ಆ್ಯಪ್ನಗರ

ಊಟ, ಉಪಹಾರಕ್ಕೆ ಹೆಚ್ಚುತ್ತಿರುವ ಕ್ಯೂ

ಹಾವೇರಿ: ನಗರದಲ್ಲಿ ಆರಂಭವಾಗಿರುವ ಜಿಲ್ಲೆಯ ಮೊದಲ ಇಂದಿರಾ ಕ್ಯಾಂಟೀನ್‌ಗೆ ಊಟ, ಉಪಹಾರಕ್ಕೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತಿದೆ.

Vijaya Karnataka 4 Feb 2019, 5:00 am
ಹಾವೇರಿ: ನಗರದಲ್ಲಿ ಆರಂಭವಾಗಿರುವ ಜಿಲ್ಲೆಯ ಮೊದಲ ಇಂದಿರಾ ಕ್ಯಾಂಟೀನ್‌ಗೆ ಊಟ, ಉಪಹಾರಕ್ಕೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತಿದೆ.
Vijaya Karnataka Web meals for breakfast and breakfast
ಊಟ, ಉಪಹಾರಕ್ಕೆ ಹೆಚ್ಚುತ್ತಿರುವ ಕ್ಯೂ


ಇಂದಿರಾ ಕ್ಯಾಂಟೀನ್‌ ರಾಜ್ಯದಲ್ಲಿ ಪ್ರಾರಂಭವಾಗಿ 2 ವರ್ಷದ ನಂತರ, ಜಿಲ್ಲೆಗೆ ಮಂಜೂರಾಗಿರುವ ಮೂರು ಕ್ಯಾಂಟೀನ್‌ಗಳ ಪೈಕಿ ಮೊದಲ ಕ್ಯಾಂಟೀನ್‌ ಅನ್ನು ಹಾವೇರಿಯ ನೂತನ ಜಿಲ್ಲಾ ಪಶು ಇಲಾಖೆ ಆವರಣದಲ್ಲಿ ಜ. 26 ರಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಉದ್ಘಾಟಿಸಿದ್ದರು. ಉದ್ಘಾಟನೆಗೊಂಡ ದಿನದಿಂದ ಕ್ಯಾಂಟೀನ್‌ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಸರಕಾರದ ಆದೇಶದ ನಿಯಮಗಳ ಪ್ರಕಾರ ನಿತ್ಯ ತಿಂಡಿ, ಊಟವನ್ನು 500 ಮಂದಿಗೆ ನೀಡಲು ಅವಕಾಶ ನೀಡಲಾಗಿದೆ. ಆದರೆ, ಜಿಲ್ಲಾಸ್ಪತ್ರೆ ಎದುರಿಗೆ ಕ್ಯಾಂಟೀನ್‌ ಇದೆ. ಇದರಿಂದ ಜನರು ಕ್ಯಾಂಟೀನ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಬೆಳಗ್ಗಿನಿಂದಲೇ ಟೋಕನ್‌ ಪಡೆಯಲು ಜನ ಕ್ಯೂ ನಿಲ್ಲುತ್ತಿರುವ ದೃಶ್ಯವೂ ಕಂಡು ಬರುತ್ತಿದೆ.

ಗ್ರಾಮೀಣ ಜನರು ಹೆಚ್ಚು :
ಗ್ರಾಮೀಣ ಪ್ರದೇಶ ಜನರು, ಆಟೊ ಚಾಲಕರು, ಜಿಲ್ಲಾ ಆಸ್ಪತ್ರೆಗೆ ಬರುವ ಜನರು, ಕೂಲಿಕಾರ್ಮಿಕರು, ಪಶು ಆಸ್ಪತ್ರೆಗೆ ಬರುವ ಜನರು ಸೇರಿದಂತೆ ನಿತ್ಯ 700ರಿಂದ 800 ಮಂದಿ ಕ್ಯಾಂಟೀನ್‌ಗೆ ಊಟ, ಉಪಹಾರಕ್ಕೆ ಬರುತ್ತಿದ್ದಾರೆ. ನಗರದಲ್ಲಿ ಸಂತೆ ದಿನ ಗುರುವಾರವಂತೂ 1000ಕ್ಕೂ ಹೆಚ್ಚು ಮಂದಿ ಮಧ್ಯಾಹ್ನದ ಊಟಕ್ಕೆ ಆಗಮಿಸುತ್ತಾರೆ. ಆದರೆ, 500ರ ನಂತರ ಟೋಕನ್‌ ವಿತರಣೆ ಮಾಡುತ್ತಿಲ್ಲ ಎನ್ನುತ್ತಾರೆ ಕ್ಯಾಂಟೀನ್‌ ವ್ಯವಸ್ಥಾಪಕ ಶೋಯಬ್‌ ಅಹ್ಮದ್‌.

ಆಹಾರವೂ ವೈವಿಧ್ಯ : ವಾರದ ಏಳು ದಿವಸವೂ ಕ್ಯಾಂಟೀನ್‌ನಲ್ಲಿ ತಿಂಡಿ ಹಾಗೂ ಊಟ ಲಭ್ಯವಿರಲಿದೆ. ನಿತ್ಯವೂ ಎರಡು ತಿಂಡಿ ಮಾಡಲಾಗುತ್ತದೆ. ತಿಂಡಿಗೆ 5 ರೂ. ನಿಗದಿಪಡಿಸಲಾಗಿದೆ. ಸೋಮವಾರ ಇಡ್ಲಿ ಅಥವಾ ಪುಳಿಯೊಗರೆ, ಮಂಗಳವಾರ ಇಡ್ಲಿ, ಖಾರಬಾತ್‌, ಬುಧವಾರ ಇಡ್ಲಿ, ಪೊಂಗಲ್‌, ಗುರುವಾರ ಇಡ್ಲಿ, ರವೆ ಕಿಚಡಿ, ಶುಕ್ರವಾರ ಇಡ್ಲಿ, ಚಿತ್ರಾನ್ನ, ಶನಿವಾರ ಇಡ್ಲಿ ಅಥವಾ ವಾಂಗಿಬಾತ್‌, ಇಡ್ಲಿ, ಖಾರಬಾತ್‌ ಹಾಗೂ ಕೇಸರಿ ಬಾತ್‌ ನೀಡಲಾಗುತ್ತದೆ.

ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ 10 ರೂ. ನಿಗದಿ ಪಡಿಸಲಾಗಿದೆ. ಅನ್ನ, ಸಾಂಬಾರು ಹಾಗೂ ಮೊಸರನ್ನ, ಟೊಮೇಟೊ ಬಾತ್‌, ಚಿತ್ರಾನ್ನ, ವಾಂಗಿಬಾತ್‌, ಬಿಸಿ ಬೇಳೆಬಾತ್‌, ಮೆಂತ್ಯೆ ಫಲಾವ್‌, ಪುಳಿಯೊಗರೆ, ಫಲಾವ್‌... ಇವುಗಳಲ್ಲಿ ಯಾವುದಾದರೂ ಒಂದು ಬಗೆಯ ಊಟವೂ ಮಧ್ಯಾಹ್ನ ಹಾಗೂ ರಾತ್ರಿಗೆ ಲಭ್ಯವಿರುತ್ತದೆ.

ಉತ್ತರ ಕರ್ನಾಟಕ ಊಟ ಕೊಡಿ: ಇಂದಿರಾ ಕ್ಯಾಂಟೀನ್‌ನಲ್ಲಿ ನಿತ್ಯ ಅನ್ನ ಸಂಬಾರ, ಫಲಾವ್‌, ಚಿತ್ರಾನ್ನ, ವಾಂಗಿಬಾತ್‌, ಬಿಸಿ ಬೇಳೆಬಾತ್‌ ಕೊಡಲಾಗುತ್ತದೆ. ಇದು ಬೆಂಗಳೂರು, ಮಂಗಳೂರು, ತುಮಕೂರು ಕಡೆಯ ಆಹಾರ ಪದ್ಧತಿ. ಈ ಆಹಾರ ಉತ್ತರ ಕರ್ನಾಟಕ ಜನರಿಗೆ ಗಟ್ಟಿ ಪದಾರ್ಥವಲ್ಲ. ಅದರ ಹೊರತಾಗಿ ಚಪಾತಿ, ರೊಟ್ಟಿ, ಕೆಂಪು ಚಟ್ನಿ, ಶೇಂಗಾ ಚಟ್ನಿ, ಗೋಧಿ ಹುಗ್ಗಿ, ಹೋಳಗಿ ಸೇರಿದಂತೆ ಉತ್ತರ ಕರ್ನಾಟಕ ಪದ್ಧತಿಯ ಉಪಹಾರ, ಊಟ ಇಂದಿರಾ ಕ್ಯಾಂಟೀನ್‌ನಿಂದ ಸಿಗಲಿ ಎಂದು ಜನರು ಬಯಸುತ್ತಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ