ಆ್ಯಪ್ನಗರ

ತಾಲೂಕು ಕೇಂದ್ರದಲ್ಲಿ ನಾಮಫಲಕಕ್ಕೆ ಮಾತ್ರ ಸೀಮಿತ ಇಲಾಖೆಗಳು

ರಟ್ಟೀಹಳ್ಳಿ : ರಟ್ಟೀಹಳ್ಳಿ ಸೇರಿದಂತೆ ಈ ಭಾಗದ ಜನರ ಬಹುದಿನ ಬೇಡಿಕೆಯಾಗಿದ್ದ ರಟ್ಟೀಹಳ್ಳಿ ತಾಲೂಕಿನ ಕನಸ್ಸನ್ನು ಕಳೆದ ಬಾರಿಯ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಈಡೇರಿಸಿ ರಟ್ಟೀಹಳ್ಳಿಯನ್ನು ನೂತನ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿತ್ತು. ತಾಲೂಕು ಘೋಷಣೆಯಿಂದ

Vijaya Karnataka 24 Feb 2019, 5:00 am
ರಟ್ಟೀಹಳ್ಳಿ : ರಟ್ಟೀಹಳ್ಳಿ ಸೇರಿದಂತೆ ಈ ಭಾಗದ ಜನರ ಬಹುದಿನ ಬೇಡಿಕೆಯಾಗಿದ್ದ ರಟ್ಟೀಹಳ್ಳಿ ತಾಲೂಕಿನ ಕನಸ್ಸನ್ನು ಕಳೆದ ಬಾರಿಯ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಈಡೇರಿಸಿ ರಟ್ಟೀಹಳ್ಳಿಯನ್ನು ನೂತನ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿತ್ತು. ತಾಲೂಕು ಘೋಷಣೆಯಿಂದ ಇನ್ನು ಮುಂದೆ ರಟ್ಟೀಹಳ್ಳಿಯಲ್ಲಿಯೇ ನಮ್ಮ ಕೆಲಸ ಕಾರ‍್ಯಗಳು ನಡೆಯುತ್ತವೆ ಎಂದು ರಟ್ಟೀಹಳ್ಳಿ ಸೇರಿದಂತೆ ಈ ಭಾಗದ ಜನರು ಕುಣಿದು ಕುಪ್ಪಳಿಸಿ ಹರ್ಷ ವ್ಯಕ್ತಪಡಿಸಿದ್ದರು.
Vijaya Karnataka Web HVR-23 RATTIHALLI  1,,A
ರಟ್ಟೀಹಳ್ಳಿ ತಾಲೂಕಿನಲ್ಲಿ ನಾಮಫಲಕ ಹಾಕಿಯೂ ಕೆಲಸ ನಿರ್ವಹಿಸದೇ ಇರುವ ಹಲವು ಕಚೇರಿಗಳು.


ತಾಲೂಕು ಘೋಷಣೆಯಾಗಿ ಕೆಲ ತಿಂಗಳ ಬಳಿಕ ತಾಲೂಕು ಕೇಂದ್ರದ ಕಚೇರಿಗಳಿಗೆ ತುಂಗಾ ಮೇಲ್ದಂಡೆ ಯೋಜನೆಯ 36 ಕಟ್ಟಡಗಳನ್ನು ಗುರುತಿಸಿ ರಟ್ಟೀಹಳ್ಳಿಯ ಕವಳಿಕುಪ್ಪಿ ಹತ್ತಿರ ಇರುವ ತುಂಗಾ ಮೇಲ್ದಂಡೆ ಕಟ್ಟಡಗಳಲ್ಲಿ 24-02-2018 ರಂದು ನೂತನ ತಾಲೂಕು ಆಡಳಿತ ಕೇಂದ್ರ ಉದ್ಘಾಟಿಸಲಾಯಿತು.

ಉದ್ಘಾಟನೆ ದಿನ ತಹಸೀಲ್ದಾರ್‌ ಕಚೇರಿ ಮತ್ತು ಹೆಸ್ಕಾಂ ಇಲಾಖೆ ಕಚೇರಿಯನ್ನು ಪ್ರಾರಂಭಿಸಿದನ್ನು ಬಿಟ್ಟರೆ ಇಲ್ಲಿಯವರೆಗೂ ಯಾವುದೇ ಕಚೇರಿಗಳು ಪ್ರಾರಂಭವಾಗಿಲ್ಲ. ಉಳಿದಿರುವ ಕಚೇರಿಗಳು ಪ್ರಾರಂಭಿಸುವ ಮತ್ತು ನೂತನ ಕಚೇರಿಗಳಿಗೆ ಸಿಬ್ಬಂದಿ ನೇಮಕ ಮಾಡುವ ನಿಟ್ಟಿನಲ್ಲಿ ಸರಕಾರ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಜನರು ರಟ್ಟೀಹಳ್ಳಿ ತಾಲೂಕು ಕೇಂದ್ರವಾದರೂ ಇನ್ನೂ ಅನೇಕ ಕೆಲಸ ಕಾರ‍್ಯಗಳಿಗೆ ಹಿರೇಕೆರೂರಿಗೆ ಹೋಗುವುದು ತಪ್ಪುತ್ತಿಲ್ಲ.

ನಾಮಫಲಕಕ್ಕೆ ಮಾತ್ರ ಸಿಮಿತ: ತಾಲೂಕು ಕೇಂದ್ರ ಉದ್ಘಾಟನೆಗೂ ಮುನ್ನ ತುಂಗಾ ಮೇಲ್ದಂಡೆ ಕಚೇರಿ ಕಟ್ಟಡಗಳನ್ನು ನಾನಾ ಇಲಾಖೆಗೆ ನೀಡಲಾಗಿದ್ದು, ಕೆಲವು ಕಟ್ಟಡಗಳಿಗೆ ನಾಮ ಫಲಕ ಹಾಕಲಾಗಿದ್ದು. ಇಲ್ಲಿಯವರಿಗೆ ಯಾವುದೇ ಇಲಾಖೆಗೆ ಸಿಬ್ಬಂದಿ ನೇಮಕವಾಗದೇ ಕೆಲಸ ಪ್ರಾರಂಭಿಸಿಲ್ಲ ಇದರಿಂದ ನಾನಾ ಇಲಾಖೆಗಳು ನಾಮಫಲಕಕ್ಕೆ ಮಾತ್ರ ಸೀಮಿತಗೊಂಡಂತಾಗಿದೆ.

ನಾಮಫಲಕ ಹಾಕಿ ಕಾರ‍್ಯ ಆರಂಭಿಸದೇ ಇರುವ ಇಲಾಖೆಗಳು: ರಟ್ಟೀಹಳ್ಳಿ ತಾಲೂಕು ಕೇಂದ್ರದಲ್ಲಿ ನಾಮಫಲಕ ಹಾಕಿ ಕಾರ‍್ಯ ಆರಂಭಿಸದೇ ಇರುವ ಇಲಾಖೆಗಳು ಸಾಕಷ್ಟು ಕಂಡು ಬರುತ್ತವೆ ಅದರಲ್ಲಿ ಮುಖ್ಯವಾಗಿ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ, ಶಿಶಿ ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಪಂಚಾಯತ್‌ ರಾಜ್ಯ ಎಂಜಿನಿಯರಿಂಗ್‌ ಉಪ ವಿಭಾಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಸಮಾಜ ಕಲ್ಯಾಣ ಇಲಾಖೆ ಕಚೇರಿ, ಉಪ ನೋಂದಣಿ ಮತ್ತು ವಿವಾಹ ನೋಂದಣಿ ಅಧಿಕಾರಿಗಳ ಕಚೇರಿ, ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಾರ್ಯಾಲಯ ಸೇರಿದಂತೆ ಹಲವು ಇಲಾಖೆಗಳು ಕಟ್ಟಡಗಳಿಗೆ ನಾಮ ಫಲಕ ಬರೆಸಿವೆ ಆದರೆ ಕೆಲಸ ಮಾತ್ರ ಪ್ರಾರಂಭಿಸುವುದಕ್ಕೆ ಸರಕಾರ ಇನ್ನೂ ಯಾವುದೇ ಆದೇಶ ನೀಡಿಲ್ಲ.

ತಹಸೀಲ್ದಾರರ ಕಚೇರಿಯಲ್ಲಿಯೂ ಸಿಬ್ಬಂದಿ ಕೊರತೆ: ತಾಲೂಕು ಆಡಳಿತಕ್ಕೂ ಮುನ್ನ ಇಲ್ಲಿನ ತಹಸೀಲ್ದಾರ್‌ ಕಚೇರಿಗೆ ಗ್ರೇಡ್‌ 1 ಹಾಗೂ ಗ್ರೇಡ್‌ 2 ತಹಸೀಲ್ದಾರ್‌ ಸೇರಿದಂತೆ ಒಟ್ಟು 17 ಹುದ್ದೆಗಳು ಮಂಜೂರಾತಿ ಮಾಡಿದೆ. ಆದರೆ ಇಲ್ಲಿ ಕಾರ‍್ಯ ನಿರ್ವಹಿಸುವುದು 5 ಸಿಬ್ಬಂದಿಗಳು ಮಾತ್ರ. ಇದರಿಂದ ಜನರ ಕೆಲಸ ಕಾರ‍್ಯಗಳಿಗೆ ತೊಂದರೆಯಾಗುವುದರ ಜತೆಗೆ ಇಲ್ಲಿನ ಸಿಬ್ಬಂದಿಗೆ ಒತ್ತಡವೂ ಆಗುತ್ತಿದೆ.

ವರ್ಷದಲ್ಲಿ 5-6 ತಹಸೀಲ್ದಾರರು: ತಾಲೂಕು ಕೇಂದ್ರ ಉದ್ಘಾಟಿಸಿದಾಗ ನೂತನ ತಹಸೀಲ್ದಾರ್‌ ಅವರನ್ನು ನೇಮಕ ಮಾಡಲಾಗಿತು. ಬಳಿಕ ವರ್ಷದಲ್ಲಿ ಇಲ್ಲಿಯವರೆಗೂ 6 ತಹಸೀಲ್ದಾರರು ಬಂದು ಹೋಗಿದ್ದಾರೆ. ಈಗ ಸದ್ಯ ಖಾಯಂ ತಹಸೀಲ್ದಾರರು ಇದ್ದಾರೆ. ಇರುವ ಸಿಬ್ಬಂದಿಯಲ್ಲಿ ಉತ್ತಮ ಕಾರ‍್ಯನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಒಟ್ಟಿನಲ್ಲಿ ರಟ್ಟೀಹಳ್ಳಿ ತಾಲೂಕು ಕೇಂದ್ರವಾಗಿ ವರ್ಷವಾದರೂ ಇಲ್ಲಿನ ಜನತೆ ತೊಂದರೆ ಎದುರಿಸುವುದು ತಪ್ಪಿಲ್ಲ. ಈ ಬಗ್ಗೆ ಮುಂದಿನ ದಿನದಲ್ಲಾದರೂ ಸರಕಾರ ಗಮನಹರಿಸಿ ತಾಲೂಕು ಕೇಂದ್ರಕ್ಕೆ ಅವಶ್ಯ ಇರುವ ಸಿಬ್ಬಂದಿ ನೇಮಿಸಿ ತಾಲೂಕಿನ ಜನರಿಗೆ ಉತ್ತಮ ಸೇವೆ ನೀಡುತ್ತದೆಯೋ ಇಲ್ಲವೋ ಕಾದು ನೋಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ