳ್ಳಬೇಕಾದರೆ ತಾಲೂಕಿನ ಅಸುಂಡಿ ಕೆರೆಯ ಹೂಳು ತೆಗೆದು ಅಭಿವೃದ್ಧಿ ಪಡಿಸಿ ನೀರು ತುಂಬಿಸುವ ಕೆಲಸ ಮಾಡಬೇಕಾಗಿದೆ.

ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ಅಸುಂಡಿ ಕೆರೆ ಸುಮಾರು 550 ಎಕರೆ ವಿಸ್ತೀರ್ಣ ಹೊಂದಿದ್ದು, ಒಂದು ಕಾಲದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಏಳು ಸಾವಿರ ಎಕರೆ ಹೊಲಗಳಿಗೆ ನೀರು ಒದಗಿಸುತ್ತಿತ್ತು. ರೈತರು ನೆಮ್ಮದಿಯಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆರೆಯಲ್ಲಿ ಸಾಕಷ್ಟು ನೀರು ನಿಲ್ಲದೇ ರೈತರು ಬೋರ್‌ವೆಲ್ಲುಗಳ ಮೊರೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ವಿವಿಧ ಕಡೆಗಳಿಂದ ಕೆರೆಗೆ ಹರಿದು ಬರುತ್ತಿದ್ದ ನೀರಿನ ಮಾರ್ಗಗಳು ಬಂದ್‌ ಆಗಿದ್ದು ಕೆರೆಯ ತೂಬನ್ನೇ ನೀರು ಹೋಗದಂತೆ ಕಟ್ಟಲಾಗಿದೆ. ಕೆರೆಯಲ್ಲಿ ಸಂಗ್ರಹವಾಗುವ ಅಲ್ಪ ಸ್ವಲ್ಪ ನೀರನ್ನು ಕುಡಿಯಲು ಹಾಗೂ ಮನೆ ಬಳಕೆಗೆ ಮಾತ್ರ ಬಳಸಲಾಗುತ್ತಿದೆ.

ಜಾಲಿಗಿಡಗಳಿಂದ ಆವೃತ

ಕೆರೆಯ ಬಹುತೇಕ ಪ್ರದೇಶ ಜಾಲಿಗಿಡಗಳಿಂದ ಆವೃತವಾಗಿದ್ದು ಎಲ್ಲಿ ನೋಡಿದರಲ್ಲಿ ದಟ್ಟ ಕಾಡಿನಂತೆ ಗೋಚರವಾಗುತ್ತದೆ. ಈ ಜಾಲಿಗಿಡಗಳನ್ನು ಕತ್ತರಿಸಿಯೇ ಇಲ್ಲ ಎನ್ನುವುದು ಗ್ರಾಮಸ್ಥರ ಆರೋಪ. ಇದಲ್ಲದೇ ಕೆಲವು ರೈತರು ಕೆರೆಯ ಪ್ರದೇಶ ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದಾರೆ.

ಮೂರು ವರ್ಷಗಳ ಹಿಂದೆ 2013ರಲ್ಲಿ ಸರಕಾರದ ವತಿಯಿಂದ ಕೆರೆಯಲ್ಲಿ ತುಂಬಿದ್ದ ಹೂಳನ್ನು ಎತ್ತಲಾಗಿತ್ತು. ನಂತರ ಮಳೆಗಾಲದಲ್ಲಿ ಕೆರೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು ಪ್ರಾಣಿ, ಪಕ್ಷಿಗಳಿಗೆ ಹಾಗೂ ಜನರಿಗೆ ತಕ್ಕಮಟ್ಟಿನ ಅನುಕೂಲ ಕೂಡ ಆಗಿತ್ತು. ಆದರೆ ಈ ಬಾರಿ ಸರಿಯಾಗಿ ಮಳೆಯಾಗದ ಕಾರಣ ಕೆರೆಯ ಒಂದು ಭಾಗದಲ್ಲಿ ಪಕ್ಷಿಗಳಿಗೆ ಕುಡಿಯುವ ಅತ್ಯಲ್ಪ ಪ್ರಮಾಣದ ನೀರು ನಿಂತಿದೆ. ಕಳೆದ ವರ್ಷ ಕೂಡ ಹೂಳೆತ್ತಲು 10 ಲಕ್ಷ ರೂ. ಹಣ ಬಿಡುಗಡೆಯಾಗಿದ್ದು ಅದರಲ್ಲಿ ಕೇವಲ ಎರಡು ಲಕ್ಷ ರೂ. ಖರ್ಚಾಗಿದ್ದು ಇನ್ನೂ 8 ಲಕ್ಷ ರೂ. ಉಳಿದಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

ಹೂಳೆತ್ತಲು ಕ್ರಮ ಅಗತ್ಯ

ಕೆರೆಯಲ್ಲಿನ ಮಣ್ಣು ಫಲವತ್ತಾಗಿದ್ದು, ಇದನ್ನು ಹೊರತೆಗೆದು ಹೊಲಗಳಿಗೆ ಹಾಕಿದರೆ ಬರಡು ಭೂಮಿಯಲ್ಲಿಯೂ ಯಾವುದೇ ರಾಸಾಯನಿಕ ಗೊಬ್ಬರಗಳ ಬಳಕೆಯಿಲ್ಲದೇ ಉತ್ತಮ ಬೆಳೆ ಬೆಳೆಯಬಹುದಾಗಿದೆ. ಕೆರೆಯ ಬಹುತೇಕ ಭಾಗದಲ್ಲಿ ಜಾಲಿಕಂಟಿಗಳು ಬೆಳೆದು ನಿಂತಿವೆ. ಅದನ್ನು ತೆರವುಗೊಳಿಸಿ ಹೂಳು ತೆಗೆದರೆ ಸಾಕಷ್ಟು ನೀರು ಸಂಗ್ರಹವಾಗಲಿದೆ. ಈಗಾಗಲೇ ಕೆಲವು ರೈತರು ಹೂಳು ತೆಗೆದುಕೊಂಡು ಹೋಗಿದ್ದಾರೆ.

ಆದ್ದರಿಂದ ಮಳೆಗಾಲ ಆರಂಭವಾಗುವ ಮುನ್ನವೇ ಸರಕಾರ ಹೂಳೆತ್ತಲು ಅಗತ್ಯ ಕ್ರಮ ಕೈಗೊಳ್ಳಬೇಕು. ರೈತರ ಹಿತದೃಷ್ಟಿಯಿಂದ ಅಸುಂಡಿ ಗ್ರಾಮ ಪಂಚಾಯಿತಿ ವತಿಯಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎನ್ನುವುದು ಸುತ್ತಮುತ್ತಲಿನ ಗ್ರಾಮಸ್ಥರ ಕೋರಿಕೆ.

ಇಲ್ಲಿನ ಪ್ರಮುಖ ಕೆರೆಗಳನ್ನು ಅಭಿವೃದ್ಧಿಪಡಿಸುವುದು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

ಜಾರಿಗೆ ಬರದ ಯೋಜನೆ

2013ರಲ್ಲಿ ತುಂಗಭದ್ರಾ ನದಿಯಿಂದ ಸುಣಕಲ್ಲಬಿದರಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಾದ ಅಸುಂಡಿ, ಬೆನಕನಕೊಂಡ, ಹೆಡಿಯಾಲ, ಉಕ್ಕುಂದ, ಸರ್ವಂದ, ಜೋಯಿಸರಹರಳಹಳ್ಳಿ ಗ್ರಾಮಗಳಲ್ಲಿರುವ ಕೆರೆಗಳಿಗೆ ನೀರು ಹರಿಸಲು 38 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಿದ್ದಲ್ಲದೇ ಅದಕ್ಕೆ ಸಂಬಂಧಿಸಿದ ನೀಲಿ ನಕ್ಷೆಯನ್ನು ಸಹ ತಯಾರಿಸಲಾಗಿತ್ತು. ಆದರೆ ಅದು ಕೇವಲ ಕಾಗದದಲ್ಲಿಯೇ ಉಳಿದುಕೊಂಡಿದ್ದು, ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ